ಬೆಂಗಳೂರು (ಮೇ 27): ಸದಾ ಒಂದಿಲ್ಲೊಂದು ವಿವಾದಗಳಲ್ಲಿ ಸಿಲುಕಿಕೊಳ್ಳುತ್ತಿರುವ ಕಾಂಗ್ರೆಸ್ ಶಾಸಕ ಎನ್.ಎ. ಹ್ಯಾರಿಸ್ ಮಗ ಮೊಹಮದ್ ನಲಪಾಡ್ ಇಂದು ಕೆಪಿಸಿಸಿ ಕಚೇರಿಯ ಮುಂದೆ ಮಧ್ಯ ರಸ್ತೆಯಲ್ಲಿ ಕಾರು ನಿಲ್ಲಿಸಿಕೊಂಡು ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ಉದ್ಯಮಿ ಲೋಕನಾಥ್ ಅವರ ಮಗ ವಿದ್ವತ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ನಲಪಾಡ್ ಜೈಲು ಸೇರಿದ್ದರು. ಇತ್ತೀಚೆಗೆ ಮೇಖ್ರಿ ಸರ್ಕಲ್ ಬಳಿ ನಡೆದ ಸರಣಿ ಅಪಘಾತದ ಪ್ರಕರಣದಲ್ಲೂ ನಲಪಾಡ್ ಹೆಸರು ಕೇಳಿಬಂದಿತ್ತು. ಈ ಪ್ರಕರಣದಲ್ಲಿ ನಲಪಾಡ್ ವಿರುದ್ಧ ಎಫ್ಐಆರ್ ಕೂಡ ದಾಖಲಿಸಲಾಗಿತ್ತು. ಇಂದು ಸಂಜೆ ಕೆಪಿಸಿಸಿ ಮುಂದಿನ ರಸ್ತೆಯಲ್ಲಿ ಎರಡು ಕಾರುಗಳನ್ನು ನಿಲ್ಲಿಸಿಕೊಂಡು, ಸ್ನೇಹಿತರೊಂದಿಗೆ ಮಾತನಾಡುತ್ತಿದ್ದ ನಲಪಾಡ್ ಬಳಿ ಕಾರು ತೆಗೆಯುವಂತೆ ಟ್ರಾಫಿಕ್ ಪೊಲೀಸರು ಸೂಚಿಸಿದ್ದಾರೆ. ಆದರೆ, ಅದಕ್ಕೆ ತಲೆಕೆಡಿಸಿಕೊಳ್ಳದ ನಲಪಾಡ್ ತನ್ನ ಗ್ಯಾಂಗ್ ಜೊತೆ ಮಾತನಾಡುತ್ತಾ ನಿಂತಿದ್ದಾರೆ.
ಬಿಳಿ ಬಣ್ಣದ ಬೆನ್ಜ್ ಹಾಗೂ ಇನೋವಾ ಕಾರುಗಳನ್ನು ನಿಲ್ಲಿಸಿಕೊಂಡಿದ್ದ ನಲಪಾಡ್ ಮತ್ತು ಆತನ ಸ್ನೇಹಿತರ ಬಳಿ ಮೂರು ಜನ ಟ್ರಾಫಿಕ್ ಪೊಲೀಸರು ಬಂದು ಕಾರು ತೆಗೆಯುವಂತೆ ಮನವಿ ಮಾಡಿದ್ದಾರೆ. ಅದಕ್ಕೆ ಬಗ್ಗದ ನಲಪಾಡ್ ಕ್ಯಾಮೆರಾದಲ್ಲಿ ಚಿತ್ರಿಕರಣ ಮಾಡುತ್ತಿದ್ದಂತೆ 'ಅಣ್ಣ, ನನಗೆ ಜೀವನ ಮಾಡೋಕೆ ಬಿಡಿ. ಯಾಕೆ ಶೂಟ್ ಮಾಡ್ತೀರ? ಬಿಟ್ಟುಬಿಡಿ' ಎಂದು ಕೈ ಮುಗಿದು ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ