ಬೆಂಗಳೂರು(ಫೆ. 12): ಅರಣ್ಯ ಕಾಯ್ದೆ ಉಲ್ಲಂಘನೆ ಕುರಿತು ಎರಡು ಪ್ರಕರಣಗಳಿದ್ದರೂ ನೂತನ ಸಚಿವ ಆನಂದ್ ಸಿಂಗ್ಗೆ ಅರಣ್ಯ ಖಾತೆಯನ್ನು ನೀಡಿರುವ ಬಗ್ಗೆ ವಿವಾದ ಮೂಡಿದೆ. ಈ ಕುರಿತು ಮೊದಲ ಬಾರಿ ಪ್ರತಿಕ್ರಿಯಿಸಿರುವ ಅವರು, ವಾಹನ ಇದೆ ಅಂದ್ಮೇಲೆ ನಿಯಮ ಉಲ್ಲಂಘನೆ ಕೇಸ್ ಇದ್ದೇ ಇರುತ್ತದೆ. ಹಾಗೆಯೇ ನಮ್ಮದು ಗಣಿ ವ್ಯವಹಾರದ ಕುಟುಂಬ. ಗಣಿ ಕಂಪನಿ ಮೇಲೆ ಅರಣ್ಯ ನಿಯಮ ಉಲ್ಲಂಘನೆ ಪ್ರಕರಣಗಳು ಸಹಜ ಎಂದರು.
ವಿಧಾನಸೌಧದಲ್ಲಿ ಈ ಕುರಿತು ಮಾತನಾಡಿದ ಅವರು, ಪೂರ್ವಜರ ಕಾಲದಿಂದಲೂ ಗಣಿಗಾರಿಕೆ ನಡೆಸುತ್ತಿರುವ ಕುಟುಂಬ ನಮ್ಮದು. ಹೀಗಾಗಿ ಸಣ್ಣಪುಟ್ಟ ಪ್ರಕರಣಗಳು ಇರುತ್ತವೆ. ಆದರೆ, ಈ ಪ್ರಕರಣಗಳಿಂದ ಯಾವುದೇ ತೊಂದರೆ ಆಗುವುದಿಲ್ಲ. ಖಾತೆಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಭರವಸೆ ನೀಡಿದರು.
ಈ ಮೊದಲು ಆಹಾರ ಮತ್ತು ನಾಗರಿಕ ಖಾತೆ ನೀಡಿ ನಂತರ ಅರಣ್ಯ ಖಾತೆ ನೀಡಿದ ಕುರಿತು ಪ್ರತಿಕ್ರಿಯಿಸಿದ ಅವರು, ಯಾವ ಶಾಸಕರಿಗೆ ಯಾವ ಖಾತೆ ನಿಭಾಯಿಸುವ ಶಕ್ತಿ ಇದೆ ಎಂಬುದು ಸಿಎಂ ಬಿ.ಎಸ್.ಯಡಿಯೂರಪ್ಪಗೆ ಚೆನ್ನಾಗಿ ಗೊತ್ತು. ಹೀಗಾಗಿ ಬದಲಾವಣೆ ಮಾಡಿದ್ದಾರೆ ಎನ್ನಿಸುತ್ತದೆ. ಖಾತೆ ಬದಲಾವಣೆಗೆ ಸಿಎಂ ಬಳಿ ಬೇಡಿಕೆ ಇಟ್ಟಿರಲಿಲ್ಲ. ಇಂತಹ ಖಾತೆಯೇ ಬೇಕೆಂದೂ ಕೂಡ ಕೇಳಿರಲಿಲ್ಲ. ಅರಣ್ಯ ಖಾತೆ ನೀಡಿರುವುದು ತೃಪ್ತಿ ಇದೆ. ಮತ್ತೆ ಖಾತೆ ಬದಲಾಗಲ್ಲ ಎಂದು ನಿರೀಕ್ಷೆ ವ್ಯಕ್ತಪಡಿಸಿದರು.
ಪ್ರತ್ಯೇಕ ಜಿಲ್ಲೆ ಕೂಗು ಮರೆತಿಲ್ಲ:
ವಿಜಯನಗರವನ್ನು
ಪ್ರತ್ಯೇಕ ಜಿಲ್ಲೆಯಾಗಿ ಘೋಷಿಸಲು ಸಿಎಂ ನಿರಾಕರಿಸಿದ್ದಾರೆ ಎಂಬ ವರದಿ ಕುರಿತು ಮಾತನಾಡಿದ ಅವರು, ಈ ವಿಜಯನಗರ ಪ್ರತ್ಯೇಕ ಜಿಲ್ಲೆ ಮಾಡುವ ವಿಚಾರವನ್ನು ನಾನು ಮರೆತಿಲ್ಲ. ಈ ಮಾತಿಗೆ ಈಗಲೂ ಬದ್ಧನಾಗಿದ್ದೇನೆ. ಮುಖ್ಯಮಂತ್ರಿಗಳು ಬಜೆಟ್ ಮಂಡನೆ ಹಾಗೂ ಸಂಪುಟ ವಿಸ್ತರಣೆಯಲ್ಲಿ ತಲ್ಲೀನರಾದ ಕಾರಣಕ್ಕೆ ಇದಕ್ಕೆ ತಡೆಯಾಗಿದೆ. ಆದರೆ ಇದಕ್ಕೆ ಸಮಯ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನು ಓದಿ: ಸಚಿವಗಿರಿ ಸಿಕ್ಕರೂ ಆನಂದ್ ಸಿಂಗ್ಗೆ ಸಂತಸವಿಲ್ಲ; ಹೊಸ ಜಿಲ್ಲೆ ರಚನೆ ವಿಚಾರದಲ್ಲಿ ರೆಡ್ಡಿ-ರಾಮುಲು ಪಾಳಯದ ಮೇಲುಗೈ
ಇನ್ನು, ಈ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಯಡಿಯೂರಪ್ಪ, ಸಮಯ ಬಂದಾಗ ಜಿಲ್ಲೆಯ ಎಲ್ಲಾ ಶಾಸಕರ ವಿಶ್ವಾಸಕ್ಕೆ ತೆಗೆದುಕೊಂಡು ನಿರ್ಧಾರ ಕೈ ಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ