ಟೀಮ್ ಇಂಡಿಯಾ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ನಡುವೆ ಈ ಹಿಂದೆಯಿಂದಲೂ ಏನೋ ಸರಿ ಇಲ್ಲ ಎಂಬ ಮಾತು ಕೇಳಿ ಬರುತ್ತಲೇ ಇದೆ. ಇದಕ್ಕೆ ಪುಷ್ಠಿ ನೀಡುವಂತೆ ಕೆಲ ಘಟನೆಗಳು ಕೂಡ ನಡೆದಿವೆ. ಆದರೆ ಇತ್ತೀಚಿನ ಕೆಲ ಘಟನೆ ಇವರಿಬ್ಬರ ನಡುವೆ ನಡೆಯುತ್ತಿರುವ ಮುಸುಕಿನ ಗುದ್ದಾಟಕ್ಕೆ ಮತ್ತೊಂದು ಬಾರಿ ಸಾಕ್ಷ್ಯ ನೀಡಿವೆ. ಏಪ್ರಿಲ್ 15, ಶನಿವಾರ ನಡೆದ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಟೂರ್ನಿಯ 20ನೇ ಲೀಗ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಎದುರು ಆರ್ಸಿಬಿ (RCB) 23 ರನ್ಗಳ ರೋಚಕ ಗೆಲವು ದಾಖಲಿಸಿತು.
ಪಂದ್ಯದಲ್ಲಿ ಕಿಂಗ್ ಕೊಹ್ಲಿ, 34 ಎಸೆತಗಳಲ್ಲಿ 50 ರನ್ ಬಾರಿಸಿ ಪಂದ್ಯವನ್ನು ಗೆಲುವಿನತ್ತ ಕೊಂಡೊಯ್ದರು. ಅಮೋಘ ಆಟಕ್ಕೆ ಪಂದ್ಯಶ್ರೇಷ್ಠ ಗೌರವ ಕೂಡ ಆ ಪಂದ್ಯದಲ್ಲಿ ವಿರಾಟ್ ಪಡೆದುಕೊಂಡರು. ಇದಿಷ್ಟು ಆಟ, ಗೆಲುವು ಆದರೆ ಮೈದಾನದ ಆಚೆ ಬೇರೆಯದ್ದೇ ಘಟನೆ ನಡೆದಿದೆ.
ಗಂಗೂಲಿಯನ್ನು ಗುರಾಯಿಸಿದ ವಿರಾಟ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದ ನಂತರ ಇಬ್ಬರೂ ದಿಗ್ಗಜರ ನಡುವೆ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಮೊಳಗಿದ ಧೋನಿ ಪರ ಘೋಷಣೆ, ಆರ್ಸಿಬಿಗೆ ಸಪೋರ್ಟ್ ಮಾಡೋಕೆ ಬಂದ್ರು ಶಿವಣ್ಣ
ವಿರಾಟ್ ಕೊಹ್ಲಿ ಫೀಲ್ಡಿಂಗ್ ಮಾಡುತ್ತಿದ್ದಾಗ ಬೌಂಡರಿ ಗೆರೆ ಬಳಿ ಡೆಲ್ಲಿ ತಂಡದ ಡಗ್ಔಟ್ನಲ್ಲಿ ಕುಳಿತಿದ್ದ ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಅವರನ್ನು ದುರುಗುಟ್ಟಿ ನೋಡಿದ್ದಾರೆ ಎನ್ನಲಾಗಿದೆ. ಈ ವಿಡಿಯೋ ಕೂಡ ಭಾರೀ ಸದ್ದು ಮಾಡಿದ್ದು, ದಾದಾ ಮತ್ತು ಕೊಹ್ಲಿ ನಡುವೆ ಕೋಲ್ಡ್ ವಾರ್ ಖಂಡಿತ ಇದೆ ಎನ್ನುತ್ತಿದ್ದಾರೆ ಕ್ರಿಕೆಟ್ ಅಭಿಮಾನಿಗಳು.
ಕಿಂಗ್ ಕೊಹ್ಲಿಗೆ ಹ್ಯಾಂಡ್ಶೇಕ್ ಮಾಡಿಲ್ಲ ದಾದಾ
ಇದಿಷ್ಟಕ್ಕೇ ಮುಗಿಯದ ಇಬ್ಬರ ಕಾದಾಟ ಹ್ಯಾಂಡ್ಶೇಕ್ ವಿಚಾರದಲ್ಲೂ ಕಿರಿಕ್ ಆಗಿದೆ. ಪಂದ್ಯ ಮುಗಿದ ಬಳಿಕ ವಿರಾಟ್ ಕೊಹ್ಲಿ ಜೊತೆಗೆ ದಾದಾ ಕೈ-ಕುಲುಕಲು ನಿರಾಕರಿಸಿದ್ದಾರೆ. ಇದು ಕೂಡ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಪಂದ್ಯ ಮುಗಿದ ಬಳಿಕ ವಿರಾಟ್ ಕೊಹ್ಲಿ ಮತ್ತು ಸೌರವ್ ಗಂಗೂಲಿ ಹ್ಯಾಂಡ್ ಶೇಕ್ ಮಾಡದೇ ಇರುವುದು ಕೂಡ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿರಾಟ್ ಹಾಗೆ ತಿನ್ನುವ ರೀತಿಯಲ್ಲಿ ಗಂಗೂಲಿ ಅವರನ್ನು ನೋಡಿದ್ದಕ್ಕೆ ದಾದಾ ಕೂಡ ಸಿಟ್ಟಾಗಿದ್ದಾರೆ, ಅದಕ್ಕೆ ಹ್ಯಾಂಡ್ಶೇಕ್ ಮಾಡಲು ನಿರಾಕರಿಸಿದ್ದಾರೆ ಎಂಬ ಚರ್ಚೆಗಳು ಆನ್ಲೈನ್ನಲ್ಲಿ ಜೋರಾಗಿ ಹರಿದಾಡುತ್ತಿವೆ.
ಗಂಗೂಲಿಯನ್ನು ಅನ್ಫಾಲೋ ಮಾಡಿದ ವಿರಾಟ್
ಇನ್ನೂ ಈ ಎಲ್ಲಾ ಘಟನೆ ನಂತರ ಇಬ್ಬರ ಜಗಳ ಸಾಮಾಜಿಕ ಜಾಲತಾಣಗಳ ವೇದಿಕೆಯವರೆಗೂ ಬಂದು ತಲುಪಿದೆ. ವಿರಾಟ್ ಕೊಹ್ಲಿ ಅವರು ಇನ್ಸ್ಟಾಗ್ರಾಮ್ನಲ್ಲಿ ಸೌರವ್ ಗಂಗೂಲಿ ಅವರನ್ನು ಅನ್ಫಾಲೋ ಮಾಡಿದ್ದಾರೆ.
ಕೊಹ್ಲಿ ಇನ್ಸ್ಟಾ ಪುಟದಲ್ಲಿ ಗಂಗೂಲಿ ಇಲ್ಲ ಎನ್ನುವುದಕ್ಕೆ ಸ್ಕ್ರೀಟ್ ಶಾಟ್ಗಳು ಹರಿದಾಡುತ್ತಿವೆ. ಈ ವಿಚಾರ ಇಬ್ಬರ ನಡುವಿನ ಜಗಳವನ್ನು ಮತ್ತಷ್ಟು ಜಗಜ್ಜಾಹೀರು ಮಾಡಿದೆ.
ಕ್ಯಾಪ್ಟನ್ಸಿ ವಿಚಾರವಾಗಿ ಇಬ್ಬರ ಮಧ್ಯೆ ಫೈಟ್
ಕ್ಯಾಪ್ಟನ್ಸಿ ವಿಚಾರವಾಗಿ ಇಬ್ಬರ ಮಧ್ಯೆ ಹುಟ್ಟಿಕೊಂಡ ಬೆಂಕಿ ಇನ್ನೂ ಆರದೇ ಹೊಗೆಯಾಡುತ್ತಿದೆ. ವೈಟ್ಬಾಲ್ ಕ್ರಿಕೆಟ್ನಲ್ಲಿ ಒಬ್ಬನೇ ಕ್ಯಾಪ್ಟನ್ ಇರಬೇಕು ಎಂಬುದು ಬಿಸಿಸಿಐ ಮತ್ತು ಆಯ್ಕೆ ಸಮಿತಿಯ ನಿರ್ಧಾರವಾಗಿತ್ತು.
ಇದೇ ಕಾರಣಕ್ಕೆ ಕೊಹ್ಲಿಯನ್ನು ಒನ್ ಡೇ ಕ್ಯಾಪ್ಟನ್ಸಿಯಿಂದ ಕೆಳಗಿಳಿಸಿಸಲಾಯಿತು. ಈ ಬೆಳವಣಿಗೆ ಕಿಂಗ್ ಕೊಹ್ಲಿ ಕೋಪಕ್ಕೆ ಕಾರಣವಾಯಿತು. ಇದೇ ಸಿಟ್ಟಲ್ಲಿ ವಿರಾಟ್ ಭಾರತ ಟೆಸ್ಟ್ ತಂಡದ ಕ್ಯಾಪ್ಟನ್ಸಿಗೆ ವಿದಾಯ ಹೇಳಿದ್ದರು. ಈ ಒಂದು ಘಟನೆ ಇಬ್ಬರ ನಡುವಿನ ಶೀತಲ ಸಮರಕ್ಕೆ ಕಾರಣವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ