ಕೋಲಾರ: 2023ರ ವಿಧಾನಸಭೆ ಚುನಾವಣೆಗೆ (Assembly Election) ಕೆಲವೇ ತಿಂಗಳುಗಳಿವೆ. ಅತಿ ಹೆಚ್ಚು ಸುದ್ದಿಯಾಗುತ್ತಿರುವುದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) . ಕಳೆದ ಒಂದು ವರ್ಷದಿಂದಲೂ ಕ್ಷೇತ್ರ ಹುಡುಕಾಟದಲ್ಲಿದ್ದ ಅವರು ವರುಣ , ಬಾದಾಮಿ ಹಾಗೂ ಕೋಲಾರ (Kolar) ಕ್ಷೇತ್ರಗಳನ್ನು ಶಾರ್ಟ್ಲಿಸ್ಟ್ ಮಾಡಿಕೊಂಡಿದ್ದರು. ಕಳೆದ ವಾರವಷ್ಟೇ ಕೋಲಾರ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ ಕ್ಷೇತ್ರ ಆಯ್ಕೆ ಮಾಡಿಕೊಳ್ಳುತ್ತಿದ್ದಂತೆಯೇ ಎಲ್ಲಾ ಪಕ್ಷಗಳ ಚಿತ್ತ ಸಿದ್ದರಾಮಯ್ಯನವರತ್ತ ನೆಟ್ಟಿದೆ. ಕೇವಲ ವಿರೋಧಿ ಪಕ್ಷಗಳು ಮಾತ್ರವಲ್ಲದೆ, ಇದೀಗ ಕುರುಬ ಹಾಗೂ ದಲಿತ ಸಮುದಾಯದ (Dalit Community) ಕೆಲವು ಮುಖಂಡರು ಸಿದ್ದರಾಮಯ್ಯನವರನ್ನು ಮಣಿಸುವುದಕ್ಕೆ ನಿಂತಿವೆ.
ಕುರುಬ ಸಮುದಾಯದ ನಾಯಕರಾಗಿರುವ ಸಿದ್ದರಾಮಯ್ಯ ಚಿನ್ನದ ನಾಡು ಕೋಲಾರವನ್ನು ಈ ಬಾರಿ ಚುನಾವಣಾ ಅಖಾಡವನ್ನಾಗಿ ಮಾಡಿಕೊಂಡಿದ್ದಾರೆ. ಜಾತಿವಾರು ಮತಗಳ ಲೆಕ್ಕಾಚಾರದಲ್ಲಿ ಕೋಲಾರವನ್ನು ಆಯ್ಕೆ ಮಾಡಿಕೊಂಡಿದ್ದ ಮಾಜಿ ಸಿಎಂಗೆ ಕುರುಬ ಸಮುದಾಯವೇ ವಿರೋಧ ವ್ಯಕ್ತಪಡಿಸಿದೆ. ಕೆಲವರು ಸಿದ್ದರಾಮಯ್ಯ ಸ್ಪರ್ಧೆಯನ್ನು ವಿರೋಧಿಸಿದರೆ, ಕೆಲವರು ಬೆಂಬಲ ನೀಡುತ್ತಿದ್ದಾರೆ. ಇದೀಗ ಸಿದ್ದರಾಮಯ್ಯ ವಿರುದ್ಧ ಕೆಲವು ದಲಿತ ಸಂಘಟನೆ ಕೂಡ ತಿರುಗಿಬಿದ್ದಿವೆ.
ಸಿದ್ದರಾಮಯ್ಯ ಸೋಲಿಗೆ ದಲಿತಾಸ್ತ್ರ ಪ್ರಯೋಗ
ಕೋಲಾರದಲ್ಲಿ ಕುರುಬ ಸಮುದಾಯದ ವಿರೋಧದ ಬೆನ್ನಲ್ಲೇ ಸಿದ್ದರಾಮಯ್ಯ ದಲಿತ ವಿರೋಧಿ ಎಂದು ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಇತ್ತೀಚೆಗೆ ಜೆಡಿಎಸ್ ಸೇರ್ಪಡೆಯಾದ ಬಾಲಾಜಿ ಚನ್ನಯ್ಯ, ಬಿಜೆಪಿ ಮುಖಂಡ ಸಾಹುಕಾರ್ ಶಂಕರಪ್ಪ, ದಲಿತ ನಾಯಕ ನಾರಾಯಣಸ್ವಾಮಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಪೋಸ್ಟರ್ ಬಿಡುಗಡೆ ಮಾಡಿದರು.
ಇದನ್ನೂ ಓದಿ: Siddaramaiah: ಕೋಲಾರದಲ್ಲಿ ಸಿದ್ದರಾಮಯ್ಯಗೆ ಮೊದಲ ಶಾಕ್; ಮಾಜಿ ಸಿಎಂ ಕನಸಿನ ಕೋಲಾರ ನನಸಾಗಲ್ವಾ?
ದಲಿತ ನಾಯಕರ ವಿರುದ್ಧ ಕುತಂತ್ರ ಆರೋಪ
ದಲಿತರು ರಾಜ್ಯದ ಮುಖ್ಯಮಂತ್ರಿ ಆಗಬಾರದೆಂದು ಜಿ.ಪರಮೇಶ್ವರ್ ವಿರುದ್ದ ಸಿದ್ದರಾಮಯ್ಯ ಕುತಂತ್ರ ನಡೆಸಿದ್ದರು. ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಶ್ರೀನಿವಾಸ ಪ್ರಸಾದ್, ಧ್ರುವನಾರಾಯಣ್, ಕೆಎಚ್ ಮುನಿಯಪ್ಪ ಇವರನ್ನ ಬದಿಗೊತ್ತಿ ವಲಸೆ ಬಂದ ಸಿದ್ದರಾಮಯ್ಯ ಮುಖ್ಯಮಂತ್ರಿ ಆದರು. ಇವರಿಂದಲೇ ಕಾಂಗ್ರೆಸ್ನಲ್ಲಿ ದಲಿತರಿಗೆ ಸಿಎಂ ಸ್ಥಾನ ಕೈ ತಪ್ಪಿದೆ ಎಂದು ಆರೋಪಿಸಿದ್ದಾರೆ.
ಸಿದ್ದರಾಮಯ್ಯ ಸೋತರೆ ದಲಿತ ಸಿಎಂ!
2023ರ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಕೋಲಾರದಲ್ಲಿ ದಲಿತ ವಿರೋಧಿ ಸಿದ್ದರಾಮಯ್ಯರನ್ನ ಸೋಲಿಸಿದರೆ, ರಾಜ್ಯಕ್ಕೆ ದಲಿತ ಮುಖಂಡರು ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಕರೆ ನೀಡಿದರು. ಪತ್ರಿಕಾಗೋಷ್ಟಿ ನಂತರ ಬೀದಿ ಬದಿಯ ಮಳಿಗೆಗಳಿಗೆ ಸಿದ್ದರಾಮಯ್ಯ ದಲಿತ ವಿರೋಧಿ ಎಂಬ ಭಿತ್ತಿ ಪತ್ರ ಹಂಚಲಾಯಿತು. ಸಿದ್ದರಾಮಯ್ಯ ಕೋಲಾರಕ್ಕೆ ಬರ್ತಾರೆ ಅವರನ್ನ ಸೋಲಿಸಿ ಎಂದು ದಲಿತ ನಾಯಕರು ಸಾರ್ವಜನಿಕರಿಗೆ ಕರೆ ನೀಡಿದರು.
ಕೋಲಾರದಲ್ಲಿ ದಲಿತ ಮತಗಳೇ ನಿರ್ಣಾಯಕ
ಜಾತಿವಾರು ಮತಗಳ ಲೆಕ್ಕಾಚಾರ ಗಮನಿಸಿದರೆ ಕೋಲಾರದಲ್ಲಿ ಗೆಲ್ಲಲು ದಲಿತ ಮತದಾರರೇ ನಿರ್ಣಾಯಕವಾಗಿದ್ದಾರೆ. ಕೋಲಾರದಲ್ಲಿ ಪರಿಶಿಷ್ಟ ಜಾತಿ 49 ಸಾವಿರ, ಪರಿಶಿಷ್ಟ ಪಂಗಡ 11 ಸಾವಿರ, ಮುಸ್ಲಿಂ 45 ಸಾವಿರ, ಒಕ್ಕಲಿಗ 18 ಸಾವಿರ ಹಾಗೂ 25 ಸಾವಿರ ಕುರುಬ ಸಮುದಾಯದ ಮತಗಳಿವೆ. ಇದೀಗ ಕುರುಬ ಸಮುದಾಯ ಮತ್ತು ದಲಿತ ಸಮುದಾಯದ ಕೆಲವು ಗುಂಪು ಸಿದ್ದರಾಮಯ್ಯ ವಿರುದ್ಧ ತಿರುಗಿಬಿದ್ದಿದ್ದಾರೆ.
ಕುರುಬರ ವಿರೋಧವೇಕೆ?
ಕುರುಬ ಸಮುದಾಯದ ವಿರೋಧ ಏಕೆಂದರೆ ಕೋಲಾರದಲ್ಲಿ ವರ್ತೂರ್ ಪ್ರಕಾಶ್ ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಅವರೂ ಕೂಡ ಕುರುಬ ಸಮುದಾಯದ ನಾಯಕ. ಬಿಜೆಪಿ ಕೂಡ ಪ್ರಕಾಶ್ ಅವರಿಗೆ ಟಿಕೆಟ್ ನೀಡುವುದು ಬಹುತೇಕ ಖಚಿತ ಎನ್ನಲಾಗಿದೆ. ಹೀಗಾಗಿ ಇಲ್ಲಿಗೆ ಮತ್ತೊಬ್ಬ ಕುರುಬ ನಾಯಕ ಬೇಡ. ವರ್ತೂರು ಪ್ರಕಾಶ್ ಅವರನ್ನೇ ಗೆಲ್ಲಿಸೋಣ, ಅವರು ಸಮೂದಾಯಕ್ಕೆ ಬೆಂಬಲ ನೀಡುತ್ತಾ ಬಂದಿದ್ದಾರೆ ಎಂದು ಜಿಲ್ಲಾ ಕುರುಬ ಸಂಘದ ಅಧ್ಯಕ್ಷ ಮುನಿಯಪ್ಪ ವರ್ತೂರ್ ಬೆಂಬಲಕ್ಕೆ ನಿಂತಿದ್ದಾರೆ.
ಮತ್ತೊಂದೆಡೆ ಕುರುಬ ಸಂಘದ ಕಾರ್ಯಾಧ್ಯಕ್ಷ ಜಯರಾಮ್ ಸಿದ್ದರಾಮಯ್ಯ ಪರ ನಿಂತಿದ್ದಾರೆ. ಸಿದ್ದರಾಮಯ್ಯ ನಮ್ಮ ನಾಯಕರು ದೊಡ್ಡ ನಾಯಕರು ಸ್ಪರ್ಧೆಯಲ್ಲಿರುವಾಗ ಚಿಕ್ಕ ನಾಯಕರಿಗೆ ಬೆಂಬಲ ನೀಡಿದರೆ ಸಮುದಾಯಕ್ಕೆ ನಷ್ಟವಾಗುತ್ತದೆ. ವೈಯಕ್ತಿಕವಾಗಿ ನಾವು ಕಾಂಗ್ರೆಸ್, ಅದರಲ್ಲೂ ಸಿದ್ದರಾಮಯ್ಯ ಪರ ಮತಯಾಚನೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ