ಬೆಂಗಳೂರು(ಜುಲೈ 26): ಬಿಎಸ್ ಯಡಿಯೂರಪ್ಪ 4ನೇ ಬಾರಿ ಸಿಎಂ ಆಗಿ ಅಧಿಕಾರ ಸ್ವೀಕರಿಸಿ ಇವತ್ತಿಗೆ ಸರಿಯಾಗಿ ಒಂದು ವರ್ಷ. 2019ರ ಜುಲೈ 26ರಂದು ಅವರು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು. ಮೈತ್ರಿಪಕ್ಷಗಳ ಬಂಡಾಯ ಶಾಸಕರನ್ನು ಒಡಲೊಳಗೆ ಹಾಕಿಕೊಂಡು, ಸ್ವಪಕ್ಷೀಯ ಅಸಮಾಧಾನಿತರ ಬೇಗುದಿಯನ್ನು ಒಡಲಲ್ಲಿಟ್ಟುಕೊಂಡು ಒಂದು ವರ್ಷ ಅವರು ಅಧಿಕಾರ ನಿಭಾಯಿಸಿದ್ದಾರೆ. ಬಿಜೆಪಿ ನೀಡಿದ್ದ ಭರವಸೆಗಳೇನು? ಈ ಒಂದು ವರ್ಷದಲ್ಲಿ ಸಿಎಂ ಆಗಿ ಯಡಿಯೂರಪ್ಪ ಎದುರಿಸಿದ ಸವಾಲುಗಳೇನು? ಸಾಧನೆಗಳೇನು ಎಂಬ ಒಂದು ಅವಲೋಕನ ಇದು.
ಯಡಿಯೂರಪ್ಪಗಿದ್ದ ಸವಾಲು:
ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅವರಿಗೆ ಮೊತ್ತಮೊದಲು ಎದುರಾಗಿದ್ದೇ ಬಹುಮತ ಸಾಬೀತುಪಡಿಸುವ ಕಠಿಣ ಸವಾಲು. ಅದಾದ ಬಳಿಕ ಸಂಪುಟ ರಚನೆಯ ಸವಾಲು ಎದುರಾಯಿತು. ಹೈಕಮಾಂಡ್ನಿಂದ ಸರಿಯಾದ ಸ್ಪಂದನೆ ಸಿಗದೆ ವಿಳಂಬಗೊಂಡಿತು. ಅಷ್ಟರಲ್ಲಿ ಬರ ಮತ್ತು ಪ್ರವಾಹ ಪರಿಸ್ಥಿತಿ ಎದುರಾಯಿತು. ಸಚಿವರಿಲ್ಲದೆ ಸಿಎಂ ಏಕಾಂಗಿ ಹೋರಾಟ ನಡೆಸಬೇಕಾಯಿತು. ಆಗಲೂ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಆಸಕ್ತಿ ತೋರಲಿಲ್ಲ.
ಸಂಪುಟ ರಚನೆ ಬಳಿಕ ಪಕ್ಷದಲ್ಲಿ ಬಂಡಾಯದ ಸಮಸ್ಯೆ ಎದ್ದಿತು. ತಮ್ಮ ನಾಯಕತ್ವ ಗುಣದಿಂದ ಅದನ್ನು ಹೇಗೋ ನಿಭಾಯಿಸಿದರು. ಆದರೆ, ಹೊಸ ಸಚಿವರಿಗೆ ಖಾತೆ ಹಂಚಲು ಅವರಿಗೆ 15 ದಿನ ಬೇಕಾಯಿತು. ಅದೂ ಕೂಡ ಯಶಸ್ವಿಯಾಗಿ ನೆರವೇರಿತು.
ಹಣಕಾಸು ಪರಿಸ್ಥಿತಿ: ಮೈತ್ರಿ ಸರ್ಕಾರದ ವೇಳೆ ಕುಮಾರಸ್ವಾಮಿ ಘೋಷಿಸಿದ್ದ ಸಾಲ ಮನ್ನಾಗೆ ಹಣದ ವ್ಯವಸ್ಥೆ ಮಾಡುವ ಸವಾಲು ಒಂದು ಕಡೆಯಾದರೆ, ಸಾಲ ಮನ್ನಾದಿಂದ ಸಂಕಷ್ಟಕ್ಕೆ ಸಿಲುಕಿದ್ದ ಆರ್ಥಿಕತೆಗೆ ಪುಷ್ಟಿ ನೀಡುವ ಸವಾಲು ಇನ್ನೊಂದೆಡೆ ಎದುರಾಗಿತ್ತು.
ಇದನ್ನೂ ಓದಿ: ಅಧಿಕಾರಕ್ಕೆ ಏರಿದಾಗಿಂದಲೂ ಎಲ್ಲಾ ಸವಾಲುಗಳನ್ನು ಯಡಿಯೂರಪ್ಪ ಯಶಸ್ವಿಯಾಗಿ ನಿಭಾಯಿಸಿದ್ದಾರೆ; ಆರ್. ಅಶೋಕ್
ಮೈತ್ರಿ ಸರ್ಕಾರವನ್ನು ಪತನಗೊಳಿಸಿ ಅನರ್ಹಗೊಂಡಿದ್ದ ಶಾಸಕರ ಪ್ರಕರಣ ಯಡಿಯೂರಪ್ಪಗೆ ದೊಡ್ಡ ತಲೆನೋವು ತಂದಿತ್ತು. ಸುಪ್ರೀಂ ಕೋರ್ಟ್ನಲ್ಲಿ ಈ ಪ್ರಕರಣದ ಇತ್ಯರ್ಥಕ್ಕೆ ಹೋರಾಟ ನಡೆಸುವುದೇ ಆಯಿತು. ಕೋರ್ಟ್ನಲ್ಲಿ ಜಯ ಸಿಕ್ಕ ನಂತರ ಅನರ್ಹ ಶಾಸಕರನ್ನು ಉಪಚುನಾವಣೆಯಲ್ಲಿ ಗೆಲ್ಲಿಸುವ ಗುರುತರ ಸವಾಲು ಎದುರಾಯಿತು. ಅನರ್ಹ ಶಾಸಕರಿಗೆ ಟಿಕೆಟ್ ಕೊಡುತ್ತಿದ್ದಂತೆಯೇ ಪಕ್ಷದಲ್ಲಿ ಟಿಕೆಟ್ ಸಿಗದ ಅಸಮಾಧಾನಿತರಿಗೆ ವಿವಿಧ ನಿಗಮ ಮಂಡಳಿ ಸ್ಥಾನಗಳನ್ನು ಕೊಟ್ಟಿ ತಣಿಸಿದರು. ಸಕಾಲದಲ್ಲಿ ಅಸಮಾಧಾನ ನೀಗಿಸಿ ಉಪಚುನಾವಣೆಯಲ್ಲಿ ಬಿಜೆಪಿಗೆ ಅಭೂತಪೂರ್ವ ಗೆಲುವು ದೊರಕಿಸಿಕೊಟ್ಟರು. ಎಂಟಿಬಿ ನಾಗರಾಜ್ ಮತ್ತು ಹೆಚ್ ವಿಶ್ವನಾಥ್ ಹೊರತಪಡಿಸಿ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅನರ್ಹ ಶಾಸಕರೆಲ್ಲರೂ ಗೆಲುವು ಪಡೆದರು.
ಈ ಯಶಸ್ಸಿನ ಬಳಿಕ ಯಡಿಯೂರಪ್ಪ ಅವರು ಸಂಪುಟ ವಿಸ್ತರಣೆ ಮಾಡಿ ಈ ಶಾಸಕರನ್ನು ಮಂತ್ರಿಮಂಡಲಕ್ಕೆ ಸೇರಿಸಿಕೊಂಡು ಖಾತೆ ಹಂಚಿಕೆ ಮಾಡುವ ಮತ್ತೊಂದು ದೊಡ್ಡ ಸವಾಲನ್ನು ನಿಭಾಯಿಸಿದರು. ಉಪಚುನಾವಣೆಯಲ್ಲಿ ಗೆದ್ದು ಅರ್ಹರಾದ ಶಾಸಕರಿಗೆ ಅವರು ಕೇಳಿದ ಖಾತೆಗಳನ್ನೇ ಹೆಚ್ಚೂಕಡಿಮೆ ನೀಡಲಾಯಿತು. ಮಹೇಶ್ ಕುಮಟಳ್ಳಿಗೆ ಸಚಿವ ಸ್ಥಾನ ನೀಡದಿದ್ದರೂ ನಿಗಮ ಮಂಡಳೀ ಜೊತೆ ಸಂಪುಟ ದರ್ಜೆ ಸ್ಥಾನ ನೀಡಿ ಸಮಸ್ಯೆ ನಿವಾರಣೆ ಮಾಡಿದರು.
ಲಕ್ಷ್ಮಣ ಸವದಿಗೆ ಡಿಸಿಎಂ ಸ್ಥಾನ ನೀಡಿದ್ದರಿಂದ ಉದ್ಭವಿಸಿದ ಅಸಮಾಧಾನ; ಉಮೇಶ್ ಕತ್ತಿ ಮೊದಲಾದವರು ಎಬ್ಬಿಸುತ್ತಿದ್ದ ಬಂಡಾಯ ಇತ್ಯಾದಿ ಸವಾಲನ್ನು ಹೇಗೋ ನಿರ್ವಹಿಸಿದರು. ಎಲ್ಲವೂ ಸರಿಯಾಯಿತು ಎಂದುಕೊಳ್ಳುತ್ತಿರುವಾಗಲೇ ವಕ್ಕರಿಸಿತ್ತು ಕೊರೋನಾ ವೈರಸ್ ಬಿಕ್ಕಟ್ಟು. ಇದು ರಾಜ್ಯದ ಹಣಕಾಸು ಸಂಕಷ್ಟವನ್ನು ಇನ್ನಷ್ಟು ಹೆಚ್ಚಿಸಿತು.
ಇದೇ ವೇಳೆ, ಖಾಲಿ ಉಳಿದಿದ್ದ ಹಲವು ವಿಧಾನ ಪರಿಷತ್ ಸ್ಥಾನಗಳು ಸಿಎಂ ಯಡಿಯೂರಪ್ಪಗೆ ವರದಾನವಾಯಿತು. ಎಂಟಿಬಿ ನಾಗರಾಜ್, ಆರ್ ಶಂಕರ್, ಸಿ.ಪಿ. ಯೋಗೇಶ್ವರ್ ಮತ್ತು ಹೆಚ್ ವಿಶ್ವನಾಥ್ ಅವರಿಗೆ ಪರಿಷತ್ ಸದಸ್ಯರನ್ನಾಗಿ ಮಾಡಿಸಿದರು.
ಎದುರಿಸಿದ ಆರೋಪಗಳು:
* ಮೈತ್ರಿ ಸರ್ಕಾರದ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರಗಳನ್ನ ದುಡ್ಡು ಕೊಟ್ಟು ಖರೀದಿ ಮಾಡಲಾಗಿದೆ ಎಂಬ ಆರೋಪ
* ಸರ್ಕಾರದಲ್ಲಿ ವರ್ಗಾವಣೆ ದಂಧೆ ಆರೋಪ
* ಉಪಚುನಾವಣೆಗಳನ್ನು ಗೆಲ್ಲಲು ನೀರಿನಂತೆ ಹಣ ಚೆಲ್ಲಿದ ಆರೋಪ
* ಉತ್ತರ ಕರ್ನಾಟಕ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಮೂಲ ಸೌಕರ್ಯಗಳು ಮತ್ತು ಮನೆ ನಿರ್ಮಿಸಿಕೊಡುವ ಕಾರ್ಯದಲ್ಲಿ ಅಧಿಕಾರಿಗಳು ಮತ್ತು ಕೆಲವು ಶಾಸಕರ ಭ್ರಷ್ಟಾಚಾರ ಆರೋಪ
* ಕೋವಿಡ್ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ 2000 ಕೋಟಿ ಆಕ್ರಮ ಆರೋಪ (ಕೆಲ ಸಚಿವರ ಮೇಲೆ )
ಇದನ್ನೂ ಓದಿ: 1-10ನೇ ತರಗತಿ ಮಕ್ಕಳಿಗೆ ಶಿಕ್ಷಣ ಇಲಾಖೆಯ ಎರಡು ಚಾನೆಲ್ಗಳ ಮೂಲಕ ಧ್ವನಿಮುದ್ರಿತ ಪಾಠ: ಸಚಿವ ಸುರೇಶ್ ಕುಮಾರ್
ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ನೀಡಿದ್ದ ಆಶ್ವಾಸನೆಗಳು:
* ಮೊದಲ ಸಂಪುಟ ಸಭೆಯಲ್ಲೇ ಲೋಕಾಯುಕ್ತ ಮರುಸ್ಥಾಪನೆ ನಿರ್ಧಾರ.
* ರಾಷ್ಟ್ರೀಕೃತ ಹಾಗೂ ಸಹಕಾರ ಸಂಘಗಳಲ್ಲಿನ ಒಂದು ಲಕ್ಷವರೆಗಿನ ರೈತರ ಸಾಲ ಮನ್ನಾ.
* 10,000 ರೂ. ಆರ್ಥಿಕ ನೆರವು ನೀಡುವ ನೇಗಿಲಯೋಗಿ ಯೋಜನೆ.
* ಮುಖ್ಯಮಂತ್ರಿ ರೈತ ಸುರಕ್ಷಾ ವಿಮಾ ಯೋಜನೆ.
* ಸುಜಲಾಂ ಸುಫಲಾಂ ಕರ್ನಾಟಕ ಕೆರೆ ಪುನಶ್ಚೇತನಕ್ಕೆ ಮಿಷನ್ ಕಲ್ಯಾಣಿ.
* ಸಾವಿರ ರೈತರಿಗೆ ಇಸ್ರೇಲ್ ಪ್ರವಾಸಯೋಗ.
* ಕರ್ನಾಟಕ ಗೋಹತ್ಯಾ ನಿಷೇಧ ಕಾಯ್ದೆ ಮರು ಜಾರಿ.
* ಬಿಪಿಎಲ್ ಕುಟುಂಬದ ಮಹಿಳೆಯರಿಗೆ ಉಚಿತ ಸ್ಮಾರ್ಟ್ ಫೋನ್ ಹಾಗೂ ಉಚಿತ ನ್ಯಾಪ್ಕಿನ್, ಉಳಿದ ಮಹಿಳೆಯರಿಗೆ ಒಂದು ರೂ.ದರದಲ್ಲಿ ಸ್ಯಾನಿಟರಿ ನ್ಯಾಪ್ಕಿನ್.
* ಭಾಗ್ಯಲಕ್ಷ್ಮಿ ಬಾಂಡ್ ಮೊತ್ತ 2 ಲಕ್ಷಕ್ಕೆ ಹೆಚ್ಚಳ.
* ಬಿಪಿಎಲ್ ಕುಟುಂಬದ ಯುವತಿಯರ ವಿವಾಹಕ್ಕೆ 25 ಸಾವಿರ ನಗದು, 3 ಗ್ರಾಂ. ಚಿನ್ನದ ತಾಳಿ.
* ಬಿಪಿಎಲ್ ಕಾರ್ಡುದಾರರಿಗೆ ಅನ್ನದಾಸೋಹ, ಎಪಿಎಲ್ ಕಾರ್ಡ್ದಾರರಿಗೆ ಕಡಿಮೆ ದರದಲ್ಲಿ ಧಾನ್ಯ.
* ಮುನ್ನೂರಕ್ಕೂ ಹೆಚ್ಚು ಮುಖ್ಯಮಂತ್ರಿ ಅನ್ನಪೂರ್ಣ ಕ್ಯಾಂಟೀನ್.
* ಸರ್ಕಾರ ರಚನೆಯಾದ ಮೂರು ತಿಂಗಳಲ್ಲಿ ನೇಕಾರರ ಒಂದು ಲಕ್ಷ ರೂ. ಸಾಲ ಮನ್ನಾ.
* ಪ್ರತಿವರ್ಷ ಅಮರಶಿಲ್ಪಿ ಜಕಣಾಚಾರಿ ಜಯಂತಿ.
* ಕೀರ್ತಿ ಆಯೋಗ ಸ್ಥಾಪನೆ, ಸಕಾಲ ಕಾಯ್ದೆಗೆ ಮರುಜೀವ.
* ಸಿ ಮತ್ತು ಡಿ ದರ್ಜೆ ನೌಕರರ ನೇಮಕದಲ್ಲಿ ಸಂದರ್ಶನ ರದ್ದು. * ಅಧಿಕಾರಕ್ಕೆ ಬಂದ ನೂರು ದಿನದಲ್ಲಿ ಕಾಂಗ್ರೆಸ್ ಆಡಳಿತಾವಧಿಯ ಆರ್ಥಿಕ ನಿರ್ವಹಣೆ ಬಗ್ಗೆ ಶ್ವೇತಪತ್ರ ಬಿಡುಗಡೆ.
* ಸಿಎಂ ಕಚೇರಿ ಅಡಿಯಲ್ಲಿ ಭ್ರಷ್ಟಾಚಾರ ವಿರೋಧಿ ಸಹಾಯವಾಣಿ.
* ಏಮ್ಸ್ ಮಾದರಿಯಲ್ಲಿ ರಾಜ್ಯದಲ್ಲಿ ಎರಡು ವೈದ್ಯವಿಜ್ಞಾನ ಸಂಸ್ಥೆಯ ಸ್ಥಾಪನೆ.
* ಆಯುಷ್ಮಾನ್ ಕರ್ನಾಟಕ ಯೋಜನೆ.
* ಆಯುಷ್ ಆರೋಗ್ಯ ಕೇಂದ್ರ, ಆಯುಷ್ ವಿವಿ ಸ್ಥಾಪನೆ.
* ನದಿ ನೀರು ಮತ್ತು ಮೇಲ್ಮೈ ನೀರು ಬಳಸಿ ಶುದ್ಧ ಕುಡಿಯುವ ನೀರು ಯೋಜನೆ ರೂಪಿಸಲು ಪ್ರತ್ಯೇಕ ಸಚಿವಾಲಯ ಸ್ಥಾಪನೆ.
* ಮೂರು ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಎಲ್ಲಾ ಪಟ್ಟಣಗಳಲ್ಲಿ ಪೈಪ್ಲೈನ್ ಮೂಲಕ ಅಡುಗೆ ಅನಿಲ ಪೂರೈಕೆ.
* ದೇವನಹಳ್ಳಿಯಲ್ಲಿ ಮೆಗಾ ಫಿಲಂಸಿಟಿ ನಿರ್ಮಾಣ. * ಬೆಂಗಳೂರು ಸಂಪೂರ್ಣ ಕಸಮುಕ್ತ ನಗರವಾಗಿರುವ ಯೋಜನೆ.
* ಬೆಂಗಳೂರಿನ ಕೆರೆಗಳ ಪುನರುಜ್ಜೀವನಕ್ಕೆ 2500 ಕೋಟಿ ವೆಚ್ಚದಲ್ಲಿ ನಾಡಪ್ರಭು ಕೆಂಪೇಗೌಡ ನಿಧಿ ಸ್ಥಾಪನೆ.
* ಕಾಲೇಜಿಗೆ ಸೇರಿದ ಪ್ರತಿ ವಿದ್ಯಾರ್ಥಿಗೆ ಉಚಿತ ಲ್ಯಾಪ್ಟಾಪ್.
* 70 ಹೊಸ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, 750 ವಸತಿ ನಿಲಯ ಸ್ಥಾಪನೆ.
ಈಡೇರಿಸಿರುವ ಭರವಸೆಗಳು:
* ರೈತ ಸುರಕ್ಷಾ ಫಸಲ್ ಭೀಮಾ ಯೋಜನೆ ವಿಮೆ ಪಾವತಿ.
* ಸುಜಲಾಂ ಸುಫಲಾಂ ಕರ್ನಾಟಕ ಕೆರೆ ಪುನಶ್ಚೇತನಕ್ಕೆ ಮಿಷನ್ ಕಲ್ಯಾಣಿ.
* ಸರ್ಕಾರ ರಚನೆಯಾದ ಮೂರು ತಿಂಗಳಲ್ಲಿ ನೇಕಾರರ ಒಂದು ಲಕ್ಷ ರೂ. ಸಾಲ ಮನ್ನಾ.
* ಆಯುಷ್ಮಾನ್ ಕರ್ನಾಟಕ ಯೋಜನೆ.
* ಪ್ರತಿವರ್ಷ ಅಮರಶಿಲ್ಪಿ ಜಕಣಾಚಾರಿ ಜಯಂತಿ.
* ಸಿ ಮತ್ತು ಡಿ ದರ್ಜೆ ನೌಕರರ ನೇಮಕದಲ್ಲಿ ಸಂದರ್ಶನ ರದ್ದು. ಮೆಗಾ ಫಿಲಂಸಿಟಿ ನಿರ್ಮಾಣಕ್ಕೆ 500 ಕೋಟಿ ಬಜೆಟ್ನಲ್ಲಿ ಮೀಸಲು...
* ಮೀನುಗಾರರು ಹಾಗೂ ನೇಕಾರರ ಸಾಲ ಮನ್ನಾ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ