ದಿಂಡಿಗಲ್ (ಡಿ. 12): ಇಲ್ಲಿನ ಎನ್ಪಿಆರ್ ಕ್ರೀಡಾಂಗಣದಲ್ಲಿ ನಡೆದ ತಮಿಳುನಾಡು ವಿರುದ್ಧದ ರಣಜಿ ಪಂದ್ಯದಲ್ಲಿ ಕರ್ನಾಟಕ ತಂಡ ರೋಚಕ ಜಯ ಸಾಧಿಸಿದೆ. ಕೃಷ್ಣಪ್ಪ ಗೌತಮ್ ಸ್ಪಿನ್ ದಾಳಿಗೆ ನಲುಗಿದ ತಮಿಳುನಾಡು ತಂಡ ಕರ್ನಾಟಕ ನೀಡಿದ್ದ ಟಾರ್ಗೆಟ್ ಬೆನ್ನಟ್ಟುವಲ್ಲಿ ವಿಫಲವಾಯಿತು. ಪರಿಣಾಮ ರಾಜ್ಯ ತಂಡ 26 ರನ್ಗಳ ಜಯ ಸಾಧಿಸಿತು.
ರಾಜ್ಯ ತಂಡ ನೀಡಿದ್ದ 181 ರನ್ಗಳ ಟಾರ್ಗೆಟ್ ಬೆನ್ನಟ್ಟಿದ ತಮಿಳುನಾಡು ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಸಾಗಿತು. ಮೊದಲ ಇನ್ನಿಂಗ್ಸ್ನಲ್ಲಿ ತಂಡಕ್ಕೆ ಆಸರೆಯಾಗಿದ್ದ ದಿನೇಶ್ ಕಾರ್ತಿಕ್ ಕೂಡ ವೈಫಲ್ಯ ಅನುಭವಿಸಿದರು.
ಅಭಿನವ್ ಮುಕುಂದ್ 42 ರನ್ ಗಳಿಸಿದರೆ, ಮುರಳಿ ವಿಜಯ್ 15 ರನ್ ಗಳಿಸಿ ರನೌಟ್ಗೆ ಬಲಿಯಾದರು. ಅಪರಜಿತ್ ಸೊನ್ನೆ ಸುತ್ತಿದರೆ, ಆರ್ ಅಶ್ವಿನ್ ಕೇವಲ 2 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ನಾಯಕ ವಿಜಯ್ ಶಂಕರ್(5) ಹಾಗೂ ದಿನೇಶ್ ಕಾರ್ತಿಕ್(17) ತಂಡಕ್ಕೆ ಆಸರೆಯಾಗಿ ನಿಲ್ಲಲಿಲ್ಲ.
ಕೊಹ್ಲಿ, ರೋಹಿತ್, ರಾಹುಲ್ರನ್ನು ಹಿಂದಿಕ್ಕಿ ಪಾಕ್ ಆಟಗಾರ ನಂಬರ್ 1
ಆದರೆ, ಕೊನೆ ಹಂತದಲ್ಲಿ ದಿನದಾಟದ ಅಂತ್ಯದ ವೇಳೆ ಕ್ರೀಸ್ ಕಚ್ಚಿ ನಿಂತ ಮುರುಗನ್ ಅಶ್ವಿನ್ ಪಂದ್ಯವನ್ನು ರೋಚಕ ಘಟ್ಟದತ್ತ ತಂದಿಟ್ಟರು. ಓವರ್ ಅಂತ್ಯವಾದರೂ ಕೊಂಚಹೊತ್ತು ಪಂದ್ಯವನ್ನು ಮುಂದುವರೆಸಲಾಯಿತು. ಆದರೆ, ಗೌತಮ್ ಅವರು ಅಂತಿಮವಾಗಿ ವಿಗ್ನೀಶ್ರನ್ನು ಔಟ್ ಮಾಡುವ ಮೂಲಕ ತಮಿಳುನಾಡು ಸೋಲು ಕಂಡಿತು. ಮುರುಗನ್ 77 ಎಸೆತಗಳಲ್ಲಿ 23 ರನ್ ಗಳಿಸಿ ಅಜೇಯರಾಗಿ ಉಳಿದರು.
ತಮಿಳುನಾಡು 154 ರನ್ಗೆ ಆಲೌಟ್ ಆಯಿತು. ಕರ್ನಾಟಕ ಪರ ಗೌತಮ್ 8 ವಿಕೆಟ್ ಕಿತ್ತು ಮಿಂಚಿದರೆ, ವಿ ಕೌಶಿಕ್ 1 ವಿಕೆಟ್ ಪಡೆದರು.
ಕರ್ನಾಟಕ ತನ್ನ ಮುಂದಿನ ಪಂದ್ಯವನ್ನು ಡಿ. 17 ರಿಂದ ಉತ್ತರ ಪ್ರದೇಶ ವಿರುದ್ಧ ಆಡಲಿದೆ. ಈ ಪಂದ್ಯ ಹುಬ್ಬಳಿಯಲ್ಲಿ ನಡೆಯಲಿದೆ.
IPL 2020 Auction: ಐಪಿಎಲ್ ಹರಾಜಿನಲ್ಲಿ ಒಟ್ಟು ಎಷ್ಟು ಆಟಗಾರರು?; ಇಲ್ಲಿದೆ ಸಂಪೂರ್ಣ ಮಾಹಿತಿ
ಇದಕ್ಕೂ ಮೊದಲು ಮೊದಲು ಬ್ಯಾಟ್ ಮಾಡಿದ ಕರ್ನಾಟಕ ದೇವದತ್ ಪಡಿಕ್ಕಲ್ ಅವರ 78, ಪವನ್ ದೇಶಪಾಂಡೆ 65 ಹಾಗೂ ಕೃಷ್ಟಪ್ಪ ಗೌತಮ್ 51 ರನ್ಗಳ ನೆರವಿನಿಂದ 110.4 ಓವರ್ನಲ್ಲಿ 336 ರನ್ಗೆ ಆಲೌಟ್ ಆಯಿತು. ತಮಿಳುನಾಡು ಪರ ಆರ್. ಅಶ್ವಿನ್ 4 ವಿಕೆಟ್ ಕಿತ್ತರೆ, ವಿಗ್ನೇಶ್ ಹಾಗೂ ಸಿದ್ಧಾರ್ಥ್ ತಲಾ 2 ವಿಕೆಟ್ ಪಡೆದರು.
ಬಳಿಕ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ತಮಿಳುನಾಡು ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಸಾಗಿತು. ಕ್ರೀಸ್ ಕಚ್ಚಿ ಆಡುವಲ್ಲಿ ವಿಫಲವಾದ ಬ್ಯಾಟ್ಸ್ಮನ್ಗಳು ಕೃಷ್ಣಪ್ಪ ಗೌತಮ್ ಬೌಲಿಂಗ್ ದಾಳಿಗೆ ನಲುಗಿ ಹೋದರು.
ತಮಿಳುನಾಡು ಪರ ದಿನೇಶ್ ಕಾರ್ತಿಕ್ ಶತಕ ಸಿಡಿಸಿ ಏಕಾಂಗಿ ಹೋರಾಟ ನಡೆಸಿದ್ದು ಬಿಟ್ಟರೆ, ಅಭಿಮನವ್ ಮುಕುಂದ್ 47 ರನ್ ಗಳಿಸಿದ್ದೇ ಹೆಚ್ಚು. ತಮಿಳುನಾಡು 307 ರನ್ಗೆ ಸರ್ವಪತನ ಕಂಡಿತು. ಕಾರ್ತಿಕ್ 235 ಎಸೆತಗಳಲ್ಲಿ 16 ಬೌಂಡರಿ ಬಾರಿಸಿ 113 ರನ್ ಕಲೆಹಾಕಿದರು.
Ranji Trophy: ಅಸ್ಸಾಂನಲ್ಲಿ ಬಿಗುವಿನ ಪರಿಸ್ಥಿತಿ; ರಣಜಿ ಟ್ರೋಫಿ ಪಂದ್ಯಗಳು ರದ್ದು
29 ರನ್ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು.ಆರ್ ಅಶ್ವಿನ್ ಹಾಗೂ ವಿಗ್ನೇಶ್ ಬೌಲಿಂಗ್ ದಾಳಿಯಿಂದ ಕರ್ನಾಟಕ ಕೇವಲ 151 ರನ್ಗೆ ಸರ್ವಪತನ ಕಂಡಿತು. ರಾಜ್ಯ ತಂಡದ ಪರ ಪಡಿಕ್ಕಲ್ 39 ರನ್ ಗಳಿಸಿದ್ದೇ ಹೆಚ್ಚಾಗಿತ್ತು. ಅಶ್ವಿನ್ 4 ಹಾಗೂ ವಿಗ್ನೇಶ್ 3 ವಿಕೆಟ್ ಕಿತ್ತರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ