ಬೆಂಗಳೂರು (ಜ. 23): ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಟೆಸ್ಟ್ ಸರಣಿಗೆ ಗೆದ್ದು ಬೀಗಿ ತವರಿಗೆ ಬಂದಿಳಿದಿರುವ ಟೀಂ ಇಂಡಿಯಾ ಸದ್ಯ ಮತ್ತೊಂದು ದೊಡ್ಡ ಸರಣಿಗೆ ಸಜ್ಜಾಗುತ್ತಿದೆ. ಇಂಗ್ಲೆಂಡ್ ತಂಡ ಭಾರತ ಪ್ರವಾಸ ಕೈಗೊಳ್ಳುತ್ತಿದ್ದು, ಈ ಸುದೀರ್ಘ ಸರಣಿಯಲ್ಲಿ 4 ಟೆಸ್ಟ್ ಪಂದ್ಯ, 5 ಟಿ-20 ಪಂದ್ಯಗಳು ಮತ್ತು 3 ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಫೆಬ್ರವರಿ 5 ರಿಂದ ಚೆನ್ನೈನ ಎಂ. ಚಿದಂಬರಂ ಸ್ಟೇಡಿಯಂನಲ್ಲಿ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಆದರೆ, ಈ ಹೈವೋಲ್ಟೇಜ್ ಪಂದ್ಯ ವೀಕ್ಷಣೆಗೆ ಕಾದುಕುಳಿತಿದ್ದ ಅಭಿಮಾನಿಗಳಿಗೆ ಭಾರೀ ನಿರಾಸೆ ಉಂಟಾಗಿದೆ.
ಇದಕ್ಕೆ ಕಾರಣ ಏನೆಂದರೆ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಎರಡು ಟೆಸ್ಟ್ ಪಂದ್ಯಗಳು ಪ್ರೇಕ್ಷಕರಿಲ್ಲದೆ ಖಾಲಿ ಸ್ಟೇಡಿಯಂನಲ್ಲಿ ನಡೆಯಲಿವೆ ಎಂದು ತಮಿಳುನಾಡು ಕ್ರಿಕೆಟ್ ಸಂಸ್ಥೆ (ಟಿಎನ್ಸಿಎ) ಪ್ರಕಟಿಸಿದೆ.
IPL 2021: RCB ಕೈಬಿಟ್ಟ ಭಾರತೀಯ ಆಟಗಾರನ ಖರೀದಿಗೆ ಮುಂದಾದ CSK: ಯಾರು ಗೊತ್ತಾ?
“ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಮಾರ್ಗಸೂಚಿಯಂತೆ ಈ ತೀರ್ಮಾನ ಕೈಗೊಳ್ಳಲಾಗಿದೆ. ಕೊರೋನಾ ವೈರಸ್ ಭೀತಿಯಿಂದಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಈ ಮೊದಲೇ ಬಿಸಿಸಿಐ ಎಸ್ಒಪಿ ಸಿದ್ಧಪಡಿಸಿತ್ತು. ಬಿಸಿಸಿಐ ಮಾರ್ಗಸೂಚಿಯಂತೆ ಪ್ರೇಕ್ಷಕರಿಗೆ ಪಂದ್ಯ ವೀಕ್ಷಿಸಲು ಅನುಮತಿ ನೀಡಲಾಗುತ್ತಿಲ್ಲ” ಎಂದು ಟಿಎನ್ಸಿಎ ಕಾರ್ಯದರ್ಶಿ ಆರ್.ಎಸ್ ರಾಮಸ್ವಾಮಿ ತಿಳಿಸಿದ್ದಾರೆ.
ಕೊರೋನಾ ವೈರಸ್ ಪ್ರಕರಣಗಳು ಭಾರತದಲ್ಲಿ ಗಣನೀಯ ಮಟ್ಟದಲ್ಲಿ ಕಡಿಮೆ ಆಗದ ಕಾರಣ ಇನ್ನೂ ವೀಕ್ಷಕರ ಪ್ರವೇಶಕ್ಕೆ ರಾಜ್ಯಗಳ ಆಡಳಿತ ಸರ್ಕಾರ ಅವಕಾಶ ನೀಡುತ್ತಿಲ್ಲ. ಆದರೆ, ನಂತರದ ಪಂದ್ಯಗಳಿಗೆ ಪ್ರೇಕ್ಷಕರು ಮೈದಾನಕ್ಕೆ ಬಂದು ಪಂದ್ಯ ವೀಕ್ಷಿಸಬಹುದೆ ಎಂಬ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ.
ಇನ್ನೂ ಇಂಗ್ಲೆಂಡ್ ಸರಣಿಗೆ ಮುಂಚಿತವಾಗಿ ಭಾರತ ತಂಡದ ಆಟಗಾರರು ಒಂದು ವಾರಗಳ ಕಾಲ ಕ್ಯಾರಂಟೈನ್ನಲ್ಲಿ ಕಳೆಯಲಿದ್ದು, ಈ ಸಂದರ್ಭದಲ್ಲಿ ಅವರು ಇಂಗ್ಲೆಂಡ್ ವಿರುದ್ಧ ತಮ್ಮ ಮಾರ್ಗವನ್ನು ಯೋಜಿಸಲಿದ್ದಾರೆ ಎಂದು ತಂಡದ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.
Mohammed Siraj: ಭಾರತಕ್ಕೆ ಬಂದ ಬೆನ್ನಲ್ಲೇ ದೊಡ್ಡ ಕಾರು ಖರೀದಿ ಮಾಡಿದ ಮೊಹಮ್ಮದ್ ಸಿರಾಜ್
ಫೆಬ್ರವರಿ 5 ರಿಂದ ಚೆನ್ನೈನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ಮೊದಲ ಟೆಸ್ಟ್ ಪಂದ್ಯ ನಡೆಯಲಿದ್ದು, 13 ರಿಂದ 17 ರ ವರೆಗೆ 2ನೇ ಪಂದ್ಯ ನಡೆಯಲಿದೆ. ಫೆಬ್ರವರಿ 24 ರಿಂದ 28 ವರೆಗೆ ಅಹಮದಾವಾದ್ನಲ್ಲಿ 3ನೇ ಟೆಸ್ಟ್ ಮತ್ತು ಮಾರ್ಚ್ 4 ರಿಂದ 8 ವರೆಗೆ ಅಂತಿಮ ಟೆಸ್ಟ್ ಪಂದ್ಯ ನಡೆಯಲಿದೆ. ನಂತರ ಅಹಮದಾಬಾದ್ನಲ್ಲಿ ಐದು ಪಂದ್ಯಗಳ ಟಿ-20 ಸರಣಿ ಮತ್ತು ಪುಣೆಯಲ್ಲಿ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ.
ಆರಂಭಿಕ 2 ಪಂದ್ಯಗಳಿಗೆ ಭಾರತ ಟೆಸ್ಟ್ ತಂಡ:
ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಶುಭ್ಮನ್ ಗಿಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ರಿಷಭ್ ಪಂತ್, ವೃದ್ಧಿಮಾನ್ ಸಹಾ, ಹಾರ್ದಿಕ್ ಪಾಂಡ್ಯ, ಕೆ. ಎಲ್ ರಾಹುಲ್, ಜಸ್ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ, ಮೊಹಮ್ಮದ್ ಸಿರಾಜ್, ಆರ್. ಅಶ್ವಿನ್, ಶಾರ್ದುಲ್ ಠಾಕೂರ್, ಕುಲ್ದೀಪ್ ಯಾದವ್, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್.
IPL 2021 Auction : ಈ ದಿನದಂದು ನಡೆಯಲಿದೆ ಬಹುನಿರೀಕ್ಷಿತ ಐಪಿಎಲ್ 2021ರ ಹರಾಜು ಪ್ರಕ್ರಿಯೆ
ಕಾಯ್ದಿರಿಸಲ್ಪಟ್ಟ ಆಟಗಾರರು: ಕೆ. ಎಸ್ ಭರತ್, ಅಭಿಮನ್ಯು ಈಶ್ವರನ್, ಶಹಬಾಝ್ ನದೀಮ್ ಮತ್ತು ರಾಹುಲ್ ಚಹರ್.
ನೆಟ್ ಬೌಲರ್ಸ್: ಅಂಕಿತ್ ರಜಪೂತ್, ಅವೇಶ್ ಖಾನ್, ಸಂದೀಪ್ ವಾರಿಯರ್, ಕೆ ಗೌತಮ್, ಸೌರಭ್ ಕುಮಾರ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ