ಕೆಆರ್ಪುರ: ಇಲ್ಲಿನ ಮಹದೇವಪುರ (Mahadevapura) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ (Primary School) ಕ್ಲಾಸ್ ನಡೆಯುತ್ತಿದ್ದಾಗಲೇ ಮಕ್ಕಳನ್ನು ತರಗತಿಯಿಂದ ಹೊರದಬ್ಬಿ ಶಾಲೆಗೆ ಬೀಗ ಜಡಿದ ಘಟನೆ ನಡೆದಿದೆ. ಈ ಶಾಲೆ ನಿರ್ಮಾಣಕ್ಕೆ ಜಮೀನು ದಾನ (Land Donate) ಮಾಡಿದ ಕುಟುಂಬದ ಕೆಲ ವ್ಯಕ್ತಿಗಳು ಈ ದುಷ್ಕೃತ್ಯ ಎಸಗಿದ್ದಾರೆ ಎನ್ನಲಾಗಿದ್ದು, ಸದ್ಯ ಮಕ್ಕಳು (School childrens) ಬಿಸಿಲಲ್ಲಿ ಹೊರಗಡೆ ನೆಲದಲ್ಲಿ ಕುಳಿತು ಪಾಠ ಕೇಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅವರ ಕ್ಷೇತ್ರದಲ್ಲೇ ಸರ್ಕಾರಿ ಶಾಲೆಗಳಿಗೆ ರಕ್ಷಣೆ ಇಲ್ಲದಂತಾಗಿದ್ದು, ದಶಕಗಳಿಂದ ನಡೆಯುತ್ತಿರುವ ಈ ಶಾಲೆಯಲ್ಲಿ ಬಡಪಾಯಿ ಮಕ್ಕಳು ಬಿಸಿಲಿನಲ್ಲಿ ಅಂಗಳದಲ್ಲಿ ಕುಳಿತು ಪಾಠ ಕೇಳಬೇಕಾದ ದುಃಸ್ಥಿತಿ ಬಂದೆರಗಿದೆ. ಸದ್ಯ ಈ ಶಾಲೆಯಲ್ಲಿ ನಾಲ್ಕನೆಯ ತರಗತಿಯಿಂದ 5ನೇ ತರಗತಿ ತನಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ದೊಡ್ಡೋರ ಜಗಳದಿಂದ ಏನೂ ಅರಿಯದ ಮುಗ್ದ ಮಕ್ಕಳು ಶಿಕ್ಷೆ ಅನುಭವಿಸುವಂತಾಗಿದೆ.
ಇದನ್ನೂ ಓದಿ: Dakshina Kannada: ಮುಚ್ಚಿ ಹೋಗ್ತಿದ್ದ ಸರ್ಕಾರಿ ಕನ್ನಡ ಶಾಲೆಗೆ ಮರುಜೀವ, ಈಗ ವಿದ್ಯಾರ್ಥಿಗಳ ಸಂಖ್ಯೆ ಡಬಲ್!
ಅಧಿಕಾರಿಗಳ ನಿರ್ಲಕ್ಷ್ಯ!
ಇದೇ ಗ್ರಾಮದ ವ್ಯಕ್ತಿಯೊಬ್ಬರು ಶಾಲೆಗಾಗಿ ದಾನ ಮಾಡಿದ ಜಾಗದಲ್ಲಿ 1965ರಲ್ಲಿ ಶಾಲೆ ಆರಂಭಗೊಂಡಿತ್ತು, 1980ರಿಂದ ಇಲ್ಲಿಯತನಕ ಈ ಶಾಲೆಯ ಹೆಸರಿನಲ್ಲಿರುವ ಭೂ ದಾಖಲೆಗಳು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ನಿಗಮದ ಹೆಸರಿನಲ್ಲಿದ್ದು, ಶಾಲಾ ಆಸ್ತಿ ಸಂರಕ್ಷಣಾ ಅಭಿಯಾನ ಶುರುವಾದ ನಂತರ ಶಾಲೆಯ ಆಸ್ತಿಯನ್ನು ಖಾತೆ ಮಾಡಿಕೊಡುವಂತೆ ಶಾಲೆಯ ಮುಖ್ಯ ಶಿಕ್ಷಕರು ಬಿಬಿಎಂಪಿಗೆ ಅಲೆದಾಡಿದರೂ ಏನೂ ಪ್ರಯೋಜನವಾಗಿಲ್ಲ. ಬಿಬಿಎಂಪಿ ಸೇರಿದಂತೆ ಇತರ ಇಲಾಖೆಗಳ ಅಧಿಕಾರಿಗಳ ಸಹಕಾರ ಕೂಡ ಸಿಗುತ್ತಿಲ್ಲ ಅನ್ನೋದು ವಾಸ್ತವ.
ಎಷ್ಟು ಮಂದಿ ಮಕ್ಕಳಿದ್ದಾರೆ?
ಸದ್ಯ ಶಾಲೆಯಲ್ಲಿ ಒಟ್ಟು 475 ಮಕ್ಕಳಿದ್ದು, ಒಟ್ಟು 11 ಮಂದಿ ಶಿಕ್ಷಕರಿದ್ದಾರೆ. ಇಂಗ್ಲಿಷ್ ಮತ್ತು ಕನ್ನಡ ಮಾಧ್ಯಮದಲ್ಲಿ ತರಗತಿಗಳು ನಡೆಯುತ್ತವೆ. ಅಷ್ಟೂ ಮಕ್ಕಳು ಹಳೆಯ ಕಟ್ಟಡದಲ್ಲಿದ್ದ ಕೇವಲ 7 ಕೊಠಡಿಗಳಲ್ಲಿ ಕಲಿಯುತ್ತಿದ್ದರು. ಬಳಿಕ ನಿರಂತರ ಪ್ರಯತ್ನದ ಫಲವಾಗಿ ಸರ್ಕಾರ ಹತ್ತಿರದಲ್ಲೇ ಶಾಲೆಗೆ ಜಾಗ ಮಂಜೂರು ಮಾಡಿತ್ತು. ಈ ಜಾಗದಲ್ಲಿ ಹೋಪ್ ಫೌಂಡೇಶನ್ ಅವರು ಸುಮಾರು ಮೂರು ಕೋಟಿ ವೆಚ್ಚದಲ್ಲಿ 12 ಕೊಠಡಿಗಳನ್ನು ನಿರ್ಮಿಸಿಕೊಟ್ಟಿದ್ದು, 4-6ನೇ ತರಗತಿ ಮಕ್ಕಳು ಹಳೆಯ ಕಟ್ಟಡದಲ್ಲಿ ಹಾಗೂ ಉಳಿದ ಮಕ್ಕಳು ಹೊಸ ಕಟ್ಟಡದಲ್ಲಿ ಕಲಿಯುತ್ತಿದ್ದಾರೆ.
ಇದನ್ನೂ ಓದಿ: Border War: ಮಹಾರಾಷ್ಟ್ರ ಗಡಿಯಲ್ಲಿ ಕನ್ನಡ ಮಾಧ್ಯಮ ಶಾಲೆಗಳ ಕೊರತೆ: ಅನಿವಾರ್ಯವಾಗಿ ಮರಾಠಿ ಶಾಲೆಗೆ ವಿದ್ಯಾರ್ಥಿಗಳ ಪಲ್ಲಟ
ಜಮೀನಿನ ಮೇಲೇಕೆ ಕಣ್ಣು?
ಸದ್ಯ ಈ ಜಾಗಕ್ಕೆ ಬಂಗಾರದ ಬೆಲೆಯಿದ್ದು, ಸಮೀಪದಲ್ಲೇ ಮೆಟ್ರೋ ಕಾಮಗಾರಿ ಕೂಡ ನಡೆಯುತ್ತಿರುವುದರಿಂದ ಶಾಲೆಯ 4 ಟಿ ಜಾಗವನ್ನು ಮೆಟ್ರೋ ಕಾಮಗಾರಿಗೆ ಬಿಟ್ಟು ಕೊಡಲಾಗಿದೆ. ಈ ಮಧ್ಯೆ ಈ ಹಿಂದೆ ಜಾಗ ನೀಡಿದ್ದ ಕುಟುಂಬದ ಸದಸ್ಯರು ಈ ಜಮೀನನ್ನು ನಮ್ಮ ಹೆಸರಿಗೆ ಬರೆದಿಟ್ಟಿದ್ದಾರೆ ಎಂದು ಕೋರ್ಟ್ ಮೊರೆ ಹೋಗಿದ್ದು, ಸದ್ಯ ಈ ಜಾಗದಲ್ಲಿ ಶಾಲೆ ಕಾರ್ಯ ನಿರ್ವಹಿಸುತ್ತಿರುವುದರಿಂದ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನಗರದ ಸಿವಿಲ್ ಕೋರ್ಟ್ ಆದೇಶ ನೀಡಿದೆ.
ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ
ಈ ಮಧ್ಯೆ ಡಿಸೆಂಬರ್ 30ನೇ ತಾರೀಕು ಶಾಲೆಯ ಬಳಿ ಗಲಾಟೆ ನಡೆದಿದ್ದು, ಈ ಶಾಲೆಯ ಕಟ್ಟಡದ ಜಾಗ ನಮಗೆ ಸೇರಿದ್ದು ಎಂದು ಕೆಲವು ಕಿಡಿಗೇಡಿಗಳು ಶಾಲೆಗೆ ಅತಿಕ್ರಮವಾಗಿ ನುಗ್ಗಿದ್ದು ಮಾತ್ರವಲ್ಲದೇ, ಕಳೆದ ಭಾನುವಾರ ಶಾಲೆಯ ಜಾಗ ಜಿಪಿಎ ಆಗಿದೆ ಎಂದು ಅವಿನಾಶ್ ಎಂಬಾತ ಬೀಗ ಜಡಿದಿದ್ದಾನೆ. ಈ ಬಗ್ಗೆ ಕೂಡಲೇ ಬಿಇಓ ರಾಮಮೂರ್ತಿ ಮಹದೇವಪುರ ಠಾಣೆಗೆ ದೂರು ನೀಡಿದ್ದು, ಯಥಾಸ್ಥಿತಿ ಕಪಾಡುವಂತೆ ಸಿವಿಲ್ ನ್ಯಾಯಾಲಯ ಆದೇಶ ನೀಡಿದ್ದರೂ, ನ್ಯಾಯಾಲಯದ ಆದೇಶ ಉಲ್ಲಂಘಿಸಿ ಶಾಲೆಗೆ ಬೀಗ ಜಡಿದು ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಮಾಡಿರುವವರ ವಿರುದ್ಧ ಕ್ರಮ ಜರುಗಿಸಬೇಕೆಂದು ಮನವಿ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ