India's T20 World Cup Squad| ಟಿ20 ವಿಶ್ವಕಪ್ ತಂಡ ಘೋಷಣೆ; ಧವನ್, ಚಹಲ್ಗಿಲ್ಲ ಸ್ಥಾನ, ಅಶ್ವಿನ್, ವರುಣ್ಗೆ ಜಾಕ್ಪಾಟ್
ಇದೇ ಮೊದಲ ಬಾರಿಗೆ ವಿಶ್ವಕಪ್ ತಂಡದಲ್ಲಿ ಮತ್ತೋರ್ವ ಆಫ್ ಸ್ಪಿನ್ನರ್ ತಮಿಳುನಾಡು ಮೂಲದ ವರುಣ್ ಚಕ್ರವರ್ತಿ ಮತ್ತು ಮುಂಬೈ ಮೂಲದ ಲೆಗ್ ಸ್ಪಿನ್ನರ್ ರಾಹುಲ್ ಚಾಹರ್ಗೆ ಅವಕಾಶ ನೀಡಲಾಗಿದೆ.
ಮುಂಬೈ (ಸೆಪ್ಟೆಂಬರ್ 08); ಅಕ್ಟೋಬರ್-ನವೆಂಬರ್ನಲ್ಲಿ ನಡೆಯಲಿರುವ ಮಹತ್ವಾಕಾಂಕ್ಷೆಯ ಟಿ20 ವಿಶ್ವಕಪ್ಗೆ ಕೊನೆಗೂ ಭಾರತ ತಂಡವನ್ನು ಬಿಸಿಸಿಐ ಘೋಷಿಸಿದೆ. ಆದರೆ, 15 ಆಟಗಾರರ ಸ್ಕ್ವಾಡ್ನಲ್ಲಿ ಐಪಿಎಲ್ ಯಶಸ್ವಿ ಬ್ಯಾಟ್ಸ್ಮನ್ ಶಿಖರ್ ಧವನ್ ಮತ್ತು ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್ನನ್ನು ಹೊರಗಿಟ್ಟು ಅಚ್ಚರಿ ಮೂಡಿಸಿರುವ ಬಿಸಿಸಿಐ, 4 ವರ್ಷಗಳ ನಂತರ ಟಿ20 ತಂಡಕ್ಕೆ ಮತ್ತೆ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ರನ್ನು ಆಯ್ಕೆ ಮಾಡುವ ಮೂಲಕ ಮತ್ತೊಂದು ಅಚ್ಚರಿ ನೀಡಿದೆ.ಅಲ್ಲದೆ, ಇದೇ ಮೊದಲ ಬಾರಿಗೆ ವಿಶ್ವಕಪ್ ತಂಡದಲ್ಲಿ ಮತ್ತೋರ್ವ ಆಫ್ ಸ್ಪಿನ್ನರ್ ತಮಿಳುನಾಡು ಮೂಲದ ವರುಣ್ ಚಕ್ರವರ್ತಿ ಮತ್ತು ಮುಂಬೈ ಮೂಲದ ಲೆಗ್ ಸ್ಪಿನ್ನರ್ ರಾಹುಲ್ ಚಾಹರ್ಗೆ ಅವಕಾಶ ನೀಡಲಾಗಿದೆ.
ಇದಲ್ಲದೆ, ಶ್ರೇಯಸ್ ಅಯ್ಯರ್, ಶಾರ್ದೂಲ್ ಠಾಕೂರ್, ಮತ್ತು ದೀಪಕ್ ಚಹರ್ ಅವರನ್ನು ಸ್ಟ್ಯಾಂಡ್ ಬೈ ಆಟಗಾರರನ್ನಾಗಿ ಹೆಸರಿಸಲಾಗಿದೆ. 2017 ರಲ್ಲಿ ಕೊನೆಯದಾಗಿ ಟಿ20 ಪಂದ್ಯದಲ್ಲಿ ಕಾಣಿಸಿಕೊಂಡಿದ್ದ ರವಿಚಂದ್ರನ್ ಅಶ್ವಿನ್ ಮತ್ತೆ ಭಾರತ ತಂಡಕ್ಕಾಗಿ ಚುಟುಕು ಕ್ರಿಕೆಟ್ನಲ್ಲಿ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಈ ಆಯ್ಕೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಇನ್ನೂ ಶ್ರೀಲಂಕಾದಲ್ಲಿ ನಡೆದ ಟಿ 20 ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಯಜುವೇಂದ್ರ ಚಾಹಲ್ ಅವರನ್ನು ಹೊರಗಿಟ್ಟಿರುವುದು ಸಹ ಅಚ್ಚರಿಗೆ ಕಾರಣವಾಗಿದೆ. ಇಂಗ್ಲೆಂಡ್ ಮತ್ತು ಶ್ರೀಲಂಕಾ ವಿರುದ್ಧದ ಅದ್ಭುತ ಪ್ರದರ್ಶನ ನೀಡದ ಕಾರಣಕ್ಕೆ ಲೆಗ್ ಸ್ಪಿನ್ನರ್ ರಾಹುಲ್ ಚಹರ್ ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ಇದಲ್ಲದೆ, ಇಂದು ಪ್ರಕಟಿಸಿರುವ 15 ಜನರ ತಂಡದಲ್ಲಿ 5 ಜನ ಸ್ಪಿನ್ನರ್ಗಳಿಗೆ ಆದ್ಯತೆ ನೀಡಿರುವುದು ಮತ್ತೊಂದು ವಿಶೇಷ.
ಬ್ಯಾಟಿಂಗ್ ವಿಭಾಗದಲ್ಲಿ ಯಾವುದೇ ಅಚ್ಚರಿ ಇಲ್ಲದಿದ್ದರೂ, ಯಶಸ್ವಿ ಆರಂಭಿಕ ಆಟಗಾರ ಶಿಖರ್ ಧವನ್ ಅವರನ್ನು ತಂಡದಿಂದ ಹೊರಗಿಡಲಾಗಿದೆ. ಆದರೆ, ವಿಕೆಟ್ ಕೀಪರ್ ಬ್ಯಾಟ್ಸ್ಮನ್ಗಳಾಗಿ ಇಶಾನ್ ಕಿಶನ್ ಮತ್ತು ರಿಷಬ್ ಪಂತ್ ಅವರಿಗೆ 15 ಸದಸ್ಯರ ತಂಡದಲ್ಲಿ ಸ್ಥಾನ ನೀಡಲಾಗಿದೆ.
ವೇಗದ ಬೌಲಿಂಗ್ ವಿಭಾಗದಲ್ಲಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಭುವನೇಶ್ವರ್ ಕುಮಾರ್ ಪರಿಣಿತ ವೇಗದ ಬೌಲರ್ಗಳಾಗಿದ್ದು, ಪಾಂಡ್ಯ ನಾಲ್ಕನೇ ಸೀಮರ್ ಪಾತ್ರವನ್ನು ನಿರ್ವಹಿಸುವ ಸಾಧ್ಯತೆ ಇದೆ. ಪಾಂಡ್ಯರಲ್ಲದೆ, ಆಲ್ರೌಂಡರ್ ಕೋಟಾದಲ್ಲಿ ರವೀಂದ್ರ ಜಡೇಜಾ ಮತ್ತು ಅಕ್ಸರ್ ಪಟೇಲ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.