ರಾಮನಗರ: ಬೆಂಗಳೂರು ಗ್ರಾಮಾಂತರ (Bengaluru Rural) ಸಂಸದ ಡಿ.ಕೆ.ಸುರೇಶ್ (MP Suresh) ಹುಟ್ಟೂರು ಜಾತ್ರಾ ಸಂಭ್ರಮದಲ್ಲಿ ಭಾಗಿಯಾಗಿದ್ದರು. ದೊಡ್ಡಾಲಹಳ್ಳಿಯ ಕೊಲ್ಲಾಪುರದಮ್ಮ ಜಾತ್ರಮಹೋತ್ಸವದಲ್ಲಿ ಭಾಗಿಯಾಗಿ, ಸಿಡಿ ಆಡಿ ಸಂಭ್ರಮಿಸಿದ್ದಾರೆ. ಗ್ರಾಮಸ್ಥರು ತೊಟ್ಟಿಲಿನಲ್ಲಿ ಡಿ.ಕೆ.ಸುರೇಶ್ರನ್ನು ಕೂರಿಸಿ ಸಿಡಿ ಆಡಿಸಿದ್ದಾರೆ. ಕೊಲ್ಲಾಪುರದಮ್ಮ ಜಾತ್ರಾಮಹೋತ್ಸವ ಪ್ರತಿವರ್ಷವೂ ವಿಜೃಂಭಣೆಯಿಂದ ನಡೆಯುತ್ತದೆ. ಇನ್ನು, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ ರವಿ ಅವರ ಟೀಕೆಗಳಿಗೆ ತಿರುಗೇಟು ನೀಡಿರುವ ಡಿ.ಕೆ ಸುರೇಶ್, ಬಿಜೆಪಿಯವರು ನೀಚರು. ಕೋಮು ಗಲಭೆ ಮಾಡಿಸುತ್ತಾರೆ. ಅವರು ಅಶಾಂತಿ ಮೂಡಿಸಲು ಹೊರಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ಬಿಜೆಪಿಯವ್ರು ಗಲಭೆ ಮಾಡಿಸ್ತಾರೆ
ಬಿಜೆಪಿಯವರು ಕೋಮು ಗಲಭೆ ಮಾಡಿಸ್ತಾರೆ ಎಂದು ಸಂಸದ ಡಿಕೆ ಸುರೇಶ್ ಸ್ಫೋಟಕ ಆರೋಪ ಮಾಡಿದ್ದಾರೆ. ಸಿ.ಟಿ ರವಿ ಹೇಳಿಕೆ ನೋಡಿದರೆ ಗಲಭೆ ಮಾಡಿಸುತ್ತಾರೆ ಅನ್ಸುತ್ತೆ. ಬಿಜೆಪಿ ನಾಯಕರು ಕರಾವಳಿ, ಬೆಂಗಳೂರಲ್ಲಿ ಅಶಾಂತಿ ಮೂಡಿಸಲು ಹೊರಟ್ಟಿದ್ದಾರೆ. ಅವರು ನೀಚರು ಎಂದು ಡಿಕೆ ಸುರೇಶ್ ಹೇಳಿದ್ದಾರೆ.
ಇದನ್ನೂ ಓದಿ: Siddaramaiah: ಹೆದರಿಸೋಕೆ ಬಂದರೆ ತೊಡೆ ತಟ್ಟೋದು ನನಗೆ ಗೊತ್ತಿದೆ; ಎದುರಾಳಿಗಳಿಗೆ ಮಾಜಿ ಸಿಎಂ ಸಿದ್ದು ವಾರ್ನಿಂಗ್
ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆ ಸುರೇಶ್, ಭಾರತೀಯ ಜನತಾ ಪಕ್ಷದ ನಾಯಕರು ನೀಚರು, ಯಾವುದೇ ಹಂತಕ್ಕೂ ಬೇಕಾದರು ಹೋಗುತ್ತಾರೆ. ಅವರು ನಮ್ಮ ಹೇಳಿಕೆಯನ್ನು ಪಾಕಿಸ್ತಾನಕ್ಕೆ ಹೋಲಿಕೆ ಮಾಡುತ್ತಾರೆ. ಅವರಿಗೆ ರಾಜ್ಯದ ಜನರ ಸಮಸ್ಯೆಗಳ ಬಗ್ಗೆ ಗಮನವಿಲ್ಲ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅವರು ಯಾಕೆ ಬರುತ್ತಿದ್ದಾರೆ. ಅವರಿಗೆ ಶಿಕ್ಷಣ ಪಡೆದು ವಿದ್ಯಾವಂತರಾಗಿರುವವರು ಎದುರಿಸುತ್ತಿರುವ ನಿರುದ್ಯೋಗ ಸಮಸ್ಯೆ, ರಾಜ್ಯ ಅಭಿವೃದ್ಧಿ ಹಿನ್ನಡೆ, ಬೆಲೆ ಏರಿಕೆ, ಬಡವರು ಅವರಿಗೆ ಕಾಣಿಸುತ್ತಿಲ್ಲವೆ?
ಮೋದಿಗೆ ಬಿಜೆಪಿ ರಾಜ್ಯ ಸರ್ಕಾರದ ದುರಂತ ಕಾಣಿಸೋದಿಲ್ವಾ?
ಶಿಕ್ಷಕರ ನೇಮಕಾತಿ, ಪಿಎಸ್ಐ ನೇಮಕಾತಿ, ವಿಶ್ವವಿದ್ಯಾಲಯಗಳ ಉಪಕುಲಪತಿಗಳ ನೇಮಕಾತಿಯಲ್ಲಿ, ಎಂಜಿನಿಯರ್, ಪ್ರಾಧ್ಯಾಪಕರ ನೇಮಕಾತಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಕಾಣುತ್ತಿಲ್ಲವಾ? ಇದನ್ನು ನಾವು ಹೇಳುತ್ತಿಲ್ಲ ಬಿಜೆಪಿ ಪಕ್ಷದ ನಾಯಕರು ಹಾಗೂ ಶಾಸಕರು ಮಾಡಿರುವ ಆರೋಪ. ಅವರ ಪಕ್ಷದ ಭಷ್ಟಾಚಾರವನ್ನು ಅತೋಟಿಯಲ್ಲಿಡಲು ಸಾಧ್ಯವಾಗದ ಅವರಿಗೆ ನಾಚಿಕೆ ಆಗಬೇಕು. ಇಂತಹ ವ್ಯಕ್ತಿಗೆ ಡಿಕೆ ಶಿವಕುಮಾರ್ ಬಗ್ಗೆ ಮಾತನಾಡಲು ಏನು ಹಕ್ಕಿದೆ ಎಂದು ಸಿ.ಟಿ ರವಿಗೆ ಪ್ರಶ್ನೆ ಮಾಡಿದರು.
ಪಾಕಿಸ್ತಾನ ಬಗ್ಗೆ ಮಾತನಾಡುತ್ತಾರೆ. ಇವರಿಗೆ ಬೇಕು ಎಂದರೆ ಈಗ ಪಾಕಿಸ್ತಾನವನ್ನು ಭಾರತದೊಂದಿಗೆ ಸೇರಿಸಿಕೊಳ್ಳಲಿ. ಈಗ ಅವರು ಕೂಡ ಸಿದ್ಧರಾಗಿದ್ದಾರೆ. ಪಾಕಿಸ್ತಾನ ದಿವಾಳಿಯಾಗಿದೆ. ಪಾಕ್ ಹೆಸರಿನಲ್ಲಿ ರಾಜಕಾರಣ ಮಾಡಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ರಾಜ್ಯಪಾಲರಿಗೆ ಮನವಿ ಮಾಡುತ್ತಿದ್ದು, ಗಲಭೆಗಳು ನಡೆಸುವ ಮುನ್ಸೂಚನೆಗಳನ್ನು ಕಂಡು ಇವುಗಳನ್ನು ತಡೆಯಬೇಕು ಎಂದು ಡಿಕೆ ಸುರೇಶ್ ಆರೋಪ ಮಾಡಿದ್ದಾರೆ.
ಸಿ.ಟಿ ರವಿ ಹೇಳಿದ್ದೇನು?
ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡಿದ್ದ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ ರವಿ, ಸುಳ್ಳು ಯಾರು ಹೇಳುತ್ತಾರೆ ಎಂದು ಸಿದ್ದರಾಮಯ್ಯನವರಿಗೆ ಚೆನ್ನಾಗಿ ಗೊತ್ತು. ಚಿಕ್ಕಮಗಳೂರಿಗೆ ಬಂದಿದ್ ಮೆಡಿಕಲ್ ಕಾಲೇಜು ರದ್ದು ಮಾಡಿ, ದತ್ತಪೀಠಕ್ಕೆ ಮೋಸ ಮಾಡಿದ್ದರು. ಡಿಜೆ ಹಳ್ಳಿ-ಕೆಜೆ ಹಳ್ಳಿ ಗ್ಯಾಂಗಿಗೆ ಸಪೋರ್ಟ್ ಮಾಡಿದ್ದು ಕೂಡ ಕಾಂಗ್ರೆಸ್. ಲೋಕಸಭಾ ಚುನಾವಣೆ ವೇಳೆ ಬಿಜೆಪಿಗೆ ಒಂದು ಸ್ಥಾನ ಬರೋದಿಲ್ಲ ಎಂದು ಹೇಳಿದ್ದರು, ಆದರೆ ರಾಜ್ಯದ ಜನ 25 ಸ್ಥಾನ ಕೊಟ್ಟಿದ್ದರು ಎಂದು ಟೀಕೆ ಮಾಡಿದ್ದರು.
ಇದನ್ನೂ ಓದಿ: HD Kumaraswamy: ‘ಪ್ರಹ್ಲಾದ್ ಜೋಶಿಯವರನ್ನ ಸಿಎಂ ಮಾಡಲು RSS ಹುನ್ನಾರ, 8 ಜನ ಡಿಸಿಎಂ’- ಮಾಜಿ ಸಿಎಂ ಹೆಚ್ಡಿಕೆ ಹೊಸ ಬಾಂಬ್!
ಇದೇ ವೇಳೆ ಕಾಂಗ್ರೆಸ್ ಅಂತರಿಕ ಸರ್ವೆಯಲ್ಲಿ ರಾಜ್ಯದಲ್ಲಿ ಅಧಿಕಾರ ಪಡೆದುಕೊಳ್ಳಲಿದೆ ಎಂಬ ವರದಿ ಬಂದಿದೆ ಎಂಬ ಬಗ್ಗೆ ವ್ಯಂಗ್ಯವಾಡಿದ್ದ ಸಿ.ಟಿ ರವಿ, ಪಾಕಿಸ್ತಾನದಲ್ಲಿ ಸರ್ವೆ ಮಾಡಿದರೆ 150 ಅಲ್ಲ, 200 ಸ್ಥಾನ ಬರಬಹುದು. ನಮ್ಮ ರಾಜ್ಯ-ದೇಶದಲ್ಲಿ ಬರಲ್ಲ, ಕಾಂಗ್ರೆಸ್ ಗೆ ಮತ ಹಾಕುವವರು ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿದೆ. ಇಲ್ಲಿ ಕಾಂಗ್ರೆಸ್ ಡೆಪಾಜಿಟ್ ಉಳಿಸಿಕೊಳ್ಳೋದು ಕಷ್ಟ ಎಂಬಂತಾಗಿದೆ ಎಂದು ಹೇಳಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ