ಗ್ರಾಮ ಪಂಚಾಯತ್ಗೆ ಹೆಂಡತಿ ಅವಿರೋಧ ಆಯ್ಕೆಯ ಬೆನ್ನಲ್ಲೇ ಗಂಡ ನೇಣಿಗೆ ಶರಣು
ದೊಡ್ಡರಾಯಪೇಟೆ ಗ್ರಾಮದ ನಿಂಗರಾಜು, ಹೊಸಕೋಟೆ ಗ್ರಾಮದ ಗಗನ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ನಿಂಗರಾಜು ತನ್ನ ಸ್ನೇಹಿತರಿಗು ನಿನ್ನೆ ರಾತ್ರಿ ಪಾರ್ಟಿ ಕೊಟ್ಟು ಮನೆಗೆ ಬಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ
ಚಾಮರಾಜನಗರ (ಡಿಸೆಂಬರ್. 16): ಹೆಂಡತಿ ಗ್ರಾಮ ಪಂಚಾಯತ್ಗೆ ಅವಿರೋಧವಾಗಿ ಆಯ್ಕೆಯಾದ ಬೆನ್ನಲ್ಲೆ ಗಂಡ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ತಾಲೂಕು ದೊಡ್ಡರಾಯಪೇಟೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ 27 ವರ್ಷದ ನಿಂಗರಾಜು ನೇಣಿಗೆ ಶರಣಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ನಿಂಗರಾಜು ತನ್ನ ಹೆಂಡತಿ ಗಗನ ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಅವಿರೋದ ಆಯ್ಕೆಯಾಗುತ್ತಿದ್ದಂತೆ ನಿನ್ನೆ ಬೆಳಿಗ್ಗೆ ಶಾಸಕ ಪುಟ್ಟರಂಗಶೆಟ್ಟಿಯನ್ನು ಭೇಟಿ ಮಾಡಿದ್ದ ಈ ದಂಪತಿ, ಶಾಸಕರನ್ನು ಅಭಿನಂದಿಸಿದ್ದರು. ಬಳಿಕ ನಿಂಗರಾಜು ತನ್ನ ಸ್ನೇಹಿತರಿಗು ನಿನ್ನೆ ರಾತ್ರಿ ಪಾರ್ಟಿ ಕೊಟ್ಟು ಮನೆಗೆ ಬಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಆದರೆ ನನ್ನ ಮಗನಿಗೆ ಮದುವೆಯಾಗಿ ಐದು ವರ್ಷವಾಯಿತು. ಇಬ್ಬರೂ ಅನ್ಯೋನ್ಯವಾಗಿದ್ದರು, ಜಗಳ ಗಲಾಟೆ ಇರಲಿಲ್ಲ. ಆದರೆ ಇವರಿಗೆ ಮಕ್ಕಳಾಗಿರಲಿಲ್ಲ. ವೈದ್ಯರು ಸಹ ಮಕ್ಕಳಾಗುವುದಿಲ್ಲ ಎಂದು ತಿಳಿಸಿದ್ದರು. ಈ ಬಗ್ಗೆ ನನ್ನ ಮಗ ನಿಂಗರಾಜು ಜಿಗುಪ್ಸೆಗೊಂಡಿದ್ದ ಇದೇ ಚಿಂತೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆತನ ತಾಯಿ ಮಹದೇವಮ್ಮ ನ್ಯೂಸ್ 18 ಕನ್ನಡಕ್ಕೆ ತಿಳಿಸಿದ್ದಾರೆ.
ನಾವು ಪ್ರೀತಿಸಿ ಮದುವೆಯಾದವರು, ನನ್ನ ಜೊತೆ ಗಂಡ ಚೆನ್ನಾಗಿಯೆ ಇದ್ದರು. ನಾನು ಗ್ರಾಮ ಪಂಚಾಯತ್ ಸದಸ್ಯಳಾಗಿ ಅವಿರೋಧವಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ನನ್ನ ಗಂಡ ನಿಂಗರಾಜು ತಮ್ಮ ಸ್ನೇಹಿತರಿಗೆ ಪಾರ್ಟಿ ಕೊಡಿಸಿ ರಾತ್ರಿ ತಡವಾಗಿ ಬಂದರು. ನಾನು ಹೊರಗೆ ಮಲಗಿದ್ದೆ. ಈ ವೇಳೆ ರೂಮ್ ನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದ ಹೆಂಡತಿ ಗಗನ ತಿಳಿಸಿದ್ದಾರೆ. ನಮಗೆ ಮಕ್ಕಳಾಗುವುದಿಲ್ಲ ಎಂದು ತಿಳಿದು ಇತ್ತೀಚೆಗೆ ನನ್ನ ಗಂಡ ಬಹಳ ಬೇಸರಗೊಂಡಿದ್ದರು ಎಂದು ಅವರು ಹೇಳಿದ್ದಾರೆ.
ಚಾಮರಾಜನಗರ ಪೂರ್ವ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಸಹಜ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆ ನಂತರ ದೊಡ್ಡರಾಯಪೇಟೆಯಲ್ಲಿ ಅಂತ್ಯಕ್ರಿಯೆ ನಡೆಯಿತು.
ದೊಡ್ಡರಾಯಪೇಟೆ ಗ್ರಾಮದ ನಿಂಗರಾಜು, ಹೊಸಕೋಟೆ ಗ್ರಾಮದ ಗಗನ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಇವರದ್ದು ಅಂತರಜಾತಿಯ ವಿವಾಹ. ಕೂಡ್ಲೂರು ಗ್ರಾಮಪಂಚಾಯತ್ ವ್ಯಾಪ್ತಿಗೆ ಬರುವ ದೊಡ್ಡರಾಯಪೇಟೆ ಗ್ರಾಮದ ಎರಡನೇ ಬ್ಲಾಕ್ ಈ ಬಾರಿ ಎಸ್ಟಿ ಮಹಿಳೆಗೆ ಮೀಸಲಾಗಿತ್ತು. ಆದರೆ, ಆ ವರ್ಗದವರು ಗ್ರಾಮದಲ್ಲಿ ಯಾರೂ ಇರಲಿಲ್ಲ. ಹಾಗಾಗಿ ಆ ವರ್ಗಕ್ಕೆ ಸೇರಿದ ತನ್ನ ಹೆಂಡತಿಯನ್ನು ನಿಂಗರಾಜು ಕಣಕ್ಕಿಳಿಸಿದ್ದ. ಬೇರೆ ಯಾರು ಸ್ಪರ್ಧಿಸದ ಕಾರಣ ಗಗನ ಅವಿರೋಧವಾಗಿ ಆಯ್ಕೆ ಯಾಗಿದ್ದರು.
Published by:G Hareeshkumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ