ಚೆನ್ನೈ (ಮೇ. 07): ಐಪಿಎಲ್ 12ನೇ ಆವೃತ್ತಿ ಅಂತಿಮ ಘಟ್ಟಕ್ಕೆ ಬಂದು ತಲುಪಿದ್ದು, ಲೀಗ್ ಹಂತದ ಎಲ್ಲ ಪಂದ್ಯಗಳು ಈಗಾಗಲೇ ಮುಕ್ತಾಯಗೊಂಡಿವೆ. ಇಂದು ಮೊದಲ ಕ್ವಾಲಿಫೈಯರ್ ಪಂದ್ಯ ನಡೆಯಲಿದ್ದು, ಎಂ ಚಿದಂಬರಂ ಕ್ರೀಡಾಂಗಣ ಸಜ್ಜಾಗಿದೆ. ಮೊದಲ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ತಂಡ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ಗೆ ಸವಾಲೊಡ್ಡಲಿದೆ.
ಇಂದಿನ ಪಂದ್ಯದಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ಗೆ ಅರ್ಹತೆ ಪಡೆಯಲಿದೆ. ಸೋತ ತಂಡ 2ನೇ ಕ್ವಾಲಿಫೈಯರ್ನಲ್ಲಿ ಎಲಿಮಿನೇಟರ್ನಲ್ಲಿ ಗೆದ್ದ ತಂಡವನ್ನ ಎದುರಿಸಲಿದೆ. ಹೀಗಾಗಿ ಇಂದಿನ ಪಂದ್ಯ ಉಭಯ ತಂಡಗಳಿಗೆ ಬಹುಮುಖ್ಯ. ಆದರೆ, ಪಂದ್ಯ ಆರಂಭಕ್ಕೂ ಮುನ್ನವೇ ಸಿಎಸ್ಕೆ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ.
ಸಿಎಸ್ಕೆ ತಂಡದ ಪ್ರಮುಖ ಬ್ಯಾಟ್ಸ್ಮನ್ ಕೇದರ್ ಜಾಧವ್ ಭುಜದ ನೋವಿನಿಂದ ಬಳಲುತ್ತಿದ್ದು, ಐಪಿಎಲ್ನಿಂದ ಹೊರಗುಳಿದಿದ್ದಾರೆ. ಕಳೆದ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಚೆಂಡು ಬಡಿದ ಪರಿಣಾಮ ಎಡಭುಜದ ನೋವಿಗೆ ಒಳಗಾಗಿ ಜಾಧವ್ ಮೈದಾನ ತೊರೆದಿದ್ದರು. ಹೀಗಾಗಿ ಉಳಿದ ಪಂದ್ಯಗಳಿಗೆ ಜಾಧವ್ ಲಭ್ಯವಿರುವುದು ಅನುಮಾನ ಎಂದು ಹೇಳಲಾಗಿತ್ತು. ಸದ್ಯ ಅಧಿಕೃತವಾಗಿ ಈ ಮಾಹಿತಿ ಹೊರಬಿದ್ದಿದ್ದು, ಐಪಿಎಲ್ 12ನೇ ಆವೃತ್ತಿಯಿಂದ ಜಾಧವ್ಗೆ ವಿಶ್ರಾಂತಿ ನೀಡಲಾಗಿದೆ.
ಇದನ್ನೂ ಓದಿ: IPL 2019: ಕೊಹ್ಲಿ ಮೇಲಿನ ಕೋಪಕ್ಕೆ ಚಿನ್ನಸ್ವಾಮಿಯಲ್ಲಿ ಬಾಗಿಲು ಮುರಿದ ಅಂಪೈರ್
ಪ್ರಮುಖ ಹಂತದಲ್ಲೇ ಸ್ಟಾರ್ ಆಟಗಾರ ತಂಡ ತೊರೆದಿರುವುದು ಧೋನಿ ಪಡೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅಲ್ಲದೆ ಇವರ ಬದಲು ಯಾವ ಆಟಗಾರನನ್ನು ಕಣಕ್ಕಿಳಿಸುವುದು ಎಂಬ ಗೊಂದಲ ಮುಂದಾಗಿದೆ. ಮುರಳಿ ವಿಜಯ್ ಈ ಆವೃತ್ತಿಯಲ್ಲಿ ಕೇವಲ ಒಂದು ಪಂದ್ಯವನ್ನಷ್ಟೆ ಆಡಿದ್ದರು. ಜೊತೆಗೆ ಫಾರ್ಮ್ ವೈಫಲ್ಯ ಕೂಡ ಅನುಭವಿಸುತ್ತಿದ್ದಾರೆ. ಹೀಗಾಗಿ ಜಾಧವ್ ಜಾಗಕ್ಕೆ ಯಾವ ಆಟಗಾರನನ್ನು ಆಯ್ಕೆ ಮಾಡುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ