ಬಾಗಲಕೋಟೆ (ಮಾ.7): ಜಿಲ್ಲಾ ಪಂಚಾಯತ್ ಅಧ್ಯಕ್ಷೆಯಾಗಿ ಬಿಡುವಿಲ್ಲದ ಕೆಲಸದಲ್ಲಿ ಮುಳುಗಿರುವವರು ಬಾಯಕ್ಕ ಮೇಟಿ ಕೇವಲ ರಾಜಕಾರಣಿ ಮಾತ್ರವಲ್ಲ, ಮಾದರಿ ಕೃಷಿಕ ಮಹಿಳೆ ಎಂಬುದನ್ನು ಸಾಬೀತು ಮಾಡಿದ್ದಾರೆ. ರಾಜಕೀಯದ ಜೊತೆ ಜೊತೆಗೆ ಕೃಷಿ, ಕುರಿ ಸಾಕಾಣಿಕೆ ಮಾಡುತ್ತಾ ಇತರರಿಗೆ ಸ್ಪೂರ್ತಿಯಾಗಿದ್ದಾರೆ.
ರಾಜಕೀಯದ ನಡುವೆಯೂ ಸದ್ದಿಲ್ಲದಂತೆ ಕೃಷಿ, ಕುರಿ ಸಾಕಾಣಿಕೆಯಲ್ಲಿ ತೊಡಗಿರುವ ಬಾಯಕ್ಕ ಮೇಟಿ ಜಿಲ್ಲೆಯ ಮಹಿಳೆಯರಿಗೆ ಮಾದರಿಯಾಗಿದ್ದಾರೆ. ಅಲ್ಲದೇ ಈ ಕುರಿತು ಸಲಹೆ ಪಡೆಯಲು ಹಲವು ಮಹಿಳೆಯರು ಅವರನ್ನು ಅರಸಿ ಬರುತ್ತಿದ್ದಾರೆ.
ಜಿಲ್ಲೆಯ ಹಿರೇಮಾಗಿ ಗ್ರಾಮದಲ್ಲಿ ಕುರಿ ಸಾಕಾಣಿಕೆ ಮಾಡುತ್ತಿರುವ ಬಾಯಕ್ಕ ಮೇಟಿ ಇದರಿಂದಲೇ ಲಕ್ಷ ಲಕ್ಷ ಆದಾಯ ಕೂಡ ಗಳಿಸುತ್ತಿದ್ದಾರೆ. ಸದ್ಯ ಇವರ ಶೆಡ್ನಲ್ಲಿ 152 ಕುರಿಗಳಿದ್ದು, ಅಕ್ಕರೆಯಿಂದ ಕುರಿ ಮರಿಗಳಿಗೆ ಹಾಲುಣಿಸುತ್ತಾ ಆರೈಕೆ ಮಾಡುತ್ತಿದ್ದಾರೆ. ಇದರ ಜೊತೆಗೆ 18 ಎಕರೆ ಜಮೀನಿನಲ್ಲಿ ಬಾಳೆ, ಕಬ್ಬು, ಮೀನು ಸಾಕಾಣಿಕೆ ಮಾಡುತ್ತಿದ್ದಾರೆ.
ಬಿಡುವಿಲ್ಲದ ಕೃಷಿ ಕಾಯಕದ ಜೊತೆ ಜೊತೆಗೆ ಅಲ್ಲಿನ ಜನರ ಸಂಕಷ್ಟವನ್ನು ಆಲಿಸುತ್ತಾರೆ. ಪಂಚಾಯತ್ ಅಧ್ಯಕ್ಷೆಯಾಗಿರುವ ಹಿನ್ನೆಲೆ ಸಕಾಲಕ್ಕೆ ಜಿಲ್ಲೆಯಲ್ಲಿ ಸಭೆ ನಡೆಸಿ, ಕಚೇರಿಯ ಕಾರ್ಯ ವೈಖರಿಗೂ ಲಕ್ಷ್ಯ ಕೊಡುತ್ತಾ ಅಭಿವೃದ್ಧಿ ಕಡೆಗೂ ಗಮನ ನೀಡುತ್ತಿದ್ದಾರೆ. ಹೆಣ್ಣೊಬ್ಬಳು ಏಕಕಾಲಕ್ಕೆ ಎಲ್ಲಾ ಕ್ಷೇತ್ರಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಳ್ಳಬಲ್ಲಳು ಎಂಬುದನ್ನು ಬಾಯಕ್ಕ ಸಾಬೀತು ಮಾಡಿ ತೋರಿಸಿದ್ದಾರೆ.
ಸ್ಪೂರ್ತಿಯಾದ ಸಿದ್ದರಾಮಯ್ಯ
ಬಾಯಕ್ಕ ಮೇಟಿಯ ಈ ಕುರಿ ಸಾಕಾಣಿಕೆಗೆ ಸ್ಪೂರ್ತಿಯಾಗಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ. 2018ರಲ್ಲಿ ಬಾಗಲಕೋಟೆಯ ಹುನಗುಂದ ಪಟ್ಟಣದಲ್ಲಿ ಸಾಧನಾ ಸಮಾವೇಶಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅವರಿಗೆ ಕುರಿ ಮರಿಯೊಂದನ್ನು ಉಡುಗೊರೆಯಾಗಿ ಅಭಿಮಾನಿಗಳು ನೀಡಿದ್ದರು. ಈ ಕುರಿಯನ್ನು ಬಾಯಕ್ಕ ಮೇಟಿಗೆ ನೀಡಿದ ಸಿದ್ದರಾಮಯ್ಯ, ಕುರಿ ಸಾಕಾಣಿಕೆ ಆರಂಭಿಸುವಂತೆ ಸಲಹೆ ನೀಡಿದ್ದರಂತೆ. ಸಿದ್ದರಾಮಯ್ಯ ನೀಡಿದ ಈ ಕುರಿಯಿಂದ ಈಗ ನೂರಾರು ಕುರಿಗಳ ಸಾಕಾಣಿಕೆ ಮಾಡುತ್ತಿದ್ದಾರೆ.
ಇದನ್ನು ಓದಿ: ಕೋಲಾರ ರೈತರಿಗೆ ಅದೃಷ್ಟ ತಂದ ಕೊರೋನಾ; ರೇಷ್ಮೆ ಗೂಡಿಗೆ ಭರ್ಜರಿ ಬೆಲೆ, ಬೆಳೆಗಾರರಲ್ಲಿ ಹರ್ಷ
ಜಿಲ್ಲಾ ಪಂಚಾಯತ್ ಅಧ್ಯಕ್ಷೆಯಾಗಿ ಬಿಡುವಿಲ್ಲದೇ, ತಮ್ಮ ಕುಟುಂಬದ ಮೂಲ ಕುಸುಬಾದ ಕೃಷಿ ಜೊತೆ ಕುರಿ ಸಾಕಾಣಿಕೆ ಮಾಡುತ್ತಾ ಇವರ ಕೆಲಸ ಹಲವು ಮಹಿಳೆಯರಿಗೆ ಸ್ಪೂರ್ತಿಯಾಗಿದೆ.
(ವರದಿ: ರಾಚಪ್ಪ ಬನ್ನಿದಿನ್ನಿ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ