news18-kannada Updated:September 27, 2020, 7:49 PM IST
ಐಕ್ಯ ಹೋರಾಟ ಸಮಿತಿ
ಕೊಡಗು(ಸೆ.27): ರಾಜ್ಯ ಸರ್ಕಾರದ ರೈತ ವಿರೋಧಿ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಮತ್ತು ಎಪಿಎಂಸಿ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ನಾಳೆ ಐಕ್ಯ ಹೋರಾಟ ಸಮಿತಿಯು ನಡೆಸುತ್ತಿರುವ ಹೋರಾಟಕ್ಕೆ ಕೊಡಗಿನಲ್ಲೂ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬಿಜೆಪಿಯೇತರ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್, ಎಸ್ಡಿಪಿಐ, ಆರ್ಪಿಐ ಪಕ್ಷ ಸೇರಿದಂತೆ ವಿವಿಧ ಪಕ್ಷಗಳ ನೇತೃತ್ವದಲ್ಲಿ ನಾಳೆ ಹೆದ್ದಾರಿ ಬಂದ್ಗೆ ನಿರ್ಧರಿಸಲಾಗಿದೆ. ಜೊತೆಗೆ ರೈತ ಸಂಘಟನೆಗಳು, ದಲಿತ ಸಂಘರ್ಷ ಸಮಿತಿ, ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಕೊಡಗಿನಲ್ಲಿ ನಾಳೆ ಬಂದ್ ಯಶಸ್ವಿಗೊಳಿಸಲು ಸಿದ್ಧತೆ ಮಾಡಿಕೊಂಡಿವೆ. ಮೈಸೂರು ಮತ್ತು ಕೊಡಗು ಗಡಿಭಾಗವಾದ ಕುಶಾಲನಗರದ ಟೋಲ್ ಗೇಟ್ ಬಳಿ ಹೆದ್ದಾರಿ ಬಂದ್ ಮಾಡಲು ನಿರ್ಧರಿಸಲಾಗಿದೆ. ಇನ್ನು ಹಾಸನ ಕೊಡಗು ಗಡಿಭಾಗವಾದ ಶನಿವಾರಸಂತೆ ಸಮೀಪದ ಬೀಟಿಕಟ್ಟೆ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ಮತ್ತು ರೈತ ಸಂಘದ ಮುಖಂಡರು ಹೆದ್ದಾರಿ ಬಂದ್ ಮಾಡಲು ಸಿದ್ಧತೆ ನಡೆಸಿದ್ದಾರೆ.
ಮಂಗಳೂರು ಮತ್ತು ಕೊಡಗು ಗಡಿಭಾಗವಾದ ಸಂಪಾಜೆಯಲ್ಲೂ ಐಕ್ಯ ಹೋರಾಟ ಸಮಿತಿಯಿಂದ ಹೆದ್ದಾರಿ ಬಂದ್ ಮಾಡಲು ನಿರ್ಧರಿಸಲಾಗಿದೆ. ಇನ್ನು ವಿರಾಜಪೇಟೆ ನಗರದಲ್ಲಿ ಆಟೋ ಚಾಲಕರ ಸಂಘವು ನಾಳೆ ಬೆಳಿಗ್ಗೆ ಆರರಿಂದ ಸಂಜೆ ಆರರ ತನಕ ಆಟೋವನ್ನು ರಸ್ತೆಗೆ ಇಳಿಸದಿರಲು ನಿರ್ಧರಿದೆ.
ಸಿದ್ದಾಪುರದಲ್ಲೂ ಹಮಾಲಿ ಕಾರ್ಮಿಕರು ಮತ್ತು ಸಿಪಿಐಎಂ ಪಕ್ಷಗಳು ಪ್ರತಿಭಟನೆ ನಡೆಸಿ ಬಂದ್ ಮಾಡಲು ನಿರ್ಧರಿಸಿವೆ. ಇದಲ್ಲದೆ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಐಕ್ಯ ಹೋರಾಟ ಸಮಿತಿಯಿಂದ ಬಂದ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಲ್ಲದೆ ಹೋಟೆಲ್ ಮಾಲೀಕರ ಸಂಘವು ನೈತಿಕ ಬೆಂಬಲ ಸೂಚಿಸಿದೆ.
ಇದನ್ನೂ ಓದಿ: ಯಡಿಯೂರಪ್ಪ ಕುಟುಂಬದಿಂದ ವ್ಯಾಪಕ ಭ್ರಷ್ಟಾಚಾರ - ಕಾಂಗ್ರೆಸ್ ಸೋಲಿಸಿದ ಬಗ್ಗೆ ಜನರ ಮರುಕ ; ಸಿದ್ಧರಾಮಯ್ಯ
ಒಟ್ಟಿನಲ್ಲಿ ನಾಳೆ ನಡೆಯುವ ರಾಜ್ಯ ಬಂದ್ ಅಂಗವಾಗಿ ಕೊಡಗಿನಲ್ಲೂ ಬಂದ್ಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹೀಗಾಗಲೇ ಮಡಿಕೇರಿಯಲ್ಲಿ ವಿವಿಧ ಸಂಘ ಸಂಸ್ಥೆಗಳು ಮತ್ತು ರಾಜಕೀಯ ಪಕ್ಷಗಳ ನೇತೃತ್ವದಲ್ಲಿ ಐಕ್ಯ ಹೋರಾಟ ಸಮಿತಿಯು ಸಭೆ ನಡೆಸಿ ಯೋಜನೆ ರೂಪಿಸಿದೆ.
Published by:
Ganesh Nachikethu
First published:
September 27, 2020, 7:47 PM IST