IPL 2020: ಪಂದ್ಯದ ನಡುವೆ ಮಂಡಿಯೂರಿ Black Live Matter ಚಳುವಳಿಗೆ ಬೆಂಬಲ ಸೂಚಿಸಿದ ಹಾರ್ದಿಕ್ ಪಾಂಡ್ಯ
ಆಟದ 19ನೇ ಓವರ್ನಲ್ಲಿ ಅಬ್ಬರದ ಅರ್ಧಶತಕ ಗಳಿಸಿದ ಹಾರ್ದಿಕ್ ಪಾಂಡ್ಯ ಈ ವೇಳೆ ಮಂಡಿಯೂರಿ ಜನಾಂಗೀಯವಾದದ ವಿರುದ್ಧ ನಡೆಯುತ್ತಿರುವ ಚಳವಳಿಗೆ ತನ್ನ ಬೆಂಬಲವನ್ನು ಘೋಷಿಸಿದ್ದಾರೆ. ಪಂದ್ಯದ ನಂತರ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಂಡಿಯೂರಿ ಕುಳಿತ ಫೋಟೊ ಹಾಕಿ Black Lives Matter ಎಂದು ಬರೆದುಕೊಂಡಿದ್ದಾರೆ.
ದುಬೈ (ಅಕ್ಟೋಬರ್ 26); ಅಮೆರಿಕದಲ್ಲಿ ಇತ್ತೀಚೆಗೆ ಜಾರ್ಜ್ ಫ್ಲಾಯ್ಡ್ ಎಂಬ ಕಪ್ಪು ವರ್ಣದ ವ್ಯಕ್ತಿಯನ್ನು ಅಲ್ಲಿನ ಪೊಲೀಸರು ನಡುರಸ್ತೆಯಲ್ಲೇ ಅಮಾನವೀಯ ಕೊಂದಿದ್ದರು. ಈ ಸಂದರ್ಭದಲ್ಲಿ ಈ ಘಟನೆಯನ್ನು ವಿರೋಧಿಸಿ ವಿಶ್ವದಾದ್ಯಂತ ಬ್ಲಾಕ್ ಲೈವ್ ಮ್ಯಾಟರ್ (Black Live Matter) ಎಂಬ ಚಳುವಳಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇತ್ತೀಚೆಗೆ ಉತ್ತರಪ್ರದೇಶದ ಹತ್ರಾಸ್ ಎಂಬಲ್ಲಿ ದಲಿತ ಯುವತಿಯನ್ನು ಅದೇ ಊರಿನ ಮೇಲ್ಜಾತಿಯ ಕೆಲ ಯುವಕರು ಸಾಮೂಹಿಕವಾಗಿ ಅತ್ಯಾಚಾರ ನಡೆಸಿ ಅಮಾನವೀಯ ಕೊಲೆ ಮಾಡಿದ್ದರು. ಈ ಘಟನೆ ಭಾರತದಾದ್ಯಂತ ಈಗಲೂ ದೊಡ್ಡ ಮಟ್ಟದ ಸದ್ದು ಮಾಡುತ್ತಿದೆ. ಆದರೆ, ಇಂತಹ ಘಟನೆಗಳ ವಿರುದ್ಧ ಕ್ರೀಡಾಪಟುಗಳು ಸಹ ತಮ್ಮ ಸಂವೇದನೆಯನ್ನು ಪ್ರದರ್ಶಿಸುವುದು, ಘಟನೆಯನ್ನು ಖಂಡಿಸುವುದು ತೀರಾ ಅಪರೂಪ. ಅಂತಹ ಅಪರೂಪದ ಘಟನೆಗೆ ಇದೀಗ ಭಾರತದ ಅಂತಾರಾಷ್ಟ್ರೀಯ ಕ್ರಿಕೆಟ್ ಪಟು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಸಾಕ್ಷಿಯಾಗಿದ್ದಾರೆ.
ಐಪಿಎಲ್ ಇತಿಹಾಸದಲ್ಲಿಯೇ ಮುಂಬೈ ಇಂಡಿಯನ್ಸ್ ತಂಡದ ಆಟಗಾರ ಹಾರ್ದಿಕ್ ಪಾಂಡ್ಯ ಇದೇ ಮೊದಲ ಬಾರಿಗೆ ಪಂದ್ಯದ ನಡುವೆ ಮಂಡಿಯೂರಿ ‘Black Lives Matter’ ಚಳವಳಿಗೆ ಐಕ್ಯಮತ್ಯ ಸೂಚಿಸಿ ಗಮನ ಸೆಳೆದಿದ್ದಾರೆ. ಈ ಪೋಟೋವನ್ನು ಟ್ವಿಟರ್ನಲ್ಲೂ ಹಂಚಿಕೊಳ್ಳುವ ಮೂಲಕ ಅವರು ಈ ಮಹತ್ವದ ಚಳುವಳಿಗೆ ಬೆಂಬಲ ಸೂಚಿಸಿದ್ದಾರೆ.
ಕೊರೋನಾ ಕಾರಣದಿಂದಾಗಿ ಈ ಬಾರಿಯ ಐಪಿಎಲ್ ದುಬೈನಲ್ಲಿ ನಡೆಯುತ್ತಿರುವುದು ಎಲ್ಲರಿಗೂ ಗೊತ್ತೆ ಇದೆ. ಭಾನುವಾರವಾದ ನಿನ್ನೆ ಮುಂಬೈ ಇಂಡಿಯನ್ಸ್ ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧ ದುಬೈ ಅಂಗಳದಲ್ಲಿ ಕಣಕ್ಕಿಳಿದಿತ್ತು. ಈ ವೇಳೆ ಮೊದಲು ಬ್ಯಾಟ್ ಮಾಡಿದ ಮುಂಬೈ ಪರ ಸ್ಲಾಗ್ ಓವರ್ಗಳಲ್ಲಿ ಲೀಲಾಜಾಲವಾಗಿ ಬ್ಯಾಟ್ ಬೀಸಿ ಅಕ್ರಮಣಕಾರಿ ಆಟವಾಡಿದ್ದ ಹಾರ್ದಿಕ್ ಪಾಂಡ್ಯ ಕೇವಲ 21 ಎಸೆತಗಳಲ್ಲಿ 60 ರನ್ ಗಳಿಸಿ ಮುಂಬೈ ಸವಾಲಿನ ಮೊತ್ತ ಪೇರಿಸಲು ಸಹಾಯ ಮಾಡಿದರು. ಈ ಅಬ್ಬರದ ಆಟದಲ್ಲಿ ಅವರು 2 ಬೌಂಡರಿ ಮತ್ತು 6 ಸಿಕ್ಸರ್ಗಳನ್ನು ಗಳಿಸಿದ್ದರು.
ಆಟದ 19ನೇ ಓವರ್ನಲ್ಲಿ ಅಬ್ಬರದ ಅರ್ಧಶತಕ ಗಳಿಸಿದ ಹಾರ್ದಿಕ್ ಪಾಂಡ್ಯ ಈ ವೇಳೆ ಮಂಡಿಯೂರಿ ಜನಾಂಗೀಯವಾದದ ವಿರುದ್ಧ ನಡೆಯುತ್ತಿರುವ ಚಳವಳಿಗೆ ತನ್ನ ಬೆಂಬಲವನ್ನು ಘೋಷಿಸಿದ್ದಾರೆ. ಪಂದ್ಯದ ನಂತರ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಂಡಿಯೂರಿ ಕುಳಿತ ಫೋಟೊ ಹಾಕಿ Black Lives Matter ಎಂದು ಬರೆದುಕೊಂಡಿದ್ದಾರೆ.
ಅಮೆರಿಕದಲ್ಲಿ 2020ರ ಮೇ ತಿಂಗಳಿನಲ್ಲಿ ಜಾರ್ಜ್ ಫ್ಲಾಯ್ಡ್ ಎಂಬ ಕಪ್ಪು ಜನಾಂಗದ ವ್ಯಕ್ತಿಯನ್ನು ಪೊಲೀಸ್ ಓರ್ವ ಕತ್ತಿನ ಮೇಲೆ ತುಳಿದು ಅಮಾನವೀಯವಾಗಿ ಕೊಂದ ಘಟನೆ, ಅಲ್ಲಿ ದೊಡ್ಡ ಹೋರಾಟಕ್ಕೆ ಕಾರಣವಾಗಿತ್ತು. ತದನಂತರ ಜನಾಂಗೀಯವಾದದ ವಿರುದ್ಧ ಅಮೆರಿಕ ಸೇರಿದಂತೆ ಪ್ರಪಂಚದಾದ್ಯಂತ Black Lives Matter ಹೆಸರಿನಲ್ಲಿ ಪ್ರತಿಭಟನೆಗಳು ಸಿಡಿದು, ದೊಡ್ಡ ಹೋರಾಟಕ್ಕೆ ನಾಂದಿಯಾಡಿದ್ದರು. ಆ ಸಂದರ್ಭದಲ್ಲಿ ಮಿನ್ನಿಯಾಪೊಲಿಸ್ನ ಪೊಲೀಸರು ಮಂಡಿಯೂರಿ ಕ್ಷಮೆಯಾಚಿಸಿದ್ದರು. ಅಂದಿನಿಂದ ಹಲವಾರು ಕ್ರೀಡಾ ತಾರೆಯರು ಮಂಡಿಯೂರುವ ಮೂಲಕ ಈ ಚಳವಳಿಗೆ ಬೆಂಬಲ ಘೋಷಿಸಿದ್ದಾರೆ.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ