ಬೆಂಗಳೂರು (ಜ.23): ಬೆಂಗಳೂರಿನ ಹೊನ್ನಾರ್ ಪೇಟೆಯ ಕಾರ್ಯಕ್ರಮದಲ್ಲಿ ಬುಧವಾರ ರಾತ್ರಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡಿತ್ತು. ಈ ಘಟನೆಯಲ್ಲಿ ಶಾಂತಿನಗರ ಕಾಂಗ್ರೆಸ್ ಶಾಸಕ ಎನ್.ಎ. ಹ್ಯಾರಿಸ್ ಸೇರಿ ನಾಲ್ವರು ಗಾಯಗೊಂಡಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾಸಕ ಹ್ಯಾರಿಸ್ ಇಂದು ಡಿಸ್ಚಾರ್ಜ್ ಆಗುವ ಸಾಧ್ಯತೆಯಿದೆ.
ಈ ಘಟನೆ ಕುರಿತು ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಥೋಡ್ ಹೇಳಿಕೆ ನೀಡಿದ್ದು, ರಾತ್ರಿ 8.30ರ ಸಮಯದಲ್ಲಿ ಕಾರ್ಯಕ್ರಮ ನಡೆಯುತ್ತಿತ್ತು. ಅದರಲ್ಲಿ ಶಾಸಕ ಹ್ಯಾರಿಸ್ ಭಾಗಿಯಾಗಿದ್ದರು. ಶಾಸಕ ಹ್ಯಾರಿಸ್ ಮೇಲೆ ಏನೋ ಸ್ಫೋಟಕ ವಸ್ತು ಬಿದ್ದಿದೆ. ಕಾರ್ಯಕ್ರಮ ಆರಂಭಕ್ಕೂ ಮುಂಚೆ ಸ್ಫೋಟಕ ವಸ್ತು ಬಿದ್ದಿದೆ. ವಸ್ತು ಸ್ಪೋಟಗೊಂಡು ಹ್ಯಾರಿಸ್ ಅವರ ಬಲಗಾಲಿಗೆ ಗಾಯವಾಗಿದೆ. ಘಟನೆಯಲ್ಲಿ ಮೋಹನ್ ಎಂಬುವವರಿಗೂ ಗಾಯವಾಗಿದೆ. ತನಿಖೆ ನಂತರ ಸ್ಫೋಟದ ಬಗ್ಗೆ ಗೊತ್ತಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.
ಅನುಮಾನಾಸ್ಪದ ವಸ್ತು ಸ್ಪೋಟಗೊಂಡಿರುವ ಹಿನ್ನೆಲೆಯಲ್ಲಿ ಮಿಸ್ ಚೀಫ್ ಆಕ್ಟ್ ಅಡಿ ಕೇಸ್ ದಾಖಲು ಮಾಡಿಕೊಳ್ಳುತ್ತೇವೆ. ನನಗೆ ಬಂದಿರೋ ಮಾಹಿತಿ ಪ್ರಕಾರ ಬರ್ತ್ ಡೇ ಪಾರ್ಟಿಗೆ ಅನುಮತಿ ಪಡೆದಿರಲಿಲ್ಲ ಎಂದು ಚೇತನ್ ಸಿಂಗ್ ರಾಥೋಡ್ ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟ; ಶಾಸಕ ಹ್ಯಾರಿಸ್ ಸೇರಿ ನಾಲ್ವರಿಗೆ ಗಾಯ
ಶಾಸಕ ಎನ್.ಎ. ಹ್ಯಾರಿಸ್ ಅವರು ಹೊನ್ನಾರ್ಪೇಟೆಯಲ್ಲಿ ತಮಿಳರು ಆಯೋಜಿಸಿದ್ದ ಎಂಜಿಆರ್ ಜನ್ಮದಿನ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದರು. ಈ ವೇಳೆ ಪಟಾಕಿಗಳನ್ನು ಸಿಡಿಸಲಾಗುತ್ತಿತ್ತು. ಆಗ ವೇದಿಕೆ ಬಳಿ ಇದ್ದಕ್ಕಿದ್ದಂತೆ ಸ್ಫೋಟ ಸಂಭವಿಸಿತ್ತು. ಘಟನೆಯಿಂದ ಶಾಸಕ ಹ್ಯಾರಿಸ್ ಕಾಲಿಗೆ ಗಾಯವಾಗಿತ್ತು. ವೇದಿಕೆಯಲ್ಲಿದ್ದ ಇತರೆ ಮೂವರು ಕೂಡ ಗಾಯಗೊಂಡಿದ್ದರು. ಶಾಸಕರು ಸೇರಿ ಗಾಯಾಳುಗಳನ್ನು ಸೇಂಟ್ ಫಿಲೋಮಿನಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಂದು ಹ್ಯಾರಿಸ್ ಡಿಸ್ಚಾರ್ಜ್ ಆಗುವ ಸಾಧ್ಯತೆಯಿದೆ.
ಹಂದಿಯನ್ನು ಹೊಡೆಯಲು ಬಳಸುವ ಮದ್ದು ಸ್ಫೋಟಗೊಂಡಿದೆ ಎಂಬ ಮಾಹಿತಿ ಪ್ರಾಥಮಿಕ ತನಿಖೆ ವೇಳೆ ಲಭ್ಯವಾಗಿದೆ. ಯಾರೋ ಉದ್ದೇಶಪೂರ್ವಕವಾಗಿಯೇ ಈ ಕೃತ್ಯ ಎಸಗಿದ್ದಾರೆ. ಕೂದಲೆಳೆ ಅಂತರದಲ್ಲಿ ನನ್ನ ಅಪ್ಪ ಬಚಾವಾಗಿದ್ದಾರೆ ಎಂದು ಹ್ಯಾರಿಸ್ ಅವರ ಮಗ ನಲಪಾಡ್ ಹೇಳಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾದ ಎರಡೇ ದಿನಗಳಲ್ಲಿ ಬೆಂಗಳೂರಿನಲ್ಲಿ ಈ ಘಟನೆ ನಡೆದಿದೆ. ಮಂಗಳೂರು ಬಾಂಬ್ ಪ್ರಕರಣದ ಆರೋಪಿ ಆದಿತ್ಯ ರಾವ್ ನಿನ್ನೆ ಬೆಳಗ್ಗೆ ಪೊಲೀಸರ ಮುಂದೆ ಶರಣಾಗಿದ್ದ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ