ಬೆಂಗಳೂರು: ಆರನೇ ವೇತನ ಆಯೋಗದ ಶಿಫಾರಸ್ಸಿನಂತೆ ಸಂಬಳ ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರು ಕಳೆದ ನಾಲ್ಕು ದಿನದಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ. ಸಾರಿಗೆ ನೌಕರರ ಮುಷ್ಕರ ವಿಷಯವಾಗಿ ಇಂದು ಸುದ್ದಿಗೋಷ್ಠಿ ನಡೆಸಿದ ನಟ ಚೇತನ್, ಇದು ನಾಲ್ಕು ದಿನದ ಮುಷ್ಕರ ಮಾತ್ರ ಅಲ್ಲ. ಹಲವು ವರ್ಷಗಳಿಂದ ಹೋರಾಟ ಮಾಡ್ತಾ ಇದ್ದಾರೆ. ಸಾರಿಗೆ ನೌಕರರ ಪರವಾಗಿ ನಾವು ಬೆಂಬಲ ಸೂಚಿಸುತ್ತಿದ್ದೇವೆ ಎಂದು ಹೇಳಿದರು.
ನಮ್ಮ ರಾಜ್ಯದ ಸಾರಿಗೆ, ದೇಶದ ಹೆಮ್ಮೆ. ಏಷ್ಯಾ ಖಂಡದಲ್ಲಿ ಅತ್ಯುತ್ತಮವಾದ ಸಂಸ್ಥೆ. ಇದಕ್ಕೆ ನಾವು ಹೆಮ್ಮೆ ಪಡಬೇಕು. ಅವರಿಗೆ ಬೆಂಬಲ ಸೂಚಿಸಬೇಕು. ಸರ್ಕಾರ ಎಂಟು ಬೇಡಿಕೆಗಳನ್ನು ಈಡೇರಿಸಿದ್ದೇವೆ ಅಂತಾ ಹೇಳ್ತಿದೆ. ಆದರೆ ಅದು ಸುಳ್ಳು. ಯಾವುದರಲ್ಲಿಯೂ ಪಾರದರ್ಶಕತೆ ಇಲ್ಲ. ಸರ್ಕಾರ ದೊಡ್ಡದಾಗಿ ಡಿಜಿಟಲ್ ಇಂಡಿಯಾ ಬಗ್ಗೆ ಮಾತನಾಡುತ್ತಾರೆ. ಆದರೆ ನಮ್ಮ ಸಾರಿಗೆ ನೌಕರರಿಗೆ ಪಾರದರ್ಶಕತೆ ನೀಡದೇ, ಹೋರಾಟ ಮಾಡುವಂತೆ ಮಾಡಿದ್ದಾರೆ. 77 ನಿಗಮಗಳು ಇವೆ. 75 ನಿಗಮಗಳಿಗೆ ಸರಿಯಾದ ಸಂಬಳ ಎಲ್ಲವನ್ನು ನೀಡ್ತಿದೆ. ಆದರೆ ಎರಡು ನಿಗಮಗಳಿಗೆ ತಾರತಮ್ಯ ಮಾಡ್ತಿದೆ. ಎಷ್ಟೋ ಜನ ನೌಕರರನ್ನು ವಜಾ ಮಾಡಿದ್ದಾರೆ. ಮನೆಯಲ್ಲಿ ಇರುವವರನ್ನು ಹೊರಗೆ ಹಾಕ್ತಾ ಇದ್ದಾರೆ. ಎಷ್ಟೋ ಜನ ನೌಕರರನ್ನು ಟ್ರಾನ್ಸಫರ್ ಮಾಡ್ತಾ ಇದ್ದಾರೆ. ಇದು ಜನ ವಿರೋಧಿ, ಕಾರ್ಮಿಕ ವಿರೋಧಿ ಸರ್ಕಾರ. 34 ಖಾಸಗೀ ಕಾರ್ಪೋರೆಟ್ ಕಂಪನಿಗಳಿಗೆ ಲಾಭ ಮಾಡಿಕೊಟ್ಟಿವೆ. ಬರೀ ಬಿಜೆಪಿ ಸರ್ಕಾರ ಮಾತ್ರ, ಅಲ್ಲ. ಈ ಹಿಂದಿನ ಸರ್ಕಾರಗಳು ಅದನ್ನೇ ಮಾಡಿವೆ. ಶ್ರೀಮಂತರ ಪರವಾದ ಸರ್ಕಾರ ಇದು ಎಂದು ನಟ ಚೇತನ್ ಅಸಮಾಧಾನ ವ್ಯಕ್ತಪಡಿಸಿದರು.
ಮಹಾರಾಷ್ಟ್ರ, ದೆಹಲಿ ನಂತರ ಕರ್ನಾಟಕ ಅತಿಹೆಚ್ಚು ಟ್ಯಾಕ್ಸ್ ಕೊಡೋ ರಾಜ್ಯ ನಮ್ಮದು. ಆದರೆ, ಕೇಂದ್ರದಿಂದ ನಮಗೆ ಏನೂ ಅನುದಾನ ಬಂದಿಲ್ಲ. 34 ಕಾರ್ಪೊರೇಟ್ ಕಂಪನಿಗಳಿಗೆ ನೀಡ್ತಾರೆ. ಜನರಿಗೆ, ಕಾರ್ಮಿಕರಿಗೆ ಏನು ಇಲ್ಲ. ಪ್ರಯಾಣಿಕರಿಗೆ ಇಂದು ಕಷ್ಟ ಆಗ್ತಾ ಇದೆ. ಅಂದ್ರೆ ಅದಕ್ಕೆ ಸರ್ಕಾರ ಕಾರಣ. ನೌಕರರು ಯಾವುದೇ ಕಾರಣಕ್ಕೂ ಕಾರಣರಲ್ಲ. ಎಲ್ಲ ವಲಯಗಳನ್ನು ಖಾಸಗೀಕರಣ ಮಾಡಲು ಹೊರಟಿದ್ದಾರೆ. ಜೆಟ್ಗಳಲ್ಲಿ ಓಡಾಡುವ ಶ್ರೀಮಂತರ ಲಾಭಕ್ಕಾಗಿ ಮಾಡಲು ಹೊರಟಿದೆ. ಬಂಡವಾಳಶಾಹಿಗಳಿಗೆ, ರಾಜಕೀಯ ವ್ಯಕ್ತಿಗಳಿಗೆ ಮಾತ್ರ ಖಾಸಗೀಕರಣದಿಂದ ಉಪಯೋಗ. ಜನಸಾಮಾನ್ಯರಿಗೆ ಯಾವುದೇ ಉಪಯೋಗ ಆಗುವುದಿಲ್ಲ. ಎಷ್ಟೋ ಜನ ನೌಕರರ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಎಷ್ಟೋ ಸಮಸ್ಯೆಗಳ ನಡುವೆ, ನಮ್ಮ ನೌಕರರು ಕೆಲಸ ಮಾಡ್ತಾ ಇದ್ದಾರೆ. ಅದನ್ನ ಸರ್ಕಾರ ಅರ್ಥ ಮಾಡಿಕೊಂಡು, ಸ್ಪಂದನೆ ನೀಡಬೇಕು ಎಂದು ಚೇತನ್ ಮನವಿ ಮಾಡಿದರು.
ಇದನ್ನು ಓದಿ: ಬೆಳಗಾವಿಯಲ್ಲಿ ಪೊಲೀಸರ ವಶಕ್ಕೆ ಕೋಡಿಹಳ್ಳಿ ಚಂದ್ರಶೇಖರ್; ಇದು ದಮನ ನೀತಿ ಎಂದ ಹೋರಾಟಗಾರರು
ಕೋಡಿಹಳ್ಳಿ ಚಂದ್ರಶೇಖರ್ ಬಂಧನ ವಿಚಾರವಾಗಿ ಮಾತನಾಡಿದ ನಟ ಚೇತನ್, ನ್ಯಾಯಯುತವಾದ ಹೋರಾಟವನ್ನು ಒಡೆಯುವ ಕೆಲಸ ಮಾಡ್ತಾ ಇದ್ದಾರೆ. ರೈತ, ಕಾರ್ಮಿಕ ಪರ ಇರುವವರನ್ನು ಬಂಧನ ಮಾಡ್ತಿದ್ದಾರೆ. ಇದನ್ನ ನಾವು ಸಹಿಸೋಲ್ಲ. ಇದು ಜನವಿರೋಧಿ ಸರ್ಕಾರ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ