ಬೆಂಗಳೂರು: 2023ರ ವಿಧಾನಸಭಾ ಚುನಾವಣೆ (2023 Karnataka Elections) ಹಿನ್ನೆಲೆಯಲ್ಲಿ ರಾಜ್ಯ ಪ್ರವಾಸ ಕೈಗೊಂಡಿರುವ ಗೃಹ ಸಚಿವ ಅಮಿತ್ ಶಾ (Home Minister Amit Shah) ಅವರು ಇಂದು ದೇವನಹಳ್ಳಿ ಬಳಿ ನಡೆಯುತ್ತಿರುವ ಬೂತ್ ವಿಜಯ್ ಸಂಕಲ್ಪ ಸಮಾವೇಶಕ್ಕೆ ಚಾಲನೆ ನೀಡಿದರು. ಇದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್ (Minister R.Ashok) ಅವರು, ಅಮಿಶಾ ರಾಜ್ಯಕ್ಕೆ ಆಗಮಿಸುತ್ತಿದ್ದಂತೆ ಚುನಾವಣಾ ಯುದ್ಧ ಶುರುವಾಗಿದೆ. ಅವರು ಆ ರತ್ನ ಈ ರತ್ನ ಅಂತ ಓಡಾಡಿಕೊಂಡಿದ್ದಾರೆ. ಆದರೆ ಹಿಂದೆಂದಿಗೂ ಗೆಲ್ಲದ ರೀತಿಯಲ್ಲಿ ಬಿಜೆಪಿ ಈ ಬಾರಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಬಗ್ಗೆ ವರದಿ ಬಂದಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜೆಡಿಎಸ್ ನಾಯಕರು ಆ ರತ್ನ ಈ ರತ್ನ ಅಂತಾ ಇದ್ದಾರೆ. ಆದರೆ ಅಮಿತ್ ಶಾ ಬಂದ ಕೂಡಲೇ ಚುನಾವಣಾ ಯದ್ಧ ಶುರುವಾಗಿದೆ. ಈಗ ದೆಹಲಿಯವರು ಮಾಡಿರುವ ಸಮೀಕ್ಷೆಯಲ್ಲಿ ಹಿಂದೆಂದಿಗೂ ಗೆಲ್ಲದ ರೀತಿಯ ಹೆಚ್ಚು ಗೆಲ್ಲುವ ಬಗ್ಗೆ ವರದಿ ಬಂದಿದೆ.
ಬೆಂಗಳೂರಲ್ಲಿ 20 ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತದೆ ಎಂದು ವರದಿ ಹೇಳಿದೆ. ಅಮಿತ್ ಶಾ ಮತ್ತು ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸುತ್ತಿದ್ದಂತೆ ಶೇಕಡಾ 20ರಷ್ಟು ವೋಟ್ ಮತ್ತೆ ಜಾಸ್ತಿ ಆಗುತ್ತದೆ ಎಂದು ವರದಿಯಲ್ಲಿ ತಿಳಿಸಿದ್ದಾರೆ. ಅದಕ್ಕಾಗಿಯೇ ಅಮಿತ್ ಶಾ ಅವರಿಗೆ ಚುನಾವಣಾ ಚಾಣಕ್ಯ ಅಂತ ಬಿರುದು ಕೊಟ್ಟಿದ್ದಾರೆ.
ಡಿಕೆ ಶಿವಕುಮಾರ್ ಕನಕಪುರ ಕ್ಷೇತ್ರಕ್ಕೆ ಮಾತ್ರ ಲೀಡರ್
ಗೃಹ ಸಚಿವ ಅಮಿತ್ ಶಾ ಅವರು ಕಾಲಿಟ್ಟ ಕಡೆಗಳೆಲ್ಲ ಗೆಲವು ಸಿಕ್ಕಿದೆ. ಆದರೆ ರಾಹುಲ್ ಗಾಂಧಿ ಕಾಲಿಟ್ಟ ಕಡೆಗಳೆಲ್ಲ ಸೋಲು ಎದುರಾಗಿದೆ. ಅದಕ್ಕಾಗಿ ರಾಹುಲ್ ಗಾಂಧಿ ಸೋಲಿನ ಸರದಾರ, ಅಮಿತ್ ಶಾ ಗೆಲುವಿನ ಸರದಾರ. ಈ ಚುನಾವಣೆ ಆದ ಮೇಲೆ ಕಾಂಗ್ರೆಸ್ ದಿಕ್ಕಾಪಾಲಾಗಿ ಹೋಗಲಿದೆ. ಸಿದ್ದರಾಮಯ್ಯ ಇದು ನನ್ನ ಕೊನೆ ಚುನಾವಣೆ ಅಂತ ಹೇಳ್ತಿದ್ದಾರೆ, ಇತ್ತ ಡಿಕೆ ಶಿವಕುಮಾರ್ ಅವರ ಕ್ಷೇತ್ರಕ್ಕೆ ಮಾತ್ರ ಲೀಡರ್. ರಾಜ್ಯದಲ್ಲಿ ಅವರ ಪ್ರಭಾವ ಏನು ಇಲ್ಲ. ಅವರು ಕನಕಪುರಕ್ಕೆ ಮಾತ್ರ ಸೀಮಿತ ಅಷ್ಟೇ. ಬೆಂಗಳೂರಲ್ಲಿ ಜಾಸ್ತಿ ಸೀಟು ಗೆದ್ದರೆ, ಇಡೀ ರಾಜ್ಯದಲ್ಲಿ ಹೆಚ್ಚು ಗೆದ್ದಂತೆ ಎಂದರು.
ರಾಹುಲ್ ಗಾಂಧಿ ಗಡ್ಡ ಬಿಡ್ಡು ಸನ್ಯಾಸಿಯಾಗಿದ್ದಾರೆ
ಇವತ್ತು ಕಾಶ್ಮೀರ ನಮ್ಮದಾಗಿದೆ. ಇಂತಹ ಭರವಸೆಗಳನ್ನು ನಾವು ಈಡೇರಿಸುತ್ತಿದ್ದೇವೆ. ಇನ್ನೂ 20 ವರ್ಷಗಳ ಕಾಲ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು. ಆದರೆ ಮೋದಿಯವರು ಹೇಳಿದ್ರು, ಇನ್ನೂ 40 ವರ್ಷ ದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿ ಇರಬೇಕು ಅಂತ.
ಬೆಂಗಳೂರು ಮತ್ತೆ ಉತ್ತರ ಕರ್ನಾಟಕದಲ್ಲಿ ಪ್ರವಾಸ ಮಾಡ್ತೀನಿ ಅಂತ ಮೋದಿ ಅವರೇ ಅಮಿತ್ ಶಾ ಅವರಿಗೆ ಹೇಳಿದ್ದಾರೆ. ನರೇಂದ್ರ ಮೋದಿಯವರು ಹದಿನೈದು ದಿನಗಳಿಗೊಮ್ಮೆ ಬರ್ತೀನಿ ಅಂದಿದ್ದಾರೆ. ಅದಕ್ಕಾಗಿ ಇವರು ಬೆಂಕಿ-ಬಿರುಗಾಳಿ. ಬೆಂಕಿ ಬಿರುಗಾಳಿಯನ್ನು ತಡೆಯುವ ಶಕ್ತಿ ಯಾವ ಸಿದ್ದರಾಮಯ್ಯ ಗೂ, ಇಲ್ಲ ಡಿಕೆ ಶಿವಕುಮಾರ್ಗೂ ಇಲ್ಲ. ಈಗಾಗಲೇ ರಾಹುಲ್ ಗಾಂಧಿ ಗಡ್ಡ ಬಿಡ್ಡು ಸನ್ಯಾಸಿಯಾಗಿದ್ದಾರೆ ಎಂದು ವ್ಯಂಗ್ಯವಾಡಿದರು.
ಮೀಸಲಾತಿ ಹೋರಾಟಗಾರರಿಗೂ ಟಾಂಗ್
ಇದೇ ವೇಳೆ ಮೀಸಲಾತಿ ಹೋರಾಟ ಕುರಿತಂತೆ ಪ್ರತಿಕ್ರಿಯೆ ನೋಡಿದ ಅಶೋಕ್ ಅವರು, ಮೀಸಲಾತಿಗಾಗಿ ಬೇರೆಯವರೆಲ್ಲ ಹೋರಾಟ ಮಾಡಿದ್ದರು. ಆದರೆ ಒಕ್ಕಲಿಗರು ಹೋರಾಟ ಮಾಡಿದ್ರಾ? ಸಿಎಂ ಅವರಿಗೆ ಮನವಿ ಮಾಡಿದರು. ಸಿಎಂ ಪರಿಶೀಲನೆ ನಡೆಸಿ ಸಮುದಾಯಕ್ಕೆ ಮೀಸಲಾತಿ ಕೊಟ್ಟಿದ್ದಾರೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಪಂಚಮಸಾಲಿ ಸಮುದಾಯದ ಹೋರಾಟಗಾರರಿಗೆ ಟಾಂಗ್ ಕೊಟ್ಟರು.
ಸಮೃದ್ಧ, ಸಂತುಷ್ಟ ಕರ್ನಾಟಕ ನಿರ್ಮಿಸುವ ನಿಟ್ಟಿನಲ್ಲಿ ಈ ಬಾರಿ ಪೂರ್ಣ ಬಹುಮತದೊಂದಿಗೆ ಬಿಜೆಪಿ ಸರ್ಕಾರವನ್ನು ರಚಿಸುವ ಸಂಕಲ್ಪ ಮಾಡಬೇಕು.
- ಶ್ರೀ @AmitShah, ಕೇಂದ್ರ ಗೃಹ ಮತ್ತು ಸಹಕಾರ ಸಚಿವರು pic.twitter.com/kDg1UFE8Yc
— BJP Karnataka (@BJP4Karnataka) December 31, 2022
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ