ಭಾರತೀಯ ಕುಸ್ತಿ ಫೆಡರೇಶನ್ (WFI) ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Sharan Singh) ವಿರುದ್ಧ ಧರಣಿ ಕುಳಿತಿರುವ ಕುಸ್ತಿಪಟುಗಳಿಂದ ಲೈಂಗಿಕ ಕಿರುಕುಳದ ಆರೋಪಗಳು ಹೊಸ ಬಲವನ್ನು ಪಡೆಯುತ್ತಿವೆ. ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕುಸ್ತಿಪಟುಗಳ ಎರಡನೇ ಸುತ್ತಿನ ಪ್ರತಿಭಟನೆ (ಏಪ್ರಿಲ್ 23 ರಿಂದ ಆರಂಭ) ಆರನೇ ದಿನಕ್ಕೆ ಕಾಲಿಟ್ಟಿದೆ. ಈ ಪ್ರಕರಣದ ವಿಚಾರಣೆ ಇಂದು ಸುಪ್ರೀಂ ಕೋರ್ಟ್ನಲ್ಲಿ ನಡೆಯಲಿದೆ. ಲೈಂಗಿಕ ಕಿರುಕುಳ ಆರೋಪದ ಪ್ರಕರಣದಲ್ಲಿ ಯುಪಿಯ ಕೈಸರ್ಗಂಜ್ನ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೋರಿ 7 ಮಹಿಳಾ ಕುಸ್ತಿಪಟುಗಳು ಸಲ್ಲಿಸಿದ ಅರ್ಜಿಯ ಮೇಲೆ ಸುಪ್ರೀಂ ಕೋರ್ಟ್ ಈಗಾಗಲೇ ದೆಹಲಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ.
ಇದೀಗ 2014ರಲ್ಲಿ ಲಕ್ನೋದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಶಿಬಿರದಲ್ಲಿ ಫಿಸಿಯೋ ಥೆರಪಿಸ್ಟ್ ಪರಮ್ಜಿತ್ ಮಲಿಕ್ ಸಿಂಗ್ ಗಂಭೀರ ಆರೋಪ ಮಾಡಿದ್ದರು. ಮಲಿಕ್ ಪ್ರಕಾರ, ಆ ರಾಷ್ಟ್ರೀಯ ಶಿಬಿರದಲ್ಲಿ ಕನಿಷ್ಠ 3 ಕಿರಿಯ ಮಹಿಳಾ ಕುಸ್ತಿಪಟುಗಳು ಎದುರಿಸಿದ ರೀತಿಯ ಒತ್ತಡದ ಬಗ್ಗೆ ಅವರಿಗಾದ ಸಮಸ್ಯೆಗಳ ಬಗ್ಗೆ ಮಾತನಾಡಿದ್ದು, ಇದೀಗ ಕುಸ್ತಿಪಟುಗಳ ಹೋರಾಟ ಹೊಸ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ.
ರಾತ್ರಿಯಲ್ಲಿ ಹುಡುಗಿಯರನ್ನು ಕರೆಯುತ್ತಾರೆ:
ಜಂತರ್ ಮಂತರ್ನಲ್ಲಿ ನಡೆದ ಕುಸ್ತಿಪಟುಗಳ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಫಿಸಿಯೋಥೆರಪಿಸ್ಟ್ ಪರಮ್ಜೀತ್ ಮಲಿಕ್, ಹಿರಿಯ ಕುಸ್ತಿಪಟುಗಳಿಗೆ ತಮ್ಮ ಸ್ಥಿತಿಯ ಬಗ್ಗೆ ಹೇಳಿಕೊಂಡು ಕಣ್ಣೀರಿಟ್ಟಿದ್ದಾರೆ ಎಂದು ಆಂಗ್ಲ ಪತ್ರಿಕೆ ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. ಪರಮ್ಜೀತ್ ಪ್ರಕಾರ, ಇವರುಗಳು ಮಹಿಳಾ ಕುಸ್ತಿಪಟುಗಳನ್ನು ರಾತ್ರಿಯ ಸಮಯದಲ್ಲಿ ಕರೆಯುತ್ತಾರೆ. ಇದರ ಬಗ್ಗೆ ಅಂದಿನ ಮಹಿಳಾ ಕೋಚ್ ಕುಲದೀಪ್ ಮಲಿಕ್ ಅವರಿಗೆ ತಿಳಿಸಿದ್ದರು, ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದಿದ್ದಾರೆ.
ಅಲ್ಲದೇ 2014ರ ಶಿಬಿರವನ್ನು ನೆನಪಿಸಿಕೊಳ್ಳುತ್ತಾ, ಪರಮ್ಜಿತ್ ಮಲಿಕ್ ಅವರು ಲಕ್ನೋದ ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್ಎಐ) ಕೇಂದ್ರದಲ್ಲಿ "ಮೂರರಿಂದ ನಾಲ್ಕು" ಕೆಡೆಟ್ ಕುಸ್ತಿಪಟುಗಳು ಶಿಬಿರದಿಂದ ಹೊರನಡೆಯುವುದನ್ನು ನೋಡಿದ್ದೇನೆ ಎಂದು ಹೇಳಿದ್ದಾರೆ. ಈ ಹುಡುಗಿಯರು ರಾತ್ರಿ 10 ಗಂಟೆಯ ನಂತರ ಹೋಗುತ್ತಿದ್ದರು. ಅವರನ್ನು ವಾಹನಗಳಲ್ಲಿ ಕರೆದೊಯ್ಯಲು ಬಂದವರು ಬ್ರಿಜ್ ಭೂಷಣ್ ಅವರ ಚಾಲಕ ಸೇರಿದಂತೆ ಅವರೊಂದಿಗೆ ಸಂಬಂಧ ಹೊಂದಿರುವವರು ಎಂದು ನಾನು ನೋಡಿದೆ. ನಂತರ ಹುಡುಗಿಯರು ತಮಗೆ ಏನಾಗುತ್ತಿದೆ ಎಂದು ಖಚಿತಪಡಿಸಿದರು.
ಇದನ್ನೂ ಓದಿ: IPL 2023: ಇಷ್ಟು ದಿನ ಒಂದು ಲೆಕ್ಕ, ಇನ್ಮೇಲೆ ಒಂದು ಲೆಕ್ಕ; ಐಪಿಎಲ್ನಲ್ಲಿ ಈಗ ಶುರುವಾಗುತ್ತೆ RCB ರಿಯಲ್ ಜರ್ನಿ
ಪರಮ್ಜೀತ್, 'ರಾತ್ರಿಯಲ್ಲಿ ಬ್ರಿಜ್ ಭೂಷಣ್ ಅವರನ್ನು ಭೇಟಿಯಾಗಲು ಕೇಳಲಾಯಿತು ಮತ್ತು ಇದಕ್ಕಾಗಿ ಒತ್ತಡ ಹೇರಲಾಯಿತು ಎಂದು ಹುಡುಗಿಯರು ನಮಗೆ ಹೇಳಿದರು. ಈ ಕೆಡೆಟ್ ಕುಸ್ತಿಪಟುಗಳು ತಮ್ಮ ಕಷ್ಟಗಳನ್ನು ಹೇಳಿಕೊಂಡು ಕಣ್ಣೀರಿಟ್ಟಿದ್ದರು. ಜಂತರ್ ಮಂತರ್ನಲ್ಲಿ ನಡೆದ ಧರಣಿ ವೇಳೆ ಕುಸ್ತಿಪಟುಗಳೂ ಸಹ ಪರಮ್ಜಿತ್ ಅವರ ಈ ಆರೋಪವನ್ನು ದೃಢಪಡಿಸಿದ್ದಾರೆ. 2014ರಲ್ಲಿ ಲಕ್ನೋ ಶಿಬಿರದಲ್ಲಿ ಪಾಲ್ಗೊಂಡಿದ್ದ ಈ ಕುಸ್ತಿಪಟು, ಈ ಆರೋಪಗಳ ಬಗ್ಗೆಯೂ ತನಿಖೆಯಾಗಬೇಕು ಎಂದಿದ್ದಾರೆ.
ಕುಸ್ತಿಪಟುಗಳ ಬೆಂಬಲಕ್ಕೆ ನಿಂತ ಕ್ರಿಕೆಟಿಗರು:
ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಕೂಡ ಅಥ್ಲೀಟ್ಗಳ ಬೆಂಬಲಕ್ಕೆ ನಿಂತಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, 'ಸಾಕ್ಷಿ, ವಿನೇಶ್ ಭಾರತದ ಹೆಮ್ಮೆ. ಒಬ್ಬ ಕ್ರೀಡಾಪಟುವಾಗಿ ಬೀದಿಗಿಳಿದು ಪ್ರತಿಭಟಿಸಲು ನನ್ನ ದೇಶದ ಹೆಮ್ಮೆಯನ್ನು ತೆಗೆದುಕೊಂಡಿದ್ದಕ್ಕೆ ನನಗೆ ಬೇಸರವಾಗಿದೆ. ಅವರಿಗೆ ನ್ಯಾಯ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ನಾನು ಅವರೊಂದಿಗೆ ನಿಲ್ಲುತ್ತೇನೆ ಎಂದು ಹೇಳಿದ್ದಾರೆ. ಬಜ್ಜಿ ಮಾತ್ರವಲ್ಲದೇ, ಕಪಿಲ್ ದೇವ್ ಸಹ ಈ ಕುರಿತು ಮಾತನಾಡಿದ್ದಾರೆ. ಕಪಿಲ್ ದೇವ್ ಕೂಡ ಪ್ರತಿಭಟನಾನಿರತ ಅಥ್ಲೀಟ್ಗಳಿಗೆ ನ್ಯಾಯ ವಿಳಂಬವಾಗುತ್ತಿರುವುದನ್ನು ಪ್ರಶ್ನಿಸಿದ್ದರು. ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಕುಸ್ತಿಪಟುಗಳ ಪಿಸಿಯ ಫೋಟೋವನ್ನು ಹಂಚಿಕೊಂಡ ಅವರು, ಅವರಿಗೆ ಎಂದಾದರೂ ನ್ಯಾಯ ಸಿಗುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ