ಸದ್ಯಕ್ಕೆ ಟೀಮ್ ಇಂಡಿಯಾ (Team India) ಬಲಿಷ್ಠ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ವಿರುದ್ದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಟೆಸ್ಟ್ ಪಂದ್ಯಗಳನ್ನು ಆಡುತ್ತಿದ್ದು, ಈಗಾಗಲೇ ಭಾರತ ಕ್ರಿಕೆಟ್ ತಂಡವು 2-1 ರಿಂದ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ. ಆದರೆ ಇನ್ನೂ ಕೊನೆಯ ಪಂದ್ಯ ಎಂದರೆ ನಾಲ್ಕನೆಯ ಟೆಸ್ಟ್ ಪಂದ್ಯ ಮಾರ್ಚ್ 9 ರಿಂದ ಶುರುವಾಗಲಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿಯ 2023 ರ (Border–Gavaskar Trophy 2023) ಆವೃತ್ತಿಯು ಈ ಬಾರಿ ಭಾರತದಲ್ಲಿ ನಡೆಯುತ್ತಿದ್ದು, ಆತಿಥೇಯರು ಸರಣಿಯಲ್ಲಿ ಈಗಾಗಲೇ ಮುನ್ನಡೆ ಸಾಧಿಸಿದ್ದಾರೆ ಅಂತ ಹೇಳಬಹುದು.
ಪ್ರಸ್ತುತ ನಡೆಯುತ್ತಿರುವ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯು ಟೀಮ್ ಇಂಡಿಯಾಕ್ಕೆ ಬಹಳ ನಿರ್ಣಾಯಕವಾಗಿದೆ, ಏಕೆಂದರೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ತಲುಪುವ ಸಾಧ್ಯತೆಗಳು ಈ ಸರಣಿಯ ಫಲಿತಾಂಶವನ್ನು ಅವಲಂಬಿಸಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.
4ನೇ ಟೆಸ್ಟ್ ಭಾರತ ತಂಡಕ್ಕೆ ‘ಮಾಡು ಇಲ್ಲವೇ ಮಡಿ’ ಪಂದ್ಯ
ಕಳೆದ ವಾರ ಇಂದೋರ್ ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವನ್ನು ಒಂಬತ್ತು ವಿಕೆಟ್ ಗಳಿಂದ ಸೋಲಿಸಿದ ನಂತರ ಆಸ್ಟ್ರೇಲಿಯಾ ಈಗಾಗಲೇ ಫೈನಲ್ ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಆದರೆ, ಭಾರತವು ಈ ಅರ್ಹತೆಯನ್ನು ಖಚಿತಪಡಿಸಿಕೊಳ್ಳಲು, ಅವರು ನಾಲ್ಕನೇ ಟೆಸ್ಟ್ ಅನ್ನು ಗೆಲ್ಲಲೆಬೇಕಾದಂತಹ ಅನಿವಾರ್ಯತೆ ಇದೆ. ಒಂದು ವೇಳೆ ಈ ಕೊನೆಯ ಪಂದ್ಯದಲ್ಲಿ ಭಾರತ ತಂಡ ಸೋತರೆ ಅಥವಾ ಡ್ರಾ ಸಾಧಿಸಿದರೆ, ರೋಹಿತ್ ಶರ್ಮಾ ಪಡೆಯ ಈ ಅವಕಾಶಗಳು ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ಸರಣಿಯ ಫಲಿತಾಂಶದ ಮೇಲೆ ಅವಲಂಬಿತವಾಗಿರುತ್ತದೆ.
ಆದಾಗ್ಯೂ, ಟೀಮ್ ಇಂಡಿಯಾ ಈ ಕೊನೆಯ ಪಂದ್ಯದಲ್ಲಿ ಸಂಪೂರ್ಣವಾಗಿ ಗೆಲುವು ಸಾಧಿಸಲು ವಿಫಲವಾದರೂ ಭಾರತವು ಫೈನಲ್ ಗೆ ಪ್ರವೇಶಿಸುವ ಹೆಚ್ಚಿನ ಸಾಧ್ಯತೆಗಳಿವೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ನ ಎರಡನೇ ಆವೃತ್ತಿಯ ಫೈನಲ್ ಜೂನ್ 7 ರಿಂದ 11 ರವರೆಗೆ ಲಂಡನ್ ನ ಓವಲ್ ನಲ್ಲಿ ನಡೆಯಲಿದೆ.
ಟೀಮ್ ಇಂಡಿಯಾ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಮಾಡ್ಬೇಕಂತೆ
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ನಲ್ಲಿ ಭಾರತ ಆಡುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರು ಬ್ಯಾಟಿಂಗ್ ಕ್ರಮಾಂಕದಲ್ಲಿ ಒಂದು ಭಾರಿ ಬದಲಾವಣೆಯನ್ನು ಮಾಡಲು ಹೇಳಿದ್ದಾರೆ ನೋಡಿ.
ರಿಕಿ ಪಾಂಟಿಂಗ್ ಅವರು ಕೆಎಲ್ ರಾಹುಲ್ ಮತ್ತು ಶುಭಮನ್ ಗಿಲ್ ಇಬ್ಬರನ್ನೂ ತಂಡದಲ್ಲಿ ಸೇರಿಸಿಕೊಳ್ಳುವಂತೆ ಭಾರತ ತಂಡದ ಮ್ಯಾನೇಜ್ಮೆಂಟ್ ಅನ್ನು ಒತ್ತಾಯಿಸಿದ್ದಾರೆ ನೋಡಿ.
ಬ್ಯಾಟಿಂಗ್ ಕ್ರಮಾಂಕದಲ್ಲಿನ ಬದಲಾವಣೆ ಬಗ್ಗೆ ರಿಕಿ ಹೇಳಿದ್ದೇನು?
ಅವರ ಪ್ರಕಾರ, ಜೂನ್ ನಲ್ಲಿ ಇಂಗ್ಲೆಂಡ್ ನಲ್ಲಿನ ಪರಿಸ್ಥಿತಿಗಳು ಪ್ರಸ್ತುತ ಉಪಖಂಡದಲ್ಲಿ ತಂಡಗಳು ಎದುರಿಸುತ್ತಿರುವ ಪರಿಸ್ಥಿತಿಗಳಿಗಿಂತ ಬಹಳ ಭಿನ್ನವಾಗಿರುತ್ತದೆ ಮತ್ತು ಅದಕ್ಕಾಗಿಯೇ ಮೂರನೇ ಟೆಸ್ಟ್ ಪ್ಲೇಯಿಂಗ್ ಇಲೆವೆನ್ ನಿಂದ ಕೈಬಿಡಲ್ಪಟ್ಟ ಕೆ.ಎಲ್.ರಾಹುಲ್ ಅವರನ್ನು ಗಣನೆಗೆ ತೆಗೆದುಕೊಳ್ಳಬಹುದು. ರಾಹುಲ್ ಇಂಗ್ಲೆಂಡ್ ನಲ್ಲಿ ಎರಡು ಶತಕಗಳನ್ನು ಗಳಿಸಿದ್ದಾರೆ ಮತ್ತು 30 ವರ್ಷದ ರಾಹುಲ್ ಅವರನ್ನು ಭಾರತದ ಮಧ್ಯಮ ಕ್ರಮಾಂಕದಲ್ಲಿ ಚೆನ್ನಾಗಿ ಬಳಸಿಕೊಳ್ಳಬಹುದು ಎಂದು ಪಾಂಟಿಂಗ್ ಅಭಿಪ್ರಾಯಪಟ್ಟಿದ್ದಾರೆ.
"ಕೆಎಲ್ ರಾಹುಲ್ ಮತ್ತು ಶುಭಮನ್ ಗಿಲ್ ಅವರಂತಹ ಆಟಗಾರರು ಈ ತಂಡದಿಂದ ಹೊರಗುಳಿದಿರುವುದರಿಂದ, ಈ ಇಬ್ಬರೂ ಸ್ವಲ್ಪ ಟೆಸ್ಟ್ ಮ್ಯಾಚ್ ಕ್ರಿಕೆಟ್ ಆಡಿದ್ದಾರೆ ಮತ್ತು ನೀವು ಇಬ್ಬರನ್ನೂ ಒಂದೇ ತಂಡದಲ್ಲಿ ಆಡಿಸಬಹುದು" ಎಂದು ಪಾಂಟಿಂಗ್ ಸಲಹೆ ನೀಡಿದ್ದಾರೆ.
"ಬಹುಶಃ ಶುಭಮನ್ ಗಿಲ್ ಅವರನ್ನು ಅಗ್ರ ಕ್ರಮಾಂಕದಲ್ಲಿ ಟ್ರೈ ಮಾಡಬಹುದು ಮತ್ತು ಕೆಎಲ್ ಅವರನ್ನ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿಸಬಹುದು. ಏಕೆಂದರೆ ಅವರು ಈ ಹಿಂದೆ ಇಂಗ್ಲಿಷ್ ಪರಿಸ್ಥಿತಿಗಳಲ್ಲಿ ಚೆನ್ನಾಗಿಯೇ ಕ್ರಿಕೆಟ್ ಆಡಿದ್ದಾರೆ" ಎಂಬುದು ಪಾಂಟಿಂಗ್ ಅವರ ಅಭಿಪ್ರಾಯವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ