ಭಾರತ ವಿರುದ್ಧ ಇಂಗ್ಲೆಂಡ್ ಸೋತಿದ್ದು ಯಾಕೆ? ಆಂಗ್ಲರ ನಾಯಕ ಕೊಟ್ಟ ಕಾರಣ ಇದು

ಜೋ ರೂಟ್

ಜೋ ರೂಟ್

Joe Root Explanation- ಭಾರತ ವಿರುದ್ಧದ ನಾಲ್ಕನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಸೋಲಲು ಏನು ಕಾರಣ ಎಂದು ನಾಯಕ ಜೋ ರೂಟ್ ತಮ್ಮದೇ ವಿಶ್ಲೇಷಣೆ ನೀಡಿದ್ದಾರೆ. ಕಠಿಣವೆನಿಸಿದ ಕ್ಯಾಚ್​ಗಳನ್ನ ಕೈಬಿಟ್ಟಿದ್ದು ಮೊದಲಾದ ಕಾರಣಗಳನ್ನ ನೀಡಿದ್ದಾರೆ.

  • Cricketnext
  • 2-MIN READ
  • Last Updated :
  • Share this:

ಲಂಡನ್: ಇಲ್ಲಿಯ ದಿ ಓವಲ್ ಮೈದಾನದಲ್ಲಿ ನಿನ್ನೆ ಮುಕ್ತಾಯಗೊಂಡ ಭಾರತ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ 157 ರನ್​ಗಳಿಂದ ಹೀನಾಮಯವಾಗಿ ಸೋತಿತು. ಹೀನಾಯ ಯಾಕೆಂದರೆ, 99 ರನ್​ಗಳ ಅಮೂಲ್ಯ ಮೊದಲ ಇನ್ನಿಂಗ್ಸ್ ಮುನ್ನಡೆ ಹೊಂದಿದ್ದೂ ಬ್ಯಾಟಿಂಗ್ ಟ್ರ್ಯಾಕ್​ನಲ್ಲಿ ಇಂಗ್ಲೆಂಡ್ ತಂಡ ಸೋತಿದೆ. ಮುಂದಿನ ಪಂದ್ಯದಲ್ಲಿ ತಿರುಗಿಬೀಳುವುದಾಗಿ ಹೇಳಿರುವ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಅವರು ಓವಲ್​ನಲ್ಲಿ ಇಂಗ್ಲೆಂಡ್ ಸೋಲಿಗೆ ಕೆಲ ಕಾರಣಗಳನ್ನೂ ನೀಡಿದ್ಧಾರೆ. ಅದರಲ್ಲಿ ಪ್ರಮುಖವಾದುದು ಕೆಲ ಕ್ಯಾಚುಗಳನ್ನ ಡ್ರಾಪ್ ಮಾಡಿದ್ದು. ಕಷ್ಟಕರವಾಗಿದ್ದ ಆ ಕ್ಯಾಚುಗಳನ್ನ ಫೀಲ್ಡರ್​ಗಳು ಹಿಡಿದಿದ್ದರೆ ಭಾರತದ ಇನ್ನಿಂಗ್ಸ್ ಅಷ್ಟು ಉದ್ದ ಬೆಳೆಯುತ್ತಿರಲಿಲ್ಲ ಎಂಬುದು ಅವರ ಅಭಿಪ್ರಾಯ.


ನಿನ್ನೆಯ ಈ ಪಂದ್ಯದಲ್ಲಿ ಇಂಗ್ಲೆಂಡ್ 99 ರನ್ ಮುನ್ನಡೆ ಪಡೆದ ಬಳಿಕ ಭಾರತ ಎರಡನೇ ಇನ್ನಿಂಗ್ಸಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಇಂಗ್ಲೆಂಡ್ ಗೆಲ್ಲಲು 368 ರನ್​ಗಳ ಕಠಿಣ ಗುರಿ ನೀಡಿತು. ಆದರೆ, ಇಂಗ್ಲೆಂಡ್ ಬ್ಯಾಟುಗಾರರು ಹೆಚ್ಚು ಪ್ರತಿರೋಧ ಒಡ್ಡದೇ 210 ರನ್​ಗೆ ಆಲೌಟ್ ಆಯಿತು. ಜೋ ರೂಟ್ ಅವರ ಪ್ರಕಾರ 99 ರನ್​ಗಳ ಮೊದಲ ಇನ್ನಿಂಗ್ಸ್ ಮುನ್ನಡೆಯ ಮೊತ್ತ ಕಡಿಮೆ ಆಯಿತಂತೆ. “ನಾನು ಇನ್ನೂ ಹೆಚ್ಚು ಮುನ್ನಡೆ ಪಡೆಯಬೇಕಿತ್ತು. ಇನ್ನೂ 100 ರನ್​ಗಳ ಮುನ್ನಡೆ ಇದ್ದಿದ್ದರೆ ಗೇಮ್ ಸ್ಥಿತಿ ವಿಭಿನ್ನವಾಗಿರುತ್ತಿತ್ತು” ಎಂದು ರೂಟ್ ಹೇಳುತ್ತಾರೆ.


“ಒಂದೇ ದಿನ 10 ವಿಕೆಟ್ ಕಳೆದುಕೊಳ್ಳುವುದು ಹತಾಶೆ ಮೂಡಿಸುತ್ತದೆ. ಆದರೆ, ಹಿಂದಿನ ದಿನ ಆಟದಲ್ಲಿ ನಾವು ಪ್ರಾಬಲ್ಯ ತೋರದೇ ಹೋಗಿದ್ದು ಪಂದ್ಯ ಕಳೆದುಕೊಳ್ಳಲು ಕಾರಣ” ಎಂದು ಅವರು ಕ್ಯಾಚ್ ಡ್ರಾಪ್​ನತ್ತ ಕೈಬೊಟ್ಟು ಮಾಡುತ್ತಾರೆ. ಶತಕ ಭಾರಿಸಿದ ರೋಹಿತ್ ಶರ್ಮಾ ಅವರು ಒಂದು ಹಂತದಲ್ಲಿ ಸ್ಲಿಪ್​ನಲ್ಲಿ ಕ್ಯಾಚ್ ಕೊಟ್ಟಿದ್ದರು. ಆದರೆ ರೋರಿ ಬರ್ನ್ಸ್ ಅವರು ಆ ಕ್ಯಾಚ್ ಹಿಡಿಯಲು ವಿಫಲರಾದರು. ಆ ಡ್ರಾಪ್ಡ್ ಕ್ಯಾಚ್ ಬಹಳ ನಿರ್ಣಾಯಕವಾಯಿತು ಎಂದು ಅವರು ತಿಳಿಸಿದ್ಧಾರೆ.


“ನಾವು ಈ ಪಂದ್ಯದಲ್ಲಿ ತುಸು ಕಠಿಣವಾಗಬೇಕಿತ್ತು. ಮೊದಲ ಇನ್ನಿಂಗ್ಸ್​ನಲ್ಲಿ ಗಳಿಸಿದ ಕಡಿಮೆ ರನ್ನುಗಳು ಮುಳುವಾದವು. ಕ್ಯಾಚ್ ಕೈಬಿಟ್ಟಿದ್ದೂ ಪರಿಣಾಮ ಬೀರಿತು… ಕೆಲ ಕಠಿಣ ಕ್ಯಾಚ್​ಗಳೂ ಇದ್ದವು… ಆದರೆ, ವಿಶ್ವ ದರ್ಜೆಯ ಆಟಗಾರರಿಗೆ ನೀವು ಜೀವದಾನ ಕೊಟ್ಟರೆ ಅವರು ಉಪಯೋಗಿಸಿಕೊಳ್ಳದೇ ಇರುತ್ತಾರಾ? ಈ ಪಂದ್ಯದಲ್ಲಿ ಅದೇ ಆಗಿದ್ದು” ಎಂದು ಪಂದ್ಯ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಇಂಗ್ಲೆಂಡ್ ನಾಯಕ ಹೇಳಿದ್ದಾರೆ.


ಇದನ್ನೂ ಓದಿ: India Vs England Test: ಇಂಗ್ಲೆಂಡ್​ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು: ಓವಲ್​ನಲ್ಲಿ 157 ರನ್​ಗಳ ಜಯ


ಇಂಗ್ಲೆಂಡ್ ಸೋಲಿನ ವಿವರಣೆ:


ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್​​ ಸರಣಿಯ ಪ್ರತಿಯೊಂದು ಪಂದ್ಯವೂ ಸಾಕಷ್ಟು ಕುತೂಹಲದಿಂದ ಕೂಡಿದೆ. ಸದ್ಯ ನಾಲ್ಕು ಪಂದ್ಯಗಳು ಮುಗಿದಿದ್ದು ಭಾರತ ಸರಣಿಯಲ್ಲಿ 2-1ರಿಂದ ಮುಂದಿದೆ. ಸರಣಿಯ ಕೊನೆಯ ಪಂದ್ಯ ಓಲ್ಡ್ ಟ್ರಫಾರ್ಡ್ ನಲ್ಲಿ ಸೆ. 10ರಂದು ಪ್ರಾಋಂಭವಾಗುತ್ತದೆ.


ನಿನ್ನೆ ಮುಗಿದ ನಾಲ್ಕನೇ ಪಂದ್ಯ ಮೊದಲ ದಿನದಿಂದಲೂ ಒಂದು ರೀತಿಯಲ್ಲಿ ತೂಗುಯ್ಯಾಲೆಯ ಸ್ಥಿತಿಯಲ್ಲೇ ಸಾಗಿತ್ತು. ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ 191 ರನ್​ಗಳಿಗೆ ಆಲ್ ಔಟ್ ಆಗುವ ಮೂಲಕ ಭಾರತ ತಂಡ ತೀವ್ರ ಮುಖಭಂಗ ಎದುರಿಸಿತ್ತು. ಆಲ್​ರೌಂಡರ್ ಶಾರ್ದುಲ್​ ಠಾಕೂರ್​ ಹೊರತುಪಡಿಸಿ ಮಿಕ್ಕೆಲ್ಲಾ ಸ್ಪೆಷಲಿಸ್ಟ್​ ಬ್ಯಾಟ್ಸ್​ಮನ್​ಗಳ ಆಟ ಇಂಗ್ಲೆಂಡ್​ ಬೌಲರ್​ಗಳ ವಿರುದ್ಧ ನಡೆಯಲಿಲ್ಲ. ಆದರೆ ಉತ್ತಮವಾಗಿ ಬೌಲಿಂಗ್​ ಪ್ರದರ್ಶಿಸಿದ ಭಾರತದ ವೇಗಿಗಳು 290 ರನ್​ಗಳಿಗೆ ಇಂಗ್ಲೆಂಡ್​ ಆಟಗಾರರನ್ನು ಕಟ್ಟಿಹಾಕಿದರು. ಪಿಚ್ ಕೇವಲ ಬೌಲರ್​ಗಳಿಗೆ ಸಹಾಯ ಮಾಡುತ್ತಿದೆ ಎಂಬಂತಿದ್ದಾಗ, ಎರಡನೇ ಇನ್ನಿಂಗ್ಸ್​ ಆರಂಭಿಸಿದ ಭಾರತ ತಂಡದ ಓಪನರ್ಸ್​ಗಳಾದ ರೋಹಿತ್​ ಶರ್ಮಾ  ಮತ್ತು ಕೆ.ಎಲ್​. ರಾಹುಲ್​ ಉತ್ತಮ ಆರಂಭ ಒದಗಿಸಿದರು. ಇಬ್ಬರೂ ಶತಕದ ಜತೆಯಾಟವಾಡಿದರು. ಅರ್ಧ ಶತಕದ ಅಂಚಿನಲ್ಲಿದ್ದ ಕೆ.ಎಲ್​. ರಾಹುಲ್​ ವಿಕೆಟ್​ ಒಪ್ಪಿಸಿದರೆ, ರೋಹಿತ್​ ಅಮೋಘ ಶತಕ ಸಿಡಿಸಿದರು.


ಎರಡನೇ ಇನ್ನಿಂಗ್ಸ್​ನಲ್ಲಿ ಉತ್ತಮ ಆಟವಾಡಿ ಇಂಗ್ಲೆಂಡ್​ಗೆ 368 ರನ್​ಗಳ ಟಾರ್ಗೆಟ್​ ನೀಡಿದರು. ಇದನ್ನು ಬೆನ್ನತ್ತಿದ್ದ ಇಂಗ್ಲೆಂಡ್​ ತಂಡದ ಆರಂಭಿಕ ದಾಂಡಿಗರಾದ ರೋರಿ ಬರ್ನ್ಸ್​ ಮತ್ತು ಹಸೀಬ್​ ಹಮೀದ್​ ಒಳ್ಳೆಯ ಪ್ರದರ್ಶನ ನೀಡಿ ಶತಕದ ಜತೆಯಾಟ ಆಡಿದರಾದರೂ ಬರ್ನ್ಸ್​ 50 ಮತ್ತು ಹಮೀದ್​ 63 ರನ್​ಗಳಿಗೆ ಹೋರಾಟ ನಿಲ್ಲಿಸಿದರು.ನಂತರ ಬಂದ ಡೇವಿಡ್​ ಮಲನ್ (David Malan)​ ಮತ್ತು ಜೋ ರೂಟ್ (Joe Root)​ ಇಬ್ಬರೂ ಉತ್ತಮ ಪ್ರದರ್ಶನ ನೀಡಲಿಲ್ಲ. ಅವರ ನಂತರ ಬಂದ ಯಾರೂ ಭಾರತದ ದಾಳಿಗೆ ಸರಿಯಾದ ಉತ್ತರ ನೀಡಲೇ ಇಲ್ಲ. ನಾಲ್ಕು ಟೆಸ್ಟ್​​ಗಳಲ್ಲಿ ಕಳಪೆ ಪ್ರದರ್ಶನ ನೀಡಿ ಆಯ್ಕೆಯ ಬಗ್ಗೆ ಪ್ರಶ್ನೆ ಏಳುವಂತೆ ಮಾಡಿದ್ದ ರವೀಂದ್ರ ಜಡೇಜಾ 5 ವಿಕೆಟ್​ ಪಡೆದು ಮಿಂಚಿದರು. ಇನ್ನೂ ಜಸ್ಪ್ರೀತ್ ಬುಮ್ರಾ 2 ಮತ್ತು ಉಮೇಶ್​ ಯಾದವ್ 3 ವಿಕೆಟ್​ ಪಡೆದು ಮಿಂಚಿದರು.


ಶಾರ್ದುಲ್​ ಠಾಕೂರ್ ಎರಡು ವಿಕೆಟ್​ ಪಡೆದರೆ, ಮೊಹಮ್ಮದ್​ ಸಿರಾಜ್​ ಯಾವುದೇ ವಿಕೆಟ್​ ಪಡೆಯಲಿಲ್ಲ. ಒಟ್ಟಿನಲ್ಲಿ ಐದು ಪಂದ್ಯಗಳ ಸರಣಿಯಲ್ಲಿ 2 ಪಂದ್ಯಗಳನ್ನು ಗೆದ್ದು ಸರಣಿಯಲ್ಲಿ ಭಾರತ ಮುಂದಿದೆ. ಒಂದು ಪಂದ್ಯ ಗೆದ್ದಿರುವ ಇಂಗ್ಲೆಂಡ್​ಗೆ ಮುಂದಿನ ಮತ್ತು ಕಡೆಯ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಯಿದೆ.

top videos
    First published: