news18-kannada Updated:February 16, 2020, 9:03 AM IST
ಅಸಾದುದ್ದೀನ್ ಓವೈಸಿ.
ಕಲಬುರ್ಗಿ; ಗುಂಡು ಹೊಡೆಯೋದಾದ್ರೆ ನನ್ನ ಮೇಲೆ ಹೊಡೀರಿ. ನಿಮಗೆ ಧೈರ್ಯವಿದ್ದರೆ ನನ್ನನ್ನು ಜೈಲಿಗೆ ಕಳುಹಿಸಿ ನೋಡ್ತೇನೆ ಎಂದು ಎಐಎಂಐಎಂ ಮುಖಂಡ ಅಸಾದುದ್ದೀನ್ ಓವೈಸಿ ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.
ಕಲಬುರ್ಗಿಯ ಪೀರ್ ಬಂಗಾಲಿ ಮೈದಾನದಲ್ಲಿ ಶನಿವಾರ ಸಂಜೆ ಎಐಎಂಐಎಂ ನೇತೃತ್ವದಲ್ಲಿ ಆಯೋಜಿಸಿದ್ದ ಪೌರತ್ವ ವಿರೋಧಿ ಸಮಾವೇಶದಲ್ಲಿ ಭಾಗಿಯಾಗಿ ಕೇಂದ್ರ ಸರ್ಕಾರದ ಕಾರ್ಯವೈಖರಿ ಕುರಿತು ಟೀಕಾಪ್ರಹಾರ ನಡೆಸಿರುವ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ, "ಎನ್.ಪಿ.ಆರ್. ಮತ್ತು ಎನ್.ಆರ್.ಸಿ ಒಂದೇ ನಾಣ್ಯದ ಎರಡು ಮುಖಗಳು. ಪೌರತ್ವ ಜಾರಿ ಮೂಲಕ ಮುಸ್ಲಿಂರ ಮೇಲೆ ಷಡ್ಯಂತ್ರ ನಡೆಸಲಾಗುತ್ತಿದೆ. ನಾವು ಜೀವಂತವಿರಬೇಕೆಂದರೆ ಸಂಘರ್ಷ ಅನಿವಾರ್ಯ. ಪ್ರಧಾನಿ ಮೋದಿ, ಶಾ, ಆರ್.ಎಸ್.ಎಸ್.ಗೆ ನಾವು ಹೆದರುವ ಅವಶ್ಯಕತೆಯಿಲ್ಲ ಎಂದು ಗುಡುಗಿದ್ದಾರೆ.
"ಬೀದರ್ ಘಟನೆಯನ್ನು ಖಂಡಿಸಿದ ಓವೈಸಿ, ಶಾಲೆಯಲ್ಲಿ ನಡೆದ ಡ್ರಾಮಾವೊಂದರಲ್ಲಿ ವಿದ್ಯಾರ್ಥಿನಿ ಚಪ್ಪಲಿಯಿಂದ ಹೊಡೆಯೋದಾಗಿ ಹೇಳಿದ್ರೆ ಅವರ ತಾಯಿಯನ್ನು ಜೈಲಿಗೆ ಹಾಕ್ತಾರೆ. ಮೋದಿ ಮತ್ತು ರಾಜ್ಯ ಬಿಜೆಪಿ ಸರ್ಕಾರ ದೇಶದ್ರೋಹದ ಆರೋಪದ ಮೇಲೆ ಪ್ರಕರಣ ದಾಖಲಿಸಿದೆ. ಆ ಬಾಲಕಿ ಮಾಡಿದ ಅಪರಾಧವಾದ್ರೂ ಏನು" ಎಂದು ಪ್ರಶ್ನಿಸಿದರು.
"ಆ ಬಾಲಕಿ ಹೇಳಿದಂತೆ ನಾವೂ ಹೇಳ್ತೇವೆ. ಮೋದಿ ಇರಲಿ ಯಾರೇ ಇರಲಿ ನಾವು ಹೇಳ್ತೇವೆ ಎನ್ನುವ ಮೂಲಕ ವಿದ್ಯಾರ್ಥಿನಿ ಚಪ್ಪಲಿಯಿಂದ ಹೊಡೆಯೋದಾಗಿ ಹೇಳಿದ್ದನ್ನು ಓವೈಸಿ ಸಮರ್ಥಿಸಿಕೊಂಡರು. ಧೈರ್ಯವಿದ್ದರೆ ನನ್ನ ವಿರುದ್ಧ ಪ್ರಕರಣ ದಾಖಲಿಸಿ ಜೈಲಿಗೆ ಹಾಕಲಿ. ಗೋಲಿ ಹೊಡೆಯೋದಾದ್ರೆ ಎಷ್ಟು ಜನರ ಮೇಲೆ ಹೊಡೀತಾರೆ ಹೊಡೀಲಿ. ನಿಮ್ಮ ಗೋಲಿಗಳು ಖಾಲಿಯಾಗುತ್ತೆ ಹೊರತು, ನಮಗೇನೂ ಆಗಲ್ಲ.
ಪೌರತ್ವ ವಿರೋಧಿ ಹೋರಾಟದಲ್ಲಿ ಹೋರಾಟಗಾರರ ಮೇಲೆ ಗುಂಡು ಹಾರಿಸಿದರೆ ಹೊಡೆದವನು ಅಪ್ರಾಪ್ತ ಎಂದು ಸಮರ್ಥಿಸಿಕೊಳ್ಳಲಾಗುತ್ತದೆ. ಹಾಗಿದ್ದರೆ ಚಪ್ಪಲಿಯಿಂದ ಹೊಡಯೋದಾಗಿ ಹೇಳಿದ ವಿದ್ಯಾರ್ಥಿನಿ ಎಷ್ಟು ವರ್ಷದವಳು ಎಂದು ಪ್ರಶ್ನಿಸಿದ ಓವೈಸಿ, ಹಿಂದೂ-ಮುಸ್ಲಿಂ ಸಮುದಾಯದ ನಡುವೆ ಗೋಡೆ ಕಟ್ಟಲಾಗುತ್ತಿದೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ವಿರುದ್ಧವೂ ವಾಗ್ದಾಳಿ ನಡೆಸಿದ ಓವೈಸಿ, ಮುಸ್ಲಿಮರನ್ನು ಹಾಳು ಮಾಡಿದ್ದೇ ಕಾಂಗ್ರೆಸ್ ಪಕ್ಷ . ತನ್ನ ಮತ ಬ್ಯಾಂಕ್ ಗಾಗಿ ನಮ್ಮನ್ನು ಬಳಸಿಕೊಂಡು ಬಿಸಾಡಿದ್ದು, ಈಗ ಏನೂ ಮಾಡಲಾರದ ಅಸಹಾಯಕತೆಯಲ್ಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ
ಇದನ್ನೂ ಒದಿ : ಹೊಸಪೇಟೆ ಅಪಘಾತ ಪ್ರಕರಣ; ದಿಢೀರ್ ಬೆಳವಣಿಗೆಯಲ್ಲಿ ಪ್ರತ್ಯಕ್ಷನಾದ ಸಚಿವ ಆರ್. ಅಶೋಕ್ ಮಗ; ಬಲಗೊಂಡ ಅನುಮಾನ
First published:
February 16, 2020, 9:03 AM IST