Bengaluru: ಕಳ್ಳತನಕ್ಕೆ ಅಂತ ಹೋದ, ದೇವರಿಗೆ ಕೈಮುಗಿದು ವಾಪಸ್ ಬಂದ! ಈ ಕಳ್ಳನಿಗೆ ಅದೇನಾಯ್ತಪ್ಪಾ?
ದೇಗುಲದ ಒಳಕ್ಕೆ ಬಂದ ಕಳ್ಳ ದೇವರ ವಿಗ್ರಹದ ಮೇಲಿರುವ ಚಿನ್ನದ ಆಭರಣ, ಕಾಣಿಕೆಯಲ್ಲಿರುವ ಹಣ ಎಲ್ಲವನ್ನೂ ನೋಡ್ತಾನೆ. ಇನ್ನೇನು ಕದಿಯಬೇಕು ಅಂತ ಯೋಚಿಸ್ತಾನೆ. ಯಾವುದಕ್ಕೂ ದೇವರಿಗೆ ಕೈ ಮುಗಿದು ಬಿಡೋಣ ಅಂತ ದೇವರ ಎದುರು ನಿಲ್ತಾನೆ. ಮುಂದೆ ಏನಾಗುತ್ತೆ ಗೊತ್ತಾ ಈ ಕಳ್ಳನಿಗೆ? ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ಸ್ಟೋರಿ....
ಬೆಂಗಳೂರು: ಯಾರಿಗೆ ದೇವರ (God) ಮೇಲೆ ಭಯ, ಭಕ್ತಿ ಇದೆಯೋ ಗೊತ್ತಿಲ್ಲ. ಆದ್ರೆ ಕೆಲವೊಬ್ಬರು ಕಳ್ಳರಿಗೆ (Thief) ಮಾತ್ರ ದೇವ್ರು ಅಂದ್ರೆ ತುಂಬಾನೇ ಭಯ, ಭಕ್ತಿ. ದೇವ್ರು ಎಲ್ಲಾ ಕಡೆ ನೋಡುತ್ತಾ ಇರುತ್ತಾನೆ. ನಾವು ಮಾಡಿದ ತಪ್ಪನ್ನೆಲ್ಲ ಗಮನಿಸ್ತಾನೆ. ನಮಗೆ ಸಂಕಷ್ಟ ಕೊಡ್ತಾನೆ ಎನ್ನುವ ಭಯ ಈ ಕಳ್ಳರಿಗೆ. ಅದಕ್ಕಾಗೇ ಕಳ್ಳತನ ಮಾಡಿದ ಮೇಲೆ ದೇವರಿಗೆ ಪೂಜೆ ಮಾಡಿಸೋದು, ತಪ್ಪು ಕಾಣಿಕೆ ಹಾಕೋದು ಎಲ್ಲಾ ಮಾಡ್ತಾನೇ ಇರ್ತಾನೆ. ಇದರ ಬಗ್ಗೆ ನಾವು ಕೇಳ್ತಾನೇ ಇರ್ತೀವಿ. ಕೆಲವೊಬ್ಬ ಕಳ್ಳರು ಕಳ್ಳತನಕ್ಕೆ ಹೋಗಿ, ದೇವರಿಗೆ ಕೈಮುಗಿದು, ಕೊನೆಗೆ ಅದೇ ದೇವರ ಮೂರ್ತಿ (Statue) ಎಗರಿಸಿದ ಘಟನೆ ಬಗ್ಗೆಯೂ ನಾವು ಕೇಳಿದ್ದೀವಿ. ಬೆಂಗಳೂರಲ್ಲೂ (Bengaluru) ಇಂಥದ್ದೇ ಒಂದು ವಿಚಿತ್ರ ಘಟನೆ ನಡೆದಿದೆ. ಇದನ್ನು ಓದಿದ್ರೆ ನೀವು ಒಳ್ಳೆಯದೇ ಆಯ್ತಪ್ಪಾ ಅಂತೀರಾ? ಅಯ್ಯೋ ಈ ಕಳ್ಳನಿಗೆ ಏನಾಯ್ತು ಅಂತ ಪ್ರಶ್ನಿಸ್ತಿರಾ? ಅಥವಾ ಇದು ದೇವರ ಪವಾಡ ಅಂತ ಕೈ ಮುಗೀತಿರಾ? ಗೊತ್ತಿಲ್ಲ…
ಎಲ್ಲಿ ನಡೆಯಿತು ಈ ವಿಚಿತ್ರ ಘಟನೆ?
ರಾಜ್ಯ ರಾಜಧಾನಿ ಬೆಂಗಳೂರಿನ ಹೊರ ವಲಯದ ತಾವರಕೆಕೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂಥದ್ದೊಂದು ವಿಚಿತ್ರ ಘಟನೆ ನಡೆದಿದೆ. ಇಲ್ಲಿನ ಆರ್ಬಿಐ ಬಡಾವಣೆಯಲ್ಲಿ ಸುಬ್ರಹ್ಮಣ್ಯ ಸ್ವಾಮಿ ದೇಗುಲವೊಂದು ಇದೆ. ತಡ ರಾತ್ರಿ 2 ಗಂಟೆ ಸುಮಾರಿಗೆ ಇದೇ ದೇಗುಲದಲ್ಲಿ ಇಂತದ್ದೊಂದು ಘಟನೆ ನಡೆದಿದೆ.
ತಡರಾತ್ರಿ ದೇಗುಲಕ್ಕೆ ಕನ್ನ ಹಾಕಲು ಬಂದ ಕಳ್ಳ
ಸುಬ್ರಹ್ಮಣ್ಯ ಸ್ವಾಮಿ ದೇಗುಲಕ್ಕೆ ತಡರಾತ್ರಿ 2 ಗಂಟೆ ಸುಮಾರಿಗೆ ಕಳ್ಳನೊಬ್ಬ ಬಂದಿದ್ದಾನೆ. ಹೀಗೆ ಕಳ್ಳತನ ಮಾಡಲು ಬಂದ ಕಳ್ಳ, ದೇವಾಲಯದ ಬಾಗಿಲನ್ನು ರಾಡ್ನಿಂದ ಮುರಿದಿದ್ದಾನೆ,. ಬಳಿಕ ದೇಗುಲದ ಒಳಕ್ಕೆ ನುಗ್ಗುತ್ತಾನೆ. ಅಲ್ಲಿ ದೇವರ ವಿಗ್ರಹದ ಮೇಲೆ ಬಂಗಾರದ ಆಭರಣಗಳು ಇರುವುದನ್ನು ನೋಡುತ್ತಾನೆ. ಕಾಣಿಕೆ ಹುಂಡಿಯಲ್ಲಿ ಭಕ್ತರು ಹಾಕಿದ್ದ ಅಪಾರ ಪ್ರಮಾಣದ ಹಣ ಇದೆ ಅನ್ನುವುದನ್ನೂ ಕನ್ಫರ್ಮ್ ಮಾಡಿಕೊಳ್ಳುತ್ತಾನೆ. ಇನ್ನೇನು ದೇವರ ಚಿನ್ನ, ಕಾಣಿಕೆ ಹಣ ಕಳ್ಳತನ ಮಾಡಬೇಕು ಅಂತ ಮನಸ್ಸಿನಲ್ಲೇ ಲೆಕ್ಕ ಹಾಕ್ತಾನೆ.
ಹೀಗೆ ದೇವರ ಆಭರಣ, ಕಾಣಿಕೆ ಹಣ ಕದಿಯೋಕೆ ಕಳ್ಳ ಯೋಚನೆ ಮಾಡ್ತಾನೆ. ಒಂದೆರಡು ನಿಮಿಷ ಹಾಗೆಯೇ ನಿಂತಿರ್ತಾನೆ. ಆದ್ರೆ ಅದೇನಾಯ್ತೋ ಗೊತ್ತಿಲ್ಲ. ತನ್ನ ಪ್ಲಾನ್ ಅನ್ನೇ ಚೇಂಜ್ ಮಾಡಿ ಬಿಡ್ತಾನೆ. ಸುಬ್ರಹ್ಮಣ್ಯ ಸ್ವಾಮಿ ದೇವರ ವಿಗ್ರಹ ನೋಡಿ ಹೆದರಿದನೋ ಅಥವಾ ಅದು ಏನನ್ನಿಸಿತೋ ಗೊತ್ತಿಲ್ಲ. ಕಳ್ಳತನಕ್ಕೆ ಅಂತ ಬಂದ ಕಳ್ಳ ಮೂಕನಂತೆ ನಿಂತು ಕೊಳ್ಳುತ್ತಾನೆ. ತಾನು ಕದಿಯೋಕೆ ಬಂದಿರುವುದು ಅನ್ನುವುದನ್ನೂ ಮರೆತು ಹಾಗೆಯೇ ನಿಂತು ಕೊಳ್ಳುತ್ತಾನೆ.
ದೇವರಿಗೆ ಕೈಮುಗಿದು ನಿಂತ ಕಳ್ಳ!
ಹೀಗೆ ಪ್ಲಾನ್ ಮಾಡ್ಕೊಂಡ ಕಳ್ಳ, ಸಡನ್ನಾಗಿ ತನ್ನ ಪ್ಲಾನ್ ಚೇಂಜ್ ಮಾಡ್ತಾನೆ. ದೇವರ ವಿಗ್ರಹದ ಮುಂದೆ ನಿಂತು ಕೈ ಮುಗೀತಾನೆ. ತದೇಕ ಚಿತ್ತದಿಂದ ವಿಗ್ರಹವನ್ನೇ ನೋಡುತ್ತಾ, ಕೈ ಮುಗಿದು ನಿಲ್ಲುತ್ತಾನೆ. ಆಗ ಅವನಿಗೆ ಏನನ್ನಿಸಿತೋ ಗೊತ್ತಿಲ್ಲ. ಮನಸ್ಸಲ್ಲೇ ಪ್ರಾರ್ಥಿಸಿಕೊಳ್ಳುತ್ತಾನೆ.
ಕಳ್ಳತನ ಮಾಡದೇ ವಾಪಸ್ಸಾದ ಆಸಾಮಿ
ಇಷ್ಟೆಲ್ಲಾ ಮಾಡಿದ ಬಳಿಕ ಕಳ್ಳನ ನಡೆ ಬದಲಾಗುತ್ತದೆ. ದೇವರ ವಿಗ್ರಹದ ಮೇಲಿರುವ ಆಭರಣ, ಹುಂಡಿ ಹಣ ಇವನ್ನೆಲ್ಲ ನೋಡುವ ಕಳ್ಳ, ಅದನ್ನು ಕದಿಯುವ ಗೋಜಿಗೂ ಹೋಗುವುದಿಲ್ಲ. ಬದಲಾಗಿ ದೇವರಿಗೆ ಕೈ ಮುಗಿದು, ಅಲ್ಲಿಂದ ವಾಪಸ್ ಬರುತ್ತಾನೆ.
ಆಭರಣ, ಹಣ ಕದಿಯಲು ದೇವಾಲಯ ಬಾಗಿಲು ಮುರಿದಿರುವ ಅಪರಿಚಿತ ವ್ಯಕ್ತಿ ಕೈ ಮುಗಿದು ವಾಪಸು ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ದೇವಾಲಯದ ಆಡಳಿತ ಮಂಡಳಿ ಬಾಗಿಲು ತೆಗೆದು ನೋಡಿದಾಗ ಕೃತ್ಯ ಬೆಳಕಿಗೆ ಬಂದಿದೆ. ಸಿಸಿಟಿವಿ ನೋಡಿದಾಗ ಎಲ್ಲವೂ ಗೊತ್ತಾಗಿದೆ. ಈ ಕುರಿತು ತಾವರೆಕೆರೆ ಪೊಲೀಸರಿಗೆ ದೂರು ನೀಡಲಾಗಿದೆ. ಬಾಗಿಲು ಮುರಿದು ಒಳ ಹೋಗಿರುವ ಕಳ್ಳ ಬರಿ ಗೈಯಲ್ಲಿ ಯಾಕೆ ಸುಮ್ಮನಾದ ಎಂಬುದು ಇದೀಗ ಸ್ಥಳೀಯರನ್ನು ಕಾಡುತ್ತಿದೆ. ದೇವರನ್ನು ನೋಡಿದ ಬಳಿಕ ಮನಸು ಬದಲಾಗಿ ವಾಪಸು ಹೋದನೇ ಎಂಬ ಮಾತುಗಳು ಕೇಳಿ ಬರುತ್ತಿವೆ.