ಭಾರತ ಮಹಿಳಾ ತಂಡದ (India cricketer) ಕ್ರಿಕೆಟರ್ ವೇದಾ ಕೃಷ್ಣಮೂರ್ತಿ (Veda Krishnamurthy)ಕರ್ನಾಟಕದ ಪ್ರಥಮ ದರ್ಜೆ ಕ್ರಿಕೆಟರ್ ಅರ್ಜುನ್ ಹೊಯ್ಸಳರೊಂದಿಗೆ (Arjun Hoysala) ದಾಂಪತ್ಯ ಜೀವನಕ್ಕೆ ( Marriage) ಕಾಲಿಟ್ಟಿದ್ದಾರೆ. ಗುರುವಾರ ಬೆಂಗಳೂರಿನಲ್ಲಿ ನ್ಯಾಯಾಲಯದಲ್ಲಿ ಸರಳವಾಗಿ ವಿವಾಹವಾಗಿದ್ದಾರೆ. ಮತ್ತೊಂದು ವಿಶೇಷವೆಂದರೆ 2021ರಲ್ಲಿ ಕೋವಿಡ್ 19 ಸಾಂಕ್ರಾಮಿಕದಿಂದ ನಿಧನರಾಗಿದ್ದ ತಮ್ಮ ತಾಯಿ ಜನ್ಮದಿನದಂದೇ ವಿವಾಹ ನೋಂದಣಿ ಮಾಡಿಸಿಕೊಂಡಿದ್ದಾರೆ. 30 ವರ್ಷದ ಮಾಜಿ ಕ್ರಿಕಟರ್ ಈ ಹಿಂದೇ ಭಾರತ ಮಹಿಳಾ ತಂಡದ ಮಾಜಿ ಕೋಚ್ ಡಬ್ಲ್ಯೂ.ವಿ. ರಾಮನ್ ಅವರ ವೀಕ್ಲಿ ಶೋನಲ್ಲಿ ತಮ್ಮ ವಿವಾಹದ ದಿನಾಂಕವನ್ನು ಬಹಿರಂಗಗೊಳಿಸಿದ್ದರು. ಗುರುವಾರ ಸಾಮಾಜಿಕ ಜಾಲಾತಾಣದಲ್ಲಿ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಜೀವನ ಮಹತ್ವದ ಕ್ಷಣವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ನವದಂಪತಿಗಳು ಜೊತೆಯಾಗಿ ನೋಂದಣಿ ಕಚೇರಿಯಲ್ಲಿ ದಾಖಲಾತಿಗೆ ಸಹಿ ಮಾಡುತ್ತಾ ಕ್ಯಾಮರಾಗೆ ಪೋಸ್ ನೀಡುತ್ತಿರುವುದನ್ನು ಕಾಣಬಹುದಾಗಿದೆ.
" ಮಿಸ್ಟರ್ ಅಂಡ್ ಮಿಸಸ್!!! ಇದು ನಿಮಗಾಗಿ ಅಮ್ಮ, ನಿಮ್ಮ ಜನ್ಮದಿನ ಸದಾ ವಿಶೇಷವಾಗಿ ಉಳಿದುಕೊಳ್ಳಲಿದೆ, ಐ ಲವ್ ಯು ಅಕ್ಕಾ, #justmarrid 12.02.23, #newlife #wedding" ಎಂದು ವೇದಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕರ್ನಾಟಕ ಕ್ರಿಕೆಟರ್ನೊಂದಿಗೆ ವಿವಾಹ
ವೇದಾ ಕೃಷ್ಣಮೂರ್ತಿಯವರನ್ನು ವಿವಾಹವಾಗಿರುವ ಕರ್ನಾಟಕ ರಣಜಿ ಕ್ರಿಕೆಟ್ ತಂಡದ ಆಟಗಾರ ಅರ್ಜುನ್ ಹೊಯ್ಸಳ ಎಡಗೈ ಬ್ಯಾಟ್ಸ್ಮನ್ ಆಗಿದ್ದು, ಕರ್ನಾಟಕ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಹಲವು ಫ್ರಾಂಚೈಸಿಗಳನ್ನು ಪ್ರತಿನಿಧಿಸಿ ಮಿಂಚಿದ್ದಾರೆ. ಅರ್ಜುನ್ ಮತ್ತು ವೇದಾ ಸೆಪ್ಟೆಂಬರ್ 18ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ವಿಷಯವನ್ನು ಸಾಮಾಜಿಕ ಜಾಲಾತಾಣದ ಮೂಲಕ ತಿಳಿಸಿದ್ದರು.
18 ವಯಸ್ಸಿಗೆ ಪದಾರ್ಪಣೆ
ಕರ್ನಾಟಕದ ಚಿಕ್ಕಮಗಳೂರಿನಲ್ಲಿರುವ ಕಡೂರು ಮೂಲದವರಾದ ವೇದಾ ಕೃಷ್ಣ ಮೂರ್ತಿ 18ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಭಾರತ ಮಹಿಳಾ ಕ್ರಿಕೆಟ್ ತಂಡದಲ್ಲಿ ಮಧ್ಯಮ ಕ್ರಮಾಂಕದ ಸ್ಟಾರ್ ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದ ಅವರು. ಒಟ್ಟು 48 ಏಕದಿನ ಪಂದ್ಯಗಳಲ್ಲಿ ಆಡಿ 829 ರನ್ಗಳನ್ನು ಗಳಿಸಿದ್ದಾರೆ. 76 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲೂ ಭಾರತದ ಪರ ಬ್ಯಾಟ್ ಬೀಸಿರುವ ಕನ್ನಡತಿ 875 ರನ್ ಗಳಿಸಿದ್ದಾರೆ.
ಇನ್ನು ಅರ್ಜುನ್ ಬಗ್ಗೆ ಹೇಳುವುದಾದರೆ 2016ರ ಡಿಸೆಂಬರ್ ತಿಂಗಳಲ್ಲಿ ಕರ್ನಾಟಕ ರಣಜಿ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಕರ್ನಾಟಕ ಪ್ರೀಮಿಯರ್ ಲೀಗ್ನಲ್ಲಿ ವಿವಿಧ ತಂಡಗಳನ್ನು ಪ್ರತಿನಿಧಿಸಿದ್ದು ಇಲ್ಲಿಯವರೆಗೆ 10 ಪಂದ್ಯಗಳನ್ನು ಆಡಿದ್ದಾರೆ.
ಕೋವಿಡ್ 2ನೇ ಅಲೆಗೆ ತಾಯಿ-ಅಕ್ಕಾ ಸಾವು
2021ರಲ್ಲಿ ಏಪ್ರಿಲ್ನಲ್ಲಿ ಇಡೀ ಪ್ರಪಂಚವನ್ನ ಕಾಡಿದ್ದ ಕೋವಿಡ್ 19 2ನೇ ಅಲೆಯಲ್ಲಿ ವೇದಾ ಕೃಷ್ಣಮೂರ್ತಿ ತಮ್ಮ ತಾಯಿಯನ್ನು ಕಳೆದುಕೊಂಡಿದ್ದರು. ನಂತರ ಒಂದೆರಡು ವಾರಗಳಲ್ಲಿ 45 ವರ್ಷದ ಅವರ ಸಹೋದರಿ ವತ್ಸಲಾ ಶಿವಕುಮಾರ್ ಕೂಡ ಮಾರಕ ವೈರಸ್ಗೆ ತುತ್ತಾಗಿ ಚಿಕ್ಕಮಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ನಂತರ ಅವರು ಭಾರತ ತಂಡದಿಂದಲೂ ಹೊರಬೀಳಬೇಕಾಯಿತು. ಆದರೂ ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಾ ರಾಷ್ಟ್ರೀಯ ತಂಡಕ್ಕೆ ಕಮ್ಬ್ಯಾಕ್ ಮಾಡಲು ಎದುರು ನೋಡುತ್ತಿದ್ದಾರೆ.
2020ರಲ್ಲಿ ಕೊನೆಯ ಪಂದ್ಯ
ಆಸ್ಟ್ರೇಲಿಯಾದಲ್ಲಿ ನಡೆದಿದ್ದ 2020ರ ಟಿ20 ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧದ ಫೈನಲ್ ಪಂದ್ಯದಲ್ಲಿ ವೇದಾ ಕೃಷ್ಣಮೂರ್ತಿ ತಮ್ಮ ಕೊನೆಯ ಪಂದ್ಯವನ್ನಾಡಿದ್ದರು. ಫಾರ್ಮ್ ಕಳೆದುಕೊಂಡಿದ್ದರಿಂದ ಭಾರತ ತಂಡದಿಂದ ಹೊರಬಿದ್ದಿದ್ದಾರೆ. ಇನ್ನು ಬಿಸಿಸಿಐ ಪ್ರಸಕ್ತ ವರ್ಷದ ವಾರ್ಷಿಕ ಗುತ್ತಿಗೆಯಿಂದ ವೇದಾ ಕೃಷ್ಣ ಮೂರ್ತಿಯವರನ್ನು ಹೊರಗಿಟ್ಟಿದೆ.
ವೇದಾ ಕೃಷ್ಣಮೂರ್ತಿ ಭಾರತ ತಂಡದಿಂದ ಹೊರಬಿದ್ದಿದ್ದರೂ ಕ್ರಿಕೆಟ್ನಿಂದ ದೂರವಾಗಿಲ್ಲ. ಅವರು ಸ್ಟಾರ್ ಸ್ಪೋರ್ಟ್ಸ್ನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ನ ಕಾಮೆಂಟರಿ ಮಾಡುತ್ತಿದ್ದಾರೆ. ಸೋನಿಯಲ್ಲೂ ಕಳೆದ ವರ್ಷದ ಕಾಮನ್ವೆಲ್ತ್ ಗೇಮ್ಸ್ನಲ್ಲಿ ವೀಕ್ಷಕ ವಿವರಣೆ ಕಾರ್ಯ ನಿರ್ವಹಿಸಿದ್ದರು. ವುಮೆನ್ಸ್ ಬಿಗ್ ಬ್ಯಾಶ್ನಲ್ಲಿ ಆಡಿದ ಭಾರತದ ಮೂರನೇ ಹಾಗೂ ಕೆಲವೇ ಆಟಗಾರ್ತಿಯರಲ್ಲಿ ಒಬ್ಬರಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ