ದೇಶದಲ್ಲಿ ಕೊರೊನಾ ನಾಲ್ಕನೇ ಅಲೆಯ (Corona 4th Wave) ಆತಂಕ ಶುರುವಾಗಿದೆ. ಕೊರೊನಾ ಮೊದಲ ಮತ್ತು ಎರಡನೇ ಅಲೆ ಜನರನ್ನು ಎಲ್ಲಾ ವಿಧದಿಂದಲೂ ಸಂಕಷ್ಟಕ್ಕೆ ಸಿಲುಕಿಸಿತ್ತು. ಮೂರನೇ ಅಲೆ ಅಷ್ಟು ಪರಿಣಾಮ ಬೀರದ ಹಿನ್ನೆಲೆ ಜನರು ನಿಟ್ಟುಸಿರು ಬಿಟ್ಟಿದ್ದರು. ಕೊರೊನಾ ಮೂರನೇ ಅಲೆ ಬರುವ ವೇಳೆಗಾಗಲೇ ವ್ಯಾಕ್ಸಿನ್ (Corona Vaccine) ಬಂದಿತ್ತು ಮತ್ತು ಮಹಾಮಾರಿ ಬಗ್ಗೆ ಜಾಗೃತಿ ಸಹ ಮೂಡಿತ್ತು. 2019ರಲ್ಲಿ ಚೀನಾದಲ್ಲಿ (China Corona) ಹುಟ್ಟಿಕೊಂಡ ಈ ಮಹಾಮಾರಿ ಬಗ್ಗೆ ಕಾಲಜ್ಞಾನಿಯೊಬ್ಬರು 300 ವರ್ಷಗಳ ಹಿಂದೆಯೇ ಬರೆದು ಇರಿಸಿದ್ದರು. ಕಾಲಜ್ಞಾನಿ ಸದಾಶಿವ ಅಜ್ಜನ (Sadashiva Ajja) ಪವಾಡ ತಿಳಿದಿರುವ ಜನರು ಇಲ್ಲಿಗೆ ಬಂದು ನೈವೇದ್ಯ ಅರ್ಪಿಸಿ ದರ್ಶನ ಪಡೆಯುತ್ತಾರೆ. ಪ್ರತಿ ವರ್ಷ ಈ ಮಠದಲ್ಲಿ ಕಾಲಜ್ಞಾನ ನುಡಿಯಲಾಗುತ್ತದೆ. ಇಲ್ಲಿ ನುಡಿಯಲಾಗುವ ಭವಿಷ್ಯ ಸತ್ಯ ಆಗಿವೆ ಎಂಬುವುದು ಇಲ್ಲಿಯ ಭಕ್ತರ ನಂಬಿಕೆ.
ಎಲ್ಲಿದೆ ಈ ಮಠ?
ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ಹೊಳೆ ಬಬಲಾದಿ ಎಂಬ ಗ್ರಾಮದಲ್ಲಿ ಈ ಮಠ ಇದೆ. ಹಾಗಾಗಿ ಇದನ್ನು ಬಬಲಾದಿ ಮಠ ಎಂದು ಕರೆಯಲಾಗುತ್ತದೆ. ಶ್ರೀ ಗುರು ಚಕ್ರವರ್ತಿ ಬಬಲಾದಿ ಸದಾಶಿವಮೂರ್ತಿ ಮಹಾಪುರುಷರು ಇಲ್ಲಿಯೇ ಲಿಂಗೈಕ್ಯರಾದ ಹಿನ್ನೆಲೆ ಮಠ ನಿರ್ಮಾಣ ಮಾಡಲಾಗಿದೆ. ಪ್ರತಿ ಶಿವರಾತ್ರಿ ದಿನ ಜಾತ್ರೆ ಮತ್ತು ಜಾನುವಾರುಗಳ ಜಾತ್ರೆ ನಡೆಯುತ್ತದೆ.
ಸದಾಶಿವ ಮಠದ ಅರ್ಚಕರು ಪ್ರತಿವರ್ಷ ಭವಿಷ್ಯ ನುಡಿಯುತ್ತಾರೆ. ಮುನ್ನೂರು ವರ್ಷಗಳ ಹಿಂದೆಯೇ ಬಾಯಿಗೆ ಜಾಳಿಗೆ ಬರುತ್ತೆ ಎಂದು ತಾಮ್ರದ ಹಾಳೆಯಲ್ಲಿ ಬರೆಯಲಾಗಿತ್ತು. ಇದು ಎಲ್ಲರಲ್ಲೂ ಅಚ್ಚರಿಯನ್ನುಂಟು ಮಾಡಿದೆ.
ಕೊರೊನಾಗೆ ಹೆದರಿ ಮಠಕ್ಕೆ ಬರುತ್ತಿರುವ ಜನರು
ಕೊರೊನಾ ನಾಲ್ಕನೇ ಅಲೆ ಆತಂಕ ಶುರುವಾಗಿರುವ ಹಿನ್ನೆಲೆ ಮಠಕ್ಕೆ ಬರುತ್ತಿರುವ ಭಕ್ತರ ಸಂಖ್ಯೆ ಏರಿಕೆ ಕಂಡಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಮಠದ ಸಿಬ್ಬಂದಿ ಹೇಳುತ್ತಿದ್ದಾರೆ. ಕೈಯಲ್ಲಿ ಮದ್ಯ ಹಿಡಿದು ಸರದಿ ಸಾಲಿನಲ್ಲಿ ನಿಂತು ಅಜ್ಜನ ದರ್ಶನ ಪಡೆಯುತ್ತಿದ್ದಾರೆ.
ನೆರೆಯ ಜಿಲ್ಲೆಗಳಿಂದಲೂ ಭಕ್ತರ ಆಗಮನ
ವಿಸ್ಕಿ, ರಮ್, ಓಟಿ, ನಾನಾ ಬ್ರಾಂಡ್ಗಳ ಮದ್ಯ ತೆಗೆದುಕೊಂಡು ಸದಾಶಿವ ಅಜ್ಜನ ದರ್ಶನಕ್ಕೆ ಭಕ್ತರು ಬರುತ್ತಿದ್ದಾರೆ. ಬೆಳಗಾವಿ, ಬಾಗಲಕೋಟೆ, ವಿಜಯಪುರ, ರಾಯಚೂರು, ಹುಬ್ಬಳ್ಳಿ-ಧಾರವಾಡ ಜಿಲ್ಲೆಗಳಿಂದ ಬಬಲಾದಿ ಮಠಕ್ಕೆ ಭಕ್ತರು ಬರುತ್ತಿದ್ದಾರೆ.
ಕಾಲಜ್ಞಾನದ ಭವಿಷ್ಯ ಹೇಳುವ ಬಬಲಾದಿ ಮಠ
ಚಂದ್ರಗಿರಿಯ ಮೂಲ ಸಂಸ್ಥಾನದ ಶ್ರೀ ಸದಾಶಿವ ಮುತ್ಯಾರ ಮಠ ಪವಾಡದ ಕ್ಷೇತ್ರ. ಇದನ್ನು ಬೆಂಕಿಯ ಬಬಲಾದಿ ಎಂದು ಕರೆಯುತ್ತಾರೆ. ಈ ಜಾಗದಲ್ಲಿ ನಿಂತು ಮಾತನಾಡಿದರೆ ಅದು ಸುಳ್ಳಾಗದು ಎಂಬ ಪ್ರತೀತಿ ಇದೆ.
ಬಿಳಿಗೋಡೆಯ ಮೇಲೆ ಕಪ್ಪು ಚುಕ್ಕಿಯಂತೆ ಇಲ್ಲಿ ಮಾತನಾಡಿದ್ದು ಹುಸಿಯಾಗದು ಎಂಬುದು ಕಳೆದ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಕಾಲಜ್ಞಾನ ಕೇಳಲು ಸುತ್ತಮುತ್ತಲ ಜಿಲ್ಲೆಗಳ ಹಾಗೂ ಅನ್ಯ ರಾಜ್ಯಗಳ ಭಕ್ತರೂ ಬರುತ್ತಾರೆ.
ಮದ್ಯದ ನೈವೇದ್ಯ ಏಕೆ?
ಇಲ್ಲಿ ಮದ್ಯದ ನೈವೇದ್ಯ ಅರ್ಪಿಸಲೂ ಒಂದು ಕಾರಣವಿದೆ. ಇಲ್ಲಿನ ಸಿದ್ಧಿ ಪುರುಷ ಚಿಕ್ಕಪ್ಪಯ್ಯ ತಮ್ಮ ಸಿದ್ಧಿಗಾಗಿ ಬಿಂದುವಿನ ಪ್ರಮಾಣದಲ್ಲಿ ಮದ್ಯವನ್ನು ಸೇವಿಸಿ ಸಾಧನೆಗೆ ಕುಳಿತುಕೊಳ್ಳುತ್ತಿದ್ದರು. ಆದರೆ, ಕಾಲಾಂತರದಲ್ಲಿ ಇದನ್ನೇ ಪ್ರಮುಖವಾಗಿ ಪರಿಗಣಿಸಿರದ ಭಕ್ತರು ಈ ಗದ್ದುಗೆಗೆ ಮದ್ಯದ ನವೈದ್ಯ ಅರ್ಪಿಸಲಾರಂಭಿಸಿದರು. ಈ ಕುರಿತು ಮಠದ ಆಡಳಿತ ಮಂಡಳಿಯವರು ಎಷ್ಟೇ ತಿಳುವಳಿಕೆ ಮೂಡಿಸಿದರೂ ಪ್ರಯೋಜನವಾಗುತ್ತಿಲ್ಲ. ಮದ್ಯದ ನೈವೇದ್ಯ ಸಾಂಗವಾಗಿ ಮುಂದುವರೆದುಕೊಂಡು ಬಂದಿದೆ.
ಇದನ್ನೂ ಓದಿ: Viral Video: ನಿಜವಾಯ್ತು ಬಬಲಾದಿ ಮಠದ ಮಾತು; 9 ತಿಂಗಳ ಹಿಂದೆಯೇ ತಿರುಪತಿ ಜಲಪ್ರಳದ ಭವಿಷ್ಯ ನುಡಿದಿದ್ದ ಸಿದ್ದು ಮುತ್ಯಾ!
ಜುಟ್ಟು ಇಲ್ಲದ ತೆಂಗಿನಕಾಯಿ
ಈ ಮಠದಲ್ಲಿ ಇನ್ನೊಂದು ವಿಶಿಷ್ಠ ಸಂಪ್ರದಾಯವಿದೆ. ಬಹುತೇಕ ಎಲ್ಲ ಮಠ ಮಂದಿರಗಳಲ್ಲಿ ತೆಂಗಿನಕಾಯಿ ಒಡೆಯುವುದು ಸಾಮಾನ್ಯ. ಜನರೂ ಸಾಮಾನ್ಯವಾಗಿ ಜುಟ್ಟು ಇರುವ ತೆಂಗಿನಕಾಯಿಯನ್ನೇ ಒಡೆಯುತ್ತಾರೆ. ಆದರೆ, ಇಲ್ಲಿ ಮಾತ್ರ ಇದಕ್ಕೆ ತದ್ವಿರುದ್ದ. ಇಲ್ಲಿ ಜುಟ್ಟು ಇಲ್ಲದ ಬೋಳ ತೆಗಿನಕಾಯಿ ಒಡೆಯುತ್ತಾರೆ. ಇದು ಯಾಕೆ ಗೊತ್ತಾ? ಹೊಳೆ ಬಬಲಾದಿ ಮಠದವರ ಜುಟ್ಟು ಯಾರ ಕೈಗೂ ಸಿಕ್ಕಿಲ್ಲ ಎಂಬುದರ ಪ್ರತೀಕ ಇದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ