ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಅನುಸರಿಸುತ್ತಿರುವ ಇಬ್ಬಗೆ ನೀತಿ ವಿರುದ್ಧ ಭಾರತ ತಂಡದ ಮಾಜಿ ಆಟಗಾರ ಸುನೀಲ್ ಗವಾಸ್ಕರ್ ಕಿಡಿಕಾರಿದ್ದಾರೆ. ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್ನಲ್ಲಿ ಭಿನ್ನ ವ್ಯಕ್ತಿಗಳಿಗೆ ಭಿನ್ನ ನಿಯಮಗಳಿವೆ ಎಂದಿರುವ ಗವಾಸ್ಕರ್, ಇದಕ್ಕೆ ಸ್ಪಷ್ಟ ಉದಾಹರಣೆಯನ್ನೂ ಸಹ ನೀಡಿದ್ದಾರೆ. ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮೊದಲ ಟೆಸ್ಟ್ ಪಂದ್ಯದ ಬಳಿಕ ತವರಿಗೆ ಹಿಂತಿರುಗಿದ್ದಾರೆ. ಇದಕ್ಕೆ ಕಾರಣ ಮುಂದಿನ ತಿಂಗಳು ಕೊಹ್ಲಿ ತಂದೆಯಾಗುತ್ತಿರುವುದು. ಈ ಹಿನ್ನೆಲೆಯಲ್ಲಿ ಪಿತೃತ್ವ ರಜೆ ತೆಗೆದುಕೊಂಡು ವಿರಾಟ್ ಭಾರತಕ್ಕೆ ಮರಳಿದ್ದಾರೆ. ಹೀಗಾಗಿ ಮುಂದಿನ ಮೂರು ಟೆಸ್ಟ್ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ.
ಆದರೆ ಇದೇ ನಿಯಮ ಎಡಗೈ ವೇಗಿ ಟಿ. ನಟರಾಜನ್ ಅವರಿಗೆ ಅನ್ವಯಿಸುವುದಿಲ್ಲವಾ ಎಂದು ಸುನೀಲ್ ಗವಾಸ್ಕರ್ ಪಶ್ನಿಸಿದ್ದಾರೆ. ಏಕೆಂದರೆ ಐಪಿಎಲ್ ಪ್ಲೇ ಆಫ್ ಪಂದ್ಯದ ವೇಳೆ ಅವರು ತಂದೆಯಾಗಿದ್ದರು. ಅತ್ತ ಐಪಿಎಲ್ನಲ್ಲಿನ ಪ್ರದರ್ಶನ ಗಮನಿಸಿ ಆತನನ್ನು ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ನೆಟ್ ಬೌಲರ್ ಆಗಿ ಆಯ್ಕೆ ಮಾಡಲಾಗಿತ್ತು. ಹೀಗಾಗಿ ಯುಎಇನಿಂದ ನೇರವಾಗಿ ಆಸ್ಟ್ರೇಲಿಯಾಗೆ ಕರೆದೊಯ್ಯಲಾಯಿತು. ನಂತರ ಇಶಾಂತ್ ಶರ್ಮಾ ಅವರ ಅನುಪಸ್ಥಿತಿಯಲ್ಲಿ ತಂಡಕ್ಕೆ ಸೇರಿಸಿಕೊಳ್ಳಲಾಯಿತು. ಸಿಕ್ಕ ಅವಕಾಶವನ್ನು ಬಳಸಿಕೊಂಡು ಅದ್ಭುತ ಪ್ರದರ್ಶನ ನೀಡಿದರು. ನಂತರ ಟೆಸ್ಟ್ ಸರಣಿಗೂ ಅವರನ್ನು ಉಳಿಸಿಕೊಳ್ಳಲಾಯಿತು.
ನೆಟ್ ಬೌಲರ್ ಆಗಿ ಸ್ಥಾನ ಪಡೆದ ಅವರು ಜನವರಿ ಜನವರಿ ಮೂರನೇ ವಾರದ ನಂತರವಷ್ಟೇ ತನ್ನ ಮುದ್ದಿನ ಮಗಳನ್ನ ಮೊದಲ ಬಾರಿ ನೋಡುವ ಅವಕಾಶ ಪಡೆಯಲಿದ್ದಾರೆ. ಆದರೆ ಟೀಮ್ ಇಂಡಿಯಾ ನಾಯಕ ತನ್ನ ತನ್ನ ಮೊದಲ ಮಗುವನ್ನು ನೋಡಲು ಅರ್ಧದಲ್ಲೇ ವಾಪಸ್ ಹೋಗುತ್ತಾರೆ. ಇದು ಭಾರತ ಕ್ರಿಕೆಟ್ ತಂಡದ ಸದ್ಯ ಸ್ಥಿತಿ. ಇಲ್ಲಿ ಬೇರೆ ಬೇರೆ ವ್ಯಕ್ತಿಗಳಿಗೆ ವಿಭಿನ್ನ ನಿಯಮಗಳು ಅನ್ವಯವಾಗುತ್ತಿದೆ ಸುನೀಲ್ ಗವಾಸ್ಕರ್ ಹರಿಹಾಯ್ದಿದ್ದಾರೆ.
ಈ ಬಗ್ಗೆ ಟಿ ನಟರಾಜನ್ ಯಾವುದೇ ರೀತಿಯಲ್ಲೂ ಧ್ವನಿಯೆತ್ತಲಾರ ಎಂಬುದು ಗೊತ್ತಿದೆ. ಏಕೆಂದರೆ ತಂಡಕ್ಕೆ ಆತ ಹೊಸಬ. ಹೀಗಾಗಿ ಅನ್ಯಾಯ ನಡೆದರೂ ಆತ ಸುಮ್ಮನಿರಲಿದ್ದಾನೆ. ಇಲ್ಲಿ ಕೊಹ್ಲಿಗೆ ಮಗುವಿನ ಹೆಸರಿನಲ್ಲಿ ರಜೆ ನೀಡುವ ಬಿಸಿಸಿಐ, ಅದೇ ನಟರಾಜನ್ಗೆ ಅನ್ಯಾಯ ಮಾಡಿದೆ ಎಂದು ಗವಾಸ್ಕರ್ ಕಿಡಿಕಾರಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ