ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಮುಂಬೈ ತಂಡ ಹೀನಾಯ ಸೋಲು ಅನುಭವಿಸಿದೆ. ಗ್ರೂಪ್-ಇ ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಪುದುಚೇರಿ ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಬ್ಯಾಟಿಂಗ್ ಆರಂಭಿಸಿದ ಮುಂಬೈಗೆ ಆರಂಭಿಕ ಆಘಾತ ನೀಡುವಲ್ಲಿ 41 ವರ್ಷದ ಹಿರಿಯ ವೇಗಿ ಸಾಂತ ಮೂರ್ತಿ ಯಶಸ್ವಿಯಾದರು.
39 ರನ್ ಆಗುವಷ್ಟರಲ್ಲಿ ಪ್ರಮುಖ 4 ವಿಕೆಟ್ ಉರುಳಿಸಿದ ಸಾಂತ ಮೂರ್ತಿ ಮುಂಬೈಗೆ ಶಾಕ್ ನೀಡಿದ್ದರು. ಅತ್ತ ಆರಂಭಿಕ ಆಘಾತದಿಂದ ಚೇತರಿಸಿಕೊಳ್ಳುವ ಮುನ್ನವೇ ಅರವಿಂದ್ ರಾಜ್ ಕೂಡ 2 ವಿಕೆಟ್ ಉರುಳಿಸಿದರು. ಪುದುಚೇರಿ ಬೌಲರುಗಳ ದಾಳಿಗೆ ತರಗೆಲೆಯಂತೆ ಉರುಳಿದ ಮುಂಬೈ ಬ್ಯಾಟ್ಸ್ಮನ್ಗಳು ಅಂತಿಮವಾಗಿ 19 ಓವರ್ಗೆ 94 ರನ್ಗಳಿಸಿ ಸರ್ವಪತನ ಕಂಡಿತು. ಪುದುಚೇರಿ ಪರ ಕರಾರುವಾಕ್ ದಾಳಿ ನಡೆಸಿದ ಸಾಂತ ಮೂರ್ತಿ 4 ಓವರ್ನಲ್ಲಿ ಕೇವಲ 20 ರನ್ ನೀಡಿ 5 ವಿಕೆಟ್ ಉರುಳಿಸಿ ಮಿಂಚಿದರು.
ಈ ಸಾಧಾರಣ ಮೊತ್ತವನ್ನು ಬೆನ್ನತ್ತಿದ ಪುದುಚೇರಿ ತಂಡಕ್ಕೆ ಉತ್ತಮ ಆರಂಭ ನೀಡುವಲ್ಲಿ ಕಾರ್ತಿಕ್ (26) ಹಾಗೂ ರೋಹಿತ್ (18) ಯಶಸ್ವಿಯಾದರು. ಮೊದಲ ವಿಕೆಟ್ಗೆ 45 ರನ್ ಕಲೆಹಾಕಿದ ಈ ಜೋಡಿ ಗೆಲುವಿನ ದೂರವನ್ನು ಕಡಿಮೆಗೊಳಿಸಿದರು. ಅಂತಿಮವಾಗಿ 4 ವಿಕೆಟ್ ಕಳೆದುಕೊಂಡು ಪುದುಚೇರಿ 19 ಓವರ್ನಲ್ಲಿ ಗುರಿ ಮುಟ್ಟಿತು. ಈ ಸೋಲಿನೊಂದಿಗೆ ಮುಂಬೈ ತಂಡದ ನಾಕೌಟ್ ಕನಸು ಕೂಡ ಛಿದ್ರವಾಗಿದೆ.
ಯಾರು ಈ ಸಾಂತ ಮೂರ್ತಿ?
ಸಾಂತ ಮೂರ್ತಿ ಕಳೆದ ವರ್ಷವಷ್ಟೇ ಪುದುಚೇರಿ ಪರ ಪ್ರಥಮ ದರ್ಜೆ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದರು. ಅಂದರೆ ತಮ್ಮ 40 ವಯಸ್ಸಿನಲ್ಲಿ ಕ್ರಿಕೆಟ್ ವೃತ್ತಿಜೀವನವನ್ನು ಆರಂಭಿಸಿದ್ದರು. ಇದೀಗ 41ನೇ ವಯಸ್ಸಿನಲ್ಲಿ 5 ವಿಕೆಟ್ ಪಡೆಯುವ ಮೂಲಕ ಟಿ20 ಕ್ರಿಕೆಟ್ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಇದಕ್ಕೂ ಮುನ್ನ ತಮಿಳುನಾಡು ಪ್ರೀಮಿಯರ್ ಲೀಗ್ನ ಕಾರೈಕುಡಿ ಕಲೈ ತಂಡದ ಭಾಗವಾಗಿದ್ದರು.
ಸದ್ಯ ಪುದುಚೇರಿಯ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಮಲ್ಟಿ ಟಾಸ್ಕಿಂಗ್ ಸಿಬ್ಬಂದಿ ಆಗಿ ಕೆಲಸ ಮಾಡುತ್ತಿರುವ ಸಾಂತ ಮೂರ್ತಿ, ಜೊತೆಗೆ ಸ್ಪೋರ್ಟ್ಸ್ ಶಾಪ್ವೊಂದನ್ನು ಕೂಡ ನಡೆಸುತ್ತಿದ್ದಾರೆ.
ನಾನು 17-18 ನೇ ವಯಸ್ಸಿನಿಂದ ಕ್ರಿಕೆಟ್ ಆಡುತ್ತಿದ್ದೇನೆ. ಈಗಲೂ ಕೂಡ ಸ್ಪರ್ಧಾತ್ಮಕ ಕ್ರಿಕೆಟ್ ಆಡುವ ಉತ್ಸಾಹವಿದೆ. ಹಾಗಾಗಿ ನನಗೆ ವಯಸ್ಸು ಎಂಬುದು ದೊಡ್ಡ ವಿಷಯವಲ್ಲ ಎಂದು ಸಾಂತ ಮೂರ್ತಿ ಹೇಳುತ್ತಾರೆ. ಒಟ್ಟಿನಲ್ಲಿ ಬಲಿಷ್ಠ ಮುಂಬೈ ತಂಡವನ್ನು ಕಟ್ಟಿಹಾಕುವಲ್ಲಿ ಪ್ರಮುಖ ಪಾತ್ರವಹಿಸಿದ 41 ರ ಸಾಂತ ಮೂರ್ತಿ ಮುಂದಿನ ಐಪಿಎಲ್ ಹರಾಜನ್ನು ಎದುರು ನೋಡುತ್ತಿದ್ದಾರೆ. ಅವರೆಲ್ಲಾ ಕನಸು ನನಸಾಗಲಿ ಎಂದು ಹಾರೈಸೋಣ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ