Video: ಅಂಪೈರ್ ನೀಡಿದ ತೀರ್ಪು: ಚರ್ಚೆಗೆ ಕಾರಣವಾಯ್ತು ಮತ್ತೊಂದು ಕ್ಯಾಚ್..!

Kyle Jamieson

Kyle Jamieson

ಇದೀಗ ಈ ವಿಡಿಯೋ ನೋಡಿದ ಕ್ರಿಕೆಟ್ ಪ್ರೇಮಿಗಳು ಭಾರತ-ಇಂಗ್ಲೆಂಡ್ ನಡುವಣ ಪಂದ್ಯದ ವೇಳೆ ಅಂಪೈರ್​ಗಳೇಕೆ ಇಂತಹ ನಿರ್ಧಾರ ತೆಗೆದುಕೊಳ್ಳಲಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ. ಅಲ್ಲದೆ ಕಳಪೆ ತೀರ್ಪಿನ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

  • Share this:

    ಕ್ರಿಕೆಟ್ ಅಂಗಳದಲ್ಲಿ ಇದೀಗ ಅಂಪೈರ್​ ನೀಡುತ್ತಿರುವ ತೀರ್ಪುಗಳು ಭಾರೀ ಚರ್ಚೆಗೆ ಕಾರಣವಾಗುತ್ತಿದೆ. ಇತ್ತೀಚೆಗಷ್ಟೇ ನಡೆದ ಭಾರತ-ಇಂಗ್ಲೆಂಡ್​ ನಡುವಣ 4ನೇ ಟಿ20 ಪಂದ್ಯದಲ್ಲಿ ಡೇವಿಡ್ ಮಲಾನ್ ಹಿಡಿದ ಕ್ಯಾಚ್​ನ ಅಂಪೈರ್ ತೀರ್ಪು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಸೂರ್ಯಕುಮಾರ್ ಬಾರಿಸಿದ ಚೆಂಡನ್ನು ಓಡಿ ಬಂದು ಹಿಡಿಯತ್ನಿಸಿದ ಮಲಾನ್ ಚೆಂಡನ್ನು ನೆಲಕ್ಕೆ ತಾಗಿಸಿದ್ದರು. ಇದಾಗ್ಯೂ ಫೀಲ್ಡ್ ಅಂಪೈರ್ ಸಾಫ್ಟ್ ಸಿಗ್ನಲ್​ನಲ್ಲಿ ಔಟ್ ಎಂದು ತೀರ್ಪು ನೀಡಿದ್ದರು. ಇದನ್ನು ಪರಿಶೀಲಿಸಿದ ಬಳಿಕ ಮೂರನೇ ಅಂಪೈರ್ ಔಟ್ ಕೂಡ ಔಟ್ ಎಂದಿದ್ದರು. ಇದರ ಬೆನ್ನಲ್ಲೇ ವಾಷಿಂಗ್ಟನ್ ಸುಂದರ್ ಬಾರಿಸಿದ ಚೆಂಡನ್ನು ಬೌಂಡರಿ ಲೈನ್​​ನಲ್ಲಿ ಆದಿಲ್ ರಶೀದ್ ಕ್ಯಾಚ್ ಹಿಡಿದಿದ್ದರು. ಆದರೆ ರೀಪ್ಲೇನಲ್ಲಿ ರಶೀದ್ ಕಾಲು ಬೌಂಡರಿ ಲೈನ್​ಗೆ ತಾಗಿರುವುದು ಸ್ಪಷ್ಟವಾಗಿತ್ತು. ಇದಾಗ್ಯೂ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದರು.


    ಈ ಎರಡು ವಿವಾದಾತ್ಮಕ ತೀರ್ಪಿನ ಬೆನ್ನಲ್ಲೇ ಇದೀಗ ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ನಡುವಣ 2ನೇ ಏಕದಿನ ಪಂದ್ಯದಲ್ಲಿ ನೀಡಲಾದ ತೀರ್ಪು ಎಲ್ಲರ ಗಮನ ಸೆಳೆಯುತ್ತಿದೆ. ಪಂದ್ಯದ 15ನೇ ಓವರ್​ನಲ್ಲಿ ಕೈಲ್ ಜೇಮಿಸನ್ ಎಸೆತವನ್ನು ಬಾಂಗ್ಲಾದೇಶ ಆರಂಭಿಕ ಆಟಗಾರ ತಮೀಮ್ ಇಕ್ಬಾಲ್ ನೇರವಾಗಿ ಬಾರಿಸಿದ್ದರು. ಅಷ್ಟೇ ವೇಗದಲ್ಲಿ ಡೈವ್ ಹೊಡೆಯುವ ಮೂಲಕ ಜೇಮಿಸನ್ ಚೆಂಡನ್ನು ಅತ್ಯುತ್ತಮವಾಗಿ ಕೈಯಲ್ಲಿ ಬಂಧಿಸಿದ್ದರು. ಇದೇ ವೇಳೆ ಫೀಲ್ಡ್ ಅಂಪೈರ್ ಔಟ್ ನೀಡಿದ್ದಾರೆ.


    ಆದರೆ ಕ್ಯಾಚ್​ನ್ನು ಪರಿಶೀಲಿಸಿದ ಮೂರನೇ ಅಂಪೈರ್​ ತೀರ್ಪನ್ನು ತಡೆ ಹಿಡಿದಿದ್ದಾರೆ. ಹಲವಾರು ಬಾರಿ ಝೂಮ್ ಮಾಡಿ ವೀಕ್ಷಿಸಿದ ಬಳಿಕ ಟಿವಿ ಅಂಪೈರ್ ಚೆಂಡು ನೆಲಕ್ಕೆ ತಾಗಿದೆ ಎಂದು ತೀರ್ಪು ನೀಡಿದ್ದಾರೆ. ಅಲ್ಲದೆ ಆನ್​-ಫೀಲ್ಡ್ ಅಂಪೈರ್​ಗೆ ತಮ್ಮ ನಿರ್ಧಾರವನ್ನು ಬದಲಿಸುವಂತೆ ತಿಳಿಸಿದ್ದಾರೆ. ಮೇಲ್ನೋಟಕ್ಕೆ ಇದೇ ಮಾದರಿಯಲ್ಲೇ ಸೂರ್ಯಕುಮಾರ್ ಕೂಡ ಔಟ್ ಆಗಿದ್ದರು.


    ಡೇವಿಡ್ ಮಲಾನ್ ಕ್ಯಾಚ್ ಹಿಡಿದಾಗ ಚೆಂಡು ನೆಲಕ್ಕೆ ತಾಗಿರುವುದು ಟಿವಿ ಅಂಪೈರ್​ಗೆ ಸ್ಪಷ್ಟವಾಗಿ ಗೋಚರಿಸಿತ್ತು. ಆದರೆ ಆನ್​-ಫೀಲ್ಡ್ ಅಂಪೈರ್ ಸಾಫ್ಟ್ ಸಿಗ್ನಲ್ ಔಟ್ ನೀಡಿದ್ದರಿಂದ ಅದೇ ತೀರ್ಪನ್ನು ಮೂರನೇ ಅಂಪೈರ್ ಮುಂದುವರೆಸಿದ್ದರು. ಆದರೆ ನ್ಯೂಜಿಲೆಂಡ್​-ಬಾಂಗ್ಲಾದೇಶ ನಡುವಣ ಪಂದ್ಯದಲ್ಲಿ ಕೈಲ್ ಜೇಮಿಸನ್ ಕ್ಯಾಚ್​ ಹಿಡಿದ ಸಂಧರ್ಭದಲ್ಲಿ ಚೆಂಡಿನ ಕೆಲ ಭಾಗ ನೆಲಕ್ಕೆ ತಾಗಿದೆ ಎಂದು ಮೂರನೇ ಅಂಪೈರ್ ನಾಟೌಟ್ ಎಂದಿದ್ದಾರೆ. ಅಲ್ಲದೆ ಫೀಲ್ಡ್ ಅಂಪೈರ್ ಸಾಫ್ಟ್​ ಸಿಗ್ನಲ್ ತೀರ್ಪನ್ನು​ ಬದಲಿಸುವಂತೆ ತಿಳಿಸಿದ್ದಾರೆ.



    ಇದೀಗ ಈ ವಿಡಿಯೋ ನೋಡಿದ ಕ್ರಿಕೆಟ್ ಪ್ರೇಮಿಗಳು ಭಾರತ-ಇಂಗ್ಲೆಂಡ್ ನಡುವಣ ಪಂದ್ಯದ ವೇಳೆ ಅಂಪೈರ್​ಗಳೇಕೆ ಇಂತಹ ನಿರ್ಧಾರ ತೆಗೆದುಕೊಳ್ಳಲಾಗಲಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ. ಅಲ್ಲದೆ ಕಳಪೆ ತೀರ್ಪಿನ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    Published by:zahir
    First published: