ಕೋಲಾರ(ಫೆ.04): ಸೇನೆಯಿಂದ ನಿವೃತ್ತಿ ಹೊಂದಿದ ಒಂದು ದಿನ ಕಳೆಯುವಷ್ಟರಲ್ಲಿ, ಹೃದಯಾಘಾತದಿಂದ ಯೋಧ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ, ಕೋಲಾರದ ಅಂಬೇಡ್ಕರ್ ಬಡಾವಣೆಯಲ್ಲಿ ನಡೆದಿದೆ. 42 ವರ್ಷದ ಮಂಜುನಾಥ್ ಸಾವನ್ನಪ್ಪಿದ ಯೋಧರಾಗಿದ್ದು, ಹೈದರಾಬಾದ್ ನಲ್ಲಿ 17 ವರ್ಷ ಸುದೀರ್ಘ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಜನವರಿ 31 ಕ್ಕೆ ಅನ್ವಯಿಸುವಂತೆ ಸ್ವಯಂ ನಿವೃತ್ತಿ ಪಡೆದುಕೊಂಡ ಮಂಜುನಾಥ್ ಅವರಿಗೆ, ಫೆಬ್ರವರಿ 1 ರಂದು ಎದೆ ನೋವು ಕಾಣಿಸಿಕೊಂಡಿತ್ತು. ಪರಿಣಾಮ ಪತ್ನಿ ಅಶ್ವಿನಿ ಹಾಗೂ ಕುಟುಂಬಸ್ಥರು ಕೋಲಾರದ ಆರ್ ಎಲ್ ಜಾಲಪ್ಪ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಫೆಬ್ರವರಿ 2 ರಂದು ಸಾವನ್ನಪ್ಪಿದ್ದಾರೆ.
ಫೆಬ್ರವರಿ 3 ರಂದು ಅಂದರೆ ನಿನ್ನೆ ಹುಟ್ಟೂರು ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬೂದಿಕೋಟೆಯ ಕೋಡಗುರ್ಕಿ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿದೆ. ಬಂಗಾರಪೇಟೆ ಶಾಸಕ ಎಸ್ ಎನ್ ನಾರಾಯಣಸ್ವಾಮಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ್ಯ ಕೆ ಚಂದ್ರಾರೆಡ್ಡಿ ಸೇರಿದಂತೆ, ನೂರಾರು ಗ್ರಾಮಸ್ಥರು, ಸ್ನೇಹಿತರು ಸಂಬಂಧಿಕರು ಅಂತಿಮ ದರ್ಶನವನ್ನ ಪಡೆದುಕೊಂಡಿದ್ದಾರೆ. ನಿವೃತ್ತಿ ಹೊಂದಿದ ಮರುದಿನವೆ ಯೋಧ ಸಾವನ್ನಪ್ಪಿದ್ದಕ್ಕೆ ಬಂಗಾರಪೇಟೆ ತಾಲೂಕಿನಾದ್ಯಂತ ಜನರು ತೀವ್ರ ಸಂತಾಪವನ್ನ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗ ರಂಗಾಯಣದಲ್ಲಿ ರಂಗಶಿಲ್ಪಗಳ ಲೋಕಾರ್ಪಣೆ
17 ವರ್ಷದ ಸೇವೆಯ ನಂತರ ನಿವೃತ್ತಿ ಪಡೆದು ಮನೆಗೆ ಮರಳಿದ್ದ ಮಂಜುನಾಥ್ ರವರು, ತಮ್ಮ ತಾಯಿ ರತ್ನಮ್ಮ, ಪತ್ನಿ ಅಶ್ವಿನಿ ಮತ್ತು ಇಬ್ಬರು ಮಕ್ಕಳೊಂದಿಗೆ ಮುಂದಿನ ಜೀವನ ನಡೆಸಲು ನೂರಾರು ಆಸೆಗಳಳನ್ನು ಹೊತ್ತಿದ್ದರು ಎಂದು ತಿಳಿದುಬಂದಿದೆ.
ದೇವರು ನಮಗೆ ಮೋಸ ಮಾಡಿದ್ದಾನೆ ಎಂದು ಗೋಳಾಡಿದ ಪತ್ನಿ ಅಶ್ವಿನಿ
ಕೋಲಾರದ ನಗರದ ಅಂಬೇಡ್ಕರ್ ಬಡಾವಣೆಯಿಂದ ಹುಟ್ಟೂರು, ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕೋಡಗುರ್ಕಿ ಗ್ರಾಮದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು, ತೆರೆದ ವಾಹನದಲ್ಲಿ ಗ್ರಾಮದಲ್ಲಿ ಮೆರವಣಿಗೆ ಮಾಡಿ, ನಂತರ ಸ್ವಂತ ಜಮೀನಿನಲ್ಲಿ ಯೋಧನ ಅಂತ್ಯ ಸಂಸ್ಕಾರ ನೆರವೇರಿದೆ, ಇದೇ ವೇಳೆ ಮಾತನಾಡಿದ ಪತ್ನಿ ಅಶ್ಚಿನಿ ಇಂತಹ ಘಟನೆಯನ್ನು ನಾವೆಂದು ನಿರೀಕ್ಷೆ ಮಾಡಿರಲಿಲ್ಲ, ನಿವೃತ್ತಿ ಪಡೆದು ಸಂತಸದಿಂದಲೇ ಮನೆಗೆ ಬಂದ ಕ್ಷಣ ಇನ್ನೂ ಹಸಿರಾಗಿದೆ. ಆದರೆ ದೇವರು ನಮಗೆ ಮೋಸ ಮಾಡಿದ್ದಾನೆ ಎಂದು ಪತ್ನಿ ಅಶ್ವಿನಿ ಗೋಳಾಡಿದರು.
ಒಟ್ಟಿನಲ್ಲಿ ಕಡು ಬಡತನದ ಕುಟುಂಬದಿಂದ ಬಂದಿದ್ದ ಮಂಜುನಾಥ್, ಸೇನೆಯಲ್ಲಿ ಸೇವೆ ಸಲ್ಲಿಸುತ್ತಾ ಮನೆಯವರನ್ನು ನೋಡಿಕೊಳ್ಳುತ್ತಾ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದ್ದರು. ನಿವೃತ್ತಿ ನಂತರ ಸ್ವಗ್ರಾಮದಲ್ಲಿ ಭವ್ಯವಾದ ಮನೆಯೊಂದನ್ನ ಕಟ್ಟುವ ಯೋಚನೆಯನ್ನು ಮಾಡಿದ್ದರು ಎಂದು ತಿಳಿದುಬಂದಿದೆ.
ಆದರೆ ವಿಧಿಯಾಟವೇ ಬೇರೆಯೇ ಇತ್ತೇನೊ, ದೇಶ ಸೇವೆಯಿಂದ ನಿವೃತ್ತಿ ಹೊಂದಿ ಕುಟುಂಬದ ಜೊತೆಗೆ ಮುಂದಿನ ಜೀವನ ನಡೆಸಲು ಮರಳಿ ಬಂದಿದ್ದ ಮಗನನ್ನ, ಹೇಳದೆ ಕೇಳದೆ ಕರೆದುಕೊಂಡೆಯಾ ಎಂದು ತಾಯಿ ರತ್ನಮ್ಮ ದೇವರಿಗೆ ಪ್ರಶ್ನೆಯನ್ನ ಹಾಕಿದ್ದಾರೆ. ಒಟ್ಟಿನಲ್ಲಿ ಸ್ವಯಂ ನಿವೃತ್ತಿ ಪಡೆದು ವಾಪಾಸ್ ಬಂದಿದ್ದ ಯೋಧನ ಅಕಾಲಿಕ ಸಾವು ನ್ಯಾಯವೇ ಎನ್ನುತ್ತಾ ಜಿಲ್ಲೆಯ ಜನರು ಕಂಬನಿ ಮಿಡಿದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ