ಗದಗ (ಏ. 14): ಜಿಲ್ಲೆಯ ರೈತರು ನೂರಾರು ವರ್ಷಗಳಿಂದ ಹಣ್ಣಿನ ರಾಜನನ್ನು ಬೆಳೆದು ಹೆಸರು ಮಾಡಿದ್ದರು .ರಾಜ್ಯ ಹಾಗೂ ಅಂತರ್ ರಾಜ್ಯಗಳಿಗೂ ಹಣ್ಣಿನ ರಾಜನಾದ ಮಾವು ರಫ್ತು ಮಾಡುತ್ತಾ ರೈತವರ್ಗ ಲಕ್ಷ ಲಕ್ಷ ಹಣ ಗಳಿಸುತ್ತಿದ್ದರು. ಆದರೆ ಈ ವರ್ಷ ಜಿಲ್ಲೆಯ ಜನರಿಗೆ ಮಾವು ಕೈಕೊಟ್ಟಿದೆ. ಹವಾಮಾನ ವೈಪರಿತ್ಯ, ಅಕಾಲಿಕ ಮಳೆ ಹಾಗೂ ವಿವಿಧ ರೋಗಗಳ ಹಾವಳಿಯಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಸಾಲಸೋಲ ಮಾಡಿ ಮಾವು ಬೆಳೆದ ರೈತರು ಗೋಳಾಡುತ್ತಿದ್ದಾರೆ. ಕೂಡಲೇ ಸರ್ಕಾರ ನಮ್ಮಗೆ ಸೂಕ್ತವಾದ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ. ಜಿಲ್ಲೆಯ ಹುಲಕೋಟಿ ಗ್ರಾಮ ಆಫೋಸ್ ಮಾವು ಬೆಳೆಯುವ ಮೂಲಕ ಹೆಸರು ಮಾಡಿದ್ದರು. ಹುಲಕೋಟಿ ಮಾವು ಎಂದರೆ ಎಲ್ಲಿಲ್ಲದ ಬೇಡಿಕೆ ಸಹ ಇತ್ತು. ಬೇಡಿಕೆಗೆ ತಕ್ಕಂತೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತಿತ್ತು. ಆದರೆ ಈ ವರ್ಷ ಮಾವು ಇಳುವರಿ ತುಂಬಾನೇ ಕುಂಟಿತವಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಮಾವು ಬೆಳೆದ ರೈತಾಪಿ ವರ್ಗ ಸಂಕಷ್ಟಕ್ಕೆ ಸಿಲುಕುತ್ತಿದೆ.
ಹುಲಕೋಟಿ, ಹೊಸಳ್ಳಿ, ಕುರ್ತಕೋಟಿ, ಶ್ಯಾಗೋಟಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಸುಮಾರು 250 ಕ್ಕೂ ಹೆಚ್ಚು ಹೆಕ್ಟರ್ ಪ್ರದೇಶದಲ್ಲಿ ರೈತರು ಮಾವು ಬೆಳೆಯುತ್ತಿದ್ದಾರೆ. ಪ್ರತಿ ಎಕರೆಗೆ 25-30 ಸಾವಿರ ರೂಪಾಯಿ ಖರ್ಚು ಮಾಡುತ್ತಾರೆ. ಆದರೆ ಈ ಬಾರಿ ಖರ್ಚು ಮಾಡಿದ ಅಸಲನ್ನು ಸಹ ಪಡೆಯೋಕಾಗುತ್ತಿಲ್ಲ. ಏಕೆಂದರೆ ಪ್ರತಿ ವರ್ಷ ಮಾವಿನ ಗಿಡಗಳು 400-500 ಹಣ್ಣುಗಳನ್ನ ನೀಡುತ್ತಿದ್ದವು. ಆದರೆ ಈ ವರ್ಷ 40-50 ಹಣ್ಣು ಮಾತ್ರ ನೀಡುತ್ತಿವೆ. ಹೀಗಾಗಿ ರೈತರು ಕಂಗಾಲಾಗಿದ್ದಾರೆ. ಇನ್ನು ಸರ್ಕಾರ ಮಾವು ಬೆಳೆದ ರೈತರಿಗೆ ವಿಮೆ ಹಣವನ್ನು ಸಹ ನೀಡಿಲ್ಲ, ಈ ಬಾರಿಯಾದರೂ ಮಾವು ಬೆಳೆ ಹಾನಿಯಾಗಿರುವ ಕಾರಣ ಸೂಕ್ತವಾದ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಸರ್ಕಾರ ಸೂಕ್ತವಾದ ಪರಿಹಾರ ನಿಡೋ ಪ್ರೋತ್ಸಾಹ ನಿಡದೇ ಇದ್ದಲ್ಲಿ ಬರು ಬರುತ್ತಾ ಮಾವು ಬೆಳೆಯೋ ರೈತರ ಸಂಖ್ಯೆ ಕ್ರಮೇಣ ಕಡಿಮೆಯಾಗುವ ಪರಿಸ್ಥಿತಿ ಬರುತ್ತೆ ಅಂತಾ ರೈತರು ಎಚ್ಚರಿಕೆ ನೀಡಿದ್ದಾರೆ.
ಹುಲಕೊಟಿ ಮಾವು ಮಾರುಕಟ್ಟೆಯಲ್ಲಿಯೂ ಬೇಡಿಕೆ ಹೆಚ್ಚು. ಆದ್ರೆ ಈ ಬಾರಿ ಮಾರುಕಟ್ಟೆಗೆ ಆ ಸ್ಥಾನ ತುಂಬುವುದಕ್ಕೆ ಆಫೂಸ್ ಮಾವು ಬರೋದೆ ಅನುಮಾನವಾಗಿದೆ. ಹಗಲು-ರಾತ್ರಿ ಎನ್ನದೆ ಶ್ರಮ ಪಟ್ಟು ಮಾವು ಬೆಳೆದಿದ್ದ ರೈತರು ಇಳುವರಿ ಬರದೆ ಗೋಳಾಡುತ್ತಿದ್ದಾರೆ. ಆಫೂಸ್ ಮಾವಿಗೆ ಹವಾಮಾನ ವೈಪರೀತ್ಯ ಹಾಗೂ ಅಕಾಲಿಕ ಮಳೆಯಿಂದ ಎಲೆ ಚಿಕ್ಕಿ ರೋಗ, ಬೂದು ರೋಗ, ಜಿಗಿ ರೋಗ ಸೇರಿದಂತೆ ವಿವಿಧ ತರಹದ ಕೀಟಗಳ ಹಾವಳಿ ಹೆಚ್ಚಾಗಿದೆ. ಪರಿಣಾಮ ಮಾವು ಬೆಳೆದ ರೈತರನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.
ಒಟ್ಟಾರೆಯಾಗಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತೆ ಇದೆ ಜಿಲ್ಲೆಯ ರೈತರ ಸ್ಥಿತಿ. ಸುಮಾರು 250 ಕ್ಕೂ ಹೆಚ್ಚು ಹೆಕ್ಟೆರ್ ಪ್ರದೇಶದಲ್ಲಿ ಬೆಳೆದ ಮಾವು ಸದ್ಯ ರೋಗಗಳಿಂದ ಹಾನಿಯಾಗುತ್ತಿದೆ. ಇನ್ನಾದರೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಕ್ಷಣ ಸಮೀಕ್ಷೆ ನಡೆಸಿ ರೈತರಿಗೆ ಸೂಕ್ತವಾದ ಪರಿಹಾರ ನೀಡಬೇಕಿದೆ. ಮಾವಿಗೆ ಬರುತ್ತಿರುವ ರೋಗಗಳ ಹತೋಟಿಗೆ ವಿಜ್ಞಾನಿಗಳನ್ನು ಕರೆಯಿಸಿ ರೋಗದ ಬಗ್ಗೆ ಪರೀಕ್ಷೆ ನಡೆಸಿ ರೋಗಗಳ ಹಾವಳಿಯಿಂದ ಮಾವು ಬೆಳೆಯುವ ರೈತರನ್ನು ಮುಕ್ತ ಮಾಡಬೇಕಿದೆ.
(ವರದಿ: ಸಂತೋಷ ಕೊಣ್ಣೂರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ