ಬೆಂಗಳೂರು: ದೆಹಲಿ ಮಾದರಿಯಲ್ಲಿ ವಕೀಲರಿಗೆ ಜೀವವಿಮೆ ಹಾಗೂ ಆರೋಗ್ಯ ವಿಮೆ ಒದಗಿಸುವ ಸಂಬಂಧ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿಯು ದೆಹಲಿ ವಕೀಲರಿಗೆ ಒದಗಿಸಿದ ವಿಮಾ ಯೋಜನೆಯನ್ನು ಪರಿಶೀಲಿಸಿ ಸರ್ಕಾರದ ಪರಿಗಣನೆಗೆ ಸ್ವೀಕರಿಸಬಹುದು ಎಂದು ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ದೆಹಲಿ ಮಾದರಿಯಲ್ಲೇ ರಾಜ್ಯದಲ್ಲೂ ವಕೀಲರಿಗೆ ಜೀವವಿಮೆ ಮತ್ತು ಆರೋಗ್ಯ ವಿಮೆ ಒದಗಿಸಲು ಸೂಕ್ತ ಯೋಜನೆ ರೂಪಿಸುವಂತೆ ಕರ್ನಾಟಕ ಹೈಕೋರ್ಟ್ ಕಳೆದ ಮಾರ್ಚ್ನಲ್ಲಿ ಸೂಚನೆ ನೀಡಿತ್ತು. ಕೊರೊನಾ ಸಂದರ್ಭದಲ್ಲಿಯೂ ಜೀವ ಲೆಕ್ಕಿಸದೆ ಕೆಲಸ ಮಾಡುತ್ತಿರುವ ವಕೀಲರಿಗೆ ವಿಮೆ ಒದಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ ಪಿ ರಂಗನಾಥ್ 2020ರ ಮಾರ್ಚ್ನಲ್ಲಿ ಬರದಿದ್ದ ಪತ್ರ ಆಧರಿಸಿ ಹೈಕೋರ್ಟ್ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿತ್ತು.
ಬೆಂಗಳೂರು ವಕೀಲರ ಸಂಘ, ಕರ್ನಾಟಕ ವಕೀಲರ ಪರಿಷತ್ ಪದಾಧಿಕಾರಿಗಳು ಮತ್ತು ವಿಮಾ ಕಂಪೆನಿಗಳೊಂದಿಗೆ ಸಭೆ ನಡೆಸಬೇಲಕು ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯ ಆಧರಿಸಿ ವಕೀಲರಿಗೆ ಜೀವ ವಿಮೆ ಹಾಗೂ ಆರೋಗ್ಯ ವಿಮೆ ಒದಗಿಸಿ ಆ ಕುರಿತ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಅದು ಸರ್ಕಾರಕ್ಕೆ ಸೂಚಿಸಿತ್ತು.
ಹೈಕೋರ್ಟ್ ಆದೇಶದನ್ವಯ ಜೂನ್ 18ರಂದು ನಡೆದ ಸಭೆಯಲ್ಲಿ ರಂಗನಾಥ್ ಅವರು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್- ಆಯುಷ್ಮಾನ್ ಭಾರತ್ ಮತ್ತು ಟೈಲರ್ ಮೇಡ್ ಫ್ಲೋಟರ್ ಗ್ರೂಪ್ ಮೆಡಿಕೇಮ್ ಪಾಲಿಸಿ ಮತ್ತು ನ್ಯೂ ಇಂಡಿಯಾ ಫ್ಲೆಕ್ಸಿ ಗ್ರೂಪ್ ಮೆಡಿಕೇಮ್ ಪಾಲಿಸಿ ಒದಗಿಸಿದ ಯೋಜನೆಗಳ ಬಗ್ಗೆ ತುಲನಾತ್ಮಕ ವಿವರಣೆ ನೀಡಿದರು. ಅಲ್ಲದೆ ನವದೆಹಲಿ ಸರ್ಕಾರ ವಕೀಲರಿಗೆ ಒದಗಿಸಿದ ಯೋಜನೆಯ ಬಗ್ಗೆ ವಿವರಿಸಿದರು.
ಪ್ರತಿ ಕುಟುಂಬಕ್ಕೆ ರೂ 10,000 ಪ್ರೀಮಿಯಂ ಮೊತ್ತ ನಿಗದಿಪಡಿಸಲಾಗಿದೆ. ನವದೆಹಲಿಯಲ್ಲಿ ಸುಮಾರು 23,000 ವಕೀಲರು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ನೋಂದಾಯಿಸಿಕೊಂಡಿರುವ ಒಟ್ಟು ವಕೀಲರ ಸಂಖ್ಯೆ 1,02,669 ಎಂದು ಅವರು ಮಾಹಿತಿ ನೀಡಿದರು.
ಮುಖ್ಯ ಕಾರ್ಯದರ್ಶಿ ಪಿ ರವಿ ಕುಮಾರ್ ಅವರು “ಏಕ ಪಾಲಿಸಿಗೆ ವಿಧಿಸಬಹುದಾದ ಪ್ರೀಮಿಯಂ ಕುರಿತು ವಿವರಣೆ ಕೇಳಿದರು. ವಕೀಲರಿಗೆ ವೈಯಕ್ತಿಕವಾಗಿ ಅಥವಾ ಗುಂಪು ವಿಮೆ (ಕುಟುಂಬಗಳಿಗೆ) ಪ್ರೀಮಿಯಂ ನಿಗದಿಪಡಿಸಲಾಗುತ್ತದೆ ಎಂದು ವಿಮಾಕಂಪೆನಿಗಳು ತಿಳಿಸಿದವು. ಇದಲ್ಲದೆ ವಯಸ್ಸು, ಭರವಸೆ ನೀಡಿದ ಮೊತ್ತ, ಕವರೇಜ್ ವಿಧಾನ ಹಾಗೂ ವಕೀಲರ ಸಂಖ್ಯೆಯನ್ನು ಕೂಡ ಪರಿಗಣಿಸಲಾಗುತ್ತದೆ ಎಂದವು. ವಿಮಾದಾರರಿಗೆ ನಗದುರಹಿತ ಸೌಲಭ್ಯ ಒದಗಿಸಲಾಗುವುದು ಮತ್ತು ರಾಜ್ಯದಲ್ಲಿ ಸುಮಾರು 370 ಆಸ್ಪತ್ರೆಗಳು ಕಂಪೆನಿಯ ವಿಮಾ ವ್ಯಾಪ್ತಿಯಲ್ಲಿವೆ ಎಂದು ತಿಳಿಸಿತು.
ಇದನ್ನು ಓದಿ: SSLC ವಿದ್ಯಾರ್ಥಿನಿ ಬನಶಂಕರಿ ಭರವಸೆ ಈಡೇರಿಸಿದ ಬಿಬಿಎಂಪಿ ಕಮಿಷನರ್: ನುಡಿದಂತೆ ಲ್ಯಾಪ್ ಟಾಪ್ ಕೊಡಿಸಿದ ಗೌರವ್ ಗುಪ್ತಾ!
ಇಡೀ ದೇಶದಲ್ಲಿ ದೆಹಲಿಯಲ್ಲಿ ಮಾತ್ರ ಸರ್ಕಾರದ ಮೂಲಕ ವಕೀಲರಿಗೆ ವಿಮಾ ಯೋಜನೆ ಕಲ್ಪಿಸಲಾಗಿದೆ ಎಂದು ಇದೇ ವೇಳೆ ವಿವರಿಸಲಾಯಿತು.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ