news18-kannada Updated:April 8, 2021, 9:47 PM IST
ಸಿಎಂ ಬಿ.ಎಸ್.ಯಡಿಯೂರಪ್ಪ.
ಬೆಂಗಳೂರು (ಏಪ್ರಿಲ್ 08); ದೇಶದಾದ್ಯಂತ ಕೊರೋನಾ ಎರಡನೇ ಅಲೆ ಮತ್ತಷ್ಟು ಆತಂಕವನ್ನು ಸೃಷ್ಟಿಸಿದೆ. ನಿನ್ನೆ ಒಂದೇ ದಿನಕ್ಕೆ ದೇಶದಲ್ಲಿ 1.5 ಲಕ್ಷಕ್ಕೂ ಅಧಿಕ ಕೊರೋನಾ ಪ್ರಕರಣಗಳು ದಾಖಲಾಗಿರುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತಲೆನೋವಿಗೆ ಕಾರಣವಾಗಿದೆ. ಅಲ್ಲದೆ, ನೆರೆಯ ಕೇರಳ, ಮಹಾರಾಷ್ಟ್ರ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಪ್ರಕರಣಗಳ ಸಂಖ್ಯೆ ಕೈಮೀರಿದ್ದು, ಕರ್ನಾಟಕದಲ್ಲೂ ಸಹ ಕೊರೋನಾ ಅಟ್ಟಹಾಸ ಮೆರೆಯುತ್ತಿದೆ. ಆದರೆ, ಪ್ರಸ್ತುತ ರಾಜ್ಯದ ಆರ್ಥಿಕ ಪರಿಸ್ಥಿತಿ ಇರುವ ಸ್ಥಿತಿಯಲ್ಲಿ ಮತ್ತೆ ಲಾಕ್ಡೌನ್ ಘೋಷಣೆ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ಹೀಗಾಗಿ ಕೊರೋನಾ ನಿಯಂತ್ರಣಕ್ಕೆ ಪರ್ಯಾಕ ಕ್ರಮ ಅನುಸರಿಸಲು ಮುಂದಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯದ ಕೆಲವು ಪ್ರಮುಖ ಜಿಲ್ಲೆಗಳಲ್ಲಿ ಶನಿವಾರದಿಂದ ರಾತ್ರಿ 10 ರಿಂದ ಬೆಳಗ್ಗೆ 5ಗಂಟೆಯವರೆಗೆ ಕರ್ಫ್ಯೂ ಜಾರಿಗೊಳಿಸಿ ಇಂದು ಆದೇಶಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಈ ಕುರಿತು ಹೇಳಿಕೆ ನೀಡಿರುವ ಸಿಎಂ ಯಡಿಯೂರಪ್ಪ, "ಪ್ರಧಾನ ಮಂತ್ರಿ ನರೇಂದ್ರ ಮೋದಿ ಅನೇಕ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಿದ್ದು ಕೊರೋನಾ ನಿಯಂತ್ರಣಕ್ಕೆ ಪರ್ಯಾಯವಾದ ಹಲವಾರು ಸಲಹೆಗಳನ್ನು ನೀಡಿದ್ದಾರೆ. ಹೀಗಾಗಿ ಪ್ರಧಾನಿ ಮೋದಿ ಸಲಹೆಯಂತೆ ರಾಜ್ಯದಲ್ಲಿ ಕೆಲವು ಪ್ರಮುಖ ಜಿಲ್ಲೆಗಳಲ್ಲಿ ಶನಿವಾರದಿಂದ ರಾತ್ರಿ 10 ರಿಂದ ಬೆಳಗ್ಗೆ 5ಗಂಟೆಯವರೆಗೆ ಕರ್ಫ್ಯೂ ಜಾರಿ ಮಾಡಲು ಆದೇಶಿಸಲಾಗಿದೆ. ಬೆಂಗಳೂರು, ಕಲಬುರಗಿ, ಮಂಗಳೂರು ಜಿಲ್ಲಾ ಕೇಂದ್ರದಲ್ಲಿ ಮಾತ್ರ ಕರ್ಫ್ಯೂ ಇರುತ್ತದೆ. ಏಪ್ರಿಲ್ 10ರಿಂದ 20ರವರೆಗೆ ಕರ್ಫ್ಯೂ ಜಾರಿಯಲ್ಲಿ ಇರಲಿದ್ದು, ಅಗತ್ಯ ಸೇವೆಗಳು ಇರಲಿವೆ. ಹೀಗಾಗಿ ಸರ್ಕಾರದ ನಿರ್ಧಾರಕ್ಕೆ ಜನರು ಸಹಕರಿಸಬೇಕು" ಎಂದು ಮನವಿ ಮಾಡಿದ್ದಾರೆ.
"ಪೂರ್ಣ ಪ್ರಮಾಣದ ಕರ್ಫ್ಯೂ ಆಗಬಾರದೆಂದರೆ ಸಾರ್ವಜನಿಕರು ಮಾಸ್ಕ್ ಅನ್ನು ಕಡ್ಡಾಯವಾಗಿ ಬಳಸಬೇಕು. ಮೊದಲು ಸೀಮಿತ ಜಿಲ್ಲೆಗಳಲ್ಲಿ ಮಾತ್ರ ನೈಟ್ ಕರ್ಫ್ಯೂ ಜಾರಿ ಮಾಡಲಾಗುವುದು. ಒಂದು ವೇಳೆ ಸೋಂಕು ನಿಯಂತ್ರಣಕ್ಕೆ ಬಾರದಿದ್ದರೆ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು. ಬಸ್ ಸಂಚಾರ ಎಂದಿನಂತೆ ಇರಲಿದೆ. ಮದುವೆ ಮತ್ತಿತರ ಸಮಾರಂಭಗಳಿಗೆ ನಿಯಮ ಪ್ರಕಾರ ಇರಬೇಕು. ಮಾಸ್ಕ್ ಹಾಕದಿದ್ದರೆ ದಂಡ ಕಡ್ಡಾಯ. ದೊಡ್ಡ ಪ್ರಮಾಣದಲ್ಲಿ ಸಭೆ ಸಮಾರಂಭ ಆಯೋಜನೆ ಮಾಡುವಂತಿಲ್ಲ" ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ನಿರ್ಲಕ್ಷ್ಯ ಬೇಡ; ಜಾಗರುಕತೆ ಅವಶ್ಯ: ಮೈಕ್ರೋ ಕಂಟೈನ್ಮೆಂಟ್ ವಲಯ ಬಗ್ಗೆ ಗಮನಹರಿಸಿ ಪ್ರಧಾನಿ ಕರೆ
ನೈಟ್ ಕರ್ಫ್ಯೂಗೆ ಪೊಲೀಸ್ ಇಲಾಖೆ ಏನೆಲ್ಲಾ ಫ್ಲಾನ್ ಗಳನ್ನು ಮಾಡಿಕೊಳ್ಳುತ್ತೆ ಗೊತ್ತಾ..?;
ನೈಟ್ ಕರ್ಫ್ಯೂ ನಿಮಿತ್ತ ರಾತ್ರಿ ವೇಳೆ ರಸ್ತೆಯಲ್ಲಿ ಪೊಲೀಸರ ನಿಯೋಜನೆ ಇರಲಿದೆ. ಈ ಸಂಬಂಧ ನಾಳೆ ಎಲ್ಲಾ ಠಾಣೆಯ ಇನ್ಸ್ಪೆಕ್ಟರ್ ಗಳಿಗೂ ಸೂಕ್ತ ಬಂದೋಬಸ್ತ್ ಮಾಡಿಕೊಳ್ಳುವಂತೆ ಕಮಿಷನರ್ ಕಮಲ್ಪಂತ್ ಸೂಚನೆ ನೀಡಲಿದ್ದಾರೆ. ಮುಖ್ಯವಾಗಿ ಎಲ್ಲಾ ಫ್ಲೈಓವರ್ ಗಳನ್ನು ಬಂದ್ ಮಾಡಲಾಗುವುದು. ರಾತ್ರಿ 10 ರ ಬಳಿಕ ಓಡಾಟ ಮಾಡೋರ ಮೇಲೆ ಕ್ರಮಕ್ಕೆ ಸೂಚಿಸಲಾಗುವುದು. ರಾತ್ರಿ ಪಾಳಿಯಲ್ಲಿ ಹೊಯ್ಸಳ, ಬೀಟ್ ಪೊಲೀಸರ ಸಂಖ್ಯೆಯನ್ನು ಹೆಚ್ಚಿಸುವ ಸಾಧ್ಯತೆ ಇದೆ.
ಇದಲ್ಲದೆ ಪೊಲೀಸರು ನಗರದ ಎಲ್ಲಾ ಮುಖ್ಯರಸ್ತೆಗಳನ್ನೂ ಬಂದ್ ಮಾಡಲಿದ್ದಾರೆ. ಕೊರೋನಾ ನಿಯಮಗಳನ್ನು ಉಲ್ಲಂಘನೆ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಿದ್ದಾರೆ. ಇದರ ಜೊತೆಗೆ ಕರ್ಫ್ಯೂ ಟೈಂನಲ್ಲಿ ಸುಖಾಸುಮ್ಮನೆ ಸುತ್ತಾಡಿದ್ರೆ ವಾಹನಗಳನ್ನು ಸೀಜ್ ಮಾಡುವ ಸಾಧ್ಯತೆಯೂ ಇದೆ ಎಂದು ಈಗಾಗಲೇ ಎಚ್ಚರಿಕೆ ನೀಡಲಾಗಿದೆ.
Published by:
MAshok Kumar
First published:
April 8, 2021, 9:34 PM IST