ಭಾರತ ಕಬಡ್ಡಿ ತಂಡದ ಹಿರಿಯರ ವಿಭಾಗದ ಸಂಭಾವ್ಯ ಆಟಗಾರರ ಪಟ್ಟಿಯಲ್ಲಿ ರಾಜ್ಯದ ಏಕೈಕ ಕಬಡ್ಡಿ ಆಟಗಾರನಾಗಿ ಆಯ್ಕೆಯಾಗಿ ಮೊದಲನೇ ಹಂತದ ಆನ್ಲೈನ್ ತರಬೇತಿ ಶಿಬಿರದಿಂದ ಕೈಬಿಡಲಾಗಿದ್ದ ಸುಳ್ಯದ ಸಚಿನ್ ಪ್ರತಾಪ್ ಅವರಿಗೆ ತಂಡದಲ್ಲಿ ಅವಕಾಶ ಕಲ್ಪಿಸಲು ದಿಲ್ಲಿ ರಾಷ್ಟ್ರೀಯ ಕಬಡ್ಡಿ ಅಸೋಸಿಯೇಶನ್ ಅಧಿಕಾರಿಗಳು ಸಮ್ಮತಿಸಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದ ಪಾಲೆಪ್ಪಾಡಿ ನಿವಾಸಿ, ಉಜಿರೆ ಎಸ್ಡಿಎಂ ಕಾಲೇಜಿನ ಹಳೆ ವಿದ್ಯಾರ್ಥಿ ಸಚಿನ್ ಪ್ರತಾಪ್ ಮೊದಲ ಹಂತದ ಆನ್ಲೈನ್ ತರಬೇತಿಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿರಲಿಲ್ಲ.
ಕರ್ನಾಟಕದಿಂದ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದ ಕರ್ನಾಟಕದ ಏಕೈಕ ಆಟಗಾರ ಸಚಿನ್ ಪ್ರತಾಪ್ ಆಗಿದ್ದು, ಸಂಭಾವ್ಯ ಪಟ್ಟಿಯಿಂದ ಪ್ರತಾಪ್ ನ್ನು ಕೈ ಬಿಡಲು ಕರ್ನಾಟಕದ ಕಬಡ್ಡಿ ಅಸೋಸಿಯೇಷನ್ ಒಳಗಿನ ಸಮಸ್ಯೆಯೇ ಕಾರಣವಾಗಿತ್ತು. ಈ ಕುರಿತು ಮಾಧ್ಯಮಗಳು ಸಚಿನ್ ಪ್ರತಾಪ್ ಗೆ ಆದ ಅನ್ಯಾಯದ ಬಗ್ಗೆ ಬೆಳಕು ಚೆಲ್ಲಿದ್ದವು.
ಈ ಬಗ್ಗೆ ಮಾಹಿತಿ ಪಡೆದ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡರು ಕಬಡ್ಡಿ ಅಸೋಸಿಯೇಶನ್ನ ಸಿಇಒ ಜತೆಗೆ ಚರ್ಚಿಸಿದ್ದು, ಪೂರಕ ಸ್ಪಂದನೆ ವ್ಯಕ್ತವಾಗಿದೆ. ಈ ಸಂಬಂಧ ದೆಹಲಿ ರಾಷ್ಟ್ರೀಯ ಕಬಡ್ಡಿ ಅಸೋಸಿಯೇಷನ್ ನಿಂದ ಪ್ರತಾಪ್ ಗೆ ದೂರವಾಣಿ ಕರೆಯ ಮೂಲಕ ಎರಡನೇ ಆಯ್ಕೆ ತರಬೇತಿಗೆ ಹಾಜರಾಗಲು ಸಮ್ಮತಿ ಸೂಚಿಸಿದೆ.
ಡಿಸೆಂಬರ್ ತಿಂಗಳಿನಲ್ಲಿ ದೆಹಲಿಯಲ್ಲಿ ಈ ತರಬೇತಿ ನಡೆಯುವ ಸಾಧ್ಯತೆಯಿದ್ದು, ಸಚಿನ್ ಪ್ರತಾಪ್ ಈ ತರಬೇತಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ನ್ಯೂಸ್ 18 ಕನ್ನಡ ಕೂಡಾ ಕರ್ನಾಟಕದ ಪ್ರತಿಭಾವಂತ ಕಬಡ್ಡಿ ಆಟಗಾರನಿಗೆ ತರಬೇತಿಗೆ ಅವಕಾಶ ನಿರಾಕರಣೆ ಎನ್ನುವ ವರದಿ ಪ್ರಕಟಿಸಿ ಸರ್ಕಾರದ ಗಮನ ಸೆಳೆದಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ