ಹುಬ್ಬಳ್ಳಿ(ಫೆ.05) : ಹುಬ್ಬಳ್ಳಿಯಲ್ಲಿ ಗರ್ಭಿಣಿಗೆ ವಿಷಪ್ರಾಸನ ಮಾಡಲಾಗಿದೆ. ಅಮಾನವೀಯ ಕೃತ್ಯಕ್ಕೆ ಹೊಟ್ಟೆಯಲ್ಲಿದ್ದ ಐದು ತಿಂಗಳ ಹಸುಗೂಸು ಮೃತಪಟ್ಟಿದೆ. ಗಂಡ ಮತ್ತು ಅತ್ತೆಯ ವಿರುದ್ಧ ಭ್ರೂಣ ಹತ್ಯೆಯ ಆರೋಪ ಕೇಳಿ ಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಹುಬ್ಬಳ್ಳಿಯ ಅಲ್ತಾಫ್ ಪ್ಲಾಟ್ ನಿವಾಸಿ ಶಾಹೀನ್ ಎಂಬುವವರಿಗೆ ಅಬಾರ್ಷನ್ ಆಗಿದೆ. ಹೊಟ್ಟೆಯಲ್ಲಿದ್ದ ಐದು ತಿಂಗಳ ಹಸುಗೂಸು ಮೃತಪಟ್ಟಿದೆ. ಮಗು ಸಾವಿಗೆ ತನ್ನ ಗಂಡ ಇಮ್ರಾನ್ ಖಾನ್ಜಾದೆ ಮತ್ತು ಅತ್ತೆ ಫಾತೀಮಾ ಕಾರಣ ಎಂದು ಶಾಹೀನ್ ಆರೋಪಿಸಿದ್ದಾಳೆ. ಗಂಡ ಮತ್ತು ಅತ್ತೆ ಸೇರಿಕೊಂಡು ವಿಷ ಮಿಶ್ರಿತ ಜ್ಯೂಸ್ ಕುಡಿಯಲು ಕೊಟ್ಟಿದ್ದರು. ಕಹಿಯಾಗಿದ್ದ ಜ್ಯೂಸ್ ಕುಡಿಯಲು ನಿರಾಕರಿಸಿದರೂ ಬಲವಂತವಾಗಿ ಕುಡಿಸಿದ್ದರು. ಹೊಟ್ಟೆ ನೋವಿನಿಂದ ಬಳಲಿದರೂ ಆಸ್ಪತ್ರೆಗೆ ಕರೆದುಕೊಂಡು ಹೋಗಲಿಲ್ಲ. ನೋವು ತಾಳದೆ ಪಕ್ಕದ ಮನೆಯವರಿಗೆ ವಿಷಯ ತಿಳಿಸಿ ಕಿಮ್ಸ್ಗೆ ಬಂದು ದಾಖಲಾಗಬೇಕಾಯಿತು. ಅಷ್ಟರಲ್ಲಿಯೇ ಮಗು ಮೃತಪಟ್ಟಿದೆ. ಗಂಡ ಮತ್ತು ಅತ್ತೆ ವಿಷ ಮಿಶ್ರಿತ ಜ್ಯೂಸ್ ಕೊಟ್ಟು ಭ್ರೂಣ ಹತ್ಯೆ ಮಾಡಿದ್ದಾರೆ ಎಂದು ಶಾಹೀನ್ ದೂರಿದ್ದಾಳೆ.
ಮೊದಲ ಮದುವೆ ವಿಚಾರ ಮುಚ್ಚಿಟ್ಟಿದ್ದರಿಂದ ಕುಟುಂಬ ಕಲಹ
ಇಮ್ರಾನ್ ಖಾನ್ಜಾದೆ ಮತ್ತು ಶಾಹೀನ್ಗೆ ಒಂದು ವರ್ಷದ ಹಿಂದೆ ವಿವಾಹವಾಗಿದೆ. ಇಮ್ರಾನ್ ತಾನು ಮೊದಲೊಂದು ಮದುವೆಯಾಗಿದ್ದ ವಿಚಾರವನ್ನು ಶಾಹೀನ್ಳಿಂದ ಮುಚ್ಚಿಟ್ಟಿದ್ದ. ವಿಷಯ ಶಾಹೀನ್ಗೆ ಗೊತ್ತಾಗಿ ಕುಟುಂಬ ಕಲಹ ಶುರುವಾಗಿತ್ತು. ಇಮ್ರಾನ್ ಕೋಪಗೊಂಡು ಶಾಹಿನ್ಳನ್ನು ಹಿಂಸಿಸುತ್ತಿದ್ದ. ಹಲ್ಲೆ ಮಾಡಿ ತವರು ಮನೆಗೆ ಕಳಿಸಿದ್ದ ಎನ್ನಲಾಗಿದೆ. ಮುಸ್ಲೀಂ ಸಮಾಜದ ಮುಖಂಡರು ಎರಡೂ ಕುಟುಂಬಗಳನ್ನು ಕರೆಸಿ ಜಗಳ ಬಗೆಹರಿಸಿ ಒಂದು ಮಾಡಿದ್ದರು. ಅದಾದ ಮೇಲೆಯೂ ಗಂಡ ಮತ್ತು ಅತ್ತೆ ಚಿತ್ರಹಿಂಸೆ ನೀಡುತ್ತಿದ್ದರು. ಈ ನಡುವೆ ಶಾಹೀನ್ ಗರ್ಭಿಣಿಯಾಗಿದ್ದಾಳೆ. ಸಹಿಸದ ಗಂಡ ಮತ್ತು ಅತ್ತೆ ಜ್ಯೂಸ್ನಲ್ಲಿ ವಿಷಹಾಕಿ ಕುಡಿಸಿದ್ದಾರೆ ಎಂದು ಶಾಹೀನ್ ಕುಟಂಬಸ್ಥರು ಆರೋಪಿಸಿದ್ದಾರೆ.
ತುಮಕೂರಿನಲ್ಲಿ ಕೊರೊನಾ ಭೀತಿ: ವೈದ್ಯಕೀಯ ವಿದ್ಯಾರ್ಥಿ ಮೇಲೆ ನಿಗಾ
ಕಿಮ್ಸ್ ಆಸ್ಪತ್ರೆಯಲ್ಲಿ ಶಾಹೀನ್ಗೆ ಚಿಕಿತ್ಸೆ ನೀಡಲಾಗಿದ್ದು ಸದ್ಯಕ್ಕೆ ಆರೋಗ್ಯವಾಗಿದ್ದಾರೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ತವರು ಮನೆಗೆ ತೆರಳಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕಸಬಾಪೇಟೆ ಠಾಣೆಯ ಪೊಲೀಸರು ಶಾಹೀನ್ ಗಂಡ ಇಮ್ರಾನ್ ಮತ್ತು ಅತ್ತೆ ಫಾತೀಮಾರನ್ನು ಕರೆದು ವಿಚಾರಣೆ ನಡೆಸಿದ್ದಾರೆ. ಮಗುವಿನ ಮೃತದೇಹವನ್ನು ಮರಣೋತ್ತರ ಪರಿಕ್ಷೆಗೆ ಕಳಿಸಲಾಗಿದೆ.
ಶಾಹಿನ್ ಬ್ಲಡ್ ಶ್ಯಾಂಪಲ್ ಕೂಡ ಸಂಗ್ರಹಿಸಿ ಲ್ಯಾಬ್ ಟೆಸ್ಟ್ಗೆ ಕಳಿಸಲಾಗಿದೆ. ಎಫ್ಎಸ್ಎಲ್ ವರದಿ ಬಂದ ನಂತರ ಮಗುವಿನ ಸಾವಿಗೆ ನೈಜ ಕಾರಣ ಏನು ಎನ್ನುವುದು ಗೊತ್ತಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ