ಕನ್ನಡಿಗ ಕೆಎಲ್ ರಾಹುಲ್ (KL Rahul) ಟೆಸ್ಟ್ ಕ್ರಿಕೆಟ್ನಲ್ಲಿ (Test Cricket) ಸತತ ವೈಫಲ್ಯ ಅನುಭವಿಸುತ್ತಿದ್ದಾರೆ. ಈ ಕಳಪೆ ಪ್ರದರ್ಶನ ಅವರನ್ನು ಭಾರತ ಟೆಸ್ಟ್ ತಂಡದ ಉಪನಾಯಕ (Vice Captain) ಸ್ಥಾನದಿಂದ ಕೆಳಗಿಳಿಯುವಂತೆ ಮಾಡಿದೆ. ಕರ್ನಾಟಕದ ಬ್ಯಾಟರ್ ಕಳೆದ 9 ಇನ್ನಿಂಗ್ಸ್ಗಳಲ್ಲಿ ಒಂದರಲ್ಲೂ 30 ರನ್ ಗಳಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಕೆಲವು ಮಾಜಿ ಕ್ರಿಕೆಟಿಗರು ರಾಹುಲ್ರನ್ನು ತಂಡದಿಂದ ಹೊರಗಿಡಬೇಕೆಂದು ಆಯ್ಕೆ ಸಮಿತಿಗೆ (Selection Committee) ಸೂಚಿಸುತ್ತಿದ್ದಾರೆ. ಗಿಲ್ ಅಂತಹ ಯುವ ಆಟಗಾರನಿಗೆ ಅವಕಾಶ ನೀಡಿ ಎಂದು ಹಲವು ಒತ್ತಾಯಿಸುತ್ತಿದ್ದಾರೆ. ಆದರೆ ಈ ಸಂದರ್ಭದಲ್ಲಿ ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್ (Rahul Dravid) ಕನ್ನಡಿಗನ ಪರ ನಿಂತಿದ್ದಾರೆ. ರಾಹುಲ್ ಪ್ರಸ್ತುತ ಫಾರ್ಮ್ ಸಮಸ್ಯೆ ಎದುರಿಸುತ್ತಿರಬಹುದು, ಆದರೆ ವಿದೇಶಿ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ. ಹಾಗಾಗಿ ಅವರ ಬೆಂಬಲಕ್ಕೆ ನಿಲ್ಲುವ ಅವಶ್ಯಕತೆಯಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಾರತ ತಂಡದ ಪ್ರಸ್ತುತ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ 2-0ಯಲ್ಲಿ ಮುನ್ನಡೆ ಸಾಧಿಸಿದೆ, ಮೊದಲ ಪಂದ್ಯದಲ್ಲಿ ಇನ್ನಿಂಗ್ಸ್ ಹಾಗೂ 132 ರನ್ಗಳಿಂದ ಜಯ ಸಾಧಿಸಿದರೆ, 2ನೇ ಪಂದ್ಯದಲ್ಲಿ 6 ವಿಕೆಟ್ಗಳ ಜಯ ಸಾಧಿಸಿತ್ತು. ಆದರೆ ಕೆಎಲ್ ರಾಹುಲ್ ಈ ಎರಡೂ ಪಂದ್ಯಗಳಲ್ಲಿ ಕ್ರಮವಾಗಿ 20, 17 ಹಾಗೂ 1 ರನ್ಗಳಿಸಿದ್ದಾರೆ. ಆದರೂ ಮುಂದಿನ ಎರಡು ಟೆಸ್ಟ್ ಪಂದ್ಯಗಳಿಗೆ ಬಿಸಿಸಿಐ ಪ್ರಕಟಿಸಿದ ತಂಡದಲ್ಲಿ ಅವಕಾಶ ಪಡೆದುಕೊಂಡಿದ್ದಾರೆ.
ವಿದೇಶದಲ್ಲಿ ರಾಹುಲ್ ಪ್ರದರ್ಶನ ಉತ್ತಮವಾಗಿದೆ
ಇನ್ನು ರಾಹುಲ್ರನ್ನು ತಂಡದಿಂದ ಕೈಬಿಡಬೇಕು ಎನ್ನುವ ಕೂಗು ಕೇಳಿಬರುತ್ತಿರುವ ಹಿನ್ನಲೆ ಪ್ರತಿಕ್ರಿಯೆ ನೀಡಿರುವ ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಇಂತಹ ಕಠಿಣ ಸಂದರ್ಭದಲ್ಲಿ ನಾವು ರಾಹುಲ್ಗೆ ಬೆಂಬಲ ನೀಡಬೇಕು ಎಂದಿದ್ದಾರೆ. " ರಾಹುಲ್ಗೆ ಕಠಿಣ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಇದು ಎಲ್ಲರಿಗೂ ಸಾಮಾನ್ಯ, ಆದರೆ ಅವರು ವಿದೇಶಿ ಪಿಚ್ಗಳಲ್ಲಿ ಭಾರತದ ಯಶಸ್ವಿ ಬ್ಯಾಟರ್ ಎನಿಸಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ , ಇಂಗ್ಲೆಂಡ್ ಪ್ರವಾಸದ ವೇಳೆ ಶತಕಗಳನ್ನು ಸಿಡಿಸಿದ್ದರು. ಹಾಗಾಗಿ ಈ ನಾವು ಅವರಿಗೆ ನಮ್ಮ ಬೆಂಬಲವನ್ನು ಮುಂದುವರಿಸುತ್ತೇವೆ" ಎಂದು ಕೋಚ್ ದ್ರಾವಿಡ್ ತಿಳಿಸಿದ್ದಾರೆ.
ರೋಹಿತ್ ಬೆಂಬಲ
ಕೋಚ್ ದ್ರಾವಿಡ್ ಅಷ್ಟೇ ಅಲ್ಲ , ನಾಯಕ ರೋಹಿತ್ ಶರ್ಮಾ ಕೂಡ ರಾಹುಲ್ ಬೆಂಬಲಕ್ಕೆ ನಿಂತಿದ್ದಾರೆ. ಇದು ಕೇವಲ ಕೆಎಲ್ ರಾಹುಲ್ ಅವರ ಸಮಸ್ಯೆಯಲ್ಲ. ಫಾರ್ಮ್ ಸಮಸ್ಯೆ ಯಾರಿಗಾದರೂ ಬರಬಹುದು. ರಾಹುಲ್ ತಮ್ಮ ನೈಜ ಆಟ ಆಡಬೇಕೆಂದು ನಾವು ಬಯಸುತ್ತೇವೆ. ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ, ಒಬ್ಬ ವ್ಯಕ್ತಿಯು ಏನು ಮಾಡುತ್ತಿದ್ದಾನೆ ಎಂಬುದರ ಬಗ್ಗೆ ನಾವು ಹೆಚ್ಚು ತಲೆಕೆಡಿಸುವುದಿಲ್ಲ. ತಂಡವಾಗಿ ಹೇಗೆ ಮುನ್ನುಗ್ಗಬೇಕು ಎಂಬ ಬಗ್ಗೆ ಯೋಚಿಸುತ್ತೇವೆ ಎಂದು ರೋಹಿತ್ ತಿಳಿಸಿದ್ದಾರೆ.
ಉಪನಾಯಕ ಸ್ಥಾನ ಕಳೆದುಕೊಂಡ ರಾಹುಲ್
ಸತತ ವೈಫಲ್ಯ ಅನುಭವಿಸಿರುವ ರಾಹುಲ್ಗೆ ಒಂದು ಕಡೆ ಅವಕಾಶ ನೀಡಬಾರೆದೆಂದು ಕನ್ನಡಿಗ ವೆಂಕಟೇಶ್ ಪ್ರಸಾದ್ ಸೇರಿದಂತೆ ಹಲವು ಮಾಜಿ ಆಟಗಾರರು ಒತ್ತಾಯಿಸುತ್ತಿದ್ದಾರೆ. ಆದರೂ ಬಿಸಿಸಿಐ ಆಯ್ಕೆಸಮಿತಿ ಕೊನೆಯ ಎರಡು ಟೆಸ್ಟ್ಗೆ ಅವರನ್ನು ಆಯ್ಕೆ ಮಾಡಿದೆ. ಆದರೆ ಅವರನ್ನು ಉಪನಾಯಕ ಸ್ಥಾನದಿಂದ ಕೆಳಗಿಳಿಸಿ ಎಚ್ಚರಿಕೆ ನೀಡಿದೆ. ಒಂದು ವೇಳೆ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳದಿದ್ದರೆ ಮುಂಬರುವ ದಿನಗಳಲ್ಲಿ ತಂಡದಿಂದಲೂ ಹೊರ ಹಾಕುವ ಪರೋಕ್ಷ ವಾರ್ನಿಂಗ್ ನೀಡಿದೆ.
ತಂಡಕ್ಕೆ ಮರಳಿದ ಉನಾದ್ಕಟ್
ಕೊನೆಯ ಎರಡು ಟೆಸ್ಟ್ ಪಂದ್ಯಗಳಿಗೆ ಪ್ರಕಟಿಸಿರುವ ತಂಡದಲ್ಲಿ ಜಸ್ಪ್ರೀತ್ ಬುಮ್ರಾ ಬದಲಿಗೆ ಉಮೇಶ್ ಯಾದವ್ಗೆ ಅವಕಾಶ ನಿಡಲಾಗಿದೆ. 2ನೇ ಟೆಸ್ಟ್ ಪಂದ್ಯದಿಂದ ಕೈಬಿಡಲಾಗಿದ್ದ ಜಯದೇವ್ ಉನಾದ್ಕಟ್ ಅವರನ್ನು ಉಳಿದ ಎರಡು ಪಂದ್ಯಗಳಿಗಾಗಿ ಆಯ್ಕೆ ಮಾಡಲಾಗಿದೆ. ದೆಹಲಿ ಟೆಸ್ಟ್ ಪಂದ್ಯಕ್ಕೂ ಮುನ್ನ ಜಯದೇವ್ ಅವರನ್ನು ರಣಜಿ ಟ್ರೋಫಿ ಫೈನಲ್ ಆಡುವುದಕ್ಕೆ ಬಿಸಿಸಿಐ ಅವಕಾಶ ಮಾಡಿಕೊಟ್ಟಿತ್ತು. ಅವರ ನೇತೃತ್ವದ ಸೌರಾಷ್ಟ್ರ ತಂಡ ರಣಜಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದೀಗ ಭಾರತ ತಂಡಕ್ಕೆ ಮರಳಿದ್ದಾರೆ.
ಕೊನೆಯ 2 ಟೆಸ್ಟ್ಗಳಿಗೆ ಭಾರತ ಟೆಸ್ಟ್ ತಂಡ
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಉಮೇಶ್ ಯಾದವ್, ಜಯದೇವ್ ಉನಾದ್ಕಟ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ