ಲಂಡನ್, ಸೆ. 5: ಇಂಗ್ಲೆಂಡ್ ಕ್ರಿಕೆಟ್ ಪ್ರವಾಸದಲ್ಲಿರುವ ಭಾರತ ತಂಡಕ್ಕೆ ಕೋವಿಡ್ ಕಂಟಕ ಕಾಡುತ್ತಿದೆ. ತಂಡದ ಮುಖ್ಯ ಕೋಚ್ ರವಿ ಶಾಸ್ತ್ರಿ ಅವರಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಅವರು ಸದ್ಯ ಐಸೋಲೇಶನ್ನಲ್ಲಿ ಇದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ರವಿಶಾಸ್ತ್ರಿ ಜೊತೆ ನಿಕಟ ಸಂಪರ್ಕದಲ್ಲಿದ್ದ ಸಪೋರ್ಟ್ ಸ್ಟಾಫ್ನ ಮೂವರನ್ನೂ ಐಸೋಲೇಶನ್ಗೆ ಕಳುಹಿಸಲಾಗಿದೆ. ಇವರಲ್ಲಿ ಬೌಲಿಂಗ್ ಕೋಚ್ ಆಗಿರುವ ಭರತ್ ಅರುಣ್ ಕೂಡ ಇದ್ದಾರೆ. ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ಮತ್ತು ಪ್ರಧಾನ ಫಿಸಿಯೋ ಥೆರಪಿಸ್ಟ್ ನಿತಿನ್ ಪಟೇಲ್ ಅವರು ಕೂಡ ಐಸೋಲೇಶನ್ನಲ್ಲಿ ಇದ್ದಾರೆ. ಬಿಸಿಸಿಐ ಈ ವಿಚಾರವನ್ನು ದೃಢಪಡಿಸಿದೆ. ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ನಲ್ಲಿ ರವಿಶಾಸ್ತ್ರಿಗೆ ಕೋವಿಡ್ ಪಾಸಿಟಿವ್ ಇರುವುದು ದೃಢಪಟ್ಟಿದೆ. ಭಾರತ ತಂಡದ ಎಲ್ಲಾ ಸದಸ್ಯರಿಗೆ ಆರ್ಟಿ-ಪಿಸಿಆರ್ ಟೆಸ್ಟ್ ಮಾಡಲಾಗಿದೆ. ಆ ವರದಿಗಳು ಬರುವವರೆಗೂ ರವಿಶಾಸ್ತ್ರಿ ಹಾಗೂ ಇತರ ಮೂವರು ಕೂಡ ಐಸೋಲೇಶನ್ನಲ್ಲಿ ಇರಲಿದ್ದಾರೆ. ಭರತ್ ಅರುಣ್ ಅವರಿಗೆ ಸೋಂಕು ದೃಢಪಡದಿದ್ದರೂ ಐಸೋಲೇಶನ್ನಲ್ಲಿ ಇರಬೇಕಾದ ಸಂದರ್ಭ ಬಂದದ್ದು ಇದು ಎರಡನೇ ಬಾರಿ.
ಸದ್ಯ ಯಾವ ಆಟಗಾರರಿಗೂ ರ್ಯಾಪಿಡ್ ಟೆಸ್ಟ್ನಲ್ಲಿ ಪಾಸಿಟಿವ್ ಬಂದಿಲ್ಲ. ಆರ್ಟಿ-ಪಿಸಿಆರ್ ಪರೀಕ್ಷೆ ಮುನ್ನ ಶನಿವಾರ ಎರಡು ಬಾರಿ ನಡೆಸಲಾದ ರ್ಯಾಪಿಡ್ ಟೆಸ್ಟ್ನಲ್ಲಿ ಬೇರೆಲ್ಲಾ ಆಟಗಾರರು ಮತ್ತು ಸಿಬ್ಬಂದಿಗೆ ನೆಗಟಿವ್ ರಿಪೋರ್ಟ್ ಬಂದಿದೆ. ಈಗ ರವಿಶಾಸ್ತ್ರಿಗೆ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರ ಸ್ಯಾಂಪಲ್ ಪಡೆದು ಆರ್ಟಿ ಪಿಸಿಆರ್ ಪರೀಕ್ಷೆಗೆ ಕಳುಹಿಸಲಾಗಿದೆ.
“ಮುಖ್ಯ ಕೋಚ್ ರವಿ ಶಾಸ್ತ್ರಿ ಅವರಿಗೆ ಲ್ಯಾಟರಲ್ ಫ್ಲೋ ಟೆಸ್ಟ್ (Rapid Antigen Test) ನಲ್ಲಿ ಪಾಸಿಟಿವ್ ರಿಪೋರ್ ಬಂದಿರುವುದರಿಂದ ಮುನ್ನೆಚ್ಚರಿಕೆಯಾಗಿ ರವಿಶಾಸ್ತ್ರ ಹಾಗೂ ಬೌಲಿಂಗ್ ಕೋಚ್ ಬಿ ಅರುಣ್, ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್, ಫಿಸಿಯೋ ಥೆರಪಿಸ್ಟ್ ನಿತಿನ್ ಪಟೇಲ್ ಅವರನ್ನ ಬಿಸಿಸಿಐನ ವೈದ್ಯಕೀಯ ತಂಡ ಐಸೋಲೇಶನ್ನಲ್ಲಿ ಇಟ್ಟಿದ್ದಾರೆ” ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: Tokyo Paralympics- ಪ್ಯಾರಾಲಿಂಪಿಕ್ಸ್ನಲ್ಲಿ ಭಾರತಕ್ಕೆ 5ನೇ ಚಿನ್ನ; ಕೃಷ್ಣಾ ನಾಗರ್ ಅಮೋಘ ಪ್ರದರ್ಶನ
ಈಗ ನಡೆಯುತ್ತಿರುವ ನಾಲ್ಕನೇ ಕ್ರಿಕೆಟ್ ಟೆಸ್ಟ್ ಪಂದ್ಯ ಮುಗಿದ ಬಳಿಕ ಮಂಗಳವಾರದಂದು ಭಾರತ ಕ್ರಿಕೆಟ್ ತಂಡ ಮ್ಯಾಂಚೆಸ್ಟರ್ಗೆ ತೆರಳಲಿದೆ. ಒಂದು ವೇಳೆ ಈಗ ಐಸೋಲೇಶನ್ನಲ್ಲಿರುವ ರವಿಶಾಸ್ತ್ರಿ ಹಾಗೂ ನಾಲ್ವರಿಗೆ ಆರ್ಟಿ ಪಿಸಿಆರ್ ಪರೀಕ್ಷೆಯಲ್ಲಿ ಪಾಸಿಟಿವ್ ದೃಢಪಟ್ಟರೆ 10 ದಿನ ರೂಮ್ ಐಸೋಲೇಶನ್ನಲ್ಲಿ ಇರಬೇಕಾಗುತ್ತದೆ. ಎರಡು ಬಾರಿ ಆರ್ ಟಿ ಪಿಸಿಆರ್ ಪರೀಕ್ಷೆಗಳಲ್ಲಿ ನೆಗಟಿವ್ ರಿಪೋರ್ಟ್ ಬರುವವರೆಗೂ ಅವರು ಐಸೋಲೇಶನ್ನಲ್ಲಿ ಇರಬೇಕಾಗುತ್ತದೆ.
“ಈ ನಾಲ್ವರಿಗೆ ಆರ್ಟಿ ಪಿಸಿಆರ್ ಟೆಸ್ಟ್ ಕೊಡಲಾಗಿದೆ. ವೈದ್ಯಕೀಯ ತಂಡದಿಂದ ಸೂಚನೆ ಬರುವವರೆಗೂ ಈ ನಾಲ್ವರು ಭಾರತ ತಂಡದ ಜೊತೆ ಪ್ರಯಾಣಿಸದೇ ಲಂಡನ್ನಲ್ಲೇ ತಂಡದ ಹೋಟೆಲ್ನಲ್ಲಿ ಇರಲಿದ್ದಾರೆ” ಎಂದು ಜಯ್ ಶಾ ಹೇಳಿದ್ಧಾರೆ.
ಭಾರತ ತಂಡದ ಆಟಗಾರರೆಲ್ಲರೂ ನಿನ್ನೆ ಸಂಜೆ ರ್ಯಾಪಿಡ್ ಟೆಸ್ಟ್ ಮಾಡಿಸಿದ್ದಾರೆ. ಇವತ್ತು ಬೆಳಗ್ಗೆಯೂ ಮತ್ತೊಮ್ಮೆ ಪರೀಕ್ಷೆ ಮಾಡಿಸಿದ್ದಾರೆ. ಎಲ್ಲರಿಗೂ ನೆಗಟಿವ್ ಬಂದಿದೆ. ಹೀಗಾಗಿ, ಇವತ್ತಿನ ನಾಲ್ಕನೇ ದಿನದ ಆಟದಲ್ಲಿ ಪಾಲ್ಗೊಳ್ಳಲು ಆಟಗಾರರಿಗೆ ಅನುಮತಿ ನೀಡಲಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ತಿಳಿಸಿದ್ಧಾರೆ.
ಭಾರತ ತಂಡ ಇದ್ದ ಹೋಟೆಲ್ನಲ್ಲಿ ರವಿಶಾಸ್ತ್ರಿ ಅವರಿಂದ ಪುಸ್ತಕ ಬಿಡುಗಡೆ ಸಮಾರಂಭ ನಡೆದಿತ್ತು. ಬ್ರಿಟನ್ ದೇಶದಲ್ಲಿ ಕಾರ್ಯಕ್ರಮ ಆಯೋಜನೆಯಲ್ಲಿ ಕಟ್ಟುನಿಟ್ಟಿನ ಕೋವಿಡ್ ನಿಯಮಗಳು ಇಲ್ಲ. ಹೀಗಾಗಿ, ಹೊರಗಿನಿಂದ ಅತಿಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇಲ್ಲಿಯೇ ರವಿಶಾಸ್ತ್ರಿ ಅವರಿಗೆ ಸೋಂಕು ತಗುಲಿರಬಹುದು ಎಂದು ಶಂಕಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ