ಬೆಳಗಾವಿ : ರಾಜ್ಯದಲ್ಲಿ ವಿಧಾನಸಭಾ ಚುನಾವಣೆ (Assembly Election) ಹತ್ತಿರ ಬರುತ್ತಿದೆ. ಈಗಾಗಲೆ ಬಿಜೆಪಿ (BJP) , ಕಾಂಗ್ರೆಸ್ (Congress) ಹಾಗೂ ಜೆಡಿಎಸ್ (JDS) ಪಕ್ಷಗಳು ಯಾತ್ರೆಗಳು, ಸಮಾವೇಶಗಳನ್ನು ಮಾಡುವ ಮೂಲಕ ಪ್ರಚಾರ ಕಾರ್ಯ ಆರಂಭಿಸಿವೆ. ಆಡಳಿತ ಪಕ್ಷ ಬಿಜೆಪಿ ಕೂಡ ತಂಡಗಳಾಗಿ ಜನಸಂಕಲ್ಪ ಯಾತ್ರೆಯ ಮೂಲಕ ರಾಜ್ಯದ ಮತದಾರರ ಬಳಿ ಮತ್ತೊಮ್ಮೆ ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡುತ್ತಿದೆ. ಇದಕ್ಕಾಗಿ ಕೇಂದ್ರದ ನಾಯಕನ್ನು ಬಳಸಿಕೊಂಡು ಮುಂದಿನ ಚುನಾವಣೆಗೆ ಭರ್ಜರಿ ತಯಾರಿ ನಡೆಸಿದೆ. ಕಳೆದ ಒಂದು ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi), ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಇದೀಗ ಇಂದು ಗೃಹಸಚಿವ ಅಮಿತ್ ಶಾ (Amit Shah) ರಾಜ್ಯಕ್ಕೆ ಆಗಮಿಸಿ ರಾಜ್ಯ ನಾಯಕರಿಗೆ ಸಾಥ್ ನೀಡಿದ್ದು, ಬೆಳಗಾವಿಯಲ್ಲಿದ್ದ ಮೂಲ ಬಿಜೆಪಿ ಹಾಗೂ ವಲಸೆ ಬಿಜೆಪಿಗರ ನಡುವಿನ ಶೀಥಲ ಸಮರವನ್ನು ನಿಲ್ಲಿಸಿ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಒಟ್ಟಾಗಿ ಶ್ರಮಿಸಬೇಕೆಂದು ಪಾಠ ಮಾಡಿ ಹೋಗಿದ್ದಾರೆ ಎನ್ನಲಾಗಿದೆ.
ಪರಿಷತ್ ಚುನಾವಣೆಯಲ್ಲಿ ಸೋಲು
ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ನಾಯಕರಲ್ಲೇ ಆಂತರಿಕ ಕಲಹದಿಂದಲೇ ಪಕ್ಷ ಹಲವು ಪರಿಣಾಮಗಳು ಉಂಟಾಗಿವೆ. ಪರಿಣಾಮ ಕಳೆದ ವಿಧಾನ ಪರಿಷತ್ ಹಾಗೂ ವಾಯುವ್ಯ ಮತಕ್ಷೇತ್ರದ ಶಿಕ್ಷಕರ ಚುನಾವಣೆಯಲ್ಲಿ ಬಿಜೆಪಿಗೆ ಸೋಲುಂಟಾಗಿತ್ತು. ಹಿಂದಿನಿಂದಲೂ ಬೆಳಗಾವಿ ಜಿಲ್ಲೆ ಬಿಜೆಪಿಯ ಭದ್ರಕೋಟೆಯಾಗಿತ್ತು. ಆದರೆ, ಪ್ರಸ್ತುತ ಕಾಂಗ್ರೆಸ್ ಪಕ್ಷ ಬಿಜೆಪಿಯ ಭದ್ರ ಕೋಟೆಯನ್ನು ಛಿದ್ರಗೊಳಿಸಲು ತಂತ್ರವನ್ನು ರೂಪಿಸುತ್ತಿರುವುದು ಕೇಂದ್ರ ವರಿಷ್ಠರ ಆತಂಕಕ್ಕೆ ಕಾರಣವಾಗಿದೆ. ಹಾಗಾಗಿ ಇಂದು ನಡೆದ ಸಭೆಯಲ್ಲಿ ಅಮಿತ್ ಶಾ 50 ಕ್ಕೂ ಹೆಚ್ಚು ಜಿಲ್ಲಾ ನಾಯಕರ ಜೊತೆಗೆ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.
ಸ್ಥಳೀಯ ನಾಯಕರಿಗೆ ಸಂಘಟನೆ ಪಾಠ
ಬೆಳಗಾವಿಯ ಯು ಕೆ 27 ಹೋಟೆಲ್ನಲ್ಲಿ ಬಿಜೆಪಿ ಮಹತ್ವದ ಸಭೆ ನಡೆಸಿದ್ದು, ಬೆಳಗಾವಿ ನಗರ, ಬೆಳಗಾವಿ ಗ್ರಾಮಾಂತರ, ಚಿಕ್ಕೋಡಿ ಭಾಗದ ಹಾಲಿ, ಮಾಜಿ ಶಾಸಕರು ಭಾಗಿ ಯಾಗಿದ್ದರು. ಸುಮಾರು 2 ಗಂಟೆಗಳ ಕಾಲ ಜಿಲ್ಲೆಯ ನಾಯಕರಿಗೆ ಅಮಿತ್ ಶಾ ಸಂಘಟನಾತ್ಮಕ ಪಾಠ ಮಾಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಬೆಳಗಾವಿ ಪ್ರಮುಖ ಜಿಲ್ಲೆಯಾಗಿದೆ. ಜಿಲ್ಲೆಯಲ್ಲಿ ಭಿನ್ನಾಭಿಪ್ರಾಯ, ಅಸಮಾಧಾನ ಬಿಟ್ಟು ಕೆಲಸ ಮಾಡಿ. ಯಾವುದೇ ಗುಂಪುಗಾರಿಕೆ, ವ್ಯಕ್ತ ಪ್ರತಿಷ್ಠೆಗೆ ಅವಕಾಶ ಇಲ್ಲ ಎಂದು ಅಮಿತ್ ಶಾ ಖಡಕ್ ವಾರ್ನಿಂಗ್ ನೀಡಿದ್ದಾರೆ ಎಂದು ತಿಳಿದುಬಂದಿದೆ.
ವಿಕ್ಟರಿ ಸಿಂಬಲ್ ತೋರಿಸಿದ ಅಮಿತ್ ಶಾ
ಬೆಳಗಾವಿಯಲ್ಲಿ ಮಹತ್ವದ ಸಭೆ ಮುಗಿಸಿ ಹೊರಬಂದ ಬಳಿಕ ಅಮಿತ್ ಶಾ ವಿಕ್ಟರಿ ಸಿಂಬ್ ಪ್ರದರ್ಶಿಸಿ ಸ್ಥಳೀಯ ನಾಯಕರ ನಡುವಿನ ಅಸಮಧಾನವನ್ನು ಶಮನ ಮಾಡಿರುವಂತೆ ವಿಕ್ಟರಿ ಸಿಂಬಲ್ ತೋರಿಸಿದರು. ಸಭೆ ಮುಗಿದ ಬಳಿಕ ಬೆಳಗಾವಿ ವಿಮಾನ ನಿಲ್ದಾಣದಿಂದ ದೆಹಲಿಗೆ ವಾಪಸ್ ಆಗಿದ್ದಾರೆ.
ಸ್ಥಳೀಯ ಬಿಜೆಪಿ ನಾಯಕರ ಕಲಹ
ಕಳೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಹಾಂತೇಶ್ ಕವಟಗಿಮಠ ಹಾಗೂ ವಾಯುವ್ಯ ಶಿಕ್ಷಕರ ಮತಕ್ಷೇತ್ರದ ಅಭ್ಯರ್ಥಿ ಅರುಣ್ ಶಹಾಪುರ್ ಸೋಲು ಅನುಭವಿಸಿದ್ದರು. ಈ ಪ್ರಮುಖ ಎರಡು ಸ್ಥಾನಗಳನ್ನು ಕಳೆದುಕೊಂಡ ಬಿಜೆಪಿಗೆ ಭಾರಿ ಮುಖಭಂಗ ಅನುಭವಿಸಿತ್ತು. ಈ ಎರಡು ಸ್ಥಾನಗಳು ಕೈತಪ್ಪಲು ಸ್ಥಳೀಯ ಬಿಜೆಪಿ ನಾಯಕರ ಒಳಜಗಳವೇ ಕಾರಣ ಎಂಬುದು ಚರ್ಚೆಗೆ ಗ್ರಾಸವಾಗಿತ್ತು. ಸದ್ಯ ರಾಜ್ಯ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಹೈಕಮಾಂಡ್ ಹೆಚ್ಚು ಸ್ಥಾನಗಳನ್ನು ಗೆಲ್ಲಲು ತಳ ಮಟ್ಟದಿಂದಲೇ ಕಾರ್ಯ ಪ್ರವೃತ್ತರಾಗಿದ್ದಾರೆ. ಇಂದು ಅಮಿತ್ ಶಾ ಸಭೆ ಮೂಲಕ ಶಮನಗೊಳಿಸಿದ್ದಾರೆ ಎಂದು ತಿಳಿಸಿದೆ.
18 ಕ್ಷೇತ್ರಗಳನ್ನು ಗೆಲ್ಲುತ್ತೇವೆ
ಸಭೆಯ ನಂತರ ಮಾತನಾಡಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಬೆಳಗಾವಿಯಲ್ಲಿ ಬಿಜೆಪಿ ಪರ ಅಲೆ ಇದೆ. ಬೆಳಗ್ಗೆಯಿಂದ ನೋಡಿದ ಎಲ್ಲಾ ಕಾರ್ಯಕ್ರಮಗಳು ಬಹಳ ಯಶಸ್ವಿಯಾಗಿವೆ. ನನಗೆ ಸಮಾಧಾನ ಆಗಿದೆ, ತೃಪ್ತಿಯಾಗಿದೆ ಎನ್ನುವ ಮಾತುಗಳನ್ನು ಅಮಿತ್ ಶಾ ಹೇಳಿದ್ದಾರೆ.
ಬೆಳಗಾವಿಯಲ್ಲಿ ನಾವು ಪ್ರಯತ್ನ ಮಾಡಿದರೆ ಹದಿನೆಂಟಕ್ಕೆ ಹದಿನೆಂಟು ಸ್ಥಾನಗಳನ್ನು ಗೆಲ್ಲಲು ಸಾಧ್ಯತೆ ಇದೆ. ಈಗ ಹದಿಮೂರು ಸೀಟ್ ಗೆದ್ದಿದ್ದು ಎಲ್ಲರೂ ಪ್ರಯತ್ನ ಮಾಡಿ ಬೆಳಗಾವಿ ಎಲ್ಲಾ ಸೀಟ್ ಗೆಲ್ಲಬೇಕು. ಮುಂಬರುವ ಚುನಾವಣೆಯಲ್ಲಿ ಪೂರ್ಣ ಬಹುಮತದೊಂದಿಗೆ ಕರ್ನಾಟಕದಲ್ಲಿ 140ಕ್ಕೂ ಹೆಚ್ಚು ಸೀಟ್ ಗೆಲ್ಲುವುದರ ಮೂಲಕ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು.
ಅಮಿತ್ ಶಾ ನಂಬಿಯೇ ಪಕ್ಷಕ್ಕೆ ಬಂದಿದ್ದೇವೆ
ಬೆಳಗಾವಿ ಜಿಲ್ಲಾ ನಾಯಕರ ಜೊತೆ ಅಮಿತ್ ಶಾ ಹೈವೋಲ್ಟೇಜ್ ಸಭೆ ವಿಚಾರ ಮಾತನಾಡಿದ ರಮೇಶ್ ಜಾರಕಿಹೊಳಿ, ಅಮಿತ್ ಶಾ ಅವರು 15 ಕ್ಷೇತ್ರ ಗೆಲ್ಲಲು ಸಲಹೆ ಕೊಟ್ಟಿದ್ದಾರೆ. ಅವರು ಹೇಳಿದ ಸಲಹೆಯಂತೆ ನಾವು ಕೆಲಸ ಮಾಡುತ್ತೇವೆ ಎಂದರು. ಇನ್ನು ಭಿನ್ನಮತ ಮರೆತು ಬೆಳಗಾವಿಯ ಎಲ್ಲರೂ ಸಭೆಗೆ ಹಾಜರು ವಿಚಾರವಾದ ಬಗ್ಗೆ ಪ್ರತಿಕ್ರಿಯಿಸಿ, ನಮ್ಮ ಬಾಸ್ ಬಂದಾಗ ಗೈರಾಗುವುದಕ್ಕೆ ಯಾರಿಗಾದರೂ ಧೈರ್ಯ ಇದಿಯಾ?.ಅಮಿತ್ ಶಾ ನಂಬಿಯೇ ಪಕ್ಷಕ್ಕೆ ಬಂದಿದ್ದೇವೆ, ಅವರಿಂದ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಿದೆ ಎಂದು ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ