• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಕಾರಿಗಾಗಿ ಡೀಸೆಲ್​​ ತರಲೆಂದು ಹೊರಟ ಯುವಕ ಶವವಾಗಿ ಪತ್ತೆ - ಬೆಚ್ಚಿಬಿದ್ದ ವಿಜಯಪುರ ಪೊಲೀಸರು

ಕಾರಿಗಾಗಿ ಡೀಸೆಲ್​​ ತರಲೆಂದು ಹೊರಟ ಯುವಕ ಶವವಾಗಿ ಪತ್ತೆ - ಬೆಚ್ಚಿಬಿದ್ದ ವಿಜಯಪುರ ಪೊಲೀಸರು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪೊಲೀಸ್ ಮೂಲಗಳ ಪ್ರಕಾರ ಸುಮಾರು ಮೂರು ದಿನಗಳ ಹಿಂದೆಯೇ ಕೊಲೆ ಮಾಡಿ ಶವವನ್ನು ಸುಟ್ಟು ಹಾಕಲಾಗಿದೆ. ಈ ಪ್ರಕರಣದ ತನಿಖೆ ಮುಂದುವರೆದಿದೆ. ಆದರೆ, ಈ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಅಷ್ಟೇ ಅಲ್ಲ, ಯಾರು ಕೊಲೆ ಮಾಡಿದ್ದಾರೆ ಎಂಬುದೂ ಗೊತ್ತಾಗಿಲ್ಲ.

  • Share this:

ವಿಜಯಪುರ(ಆ.24): ಭಾನುವಾರ ಮಧ್ಯಾಹ್ನ ಫೋನ್​​ ಕರೆ ಬಂದಿದ್ದೇ ತಡ ಬಬಲೇಶ್ವರ ಠಾಣಾ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದರು. ಪೊಲೀಸರು ಸ್ಥಳಕ್ಕೆ ಹೋಗಿ ನೋಡಿದಾಗ ಸುಟ್ಟ ಸ್ಥಿತಿಯಲ್ಲಿ ಯುವಕನೋರ್ವನ ಶವ ಪತ್ತೆಯಾಗಿತ್ತು. ಕೂಡಲೇ ಇದು ಅಪರಿಚಿತ ಶವ ಪತ್ತೆ ಎಂದು ಪ್ರಕರಣ ದಾಖಲಿಸಿಕೊಂಡ ಪೊಲೀಸರ ತಂಡ ತನಿಖೆ ನಡೆಸಿದೆ. ಬಬಲೇಶ್ವರ ಪಿಎಸ್‌ಐ ಕಲ್ಲೂರ ಮತ್ತು ವಿಜಯಪುರ ಗ್ರಾಮೀಣ ಸಿಪಿಐ ಮಹಾಂತೇಶ ಧಾಮಣ್ಣವರ ನೇತೃತ್ವದ ಪೊಲೀಸರ ತಂಡ ತನಿಖೆ ನಡೆಸಿದೆ.


ಯುವಕನ ಶವ ಪತ್ತೆಯಾದ ಜಾಗದಿಂದ ಅಣತಿ ದೂರದಲ್ಲಿ ಸ್ಕೂಟರ್​​ವೊಂದು ನಿಂತಿರುವುದು ಕಂಡು ಬಂದಿತ್ತು. ಈ ಸ್ಕೂಟರ್ ಆಧಾರದ ಮೇಲೆ ಪೊಲೀಸರು ಅದರ ದಾಖಲಾತಿ ಪರಿಶೀಲನೆ ನಡೆಸಿದರು. ಆಗ ಈ ಸ್ಕೂಟರ್ ಮಾಲೀಕನ ಹೆಸರು ಪತ್ತೆ ಮಾಡಿ ಮಾಹಿತಿ ಪಡೆದಾಗ ಕೊಲೆಯಾದ ಯುವಕನ ಗುರುತ ಪತ್ತೆಯಾಗಿದೆ.


ವಿಜಯಪುರ ನಗರದ ಎಸ್ಪಿ ಕಚೇರಿ ಹಿಂಭಾಗದ ನಿವಾಸಿ ಅಕ್ಷಯ ಮನೋಹರ ಲವಗಿ(23) ಕೊಲೆಯಾದ ಯುವಕ. ವೃತ್ತಿಯಲ್ಲಿ ಕಾರು ಚಾಲಕನಾಗಿದ್ದ ಯುವಕ ಶುಕ್ರವಾರ ಅಂದರೆ ಆಗಸ್ಟ್​ 21ರಂದು ಡೀಸೆಲ್ ತರುವುದಾಗಿ ಮನೆಯಿಂದ ಸ್ಕೂಟರ್​​ನಲ್ಲಿ ತೆರಳಿದ್ದ. ಮೊಬೈಲ್​​ ಮನೆಯಲ್ಲೇ ಇಟ್ಟು ಹೋಗಿದ್ದ. 10 ನಿಮಿಷದಲ್ಲಿ ವಾಪಾಸ್ ಬರುವುದಾಗಿ ಹೇಳಿದ್ದ ಈತ ಎಷ್ಟೋತ್ತಾದರೂ ಮನೆಗೆ ವಾಪಸ್ ಬಂದಿರಲಿಲ್ಲ.


ಬಳಿಕ ಮನೆಯವರು ಸಂಬಂಧಿಕರ ಬಳಿ ಯುವಕನ ನಾಪತ್ತೆ ಬಗ್ಗೆ ವಿಚಾರಣೆ ನಡೆಸಿದ್ದರೇ ಹೊರತು ಪೊಲೀಸ್​ ಠಾಣೆಗೆ ದೂರು ನೀಡಿರಲಿಲ್ಲ. ನಿನ್ನೆ ಮಧ್ಯಾಹ್ನ ಪೊಲೀಸರು ಮನೆಯವರಿಗೆ ಯುವಕನ ಶವ ಪತ್ತೆಯಾಗಿರುವುದು ಮನೆಯವರಿಗೆ ಫೋನ್​ ಮೂಲಕ ತಿಳಿಸಿದ್ದಾರೆ.


ನಂತರ ಯುವಕನ ಪೋಷಕರು ಘಟನಾ ಸ್ಥಳಕ್ಕೆ ಹೋಗಿದ್ದಾರೆ. ಕೊಲೆಯಾದ ಯುವಕನನ್ನು ಸಂಬಂಧಿಕರು ಗುರುತಿಸಿದ್ದಾರೆ. ಇದಾದ ಬಳಿಕ ಪೊಲೀಸರು ಯುವಕನ ಶವವನ್ನು ಮರಣೋತ್ತರ ಪರೀಕ್ಷೆಗೆ ವಿಜಯಪುರ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ.  ಮಧ್ಯಾಹ್ನ ಅಪರಿಚಿತ ಎಂದು ಗುರುತಿಸಲಾದ ಶವದ ವಾರಸುದಾರರನ್ನು ಸಂಜೆ ವೇಳೆಗೆ ಪತ್ತೆ ಮಾಡಿದ್ದಾರೆ.


ಇದನ್ನೂ ಓದಿ: Coronavirus Update: ದೇಶದಲ್ಲಿ ಕೋವಿಡ್​​-19 ಆರ್ಭಟ – 31 ಲಕ್ಷ ದಾಟಿದ ಸೋಂಕಿತರ ಸಂಖ್ಯೆ


ಪೊಲೀಸ್ ಮೂಲಗಳ ಪ್ರಕಾರ ಸುಮಾರು ಮೂರು ದಿನಗಳ ಹಿಂದೆಯೇ ಕೊಲೆ ಮಾಡಿ ಶವವನ್ನು ಸುಟ್ಟು ಹಾಕಲಾಗಿದೆ. ಈ ಪ್ರಕರಣದ ತನಿಖೆ ಮುಂದುವರೆದಿದೆ. ಆದರೆ, ಈ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.  ಅಷ್ಟೇ ಅಲ್ಲ, ಯಾರು ಕೊಲೆ ಮಾಡಿದ್ದಾರೆ ಎಂಬುದೂ ಗೊತ್ತಾಗಿಲ್ಲ.

Published by:Ganesh Nachikethu
First published: