ಬೆಂಗಳೂರು; ಸ್ಯಾಂಡಲ್ ವುಡ್ ನಟಿ ರಾಗಿಣಿಗೆ ಇನ್ನೂ ಒಂದು ತಿಂಗಳು ಜೈಲೇ ಗಟ್ಟಿಯಾಗಿದೆ..ಹೌದು, ಸ್ಯಾಂಡಲ್ ವುಡ್ ಡ್ರಗ್ಸ್ ಜಾಲದಲ್ಲಿ ನಂಟು ಹೊಂದಿದ ಆರೋಪದ ಮೇರೆಗೆ ಬಂಧನಕ್ಕೀಡಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟಿ ರಾಗಿಣಿ ದ್ವಿವೇದಿಗೆ ಜನವರಿವರೆಗೂ ಬಿಡುಗಡೆ ಭಾಗ್ಯ ಇಲ್ಲದಂತಾಗಿದೆ. ಸುಪ್ರೀಂ ಕೋರ್ಟ್ನಲ್ಲಿ ನಟಿ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಜನವರಿ ಮೊದಲ ವಾರಕ್ಕೆ ಮುಂದೂಡಿದೆ. ಇಂದು ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಪ್ರಕರಣ ಸಂಬಂದ ರಾಜ್ಯ ಸರ್ಕಾರಕ್ಕೆ ನೋಟೀಸ್ ನೀಡಿದೆ. ಜೊತೆಗೆ, ಸಿಸಿಬಿಗೂ ನೊಟೀಸ್ ನೀಡಿ, ಜನವರಿ ಮೊದಲ ವಾರಕ್ಕೆ ಮುಂದೂಡಿದೆ.
ಇನ್ನು ಹೈಕೋರ್ಟ್ ನಲ್ಲಿಂದು ನಟಿ ಸಂಜನಾ ಗಲ್ರಾನಿ ಜಾಮೀನು ಅರ್ಜಿ ವಿಚಾರಣೆ ನಡೆಯಿತು. ಈ ವೇಳೆ ವೈದ್ಯಕೀಯ ವರದಿ ಸಲ್ಲಿಕೆ ಮಾಡಲಾಯ್ತು. ವಾದ ಮಂಡಿಸಿದ ಪಬ್ಲಿಕ್ ಪ್ರಾಸಿಕ್ಯುಟರ್ ವೀರಣ್ಣ, "ಈಗಾಗಲೇ ಮೆರಿಟ್ಸ್ ಮೇಲೆ ಜಾಮೀನು ತಿರಸ್ಕರಿಸಿ ಆಗಿದೆ. ಮತ್ತೆ ಅನಾರೋಗ್ಯ ಅಂತ ಹೇಳಿದ್ದಾರೆ. ಸೂಕ್ತ ಚಿಕಿತ್ಸೆ ಕೊಡಿಸೋದಕ್ಕೆ ವ್ಯವಸ್ಥೆ ಇದೆ. ಇದೊಂದೇ ಕಾರಣಕ್ಕೆ ಜಾಮೀನು ಮಂಜೂರು ಮಾಡುವುದು ಸೂಕ್ತ ಅಲ್ಲ" ಅಂತ ವಾದಿಸಿದ್ದರು.
ಇದನ್ನೂ ಓದಿ; ಮಹಾರಾಷ್ಟ್ರ ವಿಧಾನ ಪರಿಷತ್ ಚುನಾವಣೆ; ಬಿಜೆಪಿಗೆ ಭಾರೀ ಮುಖಭಂಗ, ಮಹಾವಿಕಾಸ್ ಅಘಾಡಿ ಜಯಭೇರಿ
ಈ ವೇಳೆ ಮಾತನಾಡಿದ ಸಂಜನ ಪರ ವಕೀಲ ಹಸ್ಮತ್ ಪಾಷ, "ಸಂಜನಾಗೆ ಅನಾರೋಗ್ಯ ಇದೆ. 2018 ರಲ್ಲಿ ಮಣಿಪಾಲ್ ಆಸ್ಪತ್ರೆ ಯಲ್ಲಿ ಸರ್ಜರಿಗೆ ಒಳಗಾಗಿದ್ದರು. 2019ರಿಂದ ಅಸ್ತಮಾ ಸಮಸ್ಯೆಯನ್ನೂ ಎದುರಿಸುತ್ತಿದ್ದಾರೆ. ಚಳಿಗಾಲದಲ್ಲಿ ಅಸ್ತಮಾ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ. ಬಂಧನಕ್ಕೊಳಗಾದ ನಂತರ ಸೂಕ್ತ ಚಿಕಿತ್ಸೆ ದೊರೆತಿಲ್ಲ" ಎಂದು ಕೋರ್ಟ್ಗೆ ಮನವರಿಕೆ ಮಾಡಿಕೊಡಲು ಮುಂದಾದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ