ಚನ್ನಪಟ್ಟಣ, ರಾಮನಗರ: ರಾಜ್ಯ ರಾಜಕೀಯ ರಂಗೇರುತ್ತಿದೆ. ವಿಧಾನಸಭಾ ಚುನಾವಣೆ (assembly elections) ಘೋಷಣೆಗೂ ಮುನ್ನವೇ ತಂತ್ರ-ಪ್ರತಿತಂತ್ರಗಳು ಜೋರಾಗಿದೆ. ಈಗಾಗಲೇ ರಾಮನಗರ (Ramanagar) ಜಿಲ್ಲೆಯ ಚನ್ನಪಟ್ಟಣದ (Channapatna) ಹಾಲಿ ಶಾಸಕರಾಗಿರುವ ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ (HD Kumaraswamy), ಈ ಬಾರಿಯೂ ಅಲ್ಲಿಂದಲೇ ಸ್ಪರ್ಧಿಸೋದಾಗಿ ಘೋಷಿಸಿದ್ದಾರೆ. ಹೀಗಾಗಿ ಎಚ್ಡಿಕೆಯವರಿಗೆ ಟಕ್ಕರ್ ಕೊಟ್ಟು, ಚನ್ನಪಟ್ಟಣದಲ್ಲಿ ಅವರನ್ನು ಮಣಿಸಲು ಕಾಂಗ್ರೆಸ್ (Congress) ಸಖತ್ ಪ್ಲಾನ್ ಮಾಡುತ್ತಿದೆ. 2004ರಲ್ಲಿ ಅಂದಿನ ಕನಕಪುರ (Kanakapur) ಲೋಕಸಭಾ ಕ್ಷೇತ್ರ ಅಂದರೆ ಇಂದಿನ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ (Bengaluru Rural loksabha constituency) ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರು (HD Deve Gowda) ಸ್ಪರ್ಧಿಸಿದ್ದರು. ಆಗ ಅವರ ಎದುರು ಆಗಿನ ಪತ್ರಕರ್ತೆ ತೇಜಸ್ವಿನಿ ಗೌಡ (Tejashwini_Gowda) ಅವರನ್ನು ಕಣಕ್ಕಿಳಿಸಿ, ಗೆಲ್ಲಿಸಿದ್ದು ಡಿಕೆ ಶಿವಕುಮಾರ್ (DK Shivakumar). ಇದೀಗ ಎಚ್ಡಿಕೆ ವಿರುದ್ಧವೂ ಕಾಂಗ್ರೆಸ್ ಅಂಥದ್ದೇ ರಣತಂತ್ರ ರೂಪಿಸಿದೆ. ಕುಮಾರಸ್ವಾಮಿ ವಿರುದ್ಧ ನಟಿ, ಮಾಜಿ ಸಂಸದೆ ರಮ್ಯಾ (Actress Ramya Divyaspandana) ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಪ್ಲಾನ್ ಮಾಡಿದೆ ಎನ್ನಲಾಗಿದೆ.
ಎಚ್ಡಿಕೆ ವಿರುದ್ಧ ಸ್ಪರ್ಧಿಸ್ತಾರಾ ನಟಿ ರಮ್ಯಾ?
ಎಚ್ಡಿ ಕುಮಾರಸ್ವಾಮಿ ಅವರನ್ನು ಚನ್ನಪಟ್ಟಣದಲ್ಲಿ ಸೋಲಿಸಲು ಕಾಂಗ್ರೆಸ್ ರಣತಂತ್ರ ರೂಪಿಸುತ್ತಿದೆ. ಒಂದೆಡೆ ಜೆಡಿಎಸ್ನಿಂದ ಎಚ್ಡಿ ಕುಮಾರಸ್ವಾಮಿ ಸ್ಪರ್ಧಿಸಿದ್ರೆ, ಬಿಜೆಪಿಯಿಂದ ಮಾಜಿ ಸಚಿವ ಸಿಪಿ ಯೋಗೇಶ್ವರ್ ಸ್ಪರ್ಧಿಸ್ತಾರೆ ಎನ್ನಲಾಗಿದೆ. ಈ ನಡುವೆ ಕಾಂಗ್ರೆಸ್ನಿಂದ ಅಭ್ಯರ್ಥಿಯಾಗಿ ನಟಿ, ಮಾಜಿ ಸಂಸದೆ ರಮ್ಯಾ ಹೆಸರು ಕೇಳಿ ಬಂದಿದೆ.
ದೇವೇಗೌಡರ ವಿರುದ್ಧವೂ ಮಹಿಳಾ ಅಭ್ಯರ್ಥಿ ಕಣಕ್ಕಿಳಿಸಿದ್ದ ಕಾಂಗ್ರೆಸ್
ಈ ಹಿಂದೆ ದೇವೇಗೌಡರ ವಿರುದ್ಧವೂ ಕಾಂಗ್ರೆಸ್ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿತ್ತು. 2004ರಲ್ಲಿ 14ನೇ ಲೋಕಸಭಾ ಚುನಾವಣೆಯಲ್ಲಿ ಅಂದಿನ ಕನಕಪುರ ಲೋಕಸಭಾ ಕ್ಷೇತ್ರದಿಂದ ಎಚ್ಡಿ ದೇವೇಗೌಡ ಸ್ಪರ್ಧಿಸಿದ್ದರು. ಆಗ ಅವರ ವಿರುದ್ಧ ಪತ್ರಕರ್ತೆ ತೇಜಸ್ವಿನಿ ಗೌಡ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿತ್ತು. ಆಗ ದೇವೇಗೌಡರನ್ನು ಸೋಲಿಸಿದ್ದ ತೇಜಸ್ವಿನಿ, ಬರೋಬ್ಬರಿ 1 ಲಕ್ಷಕ್ಕೂ ಅಧಿಕ ಮತಗಳಿಂದ ಗೆದ್ದು ಬೀಗಿದ್ದರು. ಇದೀಗ ಅದೇ ಸೂತ್ರವನ್ನು ಎಚ್ಡಿಕೆ ವಿರುದ್ಧವೂ ಪ್ರಯೋಗಿಸಲು ಕಾಂಗ್ರೆಸ್ ರಣತಂತ್ರ ರೂಪಿಸುತ್ತಿದೆ ಎನ್ನಲಾಗಿದೆ.
ಇದನ್ನೂ ಓದಿ: Shivalinge Gowda: ನೀವೂ ಸುಮ್ಮನಿರಿ, ನಾನೂ ಸುಮ್ಮನಿರ್ತೀನಿ: 'ದಳ'ಪತಿಗಳಿಗೆ ಶಿವಲಿಂಗೇಗೌಡ ವಾರ್ನಿಂಗ್!
ರಮ್ಯಾಗೆ ಟಿಕೆಟ್ ಯಾಕೆ?
ಈಗಾಗಲೇ ಎಚ್ಡಿ ಕುಮಾರಸ್ವಾಮಿ ಹಾಗೂ ಸಿಪಿ ಯೋಗೇಶ್ವರ್ ಸ್ಪರ್ಧೆಯಿಂದ ಚನ್ನಪಟ್ಟಣ ಕ್ಷೇತ್ರ ಚುನಾವಣೆ ಘೋಷಣೆಗೂ ಮುನ್ನವೇ ರಂಗೇರಿದೆ. ಇದರೊಂದಿಗೆ ನಟಿ ರಮ್ಯಾ ಹೆಸರೂ ಸೇರಿಕೊಂಡಿದೆ. ಎಚ್ಡಿಕೆ ಹಾಗೂ ಸಿಪಿವೈ ಎದುರು ಪ್ರಬಲ ಅಭ್ಯರ್ಥಿಯೊಬ್ಬರ ಹುಡುಕಾಟದಲ್ಲಿರುವ ಕಾಂಗ್ರೆಸ್ ಮಾಜಿ ಸಂಸದೆ ರಮ್ಯಾ ಅವರನ್ನು ಕಣಕ್ಕಿಳಿಸುವ ಬಗ್ಗೆ ಚಿಂತನೆ ನಡೆಸಿದೆ. ಇದರಿಂದ ಪಕ್ಷದ ಸಾಂಪ್ರದಾಯಿಕ ಮತಗಳ ಜೊತೆಗೆ ಮಹಿಳಾ ಮತದಾರರನ್ನು ಸೆಳೆಯಬಹುದು ಎನ್ನುವ ಲೆಕ್ಕಾಚಾರ ಕಾಂಗ್ರೆಸ್ ಮಾಡುತ್ತಿದೆ ಎನ್ನಲಾಗಿದೆ.
ರಾಜಕೀಯದಲ್ಲಿ ಚಾಪು ಮೂಡಿಸಿರುವ ರಮ್ಯಾ
ರಮ್ಯಾ ಕಾಂಗ್ರೆಸ್ನಲ್ಲಿ ಹೈಕಮಾಂಡ್ ಮಟ್ಟದಲ್ಲೂ ತಮ್ಮ ಚಾಪು ಮೂಡಿಸಿದ್ದವರು. ಅವರು ಈ ಹಿಂದೆ 2013ರ ಲೋಕಸಭಾ ಉಪ ಚುನಾವಣೆಯಲ್ಲಿ ಮಂಡ್ಯದಿಂದ ಕಣಕ್ಕಿಳಿದು ಗೆಲುವು ಸಾಧಿಸಿದ್ದರು. ಬಳಿಕ 2014ರ ಚುನಾವಣೆಯಲ್ಲಿ ರಮ್ಯಾ ಮತ್ತೆ ಮಂಡ್ಯದಿಂದ ಸ್ಪರ್ಧಿಸಿದ್ದರು. ಆದರೆ ಜೆಡಿಎಸ್ ಅಭ್ಯರ್ಥಿ ಸಿ.ಎನ್. ಪುಟ್ಟರಾಜು ವಿರುದ್ಧ ಸೋಲು ಕಂಡರು.
ಚಿತ್ರರಂಗದಲ್ಲಿ ಸಕ್ರಿಯರಾಗಿರುವ ರಮ್ಯಾ
ಸದ್ಯ ರಮ್ಯಾ ಕನ್ನಡ ಚಿತ್ರರಂಗದಲ್ಲಿ ಮತ್ತೆ ಸಕ್ರಿಯರಾಗಿದ್ದಾರೆ. ತಮ್ಮದೇ ಮಾಲೀಕತ್ವದ ಆ್ಯಪಲ್ ಬಾಕ್ಸ್ ಎಂಬ ಸಿನಿಮಾ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಿದ್ದಾರೆ. ಅದರೊಂದಿಗೆ ನಾಯಕಿಯಾಗಿಯೂ ನಟಿಸುತ್ತಿದ್ದಾರೆ ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ