ಬೆಂಗಳೂರು (ಜುಲೈ 22): ಈ ಬಾರಿ ಬಿಬಿಎಂಪಿ (BBMP) ವ್ಯಾಪ್ತಿಯ ಎಲ್ಲ ವಾರ್ಡ್ಗಳಲ್ಲೂ (Ward) ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಅದಕ್ಕಾಗಿ ಅಭ್ಯರ್ಥಿ ಶೋಧನಾ ಸಮಿತಿ ರಚಿಸಲಾಗಿದೆ ಎಂದು ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ (Aam Aadmi Party (AAP) Prithvi Reddy) ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಬಿಎಂಪಿಯ ಚುನಾವಣೆಯು (BBMP Election) ಜನಸಾಮಾನ್ಯರ ಹಾಗೂ 40 ಪರ್ಸೆಂಟ್ (40 percent) ಲಂಚ ಪಡೆಯುವ ಸರ್ಕಾರದ ನಡುವಿನ ಕದನವಾಗಲಿದೆ. ಭಾರತ ದೇಶ ಸ್ವಾತಂತ್ರ್ಯ ದಿನದ 75 ವರ್ಷದ ಅಮೃತ ಮಹೋತ್ಸವ ಆಚರಿಸುತ್ತಿದೆ. ಈ ಹೊತ್ತಿನಲ್ಲಿ ದೇಶದ ಆಡಳಿತ ನೋಡಿದರೆ ದುರದೃಷ್ಟವಶಾತ್ ಪ್ರಜಾಪ್ರಭುತ್ವ ಎಂಬುದು 'ಆಯ್ದ ಕೆಲವರಿಂದ, ಕೆಲವರಿಗಾಗಿ, ಕೆಲವರಿಗೋಸ್ಕರ' ಮಾತ್ರ ಇರುವಂತೆ ಎಂದು ಭಾಸವಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ರು.
40% ಕಮಿಷನ್ ಸರ್ಕಾರವನ್ನು ಕಿತ್ತೊಗೆಯಬೇಕು
ದೆಹಲಿ ರಾಜ್ಯದಲ್ಲಿ ಎಎಪಿಯ (AAP) ಪ್ರಾಮಾಣಿಕ ಆಡಳಿತ ಇಡೀ ದೇಶಕ್ಕೇ ಮಾದರಿಯಾಗಿದೆ. ಪಂಜಾಬ್ನಲ್ಲೂ ಕೂಡಾ ಭ್ರಷ್ಟಾಚಾರ ರಹಿತ ಸರ್ಕಾರ ಸೃಷ್ಟಿಯಾಗಿದೆ. ಇದು ಬೆಂಗಳೂರಿನಲ್ಲಿ ಯಾಕೆ ಆಗಬಾರದು? ಬೆಂಗಳೂರಿನಲ್ಲೂ ಇದು ಸಾಧ್ಯ. ಅದಕ್ಕಾಗಿ ನಾವು ಈ 40% ಕಮಿಷನ್ ಸರ್ಕಾರವನ್ನು ಕಿತ್ತೊಗೆಯಬೇಕು. 1 ಕೋಟಿ ಜನರು ಇರುವ ಈ ನಗರವನ್ನು ಕೆಲವೇ ಕೆಲವು ದುಷ್ಟರ, ಭ್ರಷ್ಟರ ಕೈಗಳಿಗೆ ನೀಡಿದಂತಾಗಿದೆ ಎಂದು ಪೃಥ್ವಿ ರೆಡ್ಡಿ ದೂರಿದರು.
ಬೆಂಗಳೂರಿನ ಅಭಿವೃದ್ಧಿಗಾಗಿ ಮುಂದೆ ಬರಬೇಕು
ನಗರವನ್ನು ರಕ್ಷಿಸುವವರನ್ನು ನಾವು ಸ್ವಾಗತಿಸುತ್ತೇವೆ ಮತ್ತು ಪ್ರೀತಿಸುತ್ತೇವೆ. ಕೆರೆಗಳಿಗಾಗಿ ಹೋರಾಡುವವರು, ನಗರದ ಮರಗಳನ್ನು ರಕ್ಷಿಸುತ್ತಾ ಬಂದವರು, ಮಕ್ಕಳಿಗಾಗಿ ಶಾಲೆ, ಬಡವರಿಗಾಗಿ ಸರ್ಕಾರಿ ಆಸ್ಪತ್ರೆ, ಗುಂಡಿ ಮುಕ್ತ ರಸ್ತೆಗಳನ್ನು ಕೇಳುತ್ತಾ ಬಂದಿರುವ ಸಾಮಾಜಿಕ ಹೋರಾಟಗಾರರು ಇರಬಹುದು, ಇತರ ಪಕ್ಷಗಳ ಸಮರ್ಥ ನಾಯಕರಾಗಿ ಕಡೆಗಣಿಸಲ್ಪಟ್ಟವರು. ಹೀಗೆ ಎಲ್ಲರನ್ನೂ ಎಎಪಿ ಸ್ವಾಗತಿಸುತ್ತದೆ. ಜನರು ಬೆಂಗಳೂರಿನ ಅಭಿವೃದ್ಧಿಗಾಗಿ ಮುಂದೆ ಬರಬೇಕು ಎಂದು ಅವರು ಕರೆ ನೀಡಿದರು.
ಇದನ್ನೂ ಓದಿ: Karnataka Politics: ಜಮೀರ್ ಅಹ್ಮದ್ಖಾನ್ ನಮ್ಮ ಪಕ್ಷದ ಬಾಹುಬಲಿ; ಸತೀಶ್ ಜಾರಕಿಹೊಳಿ
ನಾವೆಲ್ಲರೂ ಒಟ್ಟಾಗಿ ಬೆಂಗಳೂರನ್ನು ಉಳಿಸಬಹುದು
ಜನರು ಬೆಂಗಳೂರಿಗಾಗಿ ಮುಂದೆ ಬರಬೇಕು, ಜನರು ಒಂದು ಹೆಜ್ಜೆ ಮುಂದಿಟ್ಟರೆ ನಮ್ಮ ಶಕ್ತಿ ಹೆಚ್ಚಾಗುತ್ತದೆ, ನಾವೆಲ್ಲರೂ ಒಟ್ಟಾಗಿ ಬೆಂಗಳೂರನ್ನು ಉಳಿಸಬಹುದು ಎಂದು ರೆಡ್ಡಿ ಹೇಳಿದರು.ಕಳೆದ ಕೆಲವು ವರ್ಷಗಳಿಂದ, ಕರ್ನಾಟಕದಲ್ಲಿ ಎಎಪಿ ರಾಜ್ಯದಲ್ಲಿ ಏಕೈಕ ಪ್ರತಿಪಕ್ಷವಾಗಿದೆ ಮತ್ತು ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಅನ್ಯಾಯ ಮತ್ತು ದುರಾಡಳಿತದ ವಿರುದ್ಧ ಧ್ವನಿ ಎತ್ತುವ ಏಕೈಕ ಪಕ್ಷವಾಗಿದೆ ಎಂದು ಅವರು ಹೇಳಿದರು.
ಇಂದು, ಎಎಪಿ ನಗರದಾದ್ಯಂತ ತನ್ನ ಅಸ್ತಿತ್ವವನ್ನು ಹೊಂದಿದೆ ಮತ್ತು ಜನರ ಸಮಸ್ಯೆಗಳಿಗೆ ಸಕ್ರಿಯವಾಗಿ ಸಹಾಯ ಮಾಡುತ್ತಿದೆ ಮತ್ತು ನಗರದಲ್ಲಿನ ಸಮಸ್ಯೆಗಳತ್ತ ಎಲ್ಲರ ಗಮನವನ್ನು ಸೆಳೆಯುತ್ತಿದೆ. ಸಾಂಪ್ರದಾಯಿಕ ಪಕ್ಷಗಳು ಇಷ್ಟು ದಿನ ಹಣಬಲ ಮತ್ತು ಮಾಂಸಖಂಡದ ಬಲದಿಂದ ರಾಜಕೀಯ ಮಾಡುತ್ತಿದ್ದು, ಕುಟುಂಬ ರಾಜಕಾರಣಕ್ಕೆ ಒತ್ತು ನೀಡುತ್ತಿವೆ ಎಂದು ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹೇಳಿದರು
ಇದನ್ನೂ ಓದಿ: H D Kumaraswamy: ರಾಜ್ಯದಲ್ಲಿ ಅವಧಿಪೂರ್ವ ಚುನಾವಣೆಗೆ ಸಿದ್ಧತೆ; ಯಾವಾಗ ಎಲೆಕ್ಷನ್ ಬಂದ್ರು ನಾವ್ ರೆಡಿ
'ಕೇಜ್ರೀವಾಲ್ಗೆ ಒಂದು ಅವಕಾಶ' ನೀಡಿ
'ಕೇಜ್ರೀವಾಲ್ಗೆ ಒಂದು ಅವಕಾಶ" ಎಂಬ ಘೋಷವಾಕ್ಯದ ಅಡಿಯಲ್ಲಿ, ಎಎಪಿ ರಾಜ್ಯ ಕಾರ್ಯದರ್ಶಿ ಬಿ.ಟಿ.ನಾಗಣ್ಣ ನೇತೃತ್ವದಲ್ಲಿ ಅಭ್ಯರ್ಥಿ ಶೋಧನಾ ಸಮಿತಿಯನ್ನು ರಚಿಸಲಾಗಿದೆ. ಸುರೇಶ್ ರಾಥೋಡ್, ಕುಶಲಸ್ವಾಮಿ, ಫರಿದುದ್ದೀನ್ ಷರೀಫ್, ಸಂಚಿತ್ ಸಹಾನಿಯವರು ಸಮಿತಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಇದರ ಮೂಲಕ ನಗರದ ಸಾಮಾನ್ಯ ಪ್ರಜೆಗಳು, ಯುವಜನರು, ಮಹಿಳೆಯರು, ವಕೀಲರು ಮತ್ತು ಸಮಾಜದ ಎಲ್ಲಾ ಸ್ತರದ ಜನರನ್ನು ಚುನಾವಣೆಯಲ್ಲಿ ಭಾಗವಹಿಸಲು ಎಎಪಿ ಅವಕಾಶ ಕಲ್ಪಿಸುತ್ತಿದೆ ಎಂದು ಅವರು ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ