ಕೃಣಾಲ್ ಪಾಂಡ್ಯ ವಿರುದ್ಧ ಗಂಭೀರ ಆರೋಪ: ಟೂರ್ನಿಯಿಂದ ಹಿಂದೆ ಸರಿದ ದೀಪಕ್ ಹೂಡ

Krunal Pandya-Deepak Hooda

Krunal Pandya-Deepak Hooda

Deepak Hooda: ನನ್ನ ಕ್ರಿಕೆಟಿಂಗ್ ವೃತ್ತಿಜೀವನದಲ್ಲಿ ಇಲ್ಲಿಯವರೆಗೆ ಇಂತಹ ಕೆಟ್ಟ ವಾತಾವರಣವನ್ನು ನಾನು ನೋಡಿಲ್ಲ. ಇದರಿಂದ ನಾನು ನಿರಾಶೆಗೊಂಡಿದ್ದು, ಖಿನ್ನತೆಗೆ ಒಳಗಾಗಿದ್ದೇನೆ.

  • Share this:

    ಒಂದೆಡೆ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ವೇಳೆ ಪ್ರೇಕ್ಷಕರು ಟೀಮ್ ಇಂಡಿಯಾ ಆಟಗಾರರನ್ನು ಜನಾಂಗೀಯವಾಗಿ ನಿಂದಿಸಿರುವುದು ದೊಡ್ಡ ಸುದ್ದಿಯಾಗಿದೆ. ಮತ್ತೊಂದೆಡೆ ದೇಶೀಯ ಕ್ರಿಕೆಟ್​ನಲ್ಲೂ ಆಟಗಾರರೊಬ್ಬರು ಸಹ ಆಟಗಾರನನ್ನು ನಿಂದಿಸಿರುವ ಘಟನೆ ನಡೆದಿದೆ. ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿ ಆರಂಭದ ಬೆನ್ನಲ್ಲೇ ವಿವಾದವೊಂದು ಹುಟ್ಟಿಕೊಂಡಿದೆ. ಅದು ಕೂಡ ಒಂದೇ ತಂಡದ ಇಬ್ಬರು ಆಟಗಾರರ ನಡುವೆ ಎಂಬುದು ವಿಶೇಷ.


    ಈ ವಿವಾದ ಹುಟ್ಟಿಕೊಂಡಿರುವುದು ಬರೋಡಾ ತಂಡದ ನಾಯಕ ಕೃಣಾಲ್ ಪಾಂಡ್ಯ ಹಾಗೂ ಉಪನಾಯಕ ದೀಪಕ್ ಹೂಡ ನಡುವೆ. ಉತ್ತರಾಖಂಡ್ ವಿರುದ್ಧದ ಪಂದ್ಯಕ್ಕೂ ಮುನ್ನ ನಡೆದ ಅಭ್ಯಾಸ ವೇಳೆ ಕೃಣಾಲ್ ತಮ್ಮನ್ನು ಕೆಟ್ಟದಾಗಿ ನಿಂದಿಸಿದ್ದಾರೆ ಎಂದು ಹೂಡ ಆರೋಪಿಸಿದ್ದಾರೆ. ಇದರಿಂದ ಮನ ನೊಂದು ಟೂರ್ನಿಯಿಂದ ಹೊರ ನಡೆಯುವ ನಿರ್ಧಾರ ತೆಗೆದುಕೊಂಡಿದ್ದಾರೆ.


    ಈ ಬಗ್ಗೆ ದೀಪಕ್ ಹೂಡ ಬರೋಡಾ ಕ್ರಿಕೆಟ್ ಅಸೋಸಿಯೇಷನ್​ಗೆ ಮೇಲ್ ಮಾಡಿದ್ದು, ಟೂರ್ನಿಯಿಂದ ಹಿಂದೆ ಸರಿಯುತ್ತಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ ನನ್ನ ಈ ನಿರ್ಧಾರಕ್ಕೆ ಕಾರಣ ತಂಡದ ನಾಯಕ ಕೃಣಾಲ್ ಪಾಂಡ್ಯ ಎಂದಿದ್ದಾರೆ. ವಡೋದರಾದ ರಿಲಯನ್ಸ್ ಕ್ರೀಡಾಂಗಣದಲ್ಲಿ ಬರೋಡಾ ತಂಡ ಅಭ್ಯಾಸ ನಡೆಸುತ್ತಿದ್ದು, ಈ ವೇಳೆ ಪಾಂಡ್ಯ ತಂಡದ ಆಟಗಾರರ ಮುಂದೆ ನನ್ನ ವಿರುದ್ಧ ಅಶ್ಲೀಲ ಪದ ಬಳಸಿ ನಿಂದಿಸಿದ್ದಾರೆ ಎಂದು ದೀಪಕ್ ಹೂಡಾ ತಿಳಿಸಿದ್ದಾರೆ.


    ನಾನು ನೆಟ್​ನಲ್ಲಿ ಅಭ್ಯಾಸ ಮಾಡುತ್ತಿದ್ದೆ. ಮುಖ್ಯ ಕೋಚ್ ಪ್ರಭಾಕರ್ ಅವರ ಅನುಮತಿಯೊಂದಿಗೆ ಮುಂದಿನ ಪಂದ್ಯಕ್ಕಾಗಿ ತಯಾರಿ ಮಾಡುತ್ತಿದ್ದೆ. ಈ ವೇಳೆ ಬಂದ ಕೃಣಾಲ್ ಪಾಂಡ್ಯ ನನ್ನೊಂದಿಗೆ ಅಶ್ಲೀಲ ಭಾಷೆ ಪ್ರಯೋಗಿಸಿದ್ದಾರೆ. ಇದೇ ವೇಳೆ ನಾನು ಕೋಚ್ ಅನುಮತಿಯೊಂದಿಗೆ ಅಭ್ಯಾಸ ನಡೆಸುತ್ತಿರುವುದಾಗಿ ತಿಳಿಸಿದ್ದೇನೆ. 'ನಾನು ತಂಡದ ಕ್ಯಾಪ್ಟನ್, ಮುಖ್ಯ ಕೋಚ್ ಯಾರು? ಬರೋಡಾ ತಂಡ ನಾ ಹೇಳಿದಂತೆ ಕೇಳಬೇಕು ಎಂದು ಪಾಂಡ್ಯ ತಮ್ಮ ದಾದಾಗಿರಿ ತೋರಿಸಿ, ನನ್ನ ಅಭ್ಯಾಸವನ್ನು ನಿಲ್ಲಿಸಿದರು.


    ಅಲ್ಲದೆ ಇನ್ನು ನಿನ್ನ ಬರೋಡಾ ಪರ ಆಡದಂತೆ ತಡೆಯುವುದಾಗಿ ಪಾಂಡ್ಯ ಬೆದರಿಕೆ ಹಾಕಿದರು. ನನ್ನ ಕ್ರಿಕೆಟಿಂಗ್ ವೃತ್ತಿಜೀವನದಲ್ಲಿ ಇಲ್ಲಿಯವರೆಗೆ ಇಂತಹ ಕೆಟ್ಟ ವಾತಾವರಣವನ್ನು ನಾನು ನೋಡಿಲ್ಲ. ಇದರಿಂದ ನಾನು ನಿರಾಶೆಗೊಂಡಿದ್ದು, ಖಿನ್ನತೆಗೆ ಒಳಗಾಗಿದ್ದೇನೆ. ಹಾಗೆಯೇ ಒತ್ತಡದಲ್ಲಿರುವ ಕಾರಣ ಟೂರ್ನಿಯನ್ನು ತೊರೆಯುವ ನಿರ್ಧಾರ ಮಾಡಿರುವುದಾಗಿ ದೀಪಕ್ ಹೂಡ ತಮ್ಮ ಮೇಲ್​ನಲ್ಲಿ ತಿಳಿಸಿದ್ದಾರೆ.

    Published by:zahir
    First published: