ಮುಂಬೈನ ಮಾಜಿ ಕ್ರಿಕೆಟಿಗ ಸಚಿನ್ ದೇಶ್ಮುಖ್ ಅವರು ಕೋವಿಡ್ -19 ಗೆ ಬಲಿಯಾಗಿದ್ದಾರೆ. ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ದೇಶ್ಮುಖ್ ಅವರು ಕಳೆದ ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ನಿಧನರಾಗಿದ್ದಾರೆ. 1986 ರ ನವೆಂಬರ್ನಲ್ಲಿ ಮಹಾರಾಷ್ಟ್ರ 19 ವರ್ಷದೊಳಗಿನ ತಂಡದಲ್ಲಿ ಬ್ಯಾಟ್ ಬೀಸಿದ್ದ ಸಚಿನ್, ಐದು ಇನಿಂಗ್ಸ್ನಲ್ಲಿ ಮೂರು ಶತಕ ಸಿಡಿಸಿ ಎಲ್ಲರ ಗಮನ ಸೆಳೆದಿದ್ದರು. 183, 110 ಮತ್ತು 130 ರನ್ ಬಾರಿಸಿದ್ದ ಅವರಿಗೆ ಮಹಾರಾಷ್ಟ್ರ ರಣಜಿ ತಂಡದಲ್ಲಿ ಸ್ಥಾನ ಲಭಿಸಿತ್ತು. ಆದರೆ ಆಡುವ ಬಳಗದಲ್ಲಿ ಅವಕಾಶ ಸಿಕ್ಕಿರಲಿಲ್ಲ.
ಶಾಲಾ ದಿನಗಳಿಂದಲೇ ಅತ್ಯುತ್ತಮ ಬ್ಯಾಟ್ಸ್ಮನ್ ಎಂದು ಗುರುತಿಸಿಕೊಂಡಿದ್ದ ದೇಶ್ಮುಖ್ ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿ, ಬಳಿಕ ಮುಂಬಯಿಯಲ್ಲಿ ಅಬಕಾರಿ ಮತ್ತು ಕಸ್ಟಮ್ಸ್ ಅಧೀಕ್ಷಕರಾಗಿದ್ದರು. ಈಗ ಇದನ್ನು ಈಗ ಜಿಎಸ್ಟಿ ಅ್ಯಂಡ್ ಕಸ್ಟಮ್ಸ್ ಎಂದು ಕರೆಯಲಾಗುತ್ತದೆ. 90 ರ ದಶಕದಲ್ಲಿ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಪಂದ್ಯಾವಳಿಯಲ್ಲಿ ಪುಣೆ ವಿಶ್ವವಿದ್ಯಾಲಯದ ಪರ ಬ್ಯಾಟಿಂಗ್ ಮಾಡಿದ್ದ ಸಚಿನ್ ಅವರು ಸತತ ಏಳು ಶತಕಗಳನ್ನು ಸಿಡಿಸಿ ವಿಶಿಷ್ಟ ದಾಖಲೆ ನಿರ್ಮಿಸಿದ್ದರು.
80-90ರ ದಶಕದಲ್ಲಿ ಮುಂಬೈ ಸ್ಥಳೀಯ ಕ್ರಿಕೆಟ್ನಲ್ಲಿ ಸಂಚಲನ ಸೃಷ್ಟಿಸಿದ್ದ ಸಚಿನ್ ದೇಶ್ಮುಖ್ ಅವರನ್ನು ಮಾಧವ್ ಮಂತ್ರಿ (ಭಾರತದ ಮಾಜಿ ವಿಕೆಟ್ ಕೀಪರ್) ಅವರನ್ನು ತುಂಬಾ ಇಷ್ಟಪಡುತ್ತಿದ್ದರು . ದುರದೃಷ್ಟವಶಾತ್, ಮುಂಬೈ ಪರ ಆಡಲು ಅವರಿಗೆ ಎಂದಿಗೂ ಅವಕಾಶ ಸಿಗಲಿಲ್ಲ ಎಂದು ದೇಶಮುಖ್ ಅವರ ಆಪ್ತ ರಮೇಶ್ ವಾಜ್ಘೆ ತಿಳಿಸಿದರು.
ಸಚಿನ್ ದೇಶ್ಮುಖ್ ಅವರ ಸಾವು ಎಲ್ಲರಿಗೂ ಒಂದು ಸಂದೇಶವಾಗಿದೆ. ಕೊರೋನಾವನ್ನು ಲಘುವಾಗಿ ತೆಗೆದುಕೊಳ್ಳಬಾರದು. ಏಕೆಂದರೆ ಅವರಿಗೆ ಜ್ವರವಿದ್ದರೂ ಆಸ್ಪತ್ರೆಗೆ ದಾಖಲಾಗಲು ನಿರಾಕರಿಸಿದ್ದರು. ಒಂಬತ್ತು ದಿನಗಳ ಹಿಂದೆ ಅವರಿಗೆ ಕೊರೋನಾ ಇರುವುದು ಪತ್ತೆಯಾಗಿತ್ತು. ಆದರೂ ನಿರ್ಲಕ್ಷ್ಯವಹಿಸಿರುವುದು ಸಾವಿಗೆ ಕಾರಣವಾಯಿತು ಎಂದು ಮುಂಬೈ ಕ್ರಿಕೆಟ್ ಅಸೋಷಿಯೇಷನ್ ಸದಸ್ಯರಾಗಿರುವ ರಮೇಶ್ ವಾಜ್ಘೆ ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ