ದೇಶದ ಪಾಲಿಗೆ ಕರಾಳವಾದ ಶುಕ್ರವಾರ ಭೀಕರ ರೈಲು ಅಪಘಾತಕ್ಕೆ (Accident) ಸಾಕ್ಷಿಯಾಗಿತ್ತು. ಯಾರು ಕಂಡು ಕೇಳರಿಯದ ರೈಲು ದುರಂತ ನಡೆದಿದ್ದು, ಹಲವರ ಬದುಕೇ ಹಳಿ ತಪ್ಪಿದೆ. ಒಡಿಶಾದ ಬಾಲಾಸೋರ್ನಲ್ಲಿ ಶುಕ್ರವಾರ (Friday) ಸಂಜೆ ಸಂಭವಿಸಿದ ಭೀಕರ ಸರಣಿ ರೈಲು ಅಪಘಾತ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 280ಕ್ಕೆ ಏರಿಕೆಯಾಗಿದೆ, ಸಾವಿರಾರು ಸಂಖ್ಯೆಯಲ್ಲಿ ಮಂದಿ ಗಾಯಗೊಂಡಿದ್ದಾರೆ. ಕೋರಮಂಡಲ್ ಎಕ್ಸ್ಪ್ರೆಸ್ ಮತ್ತು ಬೆಂಗಳೂರು- ಹೌರಾ ಸೂಪರ್ಫಾಸ್ಟ್ (Super Star) ಎಕ್ಸ್ಪ್ರೆಸ್ ರೈಲುಗಳ ನಡುವೆ ನಡೆದ ಭೀಕರ ಅಪಘಾತ ದೇಶವನ್ನೇ ದಿಗ್ಭ್ರಮೆಗೊಳಿಸಿದೆ. ದೇಶದ ಪ್ರತಿಯೊಬ್ಬರೂ ಕಂಬನಿ ಮಿಡಿದಿದ್ದು, ಸರ್ಕಾರದ ಜೊತೆಗೆ ಗಣ್ಯಾತೀಗಣ್ಯಗಳು ಆರ್ಥಿಕ ನೆರವು ಸೇರಿ ಎಲ್ಲಾ ರೀತಿಯ ಸಹಾಯಾಸ್ತ ನೀಡುತ್ತಿದ್ದಾರೆ.
ಲೈವ್ ಸ್ಟ್ರೀಮ್ ಆಯೋಜಿಸಿ ಸಂತ್ರಸ್ಥರಿಗೆ ನೆರವಾದ ಕ್ಯಾರಿಮಿನಾಟಿ
ಇನ್ನೂ ಜನಪ್ರಿಯ ಯೂಟ್ಯೂಬರ್ ಮತ್ತು ಪ್ರಮುಖ ಗೇಮಿಂಗ್ ಪ್ರಭಾವಿ ಕ್ಯಾರಿಮಿನಾಟಿ ಎಂದೇ ಜನಪ್ರಿಯತೆಗಳಿಸಿರುವ ಅಜೇಯ್ ನಾಗರ್, ಭೀಕರ ರೈಲು ಅಪಘಾತದ ಸಂತ್ರಸ್ತರಿಗಾಗಿ ತನ್ನ ಯೂಟ್ಯೂಬ್ ಚಾನೆಲ್ ಕ್ಯಾರಿಸ್ಲೈವ್ನಲ್ಲಿ ನಾಲ್ಕು ಗಂಟೆಗಳ ಚಾರಿಟಿ ಸ್ಟ್ರೀಮ್ ಅನ್ನು ಆಯೋಜಿಸಿದ್ದು, ಬಂದ ಹಣವನ್ನು ಸಂತ್ರಸ್ತರ ನಿಧಿಗೆ ನೀಡಿದ್ದಾರೆ.
ಒಡಿಶಾದ ಮುಖ್ಯಮಂತ್ರಿಗಳ ಪರಿಹಾರ ನಿಧಿ-ಸರ್ಕಾರಕ್ಕೆ ದೇಣಿಗೆ ನೀಡಲು ಕ್ಯಾರಿಮಿನಾಟಿ ಲೈವ್ಸ್ಟ್ರೀಮ್ ಅನ್ನು ಆಯೋಜಿಸಿದ್ದರು. ಇದರಿಂದ ಬಂದ ಎಲ್ಲಾ ಹಣವನ್ನು ಸಿಎಂ ಫಂಡ್ಗೆ ಕ್ಯಾರಿಮಿನಾಟಿ ವಿನಿಯೋಗಿಸಿದ್ದಾರೆ.
ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 13 ಲಕ್ಷ
ಲೈವ್ಸ್ಟ್ರೀಮ್ ಕಾರ್ಯಕ್ರಮವು 11,87,612 ರೂಪಾಯಿಗಳನ್ನು ಗಳಿಸಿದ್ದು, ಮಿನಾಟಿ ವೈಯಕ್ತಿಕವಾಗಿ 1.5 ಲಕ್ಷ ಕೊಡುಗೆ ನೀಡಿ ಒಟ್ಟು 13 ಲಕ್ಷಗಳನ್ನು ಕೊಡುಗೆ ನೀಡಿದ್ದಾರೆ.
ಅಪಘಾತ ಮತ್ತು ನಿಧಿಸಂಗ್ರಹದ ಬಗ್ಗೆ ಮಾತನಾಡುತ್ತಾ ಕ್ಯಾರಿಮಿನಾಟಿ, "ಅಪಘಾತದ ದೃಶ್ಯಗಳು ಮನಸ್ಸಿಗೆ ನೋವುಂಟು ಮಾಡುತ್ತವೆ. ನನ್ನ ಪ್ರತಿ ಪ್ರಾರ್ಥನೆಯಲ್ಲೂ ಅಪಘಾತ ಸಂತ್ರಸ್ತರು ಇರುತ್ತಾರೆ.
ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ ಮತ್ತು ದುಃಖತಪ್ತ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಸಂತಾಪವನ್ನು ವ್ಯಕ್ತಪಡಿಸುತ್ತೇನೆ.
ಇದನ್ನೂ ಓದಿ: ಮಳೆಯ ಆಗಮನ ಇನ್ನಷ್ಟು ವಿಳಂಬ
ಇಂತಹ ಸಮಯದಲ್ಲಿ ನಾವೆಲ್ಲರೂ ಒಗ್ಗೂಡಿ ಮಾನವೀಯ ಮಟ್ಟದಲ್ಲಿ ಒಬ್ಬರಿಗೊಬ್ಬರು ನೆರವಾಗುವಂತಹ ಕೆಲಸಗಳನ್ನು ಮಾಡಬೇಕಿದೆ. ಈ ಉದಾತ್ತ ಉದ್ದೇಶವನ್ನು ಬೆಂಬಲಿಸಿದ ಮತ್ತು ತಮ್ಮ ಬೆಂಬಲ ಮತ್ತು ಒಗ್ಗಟ್ಟನ್ನು ವ್ಯಕ್ತಪಡಿಸಲು ಒಟ್ಟಾಗಿ ಒಂದಾದ ಎಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ" ಎಂದು ಹೇಳಿದರು.
ಕಷ್ಟಕ್ಕೆ ಮಿಡಿಯುವ ಕ್ಯಾರಿಮಿನಾಟಿ
ಕ್ಯಾರಿಮಿನಾಟಿ ಎಂದೇ ಜನಪ್ರಿಯತೆಗಳಿಸಿರುವ ಅಜೇಯ್ ನಾಗರ್ ಇಂತಹ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಇದೇ ಮೊದಲಲ್ಲ. ದೇಶದಲ್ಲಿ ಇಂತಹ ಅನಾಹುತಗಳು ಸಂಭವಿಸಿದಾಗ ನೆರವಿಗಾಗಿ ನಿಧಿಸಂಗ್ರಹ ಕಾರ್ಯಕ್ರಮಗಳನ್ನು ನಡೆಸುತ್ತಾರೆ.
ಈ ಹಿಂದೆ, ಅವರು 2020 ರಲ್ಲಿ ಅಸ್ಸಾಂ ಮತ್ತು ಬಿಹಾರದ ಪ್ರವಾಹಕ್ಕೆ ನಲುಗಿದ ಜನರಿಗೆ ನೆರವಾಗಲು ಚಾರಿಟಿ ಸ್ಟ್ರೀಮ್ ಅನ್ನು ಆಯೋಜಿಸಿದ್ದರು. ಈ ಈವೆಂಟ್ನಲ್ಲಿ 12 ಲಕ್ಷಗಳನ್ನು ಸಂಗ್ರಹಿಸಿದ ಅವರು ತಮ್ಮ ಕೈಯಿಂದ ಒಂದು ಲಕ್ಷ ಕೊಡುಗೆ ನೀಡಿ ಧನ ಸಹಾಯ ಮಾಡಿದ್ದರು.
2018ರ ಕೇರಳ ಪ್ರವಾಹ, ಪುಲ್ವಾಮಾ ದಾಳಿ, 2019ರಲ್ಲಿ ಒಡಿಶಾ ಚಂಡಮಾರುತ, ಕೋವಿಡ್ ಹೀಗೆ ಇಂತಹ ಸುಮಾರು ದುರಂತಗಳಲ್ಲಿ ಕೊಡುಗೆ ನೀಡಿದರು.
ಇದನ್ನೂ ಓದಿ: 3 ದಿನದ ಅಂತರದಲ್ಲಿ ಒಡಿಶಾದಲ್ಲಿ ಮತ್ತೊಂದು ರೈಲು ಅವಘಡ! ಹಳಿತಪ್ಪಿದ ಐದು ಬೋಗಿಗಳು
ಇತ್ತ ಅನೇಕಾನೇಕರು ದುರಂತಕ್ಕೆ ಕಣ್ಣೀರಾಗಿದ್ದಾರೆ. ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ಕಿರಣ್ ಖೇರ್, ಜೂನಿಯರ್ ಎನ್ಟಿಆರ್, ಸೋನು ಸೂದ್, ಸಿದ್ಧಾರ್ಥ್ ಮಲ್ಹೋತ್ರಾ, ಕೃತಿ ಸನೋನ್, ಅನುಷ್ಕಾ ಶರ್ಮಾ, ಅನಿಲ್ ಕಪೂರ್, ರಶ್ಮಿಕಾ ಮಂದಣ್ಣ ಮುಂತಾದವರು ಪೀಡಿತ ಪ್ರದೇಶಗಳಲ್ಲಿನ ಜನರಿಗೆ ನೆರವು ನೀಡಲು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಿದ್ದಾರೆ.
ಕೇಂದ್ರ ಸರ್ಕಾರ ಮೃತರ ಕುಟುಂಬಸ್ಥರಿಗೆ 10 ಲಕ್ಷ ರೂಪಾಯಿ, ಗಂಭೀರವಾಗಿ ಗಾಯಗೊಂಡವರಿಗೆ 2 ಲಕ್ಷ ರೂಪಾಯಿ ಹಾಗೂ ಸಣ್ಣ-ಪುಟ್ಟ ಗಾಯಾಳುಗಳಿಗೆ 50 ಸಾವಿರ ರೂಪಾಯಿಯನ್ನು ಘೋಷಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ