ಪುತ್ತೂರು, ದಕ್ಷಿಣ ಕನ್ನಡ: ಪಾನಿಪೂರಿ (Panipuri) ಅಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಒಂದೊಮ್ಮೆ ಉತ್ತರ ಭಾರತದ (North India) ಪ್ರಸಿದ್ಧ ತಿನಸು ಎಂದೆಣಿಸಿದ್ದ ಪಾನಿಪೂರಿ ಇಂದು ದೇಶದೆಲ್ಲೆಡೆ ಬೇಡಿಕೆಯನ್ನು (Demand) ಕುದುರಿಸಿಕೊಂಡಿದೆ. ರಾಜ್ಯದ ಕರಾವಳಿ ಭಾಗದಲ್ಲೂ ಇದರ ಪ್ರಭಾವ ಜೋರಾಗೇ ಇದೆ. ಯುವ ಜನನಾಂಗಕ್ಕೆ ಪಾನಿಪೂರಿ ಅಂದರೆ ಅಚ್ಚುಮೆಚ್ಚು. ಆದರೆ, ಬೇಡಿಕೆಗೆ ಅನುಗುಣವಾಗಿ ಪೂರಿ ಪೂರೈಕೆ ಆಗದಿದ್ದರೆ ಪಾನಿಪೂರಿ ಪ್ರಿಯರು ನಿರಾಶರಾಗುವುದು ಖಚಿತ. ಇದನ್ನರಿತ ಬಸ್ಸು ಚಾಲಕರೋರ್ವರು (Bus Driver) ತನ್ನ ಉದ್ಯೋಗಕ್ಕೆ (Job) ತಿಲಾಂಜಲಿಯನ್ನಿತ್ತು ಪಾನಿಪೂರಿ ತಯಾರಿಕಾ ಘಟಕವನ್ನು ಆರಂಭಿಸಿ ಇದೀಗ ಯಶಸ್ಸಿನ (Success) ಹಾದಿಯಲ್ಲಿ ಮುನ್ನೆಡೆಯುತ್ತಿದ್ದಾರೆ.
ಯಶಸ್ವಿ ಉದ್ಯಮಿಯಾದ ಬಸ್ ಚಾಲಕ
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ದಾರಂದಕುಕ್ಕು ನಿವಾಸಿ, ಬಸ್ ಚಾಲಕರಾಗಿ ದುಡಿಯುತ್ತಿದ್ದ ಮನೋಜ್ ಇದೀಗ ಯಶಸ್ವೀ ಪಾನಿಪೂರಿ ಉದ್ಯಮಿ. ಜಿಲ್ಲೆಯಾದ್ಯಂತ ವಿವಿಧ ಭಾಗಗಳಲ್ಲಿ ಪಾನಿಪೂರಿ ತಯಾರಿಕಾ ಘಟಕಗಳನ್ನು ಸ್ಥಾಪಿಸಿರುವ ಮನೋಜ್ ಪಾನಿಪೂರಿಯಿಂದಲೇ ಉತ್ತಮ ಲಾಭ ಗಳಿಸುತ್ತಿದ್ದಾರೆ. ಜತೆಗೆ, ಪಾನಿಪೂರಿ ಪ್ರಿಯರಿಗೆ ನಿರಾಸೆಯಾಗದಂತೆ ವ್ಯವಹಾರ ನಡೆಸಲಾಗುತ್ತಿದೆ.
ಪಾನಿಪೂರಿ ಘಟಕ ನಡೆಸುತ್ತಿರುವ ಮನೋಜ್
ಪುತ್ತೂರಿನ ದಾರಂದಕುಕ್ಕು ಎಂಬಲ್ಲಿ ಕಳೆದ 4 ವರ್ಷಗಳಿಂದ ಮಧ್ಯಮ ಕುಟುಂಬವೊಂದು ಪಾನಿಪೂರಿ ತಯಾರಿಕಾ ಘಟಕವನ್ನು ನಡೆಸಿಕೊಂಡು ಬರುತ್ತಿದೆ. ಈ ಕುಟುಂಬದ ಹಿರಿಯರಾದ ಮೋಹಿನಿ ಅವರ ನೇತೃತ್ವದಲ್ಲಿ ಪುತ್ರ ಮನೋಜ್ ಜೀವನೋಪಾಯಕ್ಕಾಗಿ ಪಾನಿಪೂರಿ ತಯಾರಿಕಾ ಕಿರು ಘಟಕವನ್ನು ನಡೆಸಿಕೊಂಡು ಬರುತ್ತಿದ್ದಾರೆ.
ಇದನ್ನೂ ಓದಿ: Success Story: ರೈತನ ಬಾಳು ಅರಳಿಸಿದ ಗುಲಾಬಿ ಹೂವು! ಸಂಕಷ್ಟದಲ್ಲಿದ್ದಾಗ ಕೈ ಹಿಡಿಯಿತು ನರೇಗಾ ಯೋಜನೆ
ಸಿಟಿ ಬಸ್ ಚಾಲಕನ ಕೆಲಸಕ್ಕೆ ಗುಡ್ ಬೈ
ಮನೋಜ್ ಮಂಗಳೂರಿನಲ್ಲಿ ಸಿಟಿ ಬಸ್ಸು ಚಾಲಕನಾಗಿದ್ದುಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದರು. ಸುಮಾರು 5 ವರ್ಷಗಳ ಕಾಲ ಚಾಲಕನಾಗಿ ದುಡಿದು ಕಾರಣಾಂತರಗಳಿಂದ ತನ್ನ ಹುಟ್ಟೂರಾದ ಪುತ್ತೂರಿನ ದಾರಂದಕುಕ್ಕು ಮನೆಗೆ ಮರಳಿದ್ದರು. ಈ ಸಂದರ್ಭ ಅವರು ರಿಕ್ಷಾವೊಂದರಲ್ಲಿ ಚಾಲಕನಾಗಿ ದುಡಿಯಲಾರಂಭಿಸಿದರು. ಈ ಸಂದರ್ಭ ಅವರು ಪಾನಿಪೂರಿಗೆ ಹೆಚ್ಚಿನ ಬೇಡಿಕೆ ಇರುವುದನ್ನು ಕಂಡುಕೊಂಡರು. ರಿಕ್ಷಾ ಚಾಲಕನಾಗಿ ಇದ್ದುಕೊಂಡೇ ದಿನಕ್ಕೆ ಮೂರ್ನಾಲ್ಕು ಕೆ.ಜಿ. ಪೂರಿಯನ್ನು ಕೈಯಲ್ಲೇ ತಯಾರಿಸಿ ಮಾರುಕಟ್ಟೆಗೆ ಒದಗಿಸುತ್ತಿದ್ದರು.
ಸಣ್ಣದಾಗಿ ಪಾನಿಪೂರಿ ಉದ್ಯಮ ಸ್ಥಾಪನೆ
ಮನೋಜ್ ಸುಮಾರು ಎರಡೂವರೆ ವರ್ಷಗಳ ಹಿಂದೆ ಪಾನಿಪೂರಿ ತಯಾರಿಕಾ ಯಂತ್ರವನ್ನು ಖರೀದಿಸಿದರು. ಸುಮಾರು 25 ಸೆಂಟ್ಸದ ನಲ್ಲಿರುವ ತನ್ನ ಪುಟ್ಟ ನಿವೇಶದಲ್ಲಿ ಮನೆ ಸಮೀಪವೇ ಶೆಡ್ ಒಂದರಲ್ಲಿ ಪಾನಿಪೂರಿ ತಯಾರಿಸಲು ಆರಂಭಿಸಿದರು. ರಿಕ್ಷಾ ಚಾಲಕ ಉದ್ಯೋಗವನ್ನು ತೊರೆದು ಪೂರಿ ತಯಾರಿಕೆಯ ಪೂರ್ಣಕಾಲಿಕ ವ್ಯವಹಾರ ನಡೆಸಲು ಆರಂಭಿಸಿದರು. ದಿನಕ್ಕೆ ಸುಮಾರು 40 ಕೆ.ಜಿ.ಯಷ್ಟು ಪೂರಿ ತಯಾರಿಸಲು ಆರಂಭಿಸಿ ತನ್ನ ಉತ್ಪನ್ನಗಳಿಗೆ ಪುತ್ತೂರು, ಸುಳ್ಯ, ಸುಬ್ರಹ್ಮಣ್ಯ, ಕಡಬ ಮುಂತಾದ ಕಡೆಗಳಲ್ಲಿ ಉತ್ತಮ ಮಾರುಕಟ್ಟೆಯನ್ನು ಕಂಡುಕೊಂಡರು.
ಮನೋಜ್ಗೆ ತಾಯಿ, ಪತ್ನಿ ಸಾಥ್
ಪೂರಿ ತಯಾರಿಕಾ ಯಂತ್ರ ನಡೆಸಲು ಜನರೇಟರನ್ನು ಬಳಸಬೇಕಾದ ಅನಿವಾರ್ಯತೆ ಮನೋಜ್ ಗಿತ್ತು. ಇದಕ್ಕೆ ಡೀಸೆಲ್ ಅಗತ್ಯವಿದ್ದ ಕಾರಣ ಲಾಭದಲ್ಲಿ ಬಹುಪಾಲು ಇದಕ್ಕೆ ವ್ಯಯವಾಗುತ್ತಿತ್ತು. ಇದೇ ಸಂದರ್ಭ ಸೆಲ್ಕೋ ಸಂಸ್ಥೆ ಮನೋಜ್ ಅವರ ನೆರವಿಗೆ ಧಾವಿಸಿ ಬಂದ ಕಾರಣ ಇದೀಗ ಅವರು ಪ್ರತೀದಿನ ಸುಮಾರು 70 ಕೆ.ಜಿ.ಯಷ್ಟು ಪೂರಿ ತಯಾರಿಕೆ ಮಾಡುತ್ತಿದ್ದು, ಜೀವನದಲ್ಲಿ ಹೊಸ ಬೆಳಕನ್ನು ಕಂಡುಕೊಂಡಿದ್ದಾರೆ. ಮನೋಜ್ ಅವರ ಕಿರು ಉದ್ದಿಮೆಗೆ ಕೈಜೋಡಿಸಿದವರು ಅವರ ಕೈಹಿಡಿದ ಪತ್ನಿ ಧನ್ಯಾ ಮತ್ತು ತಾಯಿ ಮೋಹಿನಿ.
ಸೆಲ್ಕೋ ಸಂಸ್ಥೆಯ ನೆರವು
ಸೌರಚಾಲಿತ ಯಂತ್ರಪಾನಿಪೂರಿ ತಯಾರಿಕಾ ಘಟಕವನ್ನು ಆಧುನೀಕರಣಗೊಳಿಸಬೇಕೆಂಬ ಕನಸು ಮನೋಜ್ ಅವರದ್ದು. ಆದರೇನು...? ಇದಕ್ಕೆ ಅಗತ್ಯವಿರುವ ಹಣಕಾಸನ್ನು ಹೊಂದಿಸಿಕೊಳ್ಳಲು ಈ ಕುಟುಂಬಕ್ಕೆ ಸಾಧ್ಯವಾಗುತ್ತಿರಲಿಲ್ಲ. ಈ ಹಿನ್ನಲೆಯಲ್ಲಿ ಲಭ್ಯ ಸವಲತ್ತುಗಳೊಂದಿಗೆ ಪಾನಿಪೂರಿ ತಯಾರಿಕಾ ಘಟಕವನ್ನು ನಡೆಸಿಕೊಂಡು ಬರುತ್ತಿತ್ತು. ಈ ಸಂದರ್ಭ ಅವರ ನೆರವಿಗೆ ಬಂದದ್ದು ಸೆಲ್ಕೋ ಸಂಸ್ಥೆ. ಅವರ ಕನಸನ್ನು ನನಸಾಗಿಸಲು ಅಗತ್ಯದ ನೆರವನ್ನು ನೀಡಿದ್ದು ಇದೇ ಸಂಸ್ಥೆ.
5 ಮಂದಿಗೆ ಉದ್ಯೋಗ ನೀಡಿರುವ ಮನೋಜ್
ಸೌರಚಾಲಿತ ಪಾನಿ ಪೂರಿ ಮಾಡುವ ಯಂತ್ರವನ್ನು ಅಳವಡಿಸಲು ಸೆಲ್ಕೋ ವತಿಯಿಂದ ನೆರವನ್ನು ಒದಗಿಸಲಾಗಿದೆ. ಪೂರಿ ತಯಾರಿಕಾ ಯಂತ್ರದ ಒಟ್ಟು ಮೊತ್ತ ರೂ.3 ಲಕ್ಷ ಆಗಿದ್ದು, ಇದಕ್ಕೆ ರೂ.70 ಸಾವಿರ ಅನುದಾನ ಸೆಲ್ಕೋ ಫೌಂಡೇಶನ್ ವತಿಯಿಂದ ದೊರೆತಿದೆ. ಉಳಿದ ಮೊತ್ತವನ್ನು ಬ್ಯಾಂಕ್ ಸಾಲ ಸಹಾಯದಿಂದ ಹೊಂದಿಸಲಾಗಿದೆ.
ಇದನ್ನೂ ಓದಿ: Success Story: ಅಂದು ಕೋವಿಡ್ ವೇಳೆ ಕೆಲಸ ಕಳ್ಕೊಂಡ್ರು, ಇಂದು ಕೇಟರಿಂಗ್ ಮಾಡಿ ಸಕ್ಸಸ್ ಆದ್ರು! ಇದು ಸಾಧಕ ದಂಪತಿಯ ಸಾಹಸದ ಕಥೆ
ಸೌರಚಾಲಿತ ಪಾನಿಪುರಿ ಮಾಡುವ ಯಂತ್ರವಲ್ಲದೆ, ಅವರು ಪಾನಿಪೂರಿ ತಯಾರು ಮಾಡುವ ಕೊಠಡಿಯನ್ನು ಕೂಡ ಸೆಲ್ಕೋ ಫೌಂಡೇಶನ್ನ ವತಿಯಿಂದ ರೂ.5.50 ಲಕ್ಷ ಮೊತ್ತದ ಸಂಪೂರ್ಣ ಅನುದಾನದೊಂದಿಗೆ ನವೀಕರಿಸಲಾಗಿದೆ. ಸೆಲ್ಕೋದ ಈ ಸಹಾಯಗಳಿಂದ ಅವರ ಆದಾಯವೂ ಹೆಚ್ಚಿದೆ ಹಾಗೂ ಇದರಿಂದಾಗಿ ಇನ್ನೂ 5 ಜನರಿಗೆ ಉದ್ಯೋಗವೂ ದೊರಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ