ಒಡಿಶಾದ ಮಹಿಳಾ ಕ್ರಿಕೆಟ್ ಆಟರ್ಗಾತಿ ರಾಜಶ್ರೀ ಸ್ವೈನಿ (Rajashree) ಜನವರಿ 11 ರಿಂದ ನಾಪತ್ತೆಯಾಗಿದ್ದು, ಶುಕ್ರವಾರ, ಜನವರಿ 13ರಂದು ಕಟಕ್ (Cuttack) ಬಳಿಯ ದಟ್ಟ ಅರಣ್ಯ ಪ್ರದೇಶದಲ್ಲಿ ಆಕೆಯ ಶವ ಪತ್ತೆಯಾಗಿದೆ. ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಕಟಕ್ನ ಉಪ ಪೊಲೀಸ್ (Police) ಆಯುಕ್ತ ಪಿನಾಕ್ ಮಿಶ್ರಾ ಅವರು ಅಥಘರ್ ಪ್ರದೇಶದ ಅರಣ್ಯದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ. ರಾಜಶ್ರೀ ಅವರ ತರಬೇತುದಾರರು ಗುರುವಾರ ಕಟಕ್ನ ಮಂಗಳಬಾಗ್ ಪೊಲೀಸ್ ಠಾಣೆಯಲ್ಲಿ ರಾಜಶ್ರೀ ಅವರು ನಾಪತ್ತೆ ಆಗಿದ್ದಾರೆ ಎಂದು ದೂರು ನೀಡಿದ್ದರು. ಈ ಸಂಬಂಧ ತನಿಖೆ ನಡೆಸಿದ ಪೊಳಿಸರಿಗೆ ಆಟಗಾರ್ತಿಯ ಶವ ಪತ್ತೆಯಾಗಿದೆ.
ಶವವಾಗಿ ಪತ್ತೆಯಾದ ಆಟಗಾರ್ತಿ:
ಗುರ್ಡಿ ಜಾಟಿಯಾ ಪೊಲೀಸ್ ಠಾಣೆಯಲ್ಲಿ ರಾಜಶ್ರೀ ಅವರ ಸಾವಿನ ಕುರಿತು ಅಸ್ವಾಭಾವಿಕ ಸಾವಿನ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅವರ ಸಾವಿಗೆ ಕಾರಣವೇನು ಎಂಬುದನ್ನು ಪೊಲೀಸರು ಇನ್ನೂ ಪತ್ತೆ ಹಚ್ಚಿಲ್ಲ. ಆದರೆ, ಅವರನ್ನು ಕೊಲೆ ಮಾಡಲಾಗಿದೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ಮಹಿಳಾ ಕ್ರಿಕೆಟ್ ಆಟಗಾರ್ತಿಯ ಮೈಮೇಲೆ ಗಾಯದ ಗುರುತುಗಳಿದ್ದು, ಆಕೆಯ ಕಣ್ಣುಗಳಿಗೂ ಹಾನಿಯಾಗಿದೆ ಎಂದು ಆಕೆಯ ಕುಟುಂಬದವರು ಹೇಳಿದ್ದಾರೆ. ಪೊಲೀಸರೂ ಸಹ ಈ ಸಾವಿನ ಕುರಿತು ಹೆಚ್ಚಿನ ತನಿಖೆ ಆರಂಭಿಸಿದ್ದಾರೆ.
ಕಟ್ಟಿಗೆ ಸಂಗ್ರಹಿಸಲು ತೆರಳಿದ್ದ ಕೆಲ ಸ್ಥಳೀಯರು ಅರಣ್ಯ ರಸ್ತೆಯಲ್ಲಿ ಸ್ಕೂಟರ್ ಮತ್ತು ಹೆಲ್ಮೆಟ್ ಅನ್ನು ಕಂಡು ಮಂಗಳಬಾಗ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸ್ ಅಧಿಕಾರಿಗಳ ತಂಡ ಸ್ಥಳಕ್ಕೆ ಧಾವಿಸಿದ್ದು, ಆಕೆಗಾಗಿ ಹುಡುಕಾಟ ಆರಂಭಿಸಿದ ಬಳಿಕ ದುಪಟ್ಟಾ (ಸ್ಕಾರ್ಫ್) ಸಹಾಯದಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕಟಕ್ ಎಸಿಪಿ ಅಮಿತವ್ ಮೊಹಾಪಾತ್ರ ಹೇಳಿದ್ದಾರೆ. ಆದರೂ ಸಹ ಮುಂದಿನ ತನಿಖೆ ನಡೆಸುವುದಾಗಿ ಹೇಳಿದ್ದಾರೆ.
ಒಡಿಶಾ ಕ್ರಿಕೆಟ್ ಸಂಸ್ಥೆ ತರಬೇತಿ ಶಿಬಿರ:
ರಾಜಶ್ರೀ ಅವರ ಸ್ಕೂಟರ್ ಅರಣ್ಯದ ಬಳಿ ಪತ್ತೆಯಾಗಿದ್ದು, ಆಕೆಯ ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಆಗಿತ್ತು. ಈ ಬಗ್ಗೆ ಎಲ್ಲಾ ಆಯಾಮಗಳಿಂದ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ರಾಜಶ್ರೀ ಸೇರಿದಂತೆ ಸುಮಾರು 25 ಮಹಿಳಾ ಕ್ರಿಕೆಟಿಗರು ಪುದುಚೇರಿಯಲ್ಲಿ ನಡೆಯಲಿರುವ ಮುಂಬರುವ ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಗಾಗಿ ಬಜ್ರಕಬಾಟಿ ಪ್ರದೇಶದಲ್ಲಿ ಒಡಿಶಾ ಕ್ರಿಕೆಟ್ ಸಂಸ್ಥೆ (ಒಸಿಎ) ಆಯೋಜಿಸಿದ್ದ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದರು ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ. ಎಲ್ಲರೂ ಹೋಟೆಲ್ನಲ್ಲಿ ತಂಗಿದ್ದರು. ಆದರೆ ಇದರ ನಡುವೆ ಈ ರೀತಿಯ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ.
ಒಡಿಶಾ ರಾಜ್ಯ ಮಹಿಳಾ ಕ್ರಿಕೆಟ್ ತಂಡವನ್ನು ಜನವರಿ 10 ರಂದು ಘೋಷಿಸಲಾಯಿತು, ಆದರೆ ರಾಜಶ್ರೀ ಅವರನ್ನು ಅಂತಿಮ ಪಟ್ಟಿಯಲ್ಲಿ ಸೇರಿಸಲಾಗಿರಲಿಲ್ಲ ಎಂದು ಹೇಳಲಾಗಿದೆ. ಮರುದಿನ ಆಟಗಾರರು ತಾಂಗಿ ಪ್ರದೇಶದ ಕ್ರಿಕೆಟ್ ಮೈದಾನಕ್ಕೆ ಅಭ್ಯಾಸಕ್ಕಾಗಿ ತೆರಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ, ಆದರೆ ರಾಜಶ್ರೀ ತನ್ನ ತಂದೆಯನ್ನು ಭೇಟಿ ಮಾಡಲು ಪುರಿಗೆ ಹೋಗುವುದಾಗಿ ತನ್ನ ಕೋಚ್ಗೆ ತಿಳಿಸಿದ್ದಳು. ಆದರೆ ರಾಜಶ್ರೀ ಅವರು ಮನೆಗೂ ತಲುಪಲಿಲ್ಲ. ಬದಲಾಗಿ ಕಾಡಿನಲ್ಲಿ ಶಾವವಾಗಿ ಪತ್ತೆಯಾಗಿದ್ದು, ಹಮವು ಅನುಮಾನಗಳಿಗೆ ಕಾರಣವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ