ಟೋಕಿಯೋ ಒಲಂಪಿಕ್ಸ್ನಲ್ಲಿ ಮಹಿಳೆಯರ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಬೆಳ್ಳಿ ಗೆದ್ದಿರುವ ಮೀರಾ ಬಾಯಿ ಚಾನುಗೆ ಬಂಗಾರ ಪದಕ ಗೆಲ್ಲುವ ಸಾಧ್ಯತೆ ದಟ್ಟವಾಗಿದೆ. ಮೀರಾ ಎದುರು ಮೊದಲ ಸ್ಥಾನ ಗೆದ್ದಿದ್ದ ಚೀನಾದ ಹೋಹು ಜಿಝಿಹಿ ಡೋಪಿಂಗ್ ಆರೋಪ ಎದುರಿಸುತ್ತಿರುವ ಹಿನ್ನಲೆ ಚಾನು ಚಿನ್ನ ಗೆಲ್ಲುವ ಸಾಧ್ಯತೆ ಹೆಚ್ಚಿದೆ. ಈ ಸಂಭ್ರದ ನಡುವೆಯೇ ಇಂದು ದೇಶಕ್ಕೆ ಮರಳಿದ ಅವರಿಗೆ ಭವ್ಯ ಸ್ವಾಗತ ಸಿಕ್ಕಿದೆ. ಈ ನಡುವೆ ಅವರನ್ನು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಮಣಿಪುರ ಮುಖ್ಯಮಂತ್ರಿ ಎನ್ ಬಿರೆನ್ ಸಿಂಘ್ ಘೋಷಣೆ ಮಾಡಿದ್ದಾರೆ.
ಮೀರಾಬಾಯಿ ಚಾನು ಅವರಿಗೆ ರಾಜ್ಯದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಕ್ರೀಡೆ) ಆಗಿ ಬಡ್ತಿ ನೀಡಲಾಗಿದೆ. ಅಲ್ಲದೇ ಅವರಿಗೆ ಒಂದು ಕೋಟಿ ನಗದು ಪುರಸ್ಕಾರವನ್ನು ಕೂಡ ನೀಡಲಾಗುವುದು ಎಂದು ಘೋಷಿಸಿದ್ದಾರೆ.
26 ವರ್ಷದ ಮೀರಾಬಾಯಿ ಚಾನು 2018ರಲ್ಲಿ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ 48 ಕೆಜಿ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದರು. ಚಾನು ಒಲಿಂಪಿಕ್ಸ್ ಇತಿಹಾಸದಲ್ಲಿ ವೈಯಕ್ತಿಕವಾಗಿ ಪದಕ ಪಡೆದ 5ನೇ ಮಹಿಳಾ ಕ್ರೀಡಾಪಟುವಾಗಿದ್ದಾರೆ. ಅವರ ಈ ಸಾಧನೆ ದೇಶಕ್ಕೆ ಹೆಮ್ಮೆ ತಂದಿದೆ. ಈ ಹಿನ್ನಲೆ ರಾಜ್ಯದಲ್ಲಿ ಕೂಡ ವಿಶ್ವದರ್ಜೆಯ ವೇಟ್ ಲಿಫ್ಟಿಂಗ್ ಅಕಾಡೆಮಿಯನ್ನು ಸ್ಥಾಪಿಸಲಾಗುವುದು ಎಂದು ಸಿಎಂ ತಿಳಿಸಿದ್ದಾರೆ
ಇದೇ ವೇಳೆ 2014ರಲ್ಲಿ ಕಾಮನ್ ವೆಲ್ತ್ ಗೇಮ್ಸ್ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಜುಡೋಕಾ ಲಿಕ್ಮಾಬಮ್ ಸುಶೀಲಾ ದೇವಿ ಅವರಿಗೂ ಕೂಡ ಬಡ್ತಿ ನೀಡಿ ಆದೇಶ ಹೊರಡಿಸಲಾಗಿದೆ, ಕಾನ್ಸ್ಟೇಬಲ್ ಹುದ್ದೆಯಿಂದ ಅವರಿಗೆ ಸಬ್ ಇನ್ಸ್ಪೆಕ್ಟರ್ ಆಗಿ ಬಡ್ತಿ ನೀಡಲಾಗಿದೆ.
ಜೊತೆಗೆ ಟೋಕಿಯೋ ಒಲಂಪಿಕ್ಸ್ನಲ್ಲಿ ಪ್ರದರ್ಶನ ತೋರುತ್ತಿರುವ ಎಲ್ಲಾ ರಾಜ್ಯದ ಸ್ಪರ್ಧಿಗಳಿಗೂ 25 ಲಕ್ಷ ರೂವನ್ನು ಬಹುಮಾನ ನೀಡಲಾಗುವುದು ಎಂದು ಮಣಿಪುರ ಸಿಎಂ ತಿಳಿಸಿದ್ದಾರೆ. ಚಾನು, ದೇವಿ ಮತ್ತು ಬಾಕ್ಸರ್ ಮೇರಿ ಕೋಮ್ ಸೇರಿದಂತೆ ಮಣಿಪುರದ ಐದು ಕ್ರೀಡಾಳುಗಳು ಟೋಕಿಯೋ ಒಲಂಪಿಕ್ಸ್ನಲ್ಲಿ ಪ್ರದರ್ಶನ ತೋರುತ್ತಿದ್ದಾರೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ