ಹುಬ್ಬಳ್ಳಿ: ನಗರದ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ (Tipu Jayanti) ಆಚರಣೆಗೆ ತಲೆದಂಡವಾಗಿದೆ. ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವಾಗಲೇ ಹುಬ್ಬಳ್ಳಿಯಲ್ಲಿ ರಾಜಕೀಯ (Hubballi Politics) ಬಿರುಸುಗೊಂಡಿದೆ. ಎಐಎಂಐಎಂ (AIMIM) ಪಕ್ಷದಿಂದ ವಿಜಯ್ ಗುಂಟ್ರಾಳ (Vijay Guntral) ಉಚ್ಛಾಟನೆ ಮಾಡಲಾಗಿದೆ. ಗುಂಟ್ರಾಳ ಹುಬ್ಬಳ್ಳಿ - ಧಾರವಾಡ ಪೂರ್ವ ಕ್ಷೇತ್ರದ ಸ್ಪರ್ಧಾಕಾಂಕ್ಷಿಯಾಗಿದ್ದಾರೆ. ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ (Eidgah Ground, Hubballi) ಟಿಪ್ಪು ಜಯಂತಿ ಆಚರಿಸಿ ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಉಚ್ಛಾಟನೆ ಮಾಡಲಾಗಿದೆ. ಎಐಎಂಐಎಂ ಪಕ್ಷ ಉಚ್ಛಾಟನೆ ಬಿಸಿ ಮುಟ್ಟಿಸಿದೆ. ಟಿಕೆಟ್ ಕೇಳಿದ ಮುಖಂಡನಿಗೆ ಉಚ್ಛಾಟನೆ ಶಿಕ್ಷೆ ವಿಧಿಸಲಾಗಿದೆ ಎಂಬ ಮಾತುಗಳು ಸಹ ಹುಬ್ಬಳ್ಳಿಯಲ್ಲಿ ಕೇಳಿ ಬರುತ್ತಿವೆ.
ವಿಜಯ್ ಗುಂಟ್ರಾಳ ಎಐಎಂಐಎಂ ಪಕ್ಷದ ಧಾರವಾಡ ಜಿಲ್ಲಾ ಜಂಟಿ ಕಾರ್ಯದರ್ಶಿಯಾಗಿದ್ದರು. ನವೆಂಬರ್ 9 ರಂದು ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಿಸಿದ್ದರು.
ಉಚ್ಛಾಟನೆಗೆ ವಿಜಯ್ ಗುಂಟ್ರಾಳ ಆಕ್ರೋಶ
ರಾಷ್ಟ್ರೀಯ ಅಧ್ಯಕ್ಷ ಅಸಾದುದ್ದೀನ್ ಓವೈಸಿ ನಿರ್ದೇಶನದಂತೆ ಗುಂಟ್ರಾಳ ಉಚ್ಛಾಟನೆ ಮಾಡಲಾಗಿದೆ ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಲತೀಫ್ ಖಾನ್ ಪಠಾಣ್ ಆದೇಶ ಹೊರಡಿಸಿದ್ದಾರೆ. ಉಚ್ಛಾಟನೆಗೆ ವಿಜಯ್ ಗುಂಟ್ರಾಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಕ್ಷದ ಮುಖಂಡರ ಗಮನಕ್ಕೆ ತಂದೇ ಟಿಪ್ಪು ಜಯಂತಿ ಆಚರಿಸಿದ್ದೇನೆ. ಅದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದವರಿಂದಲೇ ಉಚ್ಛಾಟನೆ ಶಿಕ್ಷೆ ವಿಧಿಸಲಾಗಿದೆ. ಶಿಸ್ತಿನ ನೆಪದಲ್ಲಿ ಉಚ್ಛಾಟನೆ ಮಾಡಲಾಗಿದೆ. ಟಿಪ್ಪು ಜಯಂತಿ ಆಚರಣೆ ಮಾಡಿದ್ದೇ ತಪ್ಪಾ? ನನ್ನನ್ನು ಪಕ್ಷದಿಂದ ಉಚ್ಛಾಟಿಸಿದ್ದು ಕಾನೂನು ಬಾಹಿರ. ಇದರ ಹಿಂದೆ ಪಕ್ಷದ ರಾಜ್ಯ ಕಾರ್ಯದರ್ಶಿ ಲತೀಫ್ಖಾನ್ ಫಠಾಣ್ ಹುನ್ನಾರವಿದೆ ಎಂದು ವಿಜಯ್ ಗುಂಟ್ರಾಳ್ ಆರೋಪಿಸಿದ್ದಾರೆ.
ಪ್ರಸಾದ್ ಅಬ್ಬಯ್ಯಗಾಗಿ ನನ್ನ ಉಚ್ಛಾಟನೆ
ಹುಬ್ಬಳ್ಳಿ- ಧಾರವಾಡ ಪೂರ್ವ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯಗೆ ಅನುಕೂಲ ಮಾಡಲು ನನ್ನನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ. ನಾನು ಪೂರ್ವ ಕ್ಷೇತ್ರದ ಎಐಎಂಐಎಂ ಟಿಕೆಟ್ ಆಕಾಂಕ್ಷಿಯಾಗಿದ್ದೆ. ನನಗೆ ಟಿಕೆಟ್ ತಪ್ಪಿಸಲು ಎಐಎಂಐಎಂ ಮುಖಂಡರಿಗೆ ಪ್ರಸಾದ್ ಅಬ್ಬಯ್ಯ ಲಂಚ ಕೊಟ್ಟಿದ್ದಾರೆ ಎಂದು ಗುಂಟ್ರಾಳ ಆರೋಪಿಸಿದ್ದಾರೆ.
ಓವೈಸಿ ಸಂಪರ್ಕಿಸಿ ದೂರು
ನಾನು ಪೂರ್ವ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವುದು ಶತಸಿದ್ಧ. ನಾನು ಮಾದಿಗ ಸಮಾಜಕ್ಕೆ ಸೇರಿರುವ ಕಾರಣ ಅನ್ಯಾಯ ಮಾಡುತ್ತಿದ್ದಾರೆ. ಪಕ್ಷದಿಂದ ಉಚ್ಛಾಟನೆ ಮಾಡಿರುವುದರ ವಿರುದ್ಧ ಕಾನೂನು ಹೋರಾಟ ಮಾಡ್ತೇನೆ. ಓವೈಸಿಯವರನ್ನು ಸಂಪರ್ಕಿಸಿ ದೂರು ನೀಡುತ್ತೇನೆ ಎಂದು ಹೇಳಿದ್ದಾರೆ.
ನನ್ನ ಜೊತೆ ಬೇರೆ ಬೇರೆ ಪಕ್ಷಗಳು ಸಂಪರ್ಕದಲ್ಲಿವೆ. ಜೆಡಿಎಸ್, ಎಸ್ಡಿಪಿಐ, ಎಎಪಿಗಳಿಂದಲೂ ಸ್ಪರ್ಧಿಸುವಂತೆ ಒತ್ತಡವಿದೆ. ನನ್ನ ಬೆಂಬಲಿಗರ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ತೇನೆ ಅಂತ ನ್ಯೂಸ್ 18 ಗೆ ವಿಜಯ್ ಗುಂಟ್ರಾಳ ತಿಳಿಸಿದ್ದಾರೆ.
ಮಂಡ್ಯದಲ್ಲಿ ಗಿಫ್ಟ್ ಪಾಲಿಟಿಕ್ಸ್
ಮಂಡ್ಯ: ರಾಜ್ಯ ವಿಧಾನಸಭಾ ಚುನಾವಣೆಗೆ (Karnataka Assembly Election) ಕೆಲವೇ ತಿಂಗಳುಗಳು ಬಾಕಿ ಉಳಿದಿವೆ. ಕಳೆದ ಮೂರ್ನಾಲ್ಕು ತಿಂಗಳುಗಳಿಂದಲೇ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಕ್ರಿಯರಾಗಿರುವ ರಾಜಕೀಯ ಮುಖಂಡರು (Political Leaders) ಮತ ಬ್ಯಾಂಕ್ ಭದ್ರ ಮಾಡಿಕೊಳ್ಳುತ್ತಿದ್ದಾರೆ. ಎಂದಿನಂತೆ ಈ ಬಾರಿಯೂ ಗಿಫ್ಟ್ ಪಾಲಿಟಿಕ್ಸ್ (Gift Politics) ಆರಂಭಗೊಂಡಿದೆ. ಚುನಾವಣಾ ನೀತಿ ಸಂಹಿತೆ ಜಾರಿಗೂ ಮುನ್ನವೇ ಮತದಾರರಿಗೆ ಕಾಣಿಕೆ ನೀಡುವ ಕೆಲಸವನ್ನು ಮಾಡುತ್ತಿದ್ದಾರೆ.
ಇದನ್ನೂ ಓದಿ: Karnataka Politics: ಧಾರವಾಡ ಜಿಲ್ಲೆಯ ಮೂವರು ಹಾಲಿ ಶಾಸಕರಿಗೆ ಸಿಗುತ್ತಾ ಶಾಕ್?
ಬೆಳಗಾವಿ ಗ್ರಾಮೀಣ ಶಾಸಕ ಲಕ್ಷ್ಮಿ ಹೆಬ್ಬಾಳ್ಕರ್ (MLA Laxmi Hebbalkar) ಆಪ್ತರು ಸ್ಥಳೀಯರಿಗೆ ಮಿಕ್ಸರ್ ಗ್ರೈಂಡರ್ ನೀಡಿದ್ದರು. ಗಿಫ್ಟ್ ಹಂಚಿಕೆ ವಿಡಿಯೋ ಮಾಡಿದ್ದ ಕಮಲ ನಾಯಕರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದೀಗ ಬಿಜೆಪಿಯ ಸಚಿವ ನಾರಾಯಣಗೌಡರು, ಕೆ.ಆರ್.ಪೇಟೆ ಕ್ಷೇತ್ರದ ಗ್ರಾಮ ಪಂಚಾಯಿತಿ ಸದಸ್ಯರಿಗೆ ಸ್ಮಾರ್ಟ್ ಟಿವಿ (SmartTV) ವಿತರಣೆ ಮಾಡಿದ್ದಾರೆ. ಗಿಫ್ಟ್ ಸ್ವೀಕರಿಸಿರುವ ಗ್ರಾಮ ಪಂಚಾಯ್ತಿ ಸದಸ್ಯರು ಮತ್ತೊಮ್ಮೆ ನಾರಾಯಣಗೌಡರು ಎಂದು ಜೈಕಾರ ಹಾಕಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ