ಬೆಂಗಳೂರು(ಮೇ.29): ಊಟಕ್ಕಾಗಿ ನಾವು ಉಮೇಶ ಕತ್ತಿ ಅವರ ನಿವಾಸದಲ್ಲಿ ಸೇರಿದ್ದು ನಿಜ. ಆದರೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ನಾವು ಯಾವುದೇ ಸಭೆ ಮಾಡಿಲ್ಲ ಎಂದು ಹಿರಿಯ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಸ್ಪಷ್ಟಪಡಿಸಿದರು.
ಶಾಸಕರ ಭವನದಲ್ಲಿ ಮಾತನಾಡಿದ ಅವರು ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಾ, ಕಳೆದ 11 ತಿಂಗಳಿಂದ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡುವಂತೆ ಕೇಳಿದ್ದೇನೆ. ಹಲವು ಬಾರಿ ಭೇಟಿಯಾಗಿದ್ದೇನೆ ಆದರೂ ನೀಡಿಲ್ಲ ಎಂದು ಪರೋಕ್ಷವಾಗಿ ಸಿಎಂ ಯಡಿಯೂರಪ್ಪ ವಿರುದ್ಧ ಯತ್ನಾಳ ಅಸಮಾಧಾನ ಹೊರಹಾಕಿದರು.
ನನಗೆ ಮಂತ್ರಿ ನೀಡಿ ಅಂತಾ ನಾನು ಕೇಳಿಲ್ಲ. ಯಡಿಯೂರಪ್ಪ ಸಿಎಂ ಆಗಿರುವವರೆಗೂ ನಾನು ನನ್ನನ್ನ ಮಂತ್ರಿ ಮಾಡಿ ಅಂತಾ ನಾನು ಕೇಳಲ್ಲ. ಪಕ್ಷದಲ್ಲಿ ನಾನು ಹಿರಿಯನಿದ್ದೇನೆ. ಯಡಿಯೂರಪ್ಪ, ಈಶ್ವರಪ್ಪ, ಶಿವಪ್ಪ, ಅನಂತಕುಮಾರ್ ಅರನ್ನು ಬಿಟ್ಟರೆ ನಾನೇ ಹಿರಿಯವ ಹಾಗಾಗಿ ಅಧಿಕಾರಕ್ಕಾಗಿ ಯಾರ ಬಾಗಿಲು ಹೋಗುವಷ್ಟು ಸಣ್ಣವನಲ್ಲ. ಆದರೆ, ಶಾಸಕ ಉಮೇಶ ಕತ್ತಿ ಮಂತ್ರಿ ಮಾಡಿ ಎಂದಾಗಲಿ, ರಮೇಶ್ ಕತ್ತಿಗೆ ರಾಜ್ಯಸಭೆ ಸದಸ್ಯರನ್ನಾಗಿ ಮಾಡಿ ಅಂತಾ ನಾವು ಒತ್ತಡ ಹೇರಿಲ್ಲ. ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಿದ್ದೇವೆ ಅಷ್ಟೆ ಎಂದರು.
ಯಡಿಯೂರಪ್ಪ ಸಿಎಂ ಆಗಿ ಅವಧಿ ಪೂರ್ಣ ಮಾಡುತ್ತಾರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತೆ. ಹಾಗಾದ್ರೆ ಯಡಿಯೂರಪ್ಪ ನಿಮ್ಮ ನಾಯಕರಲ್ಲವೇ ಎಂದಿದ್ದಕ್ಕೆ, ಅವರು ನಮ್ಮ ಮುಖ್ಯಮಂತ್ರಿಗಳಷ್ಟೇ, ಪ್ರಧಾನಿ ಮೋದಿ, ಅಮಿತ್ ಶಾ, ಜೆ ಪಿ ನಡ್ಡಾ ಇವರು ನಮ್ಮ ನಾಯಕರು. ಯಡಿಯೂರಪ್ಪರ ಬಳಿ ಕೈ ಚಾಚಿ ಮಂತ್ರಿ ಮಾಡಿ ಅಂತಾ ಕೇಳುವ ಅಯೋಗ್ಯ ನಾನಲ್ಲ ಎಂದು ಸಿಟ್ಟಿನಿಂದಲೇ ಯತ್ನಾಳ ಹೇಳಿದರು.
ಬಸನಗೌಡ ಪಾಟೀಲ್ ಯತ್ನಾಳ ಅವರ ಹೇಳಿಕೆ ನೋಡಿದರೆ ಯಡಿಯೂರಪ್ಪ ಮೇಲೆ ಅಸಮಾಧಾನ ಇರುವುದು ಮಾತ್ರ ಅವರ ಮಾತಿನ ಉದ್ದಕ್ಕೂ ಗೊತ್ತಾಗುತ್ತಿತ್ತು. ಅಷ್ಟಕ್ಕೂ ಉಮೇಶ ಕತ್ತಿಗೆ ಮಂತ್ರಿ ಮಾಡುತ್ತೀವಿ ಖುದ್ದು ಯಡಿಯೂರಪ್ಪನವರೇ ಅವರ ಮನೆಯ ದೇವರ ಮುಂದೆ ಮಾತು ಕೊಟ್ಟಿದ್ದಾರೆ. ನಾನೇ ಅದಕ್ಮೆ ಸಾಕ್ಷಿ ಎಂದು ಯತ್ನಾಳ ಹೇಳಿದರು.
ಇದನ್ನೂ ಓದಿ : ಅಸಮಾಧಾನಿತರ ಸಭೆ ನಡೆಸಿದ್ದ ಉಮೇಶ್ ಕತ್ತಿ ಮೇಲೆ ಸಿಎಂ ಯಡಿಯೂರಪ್ಪ ಕೆಂಗಣ್ಣು
ಆಡಳಿತಾರೂಢ ಬಿಜೆಪಿಯಲ್ಲಿ ಮತ್ತೇ ಭಿನ್ನಮತ ಭುಗಿಲೆದ್ದಿದೆ. ಬಿಜೆಪಿ ಹಿರಿಯ ಮುಖಂಡರು ಹಾಗೂ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಉಮೇಶ ಕತ್ತಿ ಹಾಗೂ ಮುರುಗೇಶ ನಿರಾಣಿ ಸೇರಿ ಕೆಲವರು ಸಭೆ ನಡೆಸಿದ್ದಾರೆ. ಈ ಎಲ್ಲ ಬೆಳವಣಿಗೆಯನ್ನು ನೋಡಿದ್ರೆ ಬಿಜೆಪಿ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದು ಮತ್ತೊಮ್ಮೆ ಸಾಬೀತಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ