• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • Vijay Hazare Trophy semifinal: ಕರ್ನಾಟಕ ವಿರುದ್ಧ ಭರ್ಜರಿ ಜಯದೊಂದಿಗೆ ಫೈನಲ್​ಗೆ ಲಗ್ಗೆಯಿಟ್ಟ ಮುಂಬೈ

Vijay Hazare Trophy semifinal: ಕರ್ನಾಟಕ ವಿರುದ್ಧ ಭರ್ಜರಿ ಜಯದೊಂದಿಗೆ ಫೈನಲ್​ಗೆ ಲಗ್ಗೆಯಿಟ್ಟ ಮುಂಬೈ

Prithvi-Padikkal

Prithvi-Padikkal

29 ರನ್​ಗಳಿಸಿದ್ದ ಕರುಣ್ ನಾಯರ್ ವಿಕೆಟ್​ನ್ನು ಶಂಸ್ ಮುಲಾನಿ ಪಡೆದರೆ, 33 ರನ್ ಬಾರಿಸಿದ ಶ್ರೇಯಸ್ ಗೋಪಾಲ್ ವಿಕೆಟ್​ನ್ನು ಜೈಸ್ವಾಲ್ ಉರುಳಿಸಿದರು. ಇದೇ ವೇಳೆ ಕ್ರೀಸ್​ಗಿಳಿದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಶರತ್ ಬಿರುಸಿನ ಆಟ ಪ್ರದರ್ಶಿಸಿದರು. ಕೇವಲ 39 ಎಸೆತಗಳಲ್ಲಿ 8 ಬೌಂಡರಿ 2 ಸಿಕ್ಸರ್​ನೊಂದಿಗೆ 61 ಚಚ್ಚಿ ಗೆಲುವಿನ ಆಸೆ ಚಿಗುರಿಸಿದರು.

ಮುಂದೆ ಓದಿ ...
  • Share this:

    ದೆಹಲಿಯ ಪಾಲಂ ಸ್ಟೇಡಿಯಂನಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ವಿರುದ್ದ ಮುಂಬೈ ತಂಡವು 72 ರನ್​ಗಳ ಭರ್ಜರಿ ಜಯ ಸಾಧಿಸಿ ಫೈನಲ್​ಗೆ ಲಗ್ಗೆಯಿಟ್ಟಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಕರ್ನಾಟಕ ತಂಡದ ನಾಯಕ ರವಿಕುಮಾರ್ ಸಮರ್ಥ್ ಬೌಲಿಂಗ್ ಆಯ್ದುಕೊಂಡರು. ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ 5 ಓವರ್​ನಲ್ಲಿ ಪ್ರಸಿಧ್ದ್ ಕೃಷ್ಣ ಕರ್ನಾಟಕಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಒಂದೆಡೆ ಯಶಸ್ವಿ ಜೈಸ್ವಾಲ್ (6) ಹಾಗೂ ಆದಿತ್ಯ ತಾರೆ (16) ಬೇಗನೆ ನಿರ್ಗಮಿಸಿದರೂ, ಮತ್ತೊಂದೆಡೆ ಮುಂಬೈ ನಾಯಕ ಪೃಥ್ವಿ ಶಾ ಭರ್ಜರಿ ಬ್ಯಾಟಿಂಗ್ ನಡೆಸಿದರು.


    ಮೂರನೇ ವಿಕೆಟ್​ಗೆ ಶಂಸ್ ಮುಲಾನಿ ಜೊತೆಗೂಡಿ 159 ರನ್​ ಜೊತೆಯಾಟವಾಡಿದ ಪೃಥ್ವಿ ಶಾ ಕರ್ನಾಟಕ ಬೌಲರುಗಳನ್ನು ಚೆಂಡಾಡಿದರು. ಅಲ್ಲದೆ ಸ್ಪೋಟಕ ಸೆಂಚುರಿ ಪೂರೈಸಿದರು. ಕೇವಲ 122 ಎಸೆತಗಳನ್ನು ಎದುರಿಸಿದ ಪೃಥ್ವಿ ಶಾ 165 ರನ್ ಬಾರಿಸಿದರು. ಈ ವೇಳೆ ಯುವ ದಾಂಡಿಗನ ಬ್ಯಾಟ್​ನಿಂದ ಸಿಡಿದದ್ದು 7 ಸಿಕ್ಸರ್ ಹಾಗೂ 17 ಬೌಂಡರಿಗಳು.


    ಇತ್ತ ಶಂಸ್ ಮುಲಾನಿ 45 ರನ್​ಗಳಿಸಿ ಗೌತಮ್​ಗೆ ವಿಕೆಟ್ ಒಪ್ಪಿಸಿ ಹೊರನಡೆದರು. ಇದರ ಬೆನ್ನಲ್ಲೇ 165 ರನ್​ಗಳಿಸಿದ್ದ ಪೃಥ್ವಿ ಶಾ ವೈಶಾಖ್​ಗೆ ವಿಕೆಟ್ ನೀಡಿ ತಮ್ಮ ಸ್ಪೋಟಕ ಇನಿಂಗ್ಸ್ ಅಂತ್ಯಗೊಳಿಸಿದರು. ಆದರೆ ಅದಾಗಲೇ ಪೃಥ್ವಿ ಶಾ ಮುಂಬೈ ಸ್ಕೋರ್ ಅನ್ನು 40 ಓವರ್​ನಲ್ಲಿ 243 ರನ್​ಗೆ ತಂದು ನಿಲ್ಲಿಸಿದ್ದರು. ಇನ್ನು ಅಂತಿಮ ಹಂತದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಶಿವಂ ದುಬೆ 27 ರನ್‌ಗಳ ಕೊಡುಗೆ ನೀಡಿದರೆ, ಅಮನ್ ಹಕೀಂ ಖಾನ್ 25 ರನ್‌ ಬಾರಿಸಿದರು. ಆದರೆ ನಂತರ ಬಂದ ಬ್ಯಾಟ್ಸ್​ಮನ್​ಗಳನ್ನು ಬೇಗನೆ ಪೆವಿಲಿಯನ್​ ಕಡೆ ಕಳುಹಿಸುವಲ್ಲಿ ಯಶಸ್ವಿಯಾದ ಕರ್ನಾಟಕ ಅಂತಿಮವಾಗಿ ಮುಂಬೈ ತಂಡವನ್ನು 49.2 ಓವರ್​ನಲ್ಲಿ 322 ರನ್​ಗೆ ಆಲೌಟ್ ಮಾಡಿತು.

    323 ರನ್​ಗಳ ಬೃಹತ್ ಗುರಿಯನ್ನು ಪಡೆದ ಕರ್ನಾಟಕ ಆರಂಭಿಕ ಆಘಾತಕ್ಕೆ ಒಳಗಾಯಿತು. ತಂಡದ ನಾಯಕ ರವಿಕುಮಾರ್ ಸಮರ್ಥ್ ಕೇವಲ 8 ರನ್​ಗಳಿಸಿ 2ನೇ ಓವರ್​ನಲ್ಲಿ ವಿಕೆಟ್ ಒಪ್ಪಿಸಿದರು. ಇದಾಗ್ಯೂ ದೇವದತ್ ಪಡಿಕ್ಕಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಮುಂಬೈ ವೇಗಿಗಳನ್ನು ಸಮರ್ಥವಾಗಿ ಎದುರಿಸಿದ ಪಡಿಕ್ಕಲ್ ಅರ್ಧಶತಕ ಪೂರೈಸಿದರು.


    69 ಎಸೆತಗಳಲ್ಲಿ 9 ಬೌಂಡರಿ ಹಾಗೂ 1 ಸಿಕ್ಸರ್​ನೊಂದಿಗೆ 64 ರನ್​ಗಳಿಸಿದ್ದ ಪಡಿಕ್ಕಲ್, ಪ್ರಶಾಂತ್ ಸೋಲಂಕಿ ಎಸೆತವನ್ನು ಗುರುತಿಸುವಲ್ಲಿ ಎಡವಿ ಕ್ಲೀನ್ ಬೌಲ್ಡ್ ಆದರು. ಮತ್ತೊಂದೆಡೆ ಸಿದ್ದಾರ್ಥ್ 9 ರನ್, ಮನೀಷ್ ಪಾಂಡೆ 1 ರನ್​ಗಳಿಸಿ ಬೇಗನೆ ವಿಕೆಟ್ ಒಪ್ಪಿಸಿದರು. ಇದಾಗ್ಯೂ 5ನೇ ವಿಕೆಟ್​ಗೆ ಜೊತೆಗೂಡಿದ ಕರುಣ್ ನಾಯರ್ ಹಾಗೂ ಶ್ರೇಯಸ್ ಗೋಪಾಲ್ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವ ಸೂಚನೆ ನೀಡಿದ್ದರು.


    ಆದರೆ 29 ರನ್​ಗಳಿಸಿದ್ದ ಕರುಣ್ ನಾಯರ್ ವಿಕೆಟ್​ನ್ನು ಶಂಸ್ ಮುಲಾನಿ ಪಡೆದರೆ, 33 ರನ್ ಬಾರಿಸಿದ ಶ್ರೇಯಸ್ ಗೋಪಾಲ್ ವಿಕೆಟ್​ನ್ನು ಜೈಸ್ವಾಲ್ ಉರುಳಿಸಿದರು. ಇದೇ ವೇಳೆ ಕ್ರೀಸ್​ಗಿಳಿದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಶರತ್ ಬಿರುಸಿನ ಆಟ ಪ್ರದರ್ಶಿಸಿದರು. ಕೇವಲ 39 ಎಸೆತಗಳಲ್ಲಿ 8 ಬೌಂಡರಿ 2 ಸಿಕ್ಸರ್​ನೊಂದಿಗೆ 61 ಚಚ್ಚಿ ಗೆಲುವಿನ ಆಸೆ ಚಿಗುರಿಸಿದರು. ಈ ಹಂತದಲ್ಲಿ ಮತ್ತೆ ದಾಳಿಗಿಳಿದ ಶಂಸ್ ಮುಲಾನಿ ಭರತ್ ವಿಕೆಟ್ ಪಡೆಯುವ ಮೂಲಕ ಮುಂಬೈ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಅಂತಿಮ ಹಂತದಲ್ಲಿ ಕೃಷ್ಣಪ್ಪ ಗೌತಮ್ 28 ರನ್​ಗಳಿಸಿ ಕೊಂಚ ಪ್ರತಿರೋಧ ತೋರಿದ್ದು ಬಿಟ್ಟರೆ ಉಳಿದ ಆಟಗಾರರು ಬೇಗನೆ ವಿಕೆಟ್ ಒಪ್ಪಿಸಿದರು.


    ಗೆಲ್ಲಲು 44 ಎಸೆತಗಳಲ್ಲಿ 73 ರನ್​ಗಳ ಅವಶ್ಯಕತೆಯಿದ್ದ ವೇಳೆ ಕರ್ನಾಟಕ ಸರ್ವಪತನ ಕಾಣುವ ಮೂಲಕ ಮುಂಬೈ ತಂಡ 72 ರನ್​ಗಳ ಭರ್ಜರಿ ಜಯ ಸಾಧಿಸಿತು. ಮುಂಬೈ ಪರ ಶಂಸ್ ಮುಲಾನಿ, ತುಷಾರ್ ಪಾಂಡೆ, ಪ್ರಶಾಂತ್ ಸೋಲಂಕಿ, ತನುಷ್ ಕೋಟ್ಯಾನ್ ತಲಾ 2 ವಿಕೆಟ್ ಪಡೆದು ಮಿಂಚಿದರು.
    ಈ ಭರ್ಜರಿ ಗೆಲುವಿನೊಂದಿಗೆ ಮುಂಬೈ ತಂಡವು ವಿಜಯ್ ಹಜಾರೆ ಟ್ರೋಫಿ 2021ರ ಫೈನಲ್ ಪ್ರವೇಶಿಸಿದೆ.

    Published by:zahir
    First published: